ಇಷ್ಟವಾಗುವ ‘ಇಷ್ಟಕಾಮ್ಯ’
ಡಾ ನಾ ದಾಮೋದರ ಶೆಟ್ಟಿ
ಬಹುದಿನಗಳ ಅನಂತರ ನಾಗತಿಹಳ್ಳಿ ಚಂದ್ರಶೇಖರ್ ಅವರು ದೊಡ್ಡೇರಿ ವೆಂಕಟಗಿರಿರಾಯರ ಇಷ್ಟಕಾಮ್ಯ ಕಾದಂಬರಿಯನ್ನು ಅಪ್ಪಟ ಚಲನಚಿತ್ರವಾಗಿ ರಜತಪರದೆಗೆ ತಂದಿದ್ದಾರೆ.
ವಿವಾಹ ಹಾಗೂ ಲಿವಿಂಗ್ ಟುಗೆದರ್ನ ತಾಕಲಾಟವನ್ನು ಕೆಲವು ವಿಭಿನ್ನ ಸಂಸ್ಕಾರಗಳ ಮೂಲಕ ತೋರಿಸಿಕೊಡುವ, ವೈವಾಹಿಕ ಸಂಬಂಧ ಹಾಗೂ ಪ್ರೀತಿಯ ನಡುವಿನ ಆಯ್ಕೆಯ ಪ್ರಶ್ನೆಯನ್ನು ಕೆಲವು ವಿಭಿನ್ನ ಸಂಘರ್ಷಗಳ ಮೂಲಕ ನಿಕಷಕ್ಕೊಡ್ಡುವ ಚಲನ ಚಿತ್ರ ‘ಇಷ್ಟಕಾಮ್ಯ.’
ಅತಿಸುಂದರ ನಿಸರ್ಗದ ಮಡಿಲಲ್ಲಿ ಕಟ್ಟಿಕೊಡಲಾದ, ಅತ್ಯುತ್ತಮ ಫೋಟೋಗ್ರಫಿಯ (ರವಿಕುಮಾರ್ ಸನಾ), ಸೊಗಸಾದ ಹಾಡಿನ (ನಾಗತಿಹಳ್ಳಿ, ಯೋಗರಾಜ್ ಭಟ್) ಚಿತ್ರವಿದು. ಪ್ರೇಕ್ಷಕರು ರಜತಪರದೆಯ ಮೇಲೆ ಹೆಚ್ಚಾಗಿ ಕಂಡಿರದ ಹೊಸನಾಯಕ (ವಿಜಯ ಸೂರ್ಯ) ಹಾಗೂ ಇಬ್ಬರು ಹೊಸನಾಯಕಿಯರ (ಕಾವ್ಯಾ ಶೆಟ್ಟಿ, ಮಯೂರಿ) ಅಪೂರ್ವ ಸಂಗಮವಿದು. ನವುರಾದ ಹಾಸ್ಯ ಮತ್ತು ಗಂಭೀರ ಸಂದೇಶ ಹೊತ್ತಚಿತ್ರವಾಗಿ ಇಷ್ಟಕಾಮ್ಯ ಎಲ್ಲರಿಗು ಇಷ್ಟವಾಗುವ ಸಿನಿಕಾವ್ಯ.
ಹಳ್ಳಿಯ ಆಸ್ಪತ್ರೆಯೊಂದನ್ನು ನಡೆಸಿಕೊಡು ಹೋಗುವ ಆದರ್ಶ ಹೊತ್ತ ಡಾ. ಆಕರ್ಷ ವಿವಾಹಿತನಾಗಿದ್ದರೂ ಹೆಂಡತಿಯ ಸ್ನೇಹವನ್ನು ಕಳೆದುಕೊಂಡವ. ಅಪಘಾತ ನಿಮಿತ್ತವಾಗಿ ಹುಡುಗಿಯೋರ್ವಳ ಪರಿಚಯವಾಗಿ ಅದು ಸ್ನೇಹಕ್ಕೆ ತಿರುಗಿ ಅವರಿಬ್ಬರು ಒಂದಾಗುವರು ಎಂದುಕೊಳ್ಳಬೇಕಿದ್ದರೆ ಪತ್ನಿ ತಪ್ಪು ಮನವರಿಕೆಯಾಗಿ ಹಿಂದಿರುಗುವಳು. ನಡುವೆ ಕಾಣಿಸಿಕೊಳ್ಳುವ ಗೊಂದಲ ಪರಿಹಾರದಲ್ಲಿ ಪ್ರಕಾಶ್ ಬೆಳವಾಡಿ, ಸುಮನ್ ನಗರ್ಕರ್ ತೋರಿಸಿದ ಟುಗೆದರ್ ಲಿವಿಂಗ್ ನ ಸಾಧ್ಯತೆ, ಊರಲ್ಲಿ ನಡೆದ ಒಂದು ಹೆರಿಗೆ, ‘ಅಚ್ಚರಿ’ಯ ಮನಃಪರಿವರ್ತನೆ, ಅದಿತಿಯ ಪಶ್ಚಾತ್ತಾಪ ಇತ್ಯಾದಿಗಳು ಚಿತ್ರದ ಒಟ್ಟು ಬೆಳವಣಿಗೆಯ ಮೇಲೆ ಪರಿಣಾಮ ಬೀರುವುದು.
