ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಳ್ಳರಂಗಡಿಯ ಬಾಗಿಲು ತೆರೆದಿದೆ…

ಬ್ಲಾಗ್ ಲೋಕದ ಸ್ವಯಂಘೋಷಿತ ಕಳ್ಳರು ಮತ್ತೆ ಬಾಗಿಲು ತೆರೆದಿದ್ದಾರೆ.
ನಿಮ್ಮ ನಿಮ್ಮ ತನುವ ರಕ್ಷಿಸಿಕೊಳ್ಳಿ.
ಭೇಟಿ ನೀಡಿ..ಕಳ್ಳ ಕುಳ್ಳ

ವೈದೇಹಿ ಅವರ ಕ್ರೌಂಚ ಪಕ್ಷಿಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದ ಸುದ್ದಿ. ಅವರ ಕತೆಗಳ ರುಚಿ ಹತ್ತಿದವರಿಗೆ ವೈದೇಹಿ ಅವರಿಗೆ ಸಂದ ಈ ಪ್ರಶಸ್ತಿ ದೊಡ್ಡ ಸಂತೋಷ ಕೊಡುವ ವಿಷಯ. ಎಲ್ಲಾ ಪಂಜರದ ಗಿಣಿಗಳಿಗೆ, ಹೊಸ ಕಾಲದ ಹಳೆ ಹಿಂಸೆಗಳಿಗೆ ಮೈ ಒಡ್ಡಿದ ಸ್ತ್ರೀ ಜಗತ್ತಿಗೆ ಇದರಿಂದ ಸಮಾಧಾನವಾದರೂ ಆದೀತೇನೋ?
ಸುಮಾರು ಹದಿಮೂರು ವರ್ಷಗಳ ಹಿಂದೆ ತಮ್ಮ ಕಥಾ ಸಂಕಲನವೊಂದರಿಂದ ಪರಿಚಿತರಾದಾಗ, ಎಲ್ಲೋ ಯಾವ ಊರಲ್ಲೋ, ಯಾವ ಪುಸ್ತಕದ, ಯಾವ ಪುಟಗಳಲ್ಲೋ ಕತೆಗಳನ್ನು ತಮ್ಮ ಪಾಡಿಗೆ ಕಟ್ಟುತ್ತಿದ್ದ ವೈದೇಹಿ ಹೀಗೊಬ್ಬ ಅಜ್ಞಾತ ಅಭಿಮಾನಿಯ ಉತ್ಕಟ ಓದನ್ನು ಕಲ್ಪಿಸಿಯೂ ಇರಲಾರರಾಗಿದ್ದರೇನೋ? ಆದರೆ ಅಂಥ ಅಸಂಖ್ಯ ಓದುಗರನ್ನು ತಮ್ಮ ಸಂವೇದನೆಯಿಂದ ಮುಟ್ಟಿದರು. ಅವರ ಕತೆಗಳ ಪ್ರಪಂಚ ಹೆಣ್ಮಕ್ಕಳ ಸುತ್ತಲೇ ಸುತ್ತುತ್ತಿತ್ತಾದ್ದರೂ ಆ ಜಗತ್ತಿನಲ್ಲಿ ಏನಿತ್ತು, ಏನಿರಲಿಲ್ಲ? ಕ್ರೌರ್ಯ ತಣ್ಣಗೆ ಕೂತಿರುತ್ತಿತ್ತು, ನಗು ಗೊಳ್ಳನೆ ತಂಗಿರುತ್ತಿತ್ತು, ಜೀವನ ಪ್ರೀತಿ ತೋಳ್ತೆರೆದು ಕರೆಯುತ್ತಿತ್ತು, ಕಣ್ಣೀರು ಕಣ್ಣ ರೆಪ್ಪೆಯಲ್ಲಿ ಮೂಡಿದಾಗಲೇ ಅವರು ತಮ್ಮ ಕುಂದಾಪ್ರ ಕನ್ನಡದಿಂದ ಮತ್ತೆ ನಗುವಿನ ಬತ್ತಿಯನ್ನು ನಮ್ಮೆಲ್ಲರ ಗುಳಿಕೆನ್ನೆಯಲ್ಲಿಟ್ಟು ಹಚ್ಚುತ್ತಿದ್ದರು.
ನಮ್ಮ ನಿಮ್ಮ ಮನಸ್ಸಲ್ಲಿ ಕಟ್ಟಳೆಗಳ ಸರಳುಗಳ ಮಧ್ಯೆ ಒಂದು ವಾಂಛೆ, ಕಾಮನೆ ಕಳ್ಳನಂತೆ ಕೂತಿದ್ದಾಗ, ಹೊರಬರಲು ಕಾದಿದ್ದಾಗ ಅವರು ತಮ್ಮ ಕತೆಗಳ ಪಾತ್ರಗಳಲ್ಲಿ ಅದನ್ನೆಲ್ಲಾ ದಿಕ್ಕರಿಸಿ ತೋರಿಸಿದರು (ಸೌಗಂಧಿಯ ಸ್ವಗತಗಳು). ಅವರ ಅಕ್ಕುವಿನ ಟುವಾಲು, ಪುಟ್ಟಮ್ಮತ್ತೆಯ ಕೈರುಚಿ, ಶಾಕುಂತಲೆಯ ಬಿಗಿದ ಎದೆ ವಸ್ತ್ರ, ಆಭಾಳ ಮೇಕಪ್ ಕಿಟ್, ಹೆಣ್ಮಕ್ಕಳ ಸಂದಣಿಯ ಗುಟ್ಟು ಹಡೆ ಮಾತು…ವೈದೇಹಿ ಅವರ ಈ ಪ್ರಶಸ್ತಿ ಸಂದರ್ಭದಲ್ಲಿ ಸುಮ್ಮನೆ ನೆನಪಾಗುತ್ತಿದೆ.
‘ಕಳ್ಳ ಕುಳ್ಳ’ರ ಬ್ಲಾಗಂಗಡಿ ಮುಚ್ಚಿತ್ತು. ಒಂದು ಸುಂದರ ಸಂದರ್ಭದಲ್ಲಿ ಮತ್ತೆ ತೆರೆದುಕೊಳ್ಳಲು ಕಾಯುತ್ತಿತ್ತು. ಆದರೀಗ ನಮ್ಮ ವಸಂತಕ್ಕನ ಪ್ರಶಸ್ತಿ ಸಂಭ್ರಮದಿಂದಾಗಿ ಮತ್ತೆ ಈ ಬ್ಲಾಗ್ ಗೆ ಖುಷಿ ಮರಳಿದೆ. ಇಲ್ಲಸಲ್ಲದ ಮಾತುಗಳ, ಸಂದರ್ಭಕ್ಕೊದಗದ ಮೌನದ, ಬರಬಾರದ ಜಾಣ ಕಿವುಡಿರುವ ಈ ಕಾಲದಲ್ಲಿ ಮತ್ತೆ ಏನಾದರೂ ಮಾತಾಡುವ ತವಕ. ವೈದೇಹಿ ಅವರ ಅಕ್ಷರ ಹೊಲದಲ್ಲಿ ಪ್ರಶಸ್ತಿಯ ಪೈರು ಮೂಡಿದೆ. ಆ ಪೈರಿನ ಸುಗ್ಗಿಯನ್ನು ಸಂಭ್ರಮಿಸಲು ಮತ್ತಷ್ಟು ಅಕ್ಷರಗಳೇ ಮೊಳಕೆಯೊಡೆಯಬೇಕು. ಹಾಗಾದರೆ ಅದೇ ಅವರಿಗೆ ನಾವೆಲ್ಲಾ ಸಲ್ಲಿಸಬಹುದಾದ ಗೌರವ.
ಜೋಗಿ ಪುಸ್ತಕ ಬಿಡುಗಡೆ(ಬೆಳಿಗ್ಗೆ ಹತ್ತಕ್ಕೆ ಬೆಂಗಳೂರಿನ ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್), ಜಿಎಸ್ಎಸ್ ಅವರ ಕಾವ್ಯ ‘ಚೈತ್ರೋದಯ’(ಬೆಳಿಗ್ಗೆ ಹತ್ತೂವರೆಗೆ, ರವೀಂದ್ರ ಕಲಾಕ್ಷೇತ್ರ)ಗಳ ಜೊತೆ ಈ ಭಾನುವಾರ (27, ಡಿಸೆಂಬರ್, 2009) ಸಾಹಿತ್ಯ ಲೋಕದಲ್ಲಿ ಹಬ್ಬ. ವೈದೇಹಿ ಅವರ ಪ್ರಶಸ್ತಿಯನ್ನು ಅಲ್ಲೇ ನಾವೆಲ್ಲಾ ಸಂಭ್ರಮಿಸೋಣ, ಆಚರಿಸೋಣ.

‍ಲೇಖಕರು avadhi

26 December, 2009

1

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

– ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.ನ.,ಅಡಿಗ , ಬೇಂದ್ರೆ ಮುಂತಾದ ಕವಿಗಳ ಸಾಲುಗಳನ್ನು ಸಹ ನೀವು ತುಂಬಾ ಅರ್ಥ ಪೂರ್ಣವಾಗಿ ದುಡಿಸಿಕೊಂಡಿದ್ದಿರಿ. ಇದು ನನಗೆ […]

ನಗ್ತಾರೆ ರಾಮಯ್ಯ

ನಗ್ತಾರೆ ರಾಮಯ್ಯ

-ಸೂತ್ರಧಾರ ರಾಮಯ್ಯ ಮುನ್ ನಗೆ ನುಡಿ ಜೀವನವನ್ನು ವಿಕಟ ದೃಷ್ಟಿಯಿಂದ ನೋಡುವ , ಆಡುವ ಮಾತಿನಲ್ಲಿ ಗಾದೆಗಳನ್ನು ಬಳಸುತ್ತಾ ಶ್ಲೇಶಾರ್ಥಗಳನ್ನು ಹೊರಡಿಸುವ ಹವ್ಯಾಸ ನನಗೆ ಬುದ್ಧಿ ಬಂದಾಗಿನಿಂದ ಇದೆ. ಈ ಗೀಳು ನನಗೆ ಯಾವಾಗ, ಯಾರಿಂದ ಅಂಟಿಕೊಂಡು ಎಂದು ಒಮ್ಮೆ ಹಿಂದಿರುಗಿ […]

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading