ಡಿ ಕೋಮಲಾ
ಇತ್ತೀಚಿಗೆ ಬಿಡುಗಡೆಯಾದ ಮೈಲ್ ಸ್ಟೋನ್ ಮೋಶನ್ ಪಿಚ್ಚರ್ಸ್ಙ ರವರ 'ಕನ್ಯಾಕುಮಾರಿ' ಕಿರುಚಿತ್ರವನ್ನು ವೀಕ್ಷಿಸಿದಾಗ ನನಗನ್ನಿಸಿದ್ದು ಈ ಜಂಜಾಟದ ಬದುಕಿನಲ್ಲಿ ನಮ್ಮನ್ನು ಬಡಿದೆಚ್ಚರಿಸಲು ಇಂತಹದೊಂದು ಪ್ರಯತ್ನದ ಅವಶ್ಯಕತೆ ಇತ್ತು ಎಂದು. ಯುವ ಪ್ರತಿಭೆ ಶಂಕರ್ ದೇಶ್ ರವರ ಚಿತ್ರಕಥೆ ಸಂಭಾಷಣೆ ಹಾಗೂ ನಿರ್ದೇಶನದ ಮೊದಲ ಚಿತ್ರ ವೀಕ್ಷಕರನ್ನು ಕೊನೆಯವರೆಗೂ ಹಿಡಿದು ನಿಲ್ಲಿಸುತ್ತದೆ.
ಶ್ರೀಮತಿ ವಿಜಯಲಕ್ಷ್ಮಿ ಸತ್ಯಮೂರ್ತಿಯವರು ತುಂಬಾ ಸೊಗಸಾಗಿ ಕತೆಯನ್ನು ಹೆಣೆದಿದ್ದಾರೆ. ಕಿರು ಚಿತ್ರದಲ್ಲಿ ಕೆಲವೇ ಪಾತ್ರಗಳಿದ್ದರೂ ಪ್ರತಿಯೊಂದು ಪಾತ್ರವೂ ಒಂದು ಜೀವನವನ್ನು, ಜೀವಂತಿಕೆಯನ್ನು ಪ್ರತಿನಿಧಿಸುತ್ತದೆ. ನೆನ್ನೆ ಇಂದು ನಾಳೆಗಳ ಮಧ್ಯದ ಹೋರಾಟದ ಬದುಕು, ಪರಿಸ್ಥಿತಿಯ ಕೈಗೊಂಬೆಯಾಗಿ ವರ್ತಿಸುವ ಪಾತ್ರಗಳು ಜೀವನಕ್ಕೆ ಹತ್ತಿರವಾಗುತ್ತವೆ. ಮಾತಿಗಿಂತಲೂ ಮೌನವೇ ಹೆಚ್ಚು ಮಾತನಾಡುವುದು ಇಲ್ಲಿರುವ ವಿಶೇಷತೆ. ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅವರ ಸಾಹಿತ್ಯದ 'ಎದೆಯಲಿ ಉಳಿದ ಯಾವುದೋ ಮಾತು ಹಿಂಡುತ್ತಿದೆ ಜೀವ, ಕಾಣದೆ ಹೋದ ನಿನ್ನಯ ಕನಸು ಕಾಡುತ್ತಿದೆ ಈಗ' ಹಾಡು ನಮ್ಮನ್ನು ಹಾಗೇ ಕಾಡುತ್ತದೆ.
ಮುಖ್ಯ ಪಾತ್ರದಲ್ಲಿರುವ ಶ್ರೀಮತಿ ಭಾವನಾ ಗುರುಪ್ರಸಾದ್ ಹಾಗೂ ಸಂತೋಷ್ ಕೆ ಬೆಂಗೇರಿ ಯವರ ಮಾತು-ಮೌನ-ಕೊಳಲನಾದ ವಿಶ್ರಿತ ಸಂಭಾಷಣೆ ಕಿವಿಗಷ್ಟೇ ಅಲ್ಲ ಮನಸ್ಸಿಗೂ ತಾಗುತ್ತದೆ. ಪ್ರವೀಣ ಹೆಚ್ ಪಿ ಅವರು ವ್ಯವಸ್ಥಿತವಾಗಿ ಸಂಕಲನ ಮಾಡಿದ್ದಾರೆ. ಈ ಕಿರುಚಿತ್ರಕ್ಕಾಗಿ ನಿರ್ದೇಶಕರಾದ ಶಂಕರ್ ದೇಶ್ ಅವರಿಗೆ ಪಿಲ್ಮ್ಹಾಲಿಕ್ ಫೌಂಡೇಶನ್ ಅರ್ಪಿಸುವ ಕರ್ನಾಟಕ ಯೂತ್ ಇಂಟರ್ನ್ಯಾಷನಲ್ ಶಾರ್ಟ್ ಫಿಲಂ ಫೆಸ್ಟಿವಲ್ ನಲ್ಲಿ ಬೆಸ್ಟ್ ಡೆಬ್ಯು ಫಿಲಂ ಮೇಕರ್ ಪ್ರಶಸ್ತಿ ಲಭಿಸಿರುವುದು ಅವರ ಯಶಸ್ಸಿನ ಕಿರೀಟಕ್ಕೆ ಗರಿಯಾಗಿದೆ.
ನಿರ್ದೇಶಕ ಶಂಕರ್ ದೇಶ್ ಅವರಿಗೂ, ನಿರ್ಮಾಪಕರಿಗೂ ಹಾಗೂ ಸಂಪೂರ್ಣ ಕಿರುಚಿತ್ರತಂಡಕ್ಕೂ ಅಭಿನಂದನೆಗಳು. ನನ್ನ ಆಪ್ತ ಸ್ನೇಹಿತೆಯ ತಮ್ಮನಾಗಿರುವ ಶಂಕರ್ ದೇಶ್ ರವರ ನಿರ್ದೇಶನದಲ್ಲಿ ಇನ್ನಷ್ಟು ಮತ್ತಷ್ಟು ಚಿತ್ರಗಳು ಬರಲಿ ಎಂದು ಶುಭ ಹಾರೈಸುವೆ.
0 ಪ್ರತಿಕ್ರಿಯೆಗಳು