ಶ್ರೀಕಾಂತ ಪತ್ರೆಮರ
ಒಡೆದುದು ಕನ್ನಡಿಯಷ್ಟೆ
ಹೋದರೆ ಮತ್ತೊಂದು
ಕೊಂಡು ತರಬಹುದು..!
ಚೆಂದಗಾಣುವುದು ಮುಖ.!
ಕದಡಿದುದು ಕೆನೆ ಕಟ್ಟಿದ
ಮೃದುಮನದ ಬನಿಯಷ್ಟೆ
ತನುವ ತಮವಿರದೆ ತಿಳಿದರೆ
ತಿಳಿಯಾಗದೆ ಇರುವುದೇನದು?
ಹುಳಿಯಾದ, ಹೆಪ್ಪುಗಟ್ಟಿದ,
ಬಹು ದಿನಗಳಿಂದ ಹಳಸಿದ,
ಬಳಸಲಾಗದ ಕಹಿ ನೆನಪುಗಳ
ಮನೋಭಾವದ ಬಟ್ಟಲಿಂದ
ಬಿಸುಟಿ ತೊಳೆದು ಶುಚಿಮಾಡಿ.!
ಪ್ರೀತಿ ನಂಬಿಕೆ ವಿಶ್ವಾಸ ಒಡೆದಿಲ್ಲ
ಮನ ಮತ್ತೆ ಹೆರದ ಬಂಜೆಯಲ್ಲ
ಮತ್ತೆಮತ್ತೆ ಹಡೆಯಬಹುದಲ್ಲ
ಮುದ ಹದಗೊಂಡ ಬನದಲ್ಲಿ
ಸೊರಗಬಾರದು ಜೀವಸೆಲೆ
ಕರಗಬಹುದು ನೋವನೆಲೆ
ಇಂಗಲೆ ಬಾರದು ಭರವಸೆ
ಕರವಿಡಿದು ನಡೆಸುವನಿಹನು
ಕುಗ್ಗದೆ ಜಗ್ಗದೆ ಬದುಕಿಬಿಡು
ಜೀವವೆ ಮನಸಾರೆ ಭಜಿಸಿ.!
ಆಶಾವಾದಿ ಕವನ