ಬಾಲವನ ಚಂದ್ರು
ಊರು, ದೇಶ, ಕಾಲಗಳ ಮೀರಿದ ಸಾಹಿತ್ಯ ನಮ್ಮದಾಗುವುದು ಓದಿನ ಮೂಲಕ. ಈ ರೀತಿಯ ಸಾಹಿತ್ಯದ ಓದು ನಮ್ಮ ಜೀವನೋತ್ಸಾಹವನ್ನು ಹೆಚ್ಚಿಸುವುದು. ಕಥೆಗಳನ್ನು ಕಥಾನಕಗಳನ್ನು ಕಣ್ಣಿಗೆ ಕಟ್ಟುವಂತೆ ಈ ಕ್ಷಣಕ್ಕೆ ಇಲ್ಲೇ ನಡೆದುಹೋಯಿತು ಎನ್ನುವಂತೆ ನಿರೂಪಿಸುವುದು ಒಂದು ಕಲೆ. ಇದನ್ನು ವರ್ತಮಾನ ಭೂತ, ಭವಿಷ್ಯ, ಎಂದು ಮತ್ತೆ ವಿಂಗಡಿಸಬಹುದು. (ನಮಗೆ ಬೇಕಾದರೆ ಮಾತ್ರ).
ಸಣ್ಣ ಸಣ್ಣ ಸಂಗತಿಗಳನ್ನು ಕಥಾನಕದ ಎಳೆಗಳಾಗಿ ನಿರೂಪಿಸಿ ಎಳೆವಯಸ್ಸಿನಲ್ಲೇ ಶಹಬ್ಬಾಸ್ ಎನ್ನಿಸಿಕೊಂಡಿದ್ದಾರೆ ಕತೆಗಾರ ದಾದಾಪೀರ ಜೈಮನ್. ಹೆಸರಿನೊಂದಿಗೆ “ದಾದ” ಇರುವ ಇವರು ಮುಂದೆ ಬರವಣಿಗೆ ಮುಂದುವರಿಸಿದರೆ ಕಥಾಲೋಕದ ‘ದಾದ’ ಆಗುವುದರಲ್ಲಿ ಸಂಶಯವೇ ಬೇಡ. 2021 ರಲ್ಲಿ ಪ್ರಕಟಗೊಂಡ ಅವರ ನೀಲಕುರಿಂಜಿ ದ ಕಥೆಗಳು ಯಕಶ್ಚಿತ್ ಹೊಸತನದ ಹೂರಣ.
ಹಗರಿಬೊಮ್ಮನಹಳ್ಳಿಯ ರಾಗಿ ಬೆಳೆಯುವ ನಾಡಿನಿಂದ ಉದ್ಯೋಗದ ನಿಮಿತ್ತ ಬೆಂಗಳೂರಿಗೆ ಬಂದು ನಗರ ಜೀವನದ ಧಮನಿಯ ಸ್ಥಿತಿಗತಿಗಳನ್ನು ಕಥೆಗಳಾಗಿ ನಿರೂಪಿಸಿದ್ದಾರೆ. “ಈ ಲೆಕ್ಕದ ಮೇಷ್ಟ್ರು”. ಪೇಟೆ ಸಮುದ್ರದ ದಾರಿ, ಜಾಲಗಾರ, ಟೋಕನ್ ನಂಬರ್, ಆವರಣ, ಎಲ್ಲೋ ಎಲ್ಲೋ, ಈ ರೀತಿಯ ವರ್ಣನೆಗಳಿಂದ ಕೂಡಿದೆ. ತೇರು, ನೀಲಕುರಿಂಜಿ, ಕೊನೆಯ ಮಳೆ, ಈ ಮೂರು ಕಥೆಗಳು ಜೀವನದ್ರವ್ಯದ ಪಾಕ.
ಮೂರು ಕಥೆಯಲ್ಲಿರುವ ವಿಭಿನ್ನ ಪಾತ್ರಗಳು ಅನನ್ಯ. ಆವರಣ, ಮತ್ತು ತೀರದ ಒಲವಿನ ಒಂಟಿ ಹಾಡು, ಕಥೆಗಳು ಕಥೆಗಳಿಗಾಗಿ ಸೃಷ್ಟಿಗೊಂಡ ಅನುಭವ ನೀಡಿತು. ಒಂದು ಕಥಾಸಂಕಲನದ ಎಲ್ಲಾ ಕಥೆಗಳು ಅದ್ಭುತವಾಗಿ ಇರಬೇಕಾಗಿಲ್ಲ. ಗಣಿತದ ಮೇಷ್ಟ್ರು ಎಷ್ಟು ಚೆನ್ನಾಗಿ ಕಥೆ ಬರೆಯುತ್ತಾರಲ್ಲ! ಎಂದು ‘ತೇರು’ ಕಥೆಯನ್ನು ಎರಡೆರಡು ಸಲ ಓದಿದೆ. ಯುವ ಬರಹಗಾರ ಅನುವಾದಿಸಿರುವ ಪರ್ಧ & ಪಾಲಿ ಗಮಿ ಓದಬೇಕಾಗಿದೆ. ಕನ್ನಡದ ತೇರನ್ನೆಳೆಯುವ ಯುವ ಬರಹಗಾರರಿಗೆ ನಾವು ಪುಸ್ತಕಗಳನ್ನು ಖರೀದಿಸಿ ಓದುವುದರ ಮೂಲಕ ಉತ್ಸಾಹ ತುಂಬಬೇಕು. ಸಲಾಂ. ದಾದಾಪೀರ ಜೈಮನ್ ಬರೆಯಿರಿ ಇನ್ನಷ್ಟು ಹೊಸ ಕಥೆಗಳ.
0 ಪ್ರತಿಕ್ರಿಯೆಗಳು