ಕು ಸ ಮಧುಸೂದನ ರಂಗೇನಹಳ್ಳಿ
ಕಾಲವೇ ಸ್ತಂಭಿಸಿದಂತಿದ್ದ ಆ ಕ್ಷಣ
ಸರಿದು ಹೋಯಿತು
ಕನ್ನಡಿಯ ಗಾಜಿನ ಮೇಲೆ
ಗೋಲಿಯೊಂದು ಉರುಳಿ ಹೋದಂತೆ
ಹೇಗಾಯಿತು? ಯಾಕಾಯಿತು?
ಕೇಳಿದೆಲ್ಲ ಪ್ರಶ್ನೆಗಳಿಗೂ
ನಿರುತ್ತರವೇ ಕರಾರುವಾಕ್ ಉತ್ತರ
ಭವಿಷ್ಯದತ್ತ ಕಣ್ಣಿರಲಿ
ಭೂತದ ಗೊಡವೆ ಬೇಡ
ವರ್ತಮಾನದ ಉಪದೇಶ ಉಚಿತ
ಒಪ್ಪುಗಳ ಬರೆದಿಟ್ಟ ಇತಿಹಾಸದ ಪುಸ್ತಕಗಳನೋದು
ಇವೆಯೇ ತಪ್ಪುಗಳ ಕಿಂಚಿತ್ತಾದರೂ ಪ್ರಸ್ತಾಪ ನೋಡು
ತಾನು ಅಪರಾದಿಯೆಂದು
ಯಾವನೂ ಒಪ್ಪಿಕೊಳ್ಳುವುದಿಲ್ಲ
ನ್ಯಾಯಾಲಯದಲ್ಲಿರಲಿ
ಖಾಸಗಿಕ್ಷಣದಲ್ಲಿರಲಿ
ಪಡೆಯುವುದು ನಡೆದಿದೆ ನಿರಂತರ ಅನುಮಾನದ ಲಾಭ
ಬೆನ್ನು ತಿರುಗಿಸಿ ನಡೆದಷ್ಟೂ
ಬೆನ್ನು ಹತ್ತಿ ಬರುವ ಬೇತಾಳ
ಈ ಪ್ರಶ್ನೆಗಳು
ಮುಟ್ಟು ನಿಂತವಳಿಗಷ್ಟೆ ಗೊತ್ತು ಮುಟ್ಟಿಸಿಕೊಂಡ ಗುಟ್ಟು
0 ಪ್ರತಿಕ್ರಿಯೆಗಳು