ಐ ಕೆ ಬೊಳುವಾರು
ಶ್ರೀಪಾದ ಭಟ್ಟರ ರಂಗಪಯಣದ ಕಥೆ ‘ದಡವ ನೆಕ್ಕಿದ ಹೊಳೆ’ ಗಾಗಿ ಸಂಪರ್ಕಿಸಿ –https://shorturl.at/xBNQ6
ಕಳೆದ 25 ವರ್ಷಗಳ ಈಚೆಗಿನ ಕನ್ನಡ ರಂಗಭೂಮಿಯ ಆಗುಹೋಗುಗಳನ್ನು ಗಮನಿಸುವವರಿಗೆ , ಕರ್ನಾಟಕದಲ್ಲಿ ಈಗ ರಂಗಭೂಮಿಯ ಕುರಿತು ಅಧ್ಯಯನ ಮಾಡಬಯಸುವವರಿಗೆ, ನೀನಾಸಂ ಸಾಣೆಹಳ್ಳಿ ಮುಂತಾದ ಹಲವಾರು ರಂಗ ಶಿಕ್ಷಣ ಸಂಸ್ಥೆಗಳಿವೆ. ಎನ್ ಎಸ್ ಡಿ ಪ್ರಾದೇಶಿಕ ರಂಗಸಂಸ್ಥೆಯೂ ಇದೆ .ರಂಗಾಯಣಗಳಿವೆ. ಇಲ್ಲಿ ತರಬೇತಾದ ನೂರಾರು ವಿದ್ಯಾರ್ಥಿಗಳು ಹೊರ ಬಂದಿದ್ದಾರೆ.ತಮ್ಮದೇ ಆದ ರೀತಿಯಲ್ಲಿ ರಂಗಭೂಮಿಯನ್ನು ಕಟ್ಟುವ ಕೆಲಸವನ್ನು ಮಾಡುತ್ತಿದ್ದಾರೆ.
ಆಧುನಿಕ ರಂಗಭೂಮಿಯ ಕೆಲಸ ಅಂದರೆ ತರಬೇತಾದವರು ಮಾತ್ರ ಮಾಡಬೇಕು ಎನ್ನುವಷ್ಟರ ಮಟ್ಟಿಗೆ ವಾಡಿಕೆಯಾಗಿದೆ. ಅಲ್ಲಲ್ಲಿ ನಟನೆಯ ಕುರಿತಾದ ವಿಶೇಷ ತರಗತಿಗಳು ನಡೆಯುತ್ತಿವೆ .
ಈ ತರಗತಿಗಳು ವೃತ್ತಿಪರರಿಗೆ ಮಾತ್ರ ಎಂಬಂತೆ ನಡೆಯುತ್ತಿದೆ . ಹಿರಿಯ ರಂಗ ನಿರ್ದೇಶಕ ಪ್ರಸನ್ನರಂತೂ ಈಗಾಗಲೇ ತರಬೇತಿ ಪಡೆದು ಕೆಲಸ ಮಾಡುತ್ತಿರುವ ನಟ ನಟಿಯರಿಗಾಗಿಯೇ ಉನ್ನತ ರಂಗ ಶಿಕ್ಷಣ ನೀಡುವ ಕೆಲಸ ಮಾಡುತ್ತಿದ್ದಾರೆ .
ಇಂತಹ ಸಂದರ್ಭದಲ್ಲಿ ರಂಗಭೂಮಿಯನ್ನು ಹವ್ಯಾಸವಾಗಿ ತೊಡಗಿಸಿಕೊಂಡ ಡಾ.ಶ್ರೀಪಾದ ಭಟ್ ಅವರು ( ಅವರೇ ಹೇಳಿಕೊಳ್ಳುವ ಹಾಗೆ ಯಾವುದೇ ರಂಗಶಿಕ್ಷಣ ಕೇಂದ್ರದಲ್ಲಿ ಅಧ್ಯಯನ ಮಾಡದೆಯೇ ….ಕನ್ನಡ ಹೊರತುಪಡಿಸಿದರೆ ಇಂಗ್ಲಿಷ್ ಇತ್ಯಾದಿ ಇತರ ಭಾಷೆಗಳಲ್ಲಿ ಪರಿಣತಿ ತನಗಿಲ್ಲ ಎಂದು ಹೇಳಿಕೊಳ್ಳುತ್ತಲೇ) …ಆಧುನಿಕ ರಂಗಭೂಮಿಯ ಕೆಲಸಗಳನ್ನು ಗಂಭೀರವಾಗಿ ಮಾಡಿಕೊಂಡು ಬಂದಿದ್ದಾರೆ. ಬಹುಶ ಇವರ ಹಾಗೆ ಹವ್ಯಾಸಿ ರಂಗಭೂಮಿಯಿಂದ ಬಂದು ಗಂಭೀರವಾಗಿ ಈ ಶತಮಾನದಲ್ಲಿತೊಡಗಿಸಿ ಕೊಂಡವರು ಬೇರೆ ಯಾರೂ ನನಗೆ ನೆನಪಾಗುತ್ತಿಲ್ಲ .
ಅವರೊಂದಿಗಿರುವುದು ಅವರು ಕೆಲಸ ಮಾಡಿದ ವಿವಿಧ ರಂಗಭೂಮಿಯ ಕೆಲಸಗಳು ಮತ್ತು ಅಪಾರವಾದ ಸಾಹಿತ್ಯ ಮತ್ತು ರಂಗಭೂಮಿಯ ಕುರಿತಾದ ಓದು. ಅವರೀಗ ರಂಗಭೂಮಿಯ ಒಡನಾಟದ ಕುರಿತು ಒಂದು ಒಳ್ಳೆಯ ಪುಸ್ತಕವನ್ನು ಬರೆದು ಪ್ರಕಟಿಸಿದ್ದಾರೆ .ಬಹುರೂಪಿ ಪ್ರಕಾಶನ ಅದನ್ನು ಆಸಕ್ತರ ಕೈಗೆ ನೀಡುವ ಜವಾಬ್ದಾರಿಯನ್ನು ವಹಿಸಿಕೊಂಡಿದೆ.
ಅದರಲ್ಲಿ ಅವರು ತಾವು ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಬಗೆಯನ್ನು ಆತ್ಮಚರಿತ್ರೆಯೇನೋ ಎನ್ನುವ ಹಾಗೆ ವಿಸ್ತಾರವಾಗಿ ಬರೆದುಕೊಂಡಿದ್ದಾರೆ. .ಅದರೊಳಗಿನ ಹರಿವನ್ನು ಗಮನಿಸಿದರೆ ಇದೊಂದು ರಂಗಭೂಮಿಯ ವಿಸ್ತಾರಕ್ಕೆ ಅತ್ಯುತ್ತಮ ಪಠ್ಯ ಎಂಬುದು ಎಲ್ಲರ ಗಮನಕ್ಕೂ ಬರಬಹುದಾದ ಕೃತಿಯಾಗಿದೆ.
ಡಾ.ಶ್ರೀಪಾದ ಭಟ್ಟರು ತಾವು ಕೆಲಸ ಮಾಡಿದ ಬೇರೆ ಬೇರೆ ಊರುಗಳ ಬೇರೆ ಬೇರೆ ನಟ ನಟಿಯರೊಂದಿಗಿನ ಒಡನಾಟದಲ್ಲಿ ಕಟ್ಟಿಕೊಂಡ ನಾಟಕದ ವಿವರ ನೀಡುತ್ತಾರೆ. ಇದರಲ್ಲಿ ಮಕ್ಕಳ ರಂಗಭೂಮಿ. ಬೀದಿ ನಾಟಕಗಳಿಂದ ತೊಡಗಿ ನಟನಾ, ನವೋದಯ, ಸಮುದಾಯ ,ರಂಗಾಯಣ, ಬೆನಕ ಮುಂತಾದ ರೆಪರ್ಟರಿಗಳಿಗೆ ಮಾಡಿದ ನಾಟಕದ ವಿವರಗಳಿವೆ .
ಗ್ರಾಮೀಣ ಪ್ರದೇಶದ ಹವ್ಯಾಸಿ ನಾಟಕಗಳನ್ನು ಭಾರಂಗಂ ಉತ್ಸವಕ್ಕೆ ಚಶ್ನೆ ಬಚ್ಪನ್ ಫೆಸ್ಟಿವಲ್ ಗೆ ಕರೆದುಕೊಂಡು ಹೋಗಿ ಮೆಚ್ಚುಗೆ ಪಡೆದು ಬಂದಿರುವ ವಿವರಗಳೂ ಇವೆ .
ಪಾಪು ಗಾಂಧಿ ಬಾಪು ಗಾಂಧಿಯನ್ನಂತೂ ನೂರಕ್ಕೂ ಹೆಚ್ಚು ಕಲಾವಿದರು ಸಾವಿರಾರು ಪ್ರದರ್ಶನಗಳನ್ನು ನೀಡಿದಾಖಲೆ ನಿರ್ಮಿಸಿದ ಉಲ್ಲೇಖವೂ ಇದೆ.
ರಂಗಭೂಮಿಯನ್ನು ಹವ್ಯಾಸವಾಗಿಯೇ ಉಳಿಸಿಕೊಂಡು ಗಂಭೀರವಾಗಿ ಕೆಲಸ ಮಾಡಿರುವ ಕೆಲವು ಸಂಸ್ಥೆಗಳಿದ್ದಾವೆ. ಕೆಲವು ವ್ಯಕ್ತಿಗಳಿದ್ದಾರೆ . ಆದರೆ ಒಂದು ಸಂಸ್ಥೆಯಾಗಿ ಕೆಲಸ ಮಾಡುವ ಡಾಕ್ಟರ್ ಶ್ರೀಪಾದ ಭಟ್ ಅವರಿಗೆ ತನ್ನದೇ ಆದ ಸಂಸ್ಥೆ ಏನೂ ಇಲ್ಲ. ಆದರೆ ಕರ್ನಾಟಕದ ಎಲ್ಲ ಮುಖ್ಯ ರಂಗ ಸಂಸ್ಥೆಗಳಿಗೆ ನಾಟಕ ನಿರ್ದೇಶನ ಮಾಡಿರುವುದಲ್ಲದೆ ಅದನ್ನು ಬರಹದ ಮೂಲಕ ದಾಖಲಿಸಿದ್ದಾರೆ.
ಅವರ ಹಿಂದಿನ ಪುಸ್ತಕ ನಟನೆಯ ಕೈಪಿಡಿ ನಟ ನಟಿಯರು ಹೇಗಿರಬೇಕು ಎಂಬ ಮಾಹಿತಿ ನೀಡಿದರೆ ,ಈ ಕೃತಿಯ ಅನುಭವದ ವಿವರಗಳು ಒಬ್ಬ ರಂಗಭೂಮಿಯ ಕಾರ್ಯಕರ್ತ ಮಾಡಬಹುದಾದ ಅತ್ಯುತ್ತಮ ಕೆಲಸವನ್ನು ಮನದಟ್ಟು ಮಾಡುತ್ತದೆ.
ಕನ್ನಡದಲ್ಲಿ ರಂಗಭೂಮಿಯ ಕುರಿತಾದ ಹಲವು ಕೃತಿಗಳು ರಚನೆಗೊಂಡಿವೆ. ಆದರೆ 25 ವರ್ಷಗಳಿಂದೀಚೆಗೆ ರಂಗಭೂಮಿಯನ್ನು ವೃತ್ತಿಯಾಗಿ ತೆಗೆದುಕೊಳ್ಳದೆ ವೃತ್ತಿಪರ ನಟ ನಟರಿಗೆ ನಾಟಕಗಳನ್ನು ನಿರ್ದೇಶಿಸುತ್ತಾ ಬಂದವರು ಶ್ರೀಪಾದ ಭಟ್ಟರು . ತಮ್ಮ ಅನುಭವಗಳನ್ನು ಈ ಪುಸ್ತಕದಲ್ಲಿ ಚೆನ್ನಾಗಿ ನಿರೂಪಿಸಿದ್ದಾರೆ.
ಇಂತಹ ಕೆಲಸ ಮತ್ತು ಬರಹಗಳನ್ನು ಕಳೆದ ಶತಮಾನದಲ್ಲಿ ಡಾ. ಶಿವರಾಮ ಕಾರಂತರು- ಶ್ರೀರಂಗರು ಮಾಡಿದ್ದುಂಟು. ಅದೇ ಬಗೆಯಲ್ಲಿ ಕೆಲಸ ಮಾಡಿರುವ ಈ ಪುಸ್ತಕವನ್ನು ರಂಗ ಕುತೂಹಲಿಗಳು ಕಡ್ಡಾಯವಾಗಿ ಓದಲೇ ಬೇಕಿದೆ. ಅದರೊಳಗೆ ಸತ್ವವೂ ಶಕ್ತಿಯೂ ಅಡಗಿದೆ.
0 ಪ್ರತಿಕ್ರಿಯೆಗಳು