ಎಸ್‌ ಜಿ ಸಿದ್ದರಾಮಯ್ಯ ಅವರ ಸ್ಪೆಷಲ್ ಕವಿತೆ ‘ದರವಾಜ’

ಎಸ್ ಜಿ ಸಿದ್ದರಾಮಯ್ಯ

1.

ಬಡೇಸಾಬು ಅಲಿಯಾಸ್‌ ಬುಡಾಣು ಸಾಬು
ನಮ್ಮೂರಲ್ಲಿ ಕಿರಾಣಿ ಅಂಗಡಿ ಇಟ್ಟಿದ್ದ ಅವ
ನಮ್ಮೂರವನಲ್ಲ ಪಕ್ಕದೂರಿನ ಪೈಲುವಾನ
ಸಾಬು ಹೋಗಿ ಬಂದು ಅಂಗಡಿ ಮಾಡುತಿದ್ದ.

ತಡವಾದ ದಿನ ಇಲ್ಲೆ ಉಳಿಯುತಿದ್ದ. ಇಲ್ಲೆ
ಅಂದರೆ ಅಂಗಡಿಮನೆಯಲ್ಲೇ. ಮನೆಯೆಂದರೆ
ಅದು ಮನೆಯಲ್ಲ ಅಂಗಡಿಗಾಗಿ ಕಟ್ಟಿದ
ಗುಡಿಸಲು ನೆಲಬಾಡಿಗೆ ಇಲ್ಲದ ತಡಸಲು.

ಈ ಬಡೇಸಾಬರು ಎಲ್ಲರಿಗೂ ಬೇಕಾದ
ಮುಸಲರು. ಅದು ಹೇಗೋ ಏನೋ
ಸಮುದ್ರದ ಉಪ್ಪು ಬೆಟ್ಟದ ನೆಲ್ಲಿ ಎಲ್ಲಿಂದೆಲ್ಲಿಗೆ
ತೊಳಸಜ್ಜಿಗು ಬುಡಾಣಜ್ಜಗು ಅಂಟಿದ ನಂಟು.

ಅದು ಯಾರಿಗು ಮಾಡಲಿಲ್ಲ ಇರುಸು ಮುರುಸು
ಹುಬ್ಬುಗಂಟು. ತೊಳಸಜ್ಜಿಗೆ ಹದಿವಯಕೆ ಆದರು
ಮದುವೆ ಆರು ತಿಂಗಳಿಗೇ ಗಂಡನಿಲ್ಲದವಳು.
ಬುಡಾಣುಗಾದಳು ಪ್ಯಾರಕ ಮೊಹಬತ್ತಿನವಳು.

2.

ಮಗನಿಗೆ ಸಾಬರಭಾಷೆಯ ಕಲಿಸುವ ಆಸೆಯು
ಅಪ್ಪನಿಗೆ: ನನ್ನನು ಬಿಟ್ಟರು ಬುಡಾಣುಸಾಬರ ಬಳಿಗೆ.
ಬೆಳಗೂ ಬೈಗೂ ಹೋಗಿ ಬಂದು ಕಲಿತದ್ದು ಒಂದೇ
ದರವಾಜಖೋಲೋ. ಹತ್ತರವಯದಲಿ ಕಲಿತಾ

ಶಬ್ದ ಇಂದು ಎಪ್ಪತ್ತರ ಇಳಿವಯದಲಿ ಕಾಡುತ
ಬಂತೆ: ಅಹಮದಬಾದಿನ ಲೆಕ್ಕವಿರದ ದರವಾಜ
ಗಳ ನೆನಪಿಗೆ ತಂತೆ. ಅವರಿವರೆನ್ನದೆ ಎಲ್ಲರಿಗೂ
ತೆರೆದಾ ದರವಾಜಗಳು. ಮಂದಿರ ಮಸೀದಿ ಬಗೆ

ಬಾಂಧವ್ಯದ ದರವಾಜಗಳು. ಪ್ಯಾರಕ ಮೊಹಬತ್ತಿನ
ಪ್ರತೀಕಗಳು. ಅಲ್ಲೆ ಅಲ್ಲೇ ಹರಿವವಳು ಸಬರಮತಿ
ಸ್ವಾತಂತ್ರ್ಯದ ಹರಿಕಾರಿಗೆ ಸರ್ವೋದಯ ಕನಸಿಗೆ
ತೆರೆದಳು ದರವಾಜ. ಇದು ಮೂವತ್ತರ ದಶಕದ

ಅಂದಿನ ಸ್ವಾತಂತ್ರ್ಯದ ಪಾಠ, ತೊಂಬತ್ತರ ಗಡಿಯಲಿ
ಆಯಿತು ಗೋದ್ರಾ ಮೇಧ : ಮುಚ್ಚಿತು ದರವಾಜ,
ಅದೇ ಹೊತ್ತಲಿ ನನ್ನೂರಲಿ ಕೇಸರಿಬಣ್ಣದ ಬೆಂಕಿ
ಯಲಿ ಸುಟ್ಟಿತು ದರವಾಜ ಬಡೇಸಾಬರ ದರವಾಜ.

ಸುಟ್ಟ ಬೂದಿಯಲಿ ಮೂಳೆಯ ಹುಡುಕುತ
ಕನಸುನು ತಡಕುತ ಹರಿಹರಿದಾಡುವ ತೊಳಸಜ್ಜಿ
ಯ ಕೆನ್ನೆಯುಪ್ಪಿಗೆ ಆರದ ಬೂದಿಯಲಿ ಸಿಗದೆ
ಹೋಯಿತೋ ಸಾಬರಮತಿಯ ದರವಾಜ.

‍ಲೇಖಕರು Avadhi

December 23, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: