ನಗ್ತಾರೆ ರಾಮಯ್ಯ

-ಸೂತ್ರಧಾರ ರಾಮಯ್ಯ

ಮುನ್ ನಗೆ ನುಡಿ

ಜೀವನವನ್ನು ವಿಕಟ ದೃಷ್ಟಿಯಿಂದ ನೋಡುವ , ಆಡುವ ಮಾತಿನಲ್ಲಿ ಗಾದೆಗಳನ್ನು ಬಳಸುತ್ತಾ ಶ್ಲೇಶಾರ್ಥಗಳನ್ನು ಹೊರಡಿಸುವ ಹವ್ಯಾಸ ನನಗೆ ಬುದ್ಧಿ ಬಂದಾಗಿನಿಂದ ಇದೆ. ಈ ಗೀಳು ನನಗೆ ಯಾವಾಗ, ಯಾರಿಂದ ಅಂಟಿಕೊಂಡು ಎಂದು ಒಮ್ಮೆ ಹಿಂದಿರುಗಿ ನೋಡಿದರೆ, ನನ್ನೂರು ದೊಡ್ದಾಲ ಹಳ್ಳಿಯ  ಪರಿಸರದ ತೆರೆ ಏಳುತ್ತದೆ , ಸ್ಯಾಂಪಲ್ ನೋಡಿ.

ರೈತ:  ಯಾಕೆ ಶೆಟ್ಟರೆ ನರಳ್ತಾ ಇದ್ದೀರಾ?
ಪಾಪಯ್ಯ ಶೆಟ್ರು : ಸುಮ್ನೆ ಕುತ್ಕೊಂಡು ಎನ್ಕೆಲಸ.
ಗಿರಾಕಿ: ಬಟ್ಟೆ , ಬಣ್ಣ  ಒಗಾಕಿಲ್ವ ಸೋಮಿ ಒಗುದ್ರೆ ?
ಜವಳಿ ಅಂಗಡಿ ನಂಜುಂಡಸ್ವಾಮಿ: ಬಟ್ಟೆನಾ ಕಾಲುವೇಲಿ ಒಗಿಬೇಡ .ನಿಂಗೇಗೌಡನ  ಕೊಳದಲ್ಲಿ ಒಗಿ. ಬಣ್ಣ ಎಲ್ಲೂ ಹೋಗಲ್ಲ ; ಅಲ್ಲೇ ಇರ್ತದೆ .
ಮೊಮ್ಮಗ : ತಾತ, ವೆಂಕಟೇಶ ತಲೆ ಮೇಲೆ ಹೊಡೆದುಬಿಟ್ಟ …
ತಾತ : ಏನು ನಿನಗೆ ಹೊಡೆದ್ನೆ? ಅವನ ಬಾಯ್ಗೆ ಬೆಂದನ್ನ ಹಾಕ, ಅವನ ಮನೇಲಿ ಎಂಟೆಮ್ಮೆ  ಕರೆಯಾ .., ಸಿಗಲಿ ಅವ್ನು …
ಹರಿಕಥೆ ಚೌಡಪ್ಪ : ಮನೆ ಮಗಳೆಸರು ಭಾಗ್ಯ , ಹೊಲ ಮನೆ ಎಲ್ಲ ಭೋಗ್ಯ . ಹೆಂಡ್ತಿ  ಹೆಸರು ಶಾರದೆ ಪಾಪ! ಮಕ್ಕಳಿಗೆ ಅ , ಆ, ಇ, ಈ ಹೇಳಿಕೊಡೋಕು ಬಾರದೆ?
“ಅವನು ಬುಡಪ್ಪಾ, ಅರೆ ಮೇಲೋದ್ರು (ಬೆಟ್ಟ)ಅನ್ನ ಉಟ್ಟುಸ್ಕೋತಾನೆ .
ಸ್ವಗತ: ಬುತ್ತಿ ಕಟ್ಕೊಂಡೋದ್ರೆ
” ಏನು , ಆ ನಸ್ಗುನ್ನಿ ಕಾಯ್ನ ನೆಂಬ್ತಿಯಾ ? ನೋಡ್ಲಾ ‘ಅಲಲಾ’ ಅನ್ನೋ ಅಳ್ಳಿಮರ  ನಂಬೋದು; ಮೆತ್ಗಿರೋ  ಕಳ್ಳಿ ಮರ ನಂಬಾರ್ದು ಜ್ವಾಕೆ .
” ಅವ್ನು ನಿನ್ಕೆಲಸ ಮಾಡಿಕೊಟ್ಟಾನ..? ನಿನಗೆಲ್ಲೋ  ಹುಚ್ಹು ಅದೇನೋ ಹೇಳ್ತಾರಲ್ಲಾ ‘ ಓಡೋಗೋ  ಬಡ್ಡಿಗೆ ಹಾಲ್ಗೆ ಹೆಪ್ಪಾಕ್ಬುಟ್ಟು ಹೋಗು ಅಂದರಂತೆ ಕೆಲಸ ನೋಡು ಮೂದೇವಿ
ಈ ಕೆಲಸ ನನ್ನ ಕೈಲಾಗಾಕಿಲ್ಲ ನಿನಾದ್ರೆ ವಯಸ್ನುಡುಗಾ ನೆಲ ಗುದ್ದುದರೆ ನೀರು   ಬತ್ತದೆ ಕಣ್ಣಲ್ಲಿ
ಬೊಮ್ಮ : (ಕುಡಿದ ಮತ್ತಿನಲ್ಲಿ ) ನಾಳೆಯೇ ನಿಮ್ಮ ದುಡ್ಡು ಕೊಟ್ ಬುಡ್ತೀನಿ . ಈ ಬೊಮ್ಮ ತಾಯಾಣೆ ಸುಳ್ಳೇಳಾಕಿಲ್ಲ  ಸತ್ಯವೇ ತಾಯಿ (ಪಕ್ಕಕ್ಕೆ ತಿರುಗಿ) ತಾಯೆ  ನಮಪ್ಪನ ಹೆಂಡ್ರು  ಮೊದಲಂಗೆ  ಮೋಸ ಮಾಡಾಕಿಲ್ಲ ಬುದ್ದಿ
ಬಲು ಚಂದವಾಗಿ ಒಗಟಿನಲ್ಲಿ ಮಾತಾಡ್ತಾ  ಮಾತಿಗೊಂದು ಗಾದೆ ಉದುರಿಸುತ್ತಾ ಭಾಷೆನಾ ಜೀವಂತ ಇಟ್ಟಿರೋವು ಹಳ್ಳಿಗಳೇ  ಏನೋ ಗ್ರಾಮರ್  ಸ್ವಲ್ಪ  ಏರುಪೇರಾದುದಕ್ಕೆ ‘ಗ್ರಾಮ್ಯ ‘ ಅಂತ ಯಾರೆಷ್ಟೇ ಹಳಿದರು ಲವಲವಿಕೆಯಿಂದ ಭಾಷೆಯನ್ನು  ಬಳಸುವ ದೃಷ್ಟಿಯಲ್ಲಿ  ಹಳಿಯ ಮೇಲಿರುವುದು  ಹಳ್ಳಿಗಳೇ .
ನಾನು ಬೆಂಗಳೂರಿಗೆ  ಬಂದ ಮೇಲೆ  ಕಾಲೇಜು ದಿನಗಳಿಂದಲೇ  ಹವ್ಯಾಸಿ ರಂಗ ಚಟುವಟಿಕೆಯಲ್ಲಿ  ತೊಡಗಿ ಕೊಂಡೆ . ಕೈಲಾಸಂ  ನಾಟಕಗಳಲ್ಲಿ  ಅಭಿನಯಿಸಿದಾಗ , ಅವರ ಪ್ರಭಾವ ನನ್ನ ಮೇಲಾದ ಕಾರಣ , ಕನ್ನಡಾಂಗ್ಲ ಭಾಷೆಯ ‘ಪರ್ ಮ್ಯುಟೆಶನ್ ಕಾಂಬಿನೇಶನ್ ‘ನಲ್ಲಿ  ತೊಡಗಿಕೊಂಡೆ . ‘ ಸೂತ್ರಧಾರ ವಾರ್ತಾಪತ್ರ ‘ ಈ ಮಾಸ ನಾಟಕ  ರಂಗಪತ್ರಿಕೆಗಳಲ್ಲಿ  ‘ ಕಲಾಕ್ಷೇತ್ರದ ಮೆಟ್ಟಿಲ ಮಹಿಮೆ’ ಕಾಲಂ ಬರೆಯುವಾಗ , ಬಹಳಷ್ಟು  ಸಂಧರ್ಭಗಳಲ್ಲಿ , ಪನ್ -ಪದ ಪ್ರಯೋಗಗಳನ್ನು  ಮಾಡಿ  ಓದುಗರ  ಮೆಚ್ಹುಗೆಗೆ ಪಾತ್ರನಾದೆ , ಮತ್ತವರ  ಒತ್ತಾಸೆಯ  ಮೇರೆಗೆ ‘ಮೆಟ್ಟಿಲ ಮಹಿಮೆ’ ಎರಡು ವಾಲ್ಯುಮುಗಳನ್ನು ಪ್ರಕಟಿಸಿದೆ . ಈ ಅನುಭವಗಳ ಹಿನ್ನಲೆಯಲ್ಲಿ ‘ಹನ್ನೊಂದು ಕಟ್ಟೋ ಬದಲು ಪನ್ ಒಂದು ಕಟ್ಟಿ ನೋಡು ‘ ಎನ್ನುವುದು  ನನ್ನ ಸಲಹೆ .
ಶ್ಲೇಷಾಲಂಕಾರ  ಆಕರ್ಷಣೆ  ಯಾರನ್ನು  ಬಿಟ್ಟಿಲ್ಲ ವಜ್ರವನ್ನು ಆಕರ್ಷಕವಾಗಿ  ಹಲವು ಕೊನೆಗಳಲ್ಲಿ ಕತ್ತರಿಸಿ ಹೊಳೆಯುವಂತೆ ಮಾಡುವ ಕುಶಲ ಕಲೆಗಾರನಂತೆ ಪನ್ ಡಿತನೆಂಬ  ‘ವರ್ಡ್ ಸ್ಮಿತ್ ‘ ಒಂದು ಪದಕ್ಕೆ  ಹಲವಾರು ಅರ್ಥಗಳನ್ನು  ಹೊಳೆಯಿಸುತ್ತಾನೆ . ಸಂದರ್ಭಾನುಸಾರ  ಪದಗಳನ್ನು  ‘ಪನ್’ ಮಾಡೋದು ಒಂದು ‘ಸಾಂಕ್ರಾಮಿಕ ಯೋಗ’ ಒಬ್ಬರಿಂದೊಬ್ಬರಿಗೆ ಹರಡುತ್ತಾ ಒಳಗೊಳ್ಳುವ  ಪ್ರಕ್ರಿಯೆ . ಇದೀಗ . ಹಲವಾರು  ವರ್ಷಗಳಿಂದ ಸಂದರ್ಭಾನುಸಾರ  ನಾನು ಮಾಡಿದ ಪನ್, ತಮಾಷೆ , ಪದ್ಯ ,ಆಲೋಚನೆ . ವಿಚಾರಗಳನ್ನು  ಬರೆದು ಈ ಪುಸ್ತಕದಲ್ಲಿ ಪ್ರಕಟಿಸಿದ್ದೇನೆ . ಪುಸ್ತಕವನ್ನು ಓದಿ ಮುಗಿಸುವಷ್ಟರಲ್ಲಿ ಈ ಪನ್ ಜುರ್ಲಿಯ ಪ್ರಭಾವಕ್ಕೆ  ನೀವು ಒಳಗಾಗಿ , ಶ್ಲೇಷಾಲಂಕಾರ  ಪ್ರಿಯರಾಗದಿದ್ದರೆ ಕೇಳಿ . ಇದು ನನ್ನ ಅಚಲ ನಂಬಿಕೆ . ‘ಸಾವ್ ಧಾನ್’ ದಿಂದ  ಓದಿ ; ನಗೆ ಬಂದರೆ ನಕ್ಕು , ನಂತರ ‘ವಿಶ್ರಾಮ್’ಸ್ಕೋಳಿ ಎಂಬುದೆನ್ನ  ಬಿನ್ನಹ ಯೋಗಾ ಯೋಗವಿದ್ದರೆ ಒಮ್ಮೆ ಭೇಟಿಯಾಗೋಣ

‍ಲೇಖಕರು avadhi

February 15, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: