ತಾವರೆಯ ಬಾಗಿಲು-೧೮
ಎರಡು ಸಾವಿರ ವರ್ಷಗಳ ಹಿಂದೆ ತೆಂಕಣಭಾರತದ ದೇಶ-ಕಾಲ-ಪರಿಸ್ಥಿತಿ ಹೇಗಿತ್ತೆಂದು ನಾವು ಊಹಿಸುವುದೂ ಸಾಧ್ಯವಿಲ್ಲ. ಮರೆತು ಹೋದ ಕನಸಿನಂತೆ ಭೂತಕಾಲದ ಕಾವಳದಲ್ಲಿ ಎಲ್ಲವೂ ಮಸುಕು ಮಸುಕಾಗಿರುವಾಗ ಆವತ್ತಿನ ಗಿರಿ-ವನ-ನದಿಗಳನ್ನು, ಹೂ-ಹಣ್ಣು-ಪ್ರಾಣಿ-ಪಕ್ಷಿಗಳನ್ನೂ, ಆವತ್ತು ಬದುಕಿದ್ದ ಆದಿಮರ ಜೀವನಕ್ರಮವನ್ನು, ಬೇಟ-ಕೂಟ-ಕಳ್ಳು-ಕಾಳಗ-ಊಟ-ಉಡುಪು ವಗೈರೆಗಳ ಸಮೇತ ಮತ್ತೆ ಪಾತಾಳದಿಂದೆತ್ತಿ ಈವತ್ತಿನ ಪಾತಳಿಗೆ ತರಬಲ್ಲ ಪಾತಾಳ ಗರಡಿಯೊಂದುಂಟು. ಅದು ತಮಿಳಿನ ಅತ್ಯಂತ ಪ್ರಾಚೀನ ಭಾಷಾದಾಖಲೆಯೆನ್ನಬಹುದಾದ ಸಂಗಂ ಕಾವ್ಯ.
ಸಂಗಂ ಕಾವ್ಯ ಚಿತ್ರಿಸುವ ಭೌಗೋಳಿಕ ಮತ್ತು ಜೈವಿಕ ವಿವರಗಳು ನಮ್ಮ ಕಣ್ಣಿಗೆ ಕಟ್ಟುವಂತಿವೆ. ಮುಳ್ಳುಮುಂಡಕ, ಕೊಂಡೆ, ಸುರಹೊನ್ನೆ, ನೇಳಲ್, ತಾಳೆ, ಚಂದನ, ಈಚಲು ಮೊದಲಾದ ಮರಗಿಡಗಳಿಂದ ಇಡಿಕಿರಿದ ದಟ್ಟ ಕಾಡುಗಳು; ಅಲ್ಲಿ ಕಾಲಕಾಲಕ್ಕೆ ಅರಳುವ ಕುರಂಜಿ, ಮೊಲ್ಲೆ, ಈಂಗೈ, ವೇಂಗೈ, ತೇಟ್ರ, ಕೋನ್ರೈ, ಮತ್ತಿ, ಕಾಂದಳ್, ಪಿಡಾ, ಕೇದಗೆ, ಬೆಳ್ದಾವರೆ, ಕನ್ನೈದಿಲೆ, ಪೀಲು, ಗೌರಿ ಮೊದಲಾದ ಹೂಗಳು; ಅನ್ನಿಯೂರು, ಊಣೂರು, ಉರಂದೈ, ಕೋಟೂರು, ಪಾಳಿ, ಎರುಮೈಯೂರು(ಈವತ್ತಿನ ಮೈಸೂರು!), ಅಳ್ಳೂರು, ಚಿರೈಕುಡಿ ಮೊದಲಾದ ಊರುಗಳು; ನೆಡಿಯೋನ್, ಪೇಗನ್, ತಿತ್ತ, ಪಾರಿ, ವಲ್ ವಿಲ್ ಓರಿ, ನನ್ನನ್, ನೆಡುಂಚಳಿಯನ್, ಪಣ್ಣಿ, ತಿತಿಯನ್ ಇತ್ಯಾದಿ ಹೆಸರುಗಳ ಅರಸರು-ದಾನಿಗಳು; ವೈಗಾ, ಬಕ್ರುಳಿ ಮೊದಲಾದ ನದಿಗಳು-ಎಲ್ಲವೂ ಮತ್ತೆ ಇಲ್ಲಿ ಜೀವತಳೆಯುತ್ತವೆ.
