ಸದಾಶಿವ್ ಸೊರಟೂರು
ಊರಿಗೆ ದಾರಿ
ಯಾರು ತೋರಿದರೇನು?
ಎನ್ನುವ
ಜಿಪಿಎಸ್ ನಂತಹ ಮಾತಿನಲ್ಲಿ
ನನಗೆ ಆಸಕ್ತಿಯಿಲ್ಲ
ದಾರಿ ತೋರಿ ಹೋದವನ
ಆ ದಾರಿಯಲಿ
ಬಹಳಮಾಡಿ ಏನುಂಟು?
ಗರಿಕೆಯೇ ಇಲ್ಲದ ಮಣ್ಣು ನೆಲ
ಇಲ್ಲವೇ ಡಾಮರು ರಸ್ತೆ
ಪಕ್ಕಕ್ಕೆ ಸವರಿದ ಬೇಲಿ ಸಾಲುಗಳು
ಊರು ಸೇರಬಹುದಷ್ಟೆ
ಆದರೆ
ಊರು ಸೇರುವುದೊಂದೇ
ಬದುಕಲ್ಲ!
ಕುದುರೆಯೂ ಸಾಗುತ್ತದೆ
ಕಣ್ಣುಕಟ್ಟಿಕೊಂಡು
ಸಾಗುವ ಸಿದ್ದ ದಾರಿಯೊಂದಿದ್ದರೆ
ಜಿಪಿಎಸ್ ನ ಹುಡುಗಿ
ದಾರಿಯಲಿ ನೀನು ಕಳೆದು
ಹೋಗಬೇಕೆಂದರೂ ಬಿಡುವುದಿಲ್ಲ
ಯಾರೊ ತೋರಿದ ಹಾದಿಯನು
ನೀನಾಗಿಯೇ ತಪ್ಪುವ ಧೈರ್ಯವೂ
ಮಾಡುವುದಿಲ್ಲ!
ಅತ್ತ ಆ ತುದಿಯಲಿ
ಏನಿದೆ ಎಂದು ಸ್ವತಃ ದಾರಿಗೂ
ತಿಳಿಯದ
ಯಾರೂ ತೋರದ ಹಾದಿಯಲಿ
ಪಾದಗಳನೊಮ್ಮೆ
ಊರಿ ನೋಡು
ಹೆಜ್ಜೆ-ಹಜ್ಜೆಗೂ ಒಲವು
ನಿಗೂಢ ನಾಳೆಗಳಂತ
ಚೆಲುವು!
ಸೇರುವುದಷ್ಟೇ ಗುರಿಯಲ್ಲ
ಸೇರುತ್ತಿರುವುದು ಗುರಿಯೇ!
ಸದಾಶಿವ ಸೊರಟೂರ್ ಒಳ್ಳೆಯ ಕವನಗಳನ್ನು ಬರೆಯುತ್ತಿದ್ದಾರೆ