ಸಿನಿಮಾದ ಪೂರ್ವಾರ್ಧ ಲಘುದಾಟಿಯಲ್ಲಿ ಸಾಗುತ್ತಿದ್ದು ರಂಗಾಯಣ ರಘು, ಮಂಡ್ಯ ರಮೇಶ, ಮಿಮಿಕ್ರಿ ದಯಾನಂದ, ಚಿಕ್ಕಣ್ಣ ಮೊದಲಾದವರು ಕತೆಯನ್ನು ಸಂಭ್ರಮದಿಂದ ತೇಲಿಸಿ ಕೊಂಡೊಯ್ಯುತ್ತಲಿದ್ದರೆ ಉತ್ತರಾರ್ಧದಲ್ಲಿ ಕಥಾವಸ್ತುವಿನ ಗಾಢತೆ ಪ್ರೇಕ್ಷಕನನ್ನು ತನ್ಮಯಗೊಳಿಸಿಬಿಡುತ್ತದೆ.
ನಿರ್ದೇಶಕರು ಇನ್ನಷ್ಟು ಗಮನ ಹರಿಸಬಹುದಾಗಿದ್ದ ಎರಡು ಅಂಶಗಳು: ಒಂದು, ಅದಿತಿಯಲ್ಲಿದ್ದ ಒಬ್ಸೆಸಿವ್ ಕಂಪಲ್ಸಿವ್ ಡಿಸಾರ್ಡರಿಗೆ ಡಾಕ್ಟರ್ ಆಕರ್ಷ್ ಸ್ವತಃ ಪರಿಹಾರ ಕಂಡುಕೊಳ್ಳದ್ದು. ಎರಡು, ಆಕರ್ಷ್ ಅಷ್ಟೊಂದು ಪ್ರೀತಿಸಿದ್ದ ಅಚ್ಚರಿಯನ್ನು ಕೈಬಿಟ್ಟು ಒಮ್ಮಿಂದೊಮ್ಮೆಲೆ ಅದಿತಿಯ ಕಡೆ ಮುಖ ಮಾಡಿದ್ದು.
ಚಿಂತನ್ ವಿಕಾಸ್ ಎಂಬ ಹೊಸ ಪ್ರತಿಭೆ ಕುವೆಂಪು ಅವರ ‘ಜೇನಾಗುವಾ’ ಹಾಡನ್ನು ಇನ್ನಿಲ್ಲದಂತೆ ಹಾಡಿ ಮನಸೂರೆಗೊಂಡಿದ್ದಾರೆ (ಸಂಗೀತ: ಅಜನೀಶ್).
ಅಮೃತಧಾರೆ, ಅಮೇರಿಕಾ ಅಮೇರಿಕಾದಂತಹ ಚಿತ್ರಶಿಲ್ಪಗಳನ್ನು ನೀಡಿದ ನಾಗತಿಹಳ್ಳಿ ಚಂದ್ರಶೇಖರ್ ಎರಡು ವಿಫಲ ಚಿತ್ರಗಳನ್ನು ನಡುವೆ ನೀಡಿದ್ದರೂ ಛಲಬಿಡದ ತ್ರಿವಿಕ್ರಮನಂತೆ ಮತ್ತೊಮ್ಮೆ ಎದ್ದು ಬಂದಿದ್ದಾರೆ. ಅವರ ಇಷ್ಟಕಾವ್ಯವಾದ ‘ಇಷ್ಟಕಾಮ್ಯ’ ದೊಂದಿಗೆ ಈ ಬಾರಿ ನಾವೂ ಕೈಜೋಡಿಸೋಣ.
Please read the review of the film in today’s ‘HINDU’