ಸಂಗಂ ಕಾವ್ಯದಲ್ಲಿ ಅಗಂ ಮತ್ತು ಪುರಂ ಎಂದು ಎರಡು ಬಗೆ. (ಸಂಗಂ ಕಾವ್ಯದ ಬಗ್ಗೆ ಪ್ರೊ.ಜ್ಞಾನಸುಂದರಂ ಅವರ ಸವಿವರವಾದ ಪರಿಚಯ ಲೇಖನ ಗ್ರಂಥದ ಆರಂಭದಲ್ಲಿ ಪ್ರಕಟವಾಗಿದೆ).ಅಗಂ ಮನುಷ್ಯನ ಅಂತರಂಗದ ಬದುಕನ್ನು ಚಿತ್ರಿಸುವ ಕಾವ್ಯ. ಪುರಂ ಮನುಷ್ಯನ ಬಹಿರಂಗದ ಸಾಮಾಜಿಕ ಬದುಕನ್ನು ಕಟ್ಟಿಕೊಡುವ ಕಾವ್ಯ.
ಬೆಟ್ಟದ ಒಡೆಯನಾದ ನಾಯಕ, ಅವನ ನಾಯಕಿ, ನಾಯಕಿಯ ಗೆಳತಿ, ನಾಯಕಿಯ ತಾಯಿ, ನಾಯಕಿಯ ಸಾಕುತಾಯಿ, ನಾಯಕಿಯ ತಂದೆ, ನಾಯಕನ ಹೆಂಡತಿ ಮತ್ತು ವಿವಾಹೇತರ ಸಂಬಂಧವೆನಿಸುವ ಪ್ರೇಯಸಿ, ನಾಯಕ ದೊರೆಯೋ ಪಾಳೆಗಾರನೋ ಆಗಿರುವುದರಿಂದ ವೈರಿ ರಾಜರೊಂದಿಗೆ ಅವನ ಕಾದಾಟ, ಅದರಿಂದ ನಾಯಕಿಗೆ ಉಂಟಾಗುವ ವಿರಹ, ಕಾಳಗದಲ್ಲಿ ಸೈನಿಕರ ಪಾಡು, ಯುದ್ಧದಲ್ಲಿ ಬಳಕೆಯಾಗುವ ಆನೆ ಕುದುರೆ, ರಥಗಳು, ಯುದ್ಧದಲ್ಲಿ ಜಯ, ಅಷ್ಟರಲ್ಲಿ ಮಳೆಗಾಲ ಪ್ರಾರಂಭವಾಗಿ ಅರಸ ತನ್ನ ಊರಿಗೆ ಹಿಂದಿರುಗುವುದು, ವಿವಾಹ ಪೂರ್ವ ಎನ್ನಬಹುದಾದ ನಾಯಕ ನಾಯಕಿಯರ ಪ್ರಣಯ, ಮದುವೆಯ ಒತ್ತಾಯ, ವೀರರಾದ ದೊರೆಗಳು, ಮಹಾ ದಾನಿಗಳು, ಇವು ಮತ್ತೆ ಮತ್ತೆ ಸಂಗಂ ಕಾವ್ಯದಲ್ಲಿ ಕಾಣುವ ವ್ಯಕ್ತಿ-ಪ್ರಸಕ್ತಿಗಳು. ನಾಯಕಿ, ನಾಯಕ, ನಾಯಕಿಯ ತಾಯಿ, ನಾಯಕಿಯ ಸಖಿ ಮೊದಲಾದವರ ಸ್ವಗತಗಳು ಅಗಂ ಕಾವ್ಯದ ಮಾದರಿಗಳಾದರೆ, ಯುದ್ಧ, ಕೊಳ್ಳೆ, ಯೋಧರ ಪರಾಕ್ರಮ, ರಾಜನಿಷ್ಠೆ, ಅಗತ್ಯವಿರುವವರು ದಾನಕ್ಕಾಗಿ ದಾನಿಗಳನ್ನು ಸಮೀಪಿಸುವುದು ಇವೆಲ್ಲಾ ಪುರಂ ಕಾವ್ಯದಲ್ಲಿ ಕಾಣುವ ಸಂಗತಿಗಳು.
ಅಗಂ ಮತ್ತು ಪುರಂ ಮಾದರಿಗಳು ಒಂದಾಗಿ ಒಳ, ಹೊರ ಜಗತ್ತುಗಳೆರಡನ್ನೂ ನಿರೂಪಿಸುವ “ಅಗಪ್ಪುರಂ” ಎಂಬ ವಿಲೀನ ಕಾವ್ಯವು ಮುಂದೆ ಕಾಣಿಸಿದ್ದುಂಟು. ಅಗಂ ಇರಲಿ, ಪುರಂ ಇರಲಿ ಜೀವರಾಶಿಯ ಸಮೇತ ಪ್ರಕೃತಿಯನ್ನೂ, ಋತುಮಾನಗಳನ್ನೂ, ಜೇನು ಸಂಗ್ರಹ, ಕೃಷಿ, ಬೇಟೆ, ಕಾಳಗ, ನಾಯಕ-ನಾಯಕಿಯರ ಪ್ರಣಯ, ಕೂಟ, ವಿರಹ ಇತ್ಯಾದಿಗಳನ್ನೂ ಒಳಗೊಂಡು ಆ ಮೂಲಕವೇ ಕಾವ್ಯವು ಒಳಾರ್ಥವನ್ನು ಸಾಧಿಸುತ್ತದೆ ಎನ್ನುವುದು ಸಂಗಂ ಕಾವ್ಯದ ವಿಶೇಷ. ಎರಡು ಸಾವಿರ ವರ್ಷಗಳ ಹಿಂದೇ ಪಕ್ಕಾ ಲೌಕಿಕವೂ, ಧರ್ಮಾತೀತವೂ ಆದ ಕಾವ್ಯವೊಂದು ತಮಿಳಿನಲ್ಲಿ ನಿರ್ಮಾಣವಾದುದು ಬೆರಗು ಉಂಟುಮಾಡುವ ಸಂಗತಿ.
ಪ್ರಾಯಃ ಈ ಕಾವ್ಯವು ಮೊದಲು ಮೌಖಿಕ ಸಂಪ್ರದಾಯದಲ್ಲಿ ಹಾಡುಗಳ ರೂಪದಲ್ಲಿಯೇ ಕಾಣಿಸಿಕೊಂಡಿರಬೇಕೆಂಬುದು ವಿದ್ವಾಂಸರ ಅಭಿಪ್ರಾಯ. ಕಾವ್ಯದ ಸಹಜತೆ, ದೇಸಿ ಗುಣ, ನವುರುನವುರಾದ ಕಲ್ಪನೆ, ಒಳಾರ್ಥಕ್ಕೆ (ಉಳ್ಳುರೈ) ಆಸ್ಪದವೀಯುವ ಧ್ವನಿರಮ್ಯತೆ ಇಲ್ಲಿ ಅಪೂರ್ವವಾದವು. “ಕನ್ನಡಕ್ಕೆ ಸಂಗಂ ಕಾಲದ ಶಿಲಪ್ಪದಿಕಾರಂ ಹಲವು ಅನುವಾದಗಳ ಮೂಲಕ ಪರಿಚಯವಾಗಿದೆ. ತಿರುಕ್ಕುರುಳ್ ಕೂಡ ಹಲವು ಬಾರಿ ಕನ್ನಡಕ್ಕೆ ಅನುವಾದಗೊಂಡಿದೆ. ಆದರೆ ಸಂಗಂ ಸಾಹಿತ್ಯ ಕನ್ನಡಕ್ಕೆ ಅನುವಾದಗೊಳ್ಳದೆ ಉಳಿದಿತ್ತು”(ಬ್ಲರ್ಬಿನಲ್ಲಿ ಪ್ರಾಧಿಕಾರದ ಅಧ್ಯಕ್ಷರಾದ ಡಾ|ಕೆ.ವಿ.ನಾರಾಯಣ). ಆಯ್ದ ಸಂಗಂ ಕವಿತೆಗಳ ಈ ಕನ್ನಡ ಅನುವಾದದ ಅಚ್ಚುಕಟ್ಟಾದ ಗ್ರಂಥದ ಪ್ರಕಟಣೆಯಿಂದ ಈಗ ಆ ಅರಕೆ ತೀರಿದಂತಾಗಿದೆ.
****
ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು, ತಮಿಳು ಕವಿ ವಿಮರ್ಶಕ ವಿದ್ವಾಂಸ ಡಾ|ಎಸ್.ಕಾರ್ಲೋಸ್ ಅವರ ಸಂಪಾದಕತ್ವದಲ್ಲಿ, ತಮಿಳು, ಕನ್ನಡ ವಿದ್ವಾಂಸರು ಮತ್ತು ಕವಿಗಳ ಸಹಯೋಗದೊಂದಿಗೆ ತುಂಬ ಚೆನ್ನಾಗಿ ಸಂಗಂಕಾವ್ಯದ ಆಯ್ದ ಕಾವ್ಯಭಾಗಗಳ ಅನುವಾದವನ್ನು ಈಗ ಹೊರಕ್ಕೆ ತಂದಿದೆ. ಇದೊಂದು ಸಾರ್ಥಕ ಪ್ರಯತ್ನವೆಂದು ಸ್ವತಃ ಈ ಅನುವಾದದ ಜವಾಬುದಾರಿಯಲ್ಲಿ ಭಾಗಿಯಾದ ನಾನು ಖಚಿತವಾಗಿ ಹೇಳಬಲ್ಲೆ. ನನ್ನ ಮನ ಸೂರೆ ಮಾಡಿದ ಕೆಲವು ಕವಿತಾಖಂಡಗಳನ್ನು ಗಮನಿಸಿ:
೧ ನಾಯಕನ ಅಗಲಿಕೆಯ ವೇದನೆಯನ್ನು ನಾಯಕಿ ಸಹಿಸಲಾರಳು ಎಂದು ಗೆಳತಿ ಚಿಂತಿಸುತ್ತಿದ್ದಾಳೆ. ಆಗ ನಾಯಕಿ ಗೆಳತಿಗೆ ನುಡಿದದ್ದು-
ಸುರಹೊನ್ನೆ ಇನಿನೆರಳಲ್ಲಿ ತಂಗಿ ಕ್ರೌಂಚಗಳು ನಿದ್ರಿಸುವ
ಅಪ್ಪಳಿಸುವಲೆಯಿಂದ ಚಿಮ್ಮಿ ತುಂತುರು ಸೊಗವರಳುವ
ಆ ಮೆದು ಮಳಲ ಕಡಲ ತೀರದವನು ಅಗಲಿರಲು
ಹಲವೆಸಳ ಎನ್ನ ಕಾಡಿಗೆಗಣ್ಣು ನಿದ್ರೆಯನೆ ಒಲ್ಲವೇ!
ಇದುವೇ ಏನೇ ಸಖೀ ಮದನ ಬಾಧೆ?
ಮೂಲ ಕವಿ: ನರಿವೆರೂಉತ್ತಲೈಯಾರ್
ಅನುವಾದ: ಲಲಿತಾ ಸಿದ್ಧಬಸವಯ್ಯ
೨ ಮಗಳು ಪ್ರಿಯಕರನೊಡನೆ ಓಡಿ ಹೋದಾಗ ತಾಯಿ ಹೇಳಿದ್ದು-
ನಿಡು ಬೇಸಗೆ. ಬಾಡಿದ ಗೌರಿ ಹೂ.
ಕಿಚ್ಚಂತೆ ನಿಗಿನಿಗಿಸುವ ವಿಸ್ತಾರ ಬೆಂಗಾಡು
ಕಾಡಿನಲಿ ಮರಿಗಳ ಕಾಯುವ ಈದ ಹೆಣ್ಣುಹುಲಿ.
ಮಬ್ಬುಗತ್ತಲ ಸಂಜೆ ಹಸಿದು ಹಾದಿಹೋಕರ ಕೊಲಲು
ಹುಲ್ಲುಗಾವಲಿನ ಕಾಲ್ದಾರಿಯಲಿ ಗಂಡುಹುಲಿ ಹೊಂಚಿರಲು
ಅವಳಿಗೆಲ್ಲಿಯ ಧೈರ್ಯ
ನಾನವಳ ಹಚ್ಚೆ ಹುಯ್ದ ಚೂಪು ಕನ್ನೆಮೊಲೆಗಳು ನೋಯುವವೆಂದು
ಕೈ ಹೊರಳಿಸಿದ ಮಾತ್ರಕ್ಕೆ ಅವಳು
ತನ್ನ ಮೆದು ನೋಟದ ಬಟ್ಟಲುಗಣ್ಣು
ತೇವಗೊಳ್ಳುವಂತೆ ಅತ್ತು ನಿಟ್ಟಿಸುತ್ತಿರಲು
ಚೆಂದದ ಕಾಡಿಗೆಗಪ್ಪಿನ ಉದ್ದಗೂದಲ ತುಂಬು ಸಿಗ್ಗಿನವಳು.
ಮೂಲ ಕವಿ: ಪೂದನಾರ್
ಅನುವಾದ: ಸ.ರಘುನಾಥ
೩ ನಾಯಕನ ಅಗಲಿಕೆಯ ಸಮಯದಲ್ಲಿ ನಾಯಕಿಯ ಗೆಳತಿ ಹೇಳಿದ್ದು-
ಧರೆಯೆಲ್ಲ ತಣಿಯುವಂತೆ ಸುರಿದು ತಂಪು ಮಳೆ
ಮೋಡದ ರಣದುಂದುಭಿಯ ಗುಡುಗಿನ ಸದ್ದಡಗಿದೆ
ಹೊದರಲ್ಲಿ ಕುರುಟಿ ಮುಳ್ಳಂತೆ ಕೆಂಪು ಮೊಲ್ಲೆಯ ಮೊಗ್ಗು
ಪಿಡವಂನ ದಟ್ಟಗೊಂಚಲಿನ ಜೊತೆ ಒಟ್ಟಿಗೇ ಅರಳಲು
ಕಾಡಿಗೆ ಕಾಡೇ ಘಮಘಮಿಸುತ್ತದೆ
ಗೌರಿಹೂ ಗಿಡದ ಜೊತೆ ಗರಿಕೆಯನ್ನುಂಡು ಬೇಸತ್ತ
ಗಂಭೀರ ನಡಿಗೆಯ ಗಂಡು, ಹರಿಣಿಯನು ತಬ್ಬಿತು
ತಂಪು ನೀರ ಕುಡಿದ ಅವು ಮಲಗಿದವು ಒಂದೆಡೆ
ಗಿಡ್ಡ ಕರಿಲಕ್ಕೆ ಹಬ್ಬಿರುವ ಮೊಲ್ಲೆ
ಹೂ ಬಿಡುವಷ್ಟರವರೆಗೆ ಅಲ್ಲಿ ಗಳಿಸುವ ಗಳಿಕೆ
ಎಂದು ಹೊರಟನವನು
ಆ ಕಾಲ ