ರಾಮಾಯಣ
ಕೃಷ್ಣ ದೇವಾಂಗಮಠ
ಉರಿವ ಜ್ವಾಲೆಯಲಿ ನಿಂತ ಸೀತೆಗೆ
ಅರೆಬೆಂದ ಪುರುಷ ದೇಹ ಕಾಣಿಸಿತು
ಲಕ್ಷ್ಮಣ, ಮೈ ಸುಟ್ಟುಕೊಂಡ ಆ ಆಕೃತಿಗೆ ರಾಮನೆಂದ,
ಅಗ್ನಿ ನಂದಿಹೋಯಿತು
ಉಟ್ಟ ಬಟ್ಟೆಯೂ ಸುಡದಿದ್ದ ಕಂಡ
ಸುತ್ತಲಿದ್ದವರೆಲ್ಲಾ ಉರಿದು ಹೋದರು
ನಡುವಿನಂತೆ ಬಳುಕುತ್ತ ಹರಿವ ನದಿಗೆ
ಹೊಕ್ಕುಳಾಕಾರದ ಭಾರೀ ಸುಳಿ
ಹೆಣ್ಣಿನವತಾರ, ಕಾಮನಬಿಲ್ಲ ರಂಗು
ಎದೆಯಂತೆ ಸೆಟೆದ ಬಿಲ್ಲಿಗೆ
ಕಾಮ ಬಾಣ ಹೂಡಿ ಸ್ವರ್ಗಕ್ಕೆ ಹೊಡೆ
ಏಕತಾರಿಯಿಂದ ಹೊರಟ ಮಧುರತೆ
ನರಕಕ್ಕೆ ತಲ್ಲಣಿಸಲಿ
ಭೂಮಿ ಧಗಧಗ ದಹಿಸುವಂತೆ ಸುರಿಯಲಿ
ಅಗ್ನಿ ಛೇದಿಸಿ ಹೊರಟ ಬಾಣಗಳ ಮಳೆ
ಹೊತ್ತಿ ಉರಿಯಲಿ ರಾವಣನ ಕೆಡುಕು
ಉಳಿಯಲಿ ಲಂಕೆ ಮತ್ತದೇ ರಾವಣ
ಜೊತೆಗೆ ಮಿಕ್ಕ ಪಾತ್ರಗಳ ಮೆದುತನ
ಭೂಮಿಯ ಧೀರ್ಘಾಯುಷ್ಯದುದ್ದಕ್ಕೂ
0 ಪ್ರತಿಕ್ರಿಯೆಗಳು