ಸಂಗಮೇಶ ಸಜ್ಜನ್
ಎಸ್ ದಿವಾಕರ್ ಅಂತ ಅಂದಕೂಡಲೇ ನಮಗೆ ನೆನಪಾಗುವುದು ಅವರ ಮುಗ್ಧತೆ ಮತ್ತು ಸರಳತೆ, ಅವರ ಪಕ್ಕಕ್ಕೋಗಿ ನಿಂತಾಗ ಯಾರೋ ಒಬ್ಬ ಸಾಮಾನ್ಯ ಮನುಷ್ಯನ ಪಕ್ಕದಲ್ಲಿ ನಾ ನಿಂತಿರುವೆ ಅಂದುಕೊಳ್ಳೋದು ಸಹಜ, ಆದರೆ ಇವರ ಮಾತುಗಳೊಮ್ಮೆ ಕೇಳಿದಾಗ ನಮಗಚ್ಚರಿಯಾಗುವುದಂತೂ ಸಹಜ.
ಮೊನ್ನೆ ತಾನೇ ನವೆಂಬರ್ ತಿಂಗಳಲ್ಲಿ ಸರ್ ಅವರು ಎಪ್ಪತ್ನಾಲ್ಕು ಮುಗ್ಸಿ ಎಪ್ಪತೈದಕ್ಕೆ ಕಾಲಿಟ್ಟಿದ್ದಾರೆ, ಆ ಖುಷಿಯಲ್ಲಿ ಅವರ ಸಾಹಿತ್ಯ ಪ್ರೇಮಿಗಳು ತುಂಬಾ ಸಂಭ್ರಮಿಸಿದ್ದಾರೆ, ಅನೇಕ ಕೃತಿಗಳನ್ನು ಕನ್ನಡಕ್ಕೆ ಕೊಟ್ಟಿರುವ ಎಸ್ ದಿವಾಕರ್ ಸರ್ ಅವರು ಬರೆದ ಅನೇಕ ಕೃತಿಗಳನ್ನು ಓದಿದ ಹೆಮ್ಮೆ ನನಗೆ. ಆದರೆ ಅವರ “ಒಂದೊಂದು ಬರಹಕ್ಕೂ ಒಂದೊಂದು ವಾಸನೆ” ಎನ್ನುವ ಅಪರೂಪದ ಅನುವಾದಿತ ಪ್ರಬಂಧ ಸಂಕಲನ ನನಗೆ ಅಚ್ಚುಮೆಚ್ಚು. ಆ ಖುಷಿಯ ಸಂಭ್ರಮಕ್ಕೆ ನನ್ನದೊಂದು ಈ ಚಿಕ್ಕ ಬರಹದ ಮೂಲಕ ಶುಭಾಶಯಗಳನ್ನು ತಿಳಿಸುತ್ತಿರುವೆ.
ಎಸ್ ದಿವಾಕರ್ ಸರ್ ಅವರ ಅಂಕಣಗಳನ್ನ ನಾನು ಕಾಲೇಜಿನಲ್ಲಿದ್ದಾಗ ‘ವಿಜಯ ಕರ್ನಾಟಕ’ದಲ್ಲಿ ಓದುತ್ತಿದ್ದುದ್ದರಿಂದ ನನಗೆ ಮುಂಚೆಯಿಂದಲೂ ಸರ್ ಅಂದರೆ ತುಂಬಾ ಕಾಳಜಿ, ಮೊನ್ನೆ ಅವರನ್ನು ನೇರಾ ನೇರಾ ಭೇಟಿ ಮಾಡಿದಾಗ ನನಗಾದ ಖುಷಿಗೆ ಪಾರವೇ ಇಲ್ಲ, ಇವರ ಅನುವಾದದ ಕೃತಿಗಳನ್ನು ಓದುವುದೆಂದರೆ ತುಂಬಾ ಖುಷಿ, ಇವರ ಅನುವಾದಕ್ಕೆ ಮೆಚ್ಚಿ ಗೋಪಾಲಕೃಷ್ಣ ಅಡಿಗರೇ ಹೊಗಳಿದರಂತೆ. ಅದರಲ್ಲೂ ಅವರ ಅನುವಾದಿತ ಕೃತಿಗಳಲ್ಲಿ “ಒಂದೊಂದು ಬರಹಕ್ಕೂ ಒಂದೊಂದು ವಾಸನೆ” ತುಂಬಾ ವಿಶಿಷ್ಟ ಮತ್ತು ವಿಶೇಷವಾದ ಪುಸ್ತಕ, ಪತ್ರಿಕೆಯೊಂದರಲ್ಲಿ ಅಂಕಣವಾಗಿ ಪ್ರಕಟವಾಗುತ್ತಿದ್ದ ಲೇಖನಗಳ ಸಂಗ್ರಹವೇ ಈ ಪುಸ್ತಕ.
“ಈ ಬಸ್ಸಿನಲ್ಲಿ ತುಂಬಾ ಜನರಿದ್ದಾರಾ? ಜನವೋ ಜನ. ಅವರಲ್ಲಿ ಯಾರನ್ನಾದರೂ ಗುರುತಿಸಿದೆಯಾ ? ಉದ್ದ ಕುತ್ತಿಗೆಯಿದ್ದ ಹ್ಯಾಟಿನ ಸುತ್ತ ಹಣೆದ ದಾರವನ್ನು ಸುಟ್ಟುಕೊಂಡಿದ್ದ ಒಬ್ಬನನ್ನು ನೋಡಿದೆ”. ಈ ಮೇಲಿನ ಸಂಭಾಷಣೆಯ ವಾಕ್ಯಗಳನ್ನು ಗಮನಿಸಿದಾಗ ದೃಷ್ಟಿಕೋನದ ವಾಸ್ತವಾಂಶಗಳನ್ನು ಇದರಲ್ಲಿ ಜೀವಂತವಾಗಿಸುವ ಭಾವನೆಗಳನ್ನು ಬೆಲೆಯಿಲ್ಲವೆಂಬಂತೆ ಸೂಚಿಸುತ್ತದೆ. ಈ ಪುಸ್ತಕದ ಪ್ರತಿಯೊಂದು ಪ್ರಬಂಧಗಳು ಓದುಗರಿಗೆ ಭೂತಗನ್ನಡಿ ಹಿಡಿದಂತಿವೆ. ಓದುಗನ ವಿಷಯ ವ್ಯಾಪ್ತಿಯಲ್ಲಿ ಬೆರಗು ಮೂಡಿಸುವುದರಲ್ಲಿ ಬೇರೆ ಮಾತೆ ಇಲ್ಲ. ಇದನ್ನೆಲ್ಲಾ ಓದುತ್ತ ಹೋದಾಗ ನಮಗರಿವಾಗುವುದಿಷ್ಟೇ ಸರ್ ಅವರ ಆಳವಾದ ಓದು, ವಿಶ್ವಸಾಹಿತ್ಯದ ವ್ಯಾಮೋಹ ಇದರ ಜೊತೆಗೆ ಅವರಿಗಿರುವ ಎಲ್ಲ ವಿಷಯಗಳ ಗ್ರಹಿಕೆಯ ಶಕ್ತಿ.
ಇಂತಹ ಕೃತಿಯೊಂದು ನಾನೋದಿದಾಗ ನನಗೆ ಅಚ್ಚರಿಯಾಗಿತ್ತು. ಆದರೆ ಮೊನ್ನೆ ನನಗೆ ಸರ್ ಅವರ ಮನೆಗೆ ಹೋಗಬೇಕಾಯಿತು, ಅವರ ಮನೆಯಿಂದ ಬೇರೊಂದು ಕಾರ್ಯಕ್ರಮಕ್ಕೆ ಹೋಗುವದಿತ್ತು, ಆವತ್ತು ನಾವಿಬ್ಬರು ದಾರಿಯುದ್ದಕ್ಕೂ ಆಡಿದ ಸಾಹಿತ್ಯದ ಮಾತುಗಳನ್ನು ನಾನೆಂದು ಮರೆಯಲು ಸಾಧ್ಯವಿಲ್ಲ, ಸರ್ ಯಾವಾಗಲೂ ಅನುವಾದದ ಬಗ್ಗೆ ಹೇಳಿದ್ದುಂಟು, ಒಂದು ಪುಸ್ತಕವನ್ನು ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಅನುವಾದ ಮಾಡುವುದೆಂದರೆ ಅದು ಅಷ್ಟು ಸಾದ್ಯದ ಕೆಲಸವಲ್ಲ, ಶೇಕ್ಸ್ ಪಿಯರ್ ನ ಕೃತಿಯನ್ನು ಅನುವಾದ ಮಾಡುವುದೆಂದರೆ ನಮ್ಮೊಳಗಿನ ಶೇಕ್ಸ್ ಪಿಯರ್ ಎದ್ದು ಬಂದು ಅನುವಾದ ಮಾಡಿದಂತಿರಬೇಕು, ಆಗ ಮಾತ್ರ ನಾವು ಓದುಗನನ್ನು ಗೆಲ್ಲಲು ಸಾಧ್ಯ ಅಂತ. ಅದಕ್ಕೆ ಏನೋ ನಾವು ಸರ್ ಅವರ ಅನೇಕ ಕೃತಿಗಳನ್ನೋದಿದಾಗ ನಮಗೆ ಮೂಲ ಬರಹಗಾರನನ್ನೇ ಓದಿದಂತಾಗುತ್ತದೆ.
ಅತಿ ಸಣ್ಣ ಕತೆಗಳನ್ನು ಮತ್ತು ಅನುವಾದಿತ ಕತೆಗಳನ್ನು ಕನ್ನಡಕ್ಕೆ ಪರಿಚಯಿಸುವುದರ ಮೂಲಕ ಕನ್ನಡದ ಸಾಹಿತ್ಯಕ್ಕೊಂದು ಹೊಸ ರೂಪ ಕೊಟ್ಟವರು ಎಸ್ ದಿವಾಕರ ಸರ್. ನೊಬೆಲ್ ಪ್ರಶಸ್ತಿ ವಿಜೇತ ಬರಹಗಾರರ ಅನೇಕ ಕೃತಿಗಳ ಅನುವಾದ ಮಾಡುವುದರ ಮೂಲಕ ಮತ್ತು ಅವರ ಸ್ವಂತ ಸಣ್ಣ ಕಥೆಗಳು, ಕವನಗಳ ಬರೆಯುವುದರ ಮೂಲಕ ಕನ್ನಡ ಸಾಹಿತ್ಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
0 ಪ್ರತಿಕ್ರಿಯೆಗಳು