“ತುಘಲಕ್” ನಾಟಕದಲ್ಲಿ ಬೀದಿನಾಯಿ…!!!!
ಶಶಿಕಾಂತ ಯಡಹಳ್ಳಿ
ಅವತ್ತು ಡಿಸೆಂಬರ್ 10, ರವೀಂದ್ರ ಕಲಾಕ್ಷೇತ್ರದಲ್ಲಿ ಸಮುದಾಯ ರಂಗತಂಡದ ’ತುಘಲಕ್’ ನಾಟಕದ ಪ್ರದರ್ಶನ ನಡೆಯುತ್ತಿತ್ತು. ಈ ನಾಟಕದ ಪ್ರದರ್ಶನದಲ್ಲಾದ ಅವಘಡವನ್ನು ಹಾಗೂ ಅದರಿಂದ ಪ್ರೇಕ್ಷಕರಿಗಾದ ರಸಭಂಗವನ್ನೂ ಇಲ್ಲಿ ಪ್ರಸ್ತಾಪಿಸಲೇ ಬೇಕಿದೆ.
ರಂಗದಮೇಲೆ ಸುಲ್ತಾನನ ಆಸ್ಥಾನಕ್ಕೆ ಶಹಾಬುದ್ದೀನನ ವೇಷದಲ್ಲಿ ಬಂದ ಅಝೀಝ ಎನ್ನುವ ವಂಚಕ ಹಾಗು ಇನ್ನೊಬ್ಬ ಕಳ್ಳ ಆಝಂ ಈ ಇಬ್ಬರ ಮಾತುಕತೆಯ ಗಂಭೀರವಾದ ಹಾಗೂ ಕುತೂಹಲಕಾರಿಯಾದ ದೃಶ್ಯ ನಡೆಯುತ್ತಿತ್ತು. ಅದೇ ಸಮಯಕ್ಕೆ ಕಲಾಕ್ಷೇತ್ರದ ವೇದಿಕೆಗೆ ಅಚಾನಕ್ಕಾಗಿ ಬೀದಿ ನಾಯಿಯೊಂದು ಬಲಗಡೆಯ ಸೈಡ್ ವಿಂಗ್ ನಿಂದ ನುಗ್ಗಿ ಪ್ರಖರವಾದ ಬೆಳಕಿಗೆ ಕಕ್ಕಾಬಿಕ್ಕಿಯಾಗಿ ಗಾಬರಿಯಾಗಿ ನಿಂತುಬಿಟ್ಟಿತು. ನಂತರ ಆದರ ರೋಲ್ ಮುಗಿಯಿತೇನೋ ಎಂಬಂತೆ ಚಂಗನೆ ಎಡಗಡೆ ವಿಂಗಿನತ್ತ ಧಾವಿಸಿತು. ಇಡೀ ಸಭಾಂಗಣವೇ ಒಂದು ಕ್ಷಣ ದಿಗಿಲುಗೊಂಡು ಮತ್ತೊಂದು ಕ್ಷಣದಲ್ಲಿ ಜೋರಾಗಿ ನಗಲು ಆರಂಭಿಸಿತು.
ನಾಟಕದ ಕಲಾವಿದರಿಗೂ ಹಾಗೂ ಪ್ರೇಕ್ಷಕರಿಗೂ ರಸಭಂಗವಾಗಿದ್ದಂತೂ ಸತ್ಯ. ಇದು ನಮ್ಮ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಧೀನದಲ್ಲಿರುವ ರವೀಂದ್ರ ಕಲಾಕ್ಷೇತ್ರದ ಸಿಬ್ಬಂದಿಯ ಬೇಜವಾಬ್ದಾರಿಯ ಪರಮಾವಧಿಯಾಗಿದೆ.. ನಾಟಕ ಆರಂಭವಾದ ತಕ್ಷಣ ರಂಗಮಂದಿರದ ಗೇಟುಗಳೆಲ್ಲವೂ ಬಂದು ಮಾಡಲಾಗುತ್ತದೆ. ಆದರೂ ಬೀದಿ ನಾಯಿಯೊಂದು ವೇದಿಕೆಗೆ ನುಗ್ಗಿದ್ದಾದರೂ ಹೇಗೆ? ಕಲಾಕ್ಷೇತ್ರದ ಕಾವಲು ಸಿಬ್ಬಂದಿ ಎಲ್ಲಿ ಮಾಯವಾಗಿದ್ದರು. ಕಲಾಕ್ಷೇತ್ರದ ನಿರ್ವಹಣೆಗೊಬ್ಬ ಮ್ಯಾನೇಜರ್ ಇದ್ದಾರಲ್ಲಾ ಅವರೇನು ಮಾಡುತ್ತಿದ್ದರು…? ಎಂಬ ಹಲವಾರು ಪ್ರಶ್ನೆಗಳು ಪ್ರಜ್ಞಾವಂತ ಪ್ರೇಕ್ಷಕರನ್ನು ಕಾಡಿದ್ದಂತೂ ನಿಜ.
ಇತ್ತೀಚೆಗೆ ಮೂರು ಕೋಟಿ ಹಣದಲ್ಲಿ ಕಲಾಕ್ಷೇತ್ರವನ್ನು ನವೀಕರಣಗೊಳಿಸಿದ್ದಾರೆಂದು ಹೇಳುತ್ತಾರೆ. ಆದರೆ ಅಲ್ಲಿ ದ್ವನಿ ಬೆಳಕಿನ ಅವ್ಯವಸ್ಥೆ ಅನುಭವಿಸಿದವರಿಗೇ ಗೊತ್ತು. ಕಲಾಕ್ಷೇತ್ರದಲ್ಲಿ ದ್ವನಿ ಹಾಗೂ ಸಂಗೀತವಂತೂ ಟೆಂಟ್ ಸಿನೆಮಾ ಥಿಯೇಟರ್ ನಲ್ಲಿ ಕೂತು ಸಂಗೀತ ಆಸ್ವಾದಿಸುವಷ್ಟು ಕರ್ಕಶವಾಗಿ ಕೇಳುತ್ತದೆ.
ಇದೇ ತುಘಲಕ್ ನಾಟಕಕ್ಕೆ ಹೆಚ್ಚುವರಿ ಲೈಟ್ ಗಳನ್ನು ಹೊರಗಿನಿಂದ ಬಾಡಿಗೆಗೆ ತಂದು ’ಸಮುದಾಯ’ ಬಳಸಿತ್ತು. ಅಂದರೆ ಮೂರು ಕೋಟಿಗೆ ಮೂರು ನಾಮ ಹಾಕಿದ್ದಾದರೂ ಯಾರು? ಇದರಲ್ಲಿ ತಿಂದವರೆಷ್ಟು, ಮಿಂದವರೆಷ್ಟು? ಇದನ್ನೆಲ್ಲಾ ಕೇಳುವವರು ಯಾರು? ಬೆಕ್ಕಿಗೆ ಗಂಟೆ ಕಟ್ಟುವವರಾದರೂ ಯಾರು? ಅದೂ ಸಮುದಾಯದಂತಹ ಹೋರಾಟಪರ ಸಂಘಟನೆಯ ನಾಟಕದಲ್ಲೇ ಬೀದಿ ನಾಯಿಯೊಂದು ನಾಟಕ ನಡೆಯುವಾಗಲೇ ರಂಗವೇದಿಕೆಯಲ್ಲಿ ಓಡಾಡುತ್ತದೆ ಎಂದರೆ, ದ್ವನಿ ಬೆಳಕಿನ ವ್ಯವಸ್ಥೆ ಅದ್ವಾನವಾಗಿದೆ ಎಂದರೆ ಈ ಅವ್ಯವಸ್ಥೆಯ ವಿರುದ್ಧ ’ಸಮುದಾಯ’ದ ಪ್ರತಿಭಟನೆ ಮಾಡುತ್ತದೆಯೇ? ಹೀಗೆ ಹಲವಾರು ಪ್ರಶ್ನೆಗಳಿವೆ. ಇಡೀ ರವೀಂದ್ರ ಕಲಾಕ್ಷೇತ್ರ ಅವ್ಯವಸ್ಥೆಯ ಆಗರವಾಗಿದೆ. ಆದರೂ ಅದು ಹೇಗೋ ಅನಿವಾರ್ಯವಾಗಿ ನಾಟಕಗಳು ಪ್ರದರ್ಶನಗೊಳ್ಳುತ್ತಲೇ ಇವೆ.
0 ಪ್ರತಿಕ್ರಿಯೆಗಳು