ಎಲ್ಲಿಂದ ಬಂದೆಯಯ್ಯ ನೀನು..

ಗಾಂಧಿ-೧೫೦

ಜಿ.ಪಿ.ಬಸವರಾಜು

ಹಣ್ಣೆಲೆಗಳೆಲ್ಲ ಉದುರಿ
ಹೊಸ ಹುಟ್ಟು –
ಹಳೆಯ ಮರಕ್ಕೆ, ಹೊಸ
ಹುರುಪು
ಹಿರಿಯ ಜೀವಕ್ಕೆ;

ನೀನಾಡಿದ ಮಾತುಗಳೆಲ್ಲ
ಸಲ್ಲವೆಂದು ಈ ಕಾಲಕ್ಕೆ
ಮರೆತುಬಿಟ್ಟೆವು ನಿನ್ನ; ಹೀಗೇ
ಬಾನತುಂಬ ರೆಕ್ಕೆ ಬಡಿದು
ದಣಿದು ನೆಲಕ್ಕಿಳಿದರೆ ಅಲ್ಲಿ
ನೀನು, ನಿನ್ನ ಮಾತು, ಕತೆ
ಮತ್ತೆ ಮತ್ತೆ ಹೊಸತು, ಕೇಳಿ
ಕೇಳಿ ಹೊಸ ಹಾದಿ ತುಳಿದೆವು;

ಎಲ್ಲಿಂದ ಬಂದೆಯಯ್ಯ ನೀನು
ಈ ನೆಲಕ್ಕೆ, ನಿನ್ನ ಹುಟ್ಟೊಂದೆ
ನಮಗೆಲ್ಲ ಗೊತ್ತು, ಬಾಳೆಲ್ಲ
ಬಿಡಿಸಲಾಗದ ಗುಟ್ಟು, ನೀನು
ತೆರೆದಿಟ್ಟಿದ್ದೆ ಎಲ್ಲ, ಅದನೆಲ್ಲ
ನೋಡಲಾಗಲಿಲ್ಲ ನಮಗೆ
ಕೇಳಲಾಗಲಿಲ್ಲ ನಮಗೆ,
ಓದಲಾಗಲಿಲ್ಲ ನಮಗೆ,

ನಿನ್ನ ಹೆಸರ ಪತಾಕೆ ಹಾರಾಡುತ್ತಿದೆ
ಬಾನತುಂಬ, ಅದರ ನೆರಳೆಲ್ಲ
ನಮಗೆ ಹೊದಿಕೆ- ಉರಿವ ಸೂರ್ಯನಿಗೆ
ಸುರಿವ ಮಳೆಗೆ, ಗುಡುಗು ಸಿಡಿಲಿಗೆ

ಸಿಕ್ಕರೂ ನೀನು ಸಿಗದಂತವನು
ಹಿಡಿದರೂ ನೀನು ಹಿಡಿಯಲಾಗದವನು
ನಕ್ಕರೆ ನಿನ್ನ ಬೊಚ್ಚು ಬಾಯಿ
ತೆರೆದು ಜಗದಗಲ, ಮುಗಿಲಗಲ,
ಎಲ್ಲಿ ಎಲ್ಲಿ ಯಾವ ನೆಲದವನಯ್ಯ
ನೀನು, ಯಾವ ಜಲವ ಕುಡಿದೆ
ಯಾವ ಮಂತ್ರವ ಹಿಡಿದೆ
ತಿಳಿಯಿತೆಂದರೆ ತಿಳಿಯಲಾಗದ
ನಿನ್ನ ವರಸೆಗೆ ರೇಗಿ, ನಿನ್ನ
ಗುಂಡಿಗೆಯ ಬಗೆದು, ನಿನ್ನ
ನೆತ್ತರಲ್ಲಿ ನನ್ನ ಹೆಸರ ಕೆತ್ತುವ
ಹುನ್ನಾರದಲ್ಲಿ ಗುಂಡಿಕ್ಕಿದರೆ
ನಿನ್ನೆದೆಗೆ, ಆಗಲೂ ಹರಿಯಲಿಲ್ಲ
ನೆತ್ತರು, ನಗುತ್ತಿದ್ದೆ ನೀನು
ಕರುಣೆಯ ನೋಟದಲ್ಲಿ
ಬರೆದೆ ನಮ್ಮೆದೆಯ ಮೇಲೆ
‘ರಾಮ’ ನಾಮ

‍ಲೇಖಕರು avadhi

December 31, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: