ಬಿಳುಮನೆ ರಾಮದಾಸ್
ಮೈಸೂರಿನಲ್ಲಿ ನಮ್ಮ ಗೆಳೆಯರೊಬ್ಬರು ಇದ್ದರು. ಅವರ ಹೆಸರು ಶ್ರೀನಿವಾಸ್ ಎಂದು. ವಾಣಿಜ್ಯ ತೆರಿಗೆ ಇನ್ಸ್ ಪೆಕ್ಟರ್ ಆಗಿದ್ದರು. ತುಂಬ ಒಳ್ಳೆಯ ಮನುಷ್ಯ ಎಂದು ಹೆಸರು ಪಡೆದಿದ್ದರು. ಹಿರಿಯ ಅಧಿಕಾರಿಗಳಲ್ಲೂ ಅವರಿಗೆ ಒಳ್ಳೆಯ ಹೆಸರಿದ್ದಿತು. ಅವರಿಂದ ವ್ಯಾಪಾರಿಗಳಿಗೆ ಯಾವುದೇ ಕಿರುಕುಳವಿರಲಿಲ್ಲ. ಅವರ ನಯವಿನಯ, ಜೇನಿನ ಮಾತಿನಿಂದಾಗಿ ವ್ಯಾಪಾರಿಗಳು ಅವರ ಕೈ ಬೆಚ್ಚಗೆ ಮಾಡಿ ಹೋಗುತ್ತಿದ್ದರು. ಯಾರಿಗೂ ಲಂಚ ಕೊಡದೆ ಇರುವ ವ್ಯಾಪಾರಿಗಳೂ ಅವರಿಗೆ ಮಾತ್ರ ಕೊಟ್ಟು ಹೋಗುತ್ತಿದ್ದರು. ಅವರ ಈ ಗುಣಕ್ಕೆ ಅವರ ಗೆಳೆಯರಿಂದ ಗೇಲಿಗೊಳಗಾಗುತ್ತಿದ್ದರು. ಅವರಿಗೆ ಹೆಣ್ಣಿನ ಖಯಾಲಿ ಇದ್ದಿತು. ಅವರು ಯಾವುದೇ ಕಚೇರಿಗೆ ವರ್ಗವಾಗಿ ಹೋದರೂ ಆ ಕಚೇರಿಯಲ್ಲಿ ಸ್ಪುರದ್ರೂಪಿ ಹೆಣ್ಣಿದ್ದರೆ ಅವಳನ್ನು ಹೇಗೋ ಮಾಡಿ ಬುಟ್ಟಿಗೆ ಹಾಕಿಕೊಳ್ಳುತ್ತಿದ್ದರು. ಯಾರಿಗೂ ಬಲಿ ಬೀಳದ ಹುಡುಗಿಯರೂ ಅವರಿಗೆ ಬಲಿಯಾಗುತ್ತಿದ್ದರು. ಅವರು ಕೊಳ್ಳೇಗಾಲದ ಊರಿನವರಾದದ್ದರಿಂದ ನಾವು ತಮಾಷೆಗಾಗಿ ಅವರಿಗೆ “ಏನು ಕೊಳ್ಳೇಗಾಲದಿಂದ ಅಂತ್ರ ಕಟ್ಟಿಸಿಕೊಂಡು ಬಂದಿದ್ದೀರಾ?” ಎಂದು ಗೇಲಿ ಮಾಡುತ್ತಿದ್ದೆವು. ಏಕೆಂದರೆ ಕೊಳ್ಳೇಗಾಲವು ಒಂದು ಕಾಲದಲ್ಲಿ ಮಂತ್ರ ಮಾಟ ಮಾಡುವುದಕ್ಕೆ ಪ್ರಸಿದ್ಧವಾಗಿತ್ತು.
ಸಹೋದ್ಯೋಗಿ ಮಹಿಳೆಯರನ್ನು ವಶೀಕರಣ ಮಾಡಿಕೊಳ್ಳುವುದರಲ್ಲಿ ಶ್ರೀನಿವಾಸ್ ಮಾಟಗಾರರ ಮೊರೆ ಹೋಗಿದ್ದಾರೆಂದೇ ನಮ್ಮ ಭಾವನೆಯಾಗಿತ್ತು. ಒಂದು ಸಾರಿ ಶ್ರೀನಿವಾಸ್ ಅವರು ಕಚೇರಿಗೆ ಬಹಳ ತಡವಾಗಿ ಏದುಸಿರು ಬಿಡುತ್ತಾ ಬಂದು ಕೂತರು. ಅವರು ಬಹಳ ಮಂಕಾಗಿದ್ದರು. ಬಹಳ ಹೆದರಿದಂತಿದ್ದರು. ನಾನು ಅವರನ್ನು ಕರೆದುಕೊಂಡು ಹೋಗಿ ಯಾಕೆ ಏನಾಯಿತೆಂದು ಕೇಳಿದೆ. ಅವರು ಹೇಳಿದ ಕತೆ ಹೊಟ್ಟೆಬಿರಿ ನಗುವಂತೆ ಮಾಡಿತು. ಶ್ರೀನಿವಾಸ್ ಅವರು ಅವರ ಮನೆ ಬೀದಿಯ ಮಹಿಳೆಯೊಬ್ಬರ ಸ್ನೇಹ ಮಾಡಿಕೊಂಡಿದ್ದರು. ಆಕೆಯ ಗಂಡ ಇಲ್ಲದಾಗ ಅವರ ಮನೆಗೆ ಹೋಗುತ್ತಿದ್ದರು. ಇದು ಅಕ್ಕಪಕ್ಕದ ಮನೆಗೆಲ್ಲಾ ಗೊತ್ತಾಗಿ ಶ್ರೀನಿವಾಸ್ ಅವರನ್ನು ಹಿಡಿದು ಚಚ್ಚಲು ಸಮಯ ಕಾಯುತ್ತಿದ್ದರು. ಆ ದಿನ ಶ್ರೀನಿವಾಸ್ ಬೆಳಗ್ಗೆ ಕಚೇರಿಗೆ ಹೊರಡುವಾಗ ಆ ಮಹಿಳೆ ಕೈಸನ್ನೆ ಮಾಡಿದಳು. ಇದನ್ನು ಸುತ್ತ ಮನೆಯವರು ಕಿಟಕಿ ಮೂಲಕ ನೋಡುತ್ತಿದ್ದರು. ಶ್ರೀನಿವಾಸ್ ಅವರು ಮನೆಯೊಳಗೆ ಹೋಗಿ ಬಾಗಿಲು ಹಾಕಿಕೊಂಡಾಗ ಸುತ್ತಮುತ್ತಲ ಮನೆಯವರು ದೊಣ್ಣೆ ಬಡಿಗೆ ಹಿಡಿದು ಬಂದು ಬಾಗಿಲು ಬಡಿದು “ಶ್ರೀನಿವಾಸ ಹೊರಗೆ ಬಾರೊ ಸೂಳೆಮಗನೆ” ಎಂದು ಕೂಗಿದರು. ಗಾಬರಿಬಿದ್ದ ಶ್ರೀನಿವಾಸ್ ತಪ್ಪಿಸಿಕೊಳ್ಳಲು ನೋಡಿದರು. ಹಿಂದಿನ ಬಾಗಿಲಲ್ಲಿ ಓಡಿಹೋಗಲು ನೋಡಿದರೆ ಆ ಮನೆಗೆ ಹಿಂದೆ ಬಾಗಿಲು ಇರಲಿಲ್ಲ. ಅದು ಹೆಂಚಿನ ಮನೆಯಾದದ್ದರಿಂದ ಮನೆಯೊಡತಿ ಉಪಾಯ ಮಾಡಿ ಏಣಿ ಹಾಕಿಕೊಟ್ಟಳು. ಶ್ರೀನಿವಾಸ್ ಏಣಿ ಹತ್ತಿ ಹೆಂಚು ತೆಗೆದು ಕೆಳಕ್ಕೆ ಧುಮುಕಿ ಕಚೇರಿಗೆ ಓಡಿ ಹೋದರು.
0 ಪ್ರತಿಕ್ರಿಯೆಗಳು