ಚೀ ಜ ರಾಜೀವ
ಪ್ರಿಯ ಗಾಂಧಿ
ನಿನ್ನ ಮಗನಂತಿದ್ದ ದೇಸಾಯಿ
ಕಾರಾಗೃಹದಲ್ಲಿ ಸತ್ತಾಗ ಅಂದು
ಶವದ ಮೆರವಣಿಗೆಗೆ ನಿನ್ನವರು
ಹಾತೊರೆದರು
ಮಗನ ಅಂತಿಮ ಯಾತ್ರೆ
ಮಾಡಿದರೆ ತಪ್ಪೇನು ?
ಜನರಿಗೆ ಓಗೊಟ್ಟು ಒಪ್ಪಿದೆ ನೀನು
ಆದರೆ, ಸತ್ತ ಮಗ ಬರೀ ಮಗನಲ್ಲ
ಸ್ವಾತಂತ್ರ್ಯ ಹೋರಾಟಗಾರನೂ ಆಗಿದ್ದ
ನೆನಪಿಸಿತು ಬ್ರಿಟಿಷ್ ಸರಕಾರ
ಎಚ್ಚೆತ್ತು ನೀ ಹೇಳಿದೆ-
ಮಗನ ಶವ ಮುಂದಿಟ್ಟುಕೊಂಡು
ಸ್ವಾತಂತ್ರ್ಯದ ರಾಜಕೀಯ ಮಾಡಲಾರೆ !
ಪ್ರಿಯ ಗಾಂಧಿ
ನಿನ್ನ ಮೊಮ್ಮಗನಂಥ ಕಬೀರ
ಕೋಮುವಾದದಲ್ಲಿ ಕರಗಿದಾಗ ಇಂದು
ಶವದ ಯಾತ್ರೆಗೆ ಮುಂದಾದರು ಮತ್ತದೆ ಜನ
ಮಾಡಿದರೆ ತಪ್ಪೇನು
ನಡೆದರೆ ಏನಾದೀತು ?
ಕಬೀರನ ಮನೆಯವರೂ ದ್ವಂದ್ವದಲ್ಲಿದ್ದರು
ಎಚ್ಚರಿಸಿತು ಸರಕಾರ-
ಕಬೀರ್ ಬರೀ ಕಬೀರ್ ಅಲ್ಲ
ನೆನಪಿಸಿತು ವಾತಾವರಣದ ಮತಾಂಧತೆಯ
ಎಚ್ಚೆತ್ತ ಕಬೀರನ ಕುಟುಂಬ ಘೋಷಿಸಿತು
ಶವ ಮುಂದಿಟ್ಟುಕೊಂಡು
ಕೋಮು ರಾಜಕೀಯ ಮಾಡಲಾರೆವು !
ಪ್ರಿಯ ಗಾಂಧಿ,
ಯಾರು ಹೇಳಿದರು ನೀ ಇಲ್ಲವೆಂದು?
ಕಬೀರನ ಮನೆಯವರ ಘೋಷಣೆಯಲ್ಲಿ ನೀನಿದ್ದೆ
ಮಗನ ಸಾವಿಗೆ ಪ್ರತೀಕಾರ ಸಲ್ಲದು
ಎಂಬ ಕುಟುಂಬ ಕಳಕಳಿಯಲ್ಲೂ ನೀನಿದ್ದೆ
ಹೆಣದೊಂದಿಗೆ ರಾಜಕೀಯ ಮಾಡಬಾರದು
ಎಂಬ ವಿವೇಕ ನಿನ್ನದೇ ಅಲ್ಲವೇ ?
ಕಡೆಗೆ,
ಒಂದು ಕಣ್ಣಿಗೆ ಮತ್ತೊಂದು ಕಣ್ಣೇ
ಎಂಬ ಪಶ್ಚಾತ್ತಾಪದ
ಸೊಲ್ಲಿನಲ್ಲೂ ನೀನೇ ಇದ್ದೆ !
ಅಂದು-ಇಂದು-ಎಂದೆಂದೂ
ನೀ ಇರುವೆ ಕಬೀರರ ನಡುವೆ
ಭಾವಪೂಣ೯, ಅಥ೯ಪೂಣ೯ ಕವಿತೆ. ಧನ್ಯವಾದಗಳು.