ಖ್ಯಾತ ಕಥೆಗಾರ್ತಿ ವೋಲ್ಗಾ ಅವರ ಕಥೆಗಳು ಮತ್ತೆ ಕನ್ನಡಕ್ಕೆ ಸಿಕ್ಕಿದೆ.
ಅಜಯ್ ವರ್ಮಾ ಅಲ್ಲೂರಿ ಈ ಕಥೆಗಳನ್ನು ಕನ್ನಡಕ್ಕೆ ತಂದಿದ್ದಾರೆ.
‘ವಿಮುಕ್ತೆ’ ಕೃತಿ ರಾಮಾಯಣವನ್ನು ಸ್ತ್ರೀವಾದಿ ದೃಷ್ಟಿಕೋನದಿಂದ ವಿಶ್ಲೇಷಿಸಿದೆ.
ಈ ಕೃತಿಯ ಬಗ್ಗೆ ಖ್ಯಾತ ಸಾಹಿತಿ ವೈದೇಹಿ ಹಾಗೂ ವಿಮರ್ಶಕ ಓ.ಎಲ್.ನಾಗಭೂಷಣಸ್ವಾಮಿ ಅವರ ನೋಟ ಇಲ್ಲಿದೆ-
ವೈದೇಹಿ
ಓ.ಎಲ್. ನಾಗಭೂಷಣ ಸ್ವಾಮಿ
ಓಲ್ಗಾ ಎಂಬ ಹೆಸರಿನಿಂದಲೇ ಪ್ರಖ್ಯಾತರಾಗಿರುವ ಪಿ. ಲಲಿತಾ ಕುಮಾರಿ ತೆಲುಗಿನ ಪ್ರಮುಖ ಲೇಖಕರು. ರಾಮಾಯಣದ ಅಮುಖ್ಯವೆಂದು ಭಾವಿಸಲಾಗಿರುವ ಹೆಣ್ಣು ಪಾತ್ರಗಳು ‘ವಿಮುಕ್ತೆ’ಯಲ್ಲಿ ತಮ್ಮ ಕಥೆಯನ್ನು ನಾಯಕಿ ಎಂದು ಪರಿಗಣಿತಳಾಗಿರುವ ಸೀತೆಗೆ ಹೇಳಿಕೊಳ್ಳುತ್ತವೆ. ಈ ಕಥೆಗಳನ್ನು ಕೇಳುತ್ತ ಸೀತೆ ಬಿಡುಗಡೆ ಪಡೆಯುತ್ತಾಳೆ, ಇಡೀ ರಾಮಾಯಣವನ್ನು ಹೆಣ್ಣು ಪಾತ್ರಗಳ ದೃಷ್ಟಿಯಿಂದ ಓದುಗರು ಮತ್ತೆ ಕಟ್ಟಿಕೊಳ್ಳುವಂತಾಗುತ್ತದೆ.
ಪರಸ್ಪರ ಅಕ್ಕ-ತಂಗಿಯರ ಭಾವನೆಯನ್ನು ಬೆಳೆಸಿಕೊಳ್ಳುವ ಮೂಲಕವೇ ಮಹಿಳೆಯರ ಬಿಡುಗಡೆ ಸಾಧ್ಯವೆನ್ನುವುದು ಈ ಸಂಕಲನದ, ಓಲ್ಗಾ ಅವರ ಒಟ್ಟು ಬರವಣಿಗೆಯ ಶ್ರುತಿ. ರಾಮಾಯಣದ ಪಾತ್ರಗಳ ಕಥನದ ಮೂಲಕ ಮಹಾಕಾವ್ಯಕ್ಕೆ ಸಾಂಪ್ರದಾಯಿಕ ವ್ಯಾಖ್ಯಾನದಿಂದ ವಿಮುಕ್ತಿ ದೊರಕಿಸಿದ್ದಾರೆ ವೋಲ್ಗಾ.
ಭಾರತೀಯ ಸ್ತ್ರೀವಾದದ ಪ್ರಮುಖ ಕಥಾ ಸಂಕಲನವನ್ನು ಅಜಯ್ ವರ್ಮಾ ಅಲ್ಲೂರಿ ಕನ್ನಡಕ್ಕೆ ತಂದು ಓದುಗರ ಕೃತಜ್ಞತೆಗೆ ಪಾತ್ರವಾಗಬೇಕಾದಂಥ ಕೆಲಸ ಮಾಡಿದ್ದಾರೆ. ವಿಜ್ಞಾನದ ವಿದ್ಯಾರ್ಥಿಯಾದ ವರ್ಮಾ ಅವರಿಗೆ ಇರುವ ತೆಲುಗಿನ ಒಡನಾಟ, ಕನ್ನಡದ ತಿಳಿವು, ಅನುವಾದದಲ್ಲಿ ಗಂಭೀರ ಆಸಕ್ತಿ, ವಿಶ್ವಸಾಹಿತ್ಯದ ಬಗ್ಗೆ ಕುತೂಹಲ, ಅಪಾರವಾದ ಓದಿನ ಪ್ರೀತಿ ಇವೆಲ್ಲ ಮೇಳೈಸಿ ಕನ್ನಡದ ಈ ಸಂಕಲನ ರೂಪುಗೊಂಡಿದೆ.
ತೆಲುಗಿನ ಕೃತಿಗೆ ಅನ್ಯಾಯವಾಗದಂತೆ, ಕನ್ನಡದಲ್ಲಿ ಅಸಹಜವಾಗದಂತೆ ವಿಮುಕ್ತೆಯನ್ನು ಅನುವಾದಿಸಿರುವ ಅಜಯ್ ವರ್ಮ ಅಭಿನಂದನೆಗೆ ಅರ್ಹರು. ಭಾಷೆಗಳ ಅಧ್ಯಯನದ ಬಗ್ಗೆಯೇ ಶೈಕ್ಷಣಿಕ ಆಸಕ್ತಿ ಕುಗ್ಗುತ್ತಿರುವ ಈ ಹೊತ್ತಿನಲ್ಲಿ ನಮ್ಮ ನೆರೆಹೊರೆಯ ನುಡಿಗಳ, ದೇಶ ವಿದೇಶಗಳ ಭಾಷೆಗಳ ಸಾಹಿತ್ಯವನ್ನು ಕನ್ನಡ ಮಾತ್ರ ಬಲ್ಲ ಓದುಗರಿಗೆ ಒದಗಿಸುವ ಕಾರ್ಯದಲ್ಲಿ ತೊಡಗುವುದು ಬಹಳ ಮುಖ್ಯವಾದ ಸಾಂಸ್ಕೃತಿಕ ಜವಾಬ್ದಾರಿ. ಅಜಯ್ ವರ್ಮಾ ಕನ್ನಡದ ಮುಖ್ಯ ಅನುವಾದಕಾರಾಗಿ ಬೆಳೆಯುವ ಸೂಚನೆಗಳೆಲ್ಲ ಈ ಕೃತಿಯಲ್ಲಿವೆ.
ಓದಬೇಕೆನಿಸಿದೆ.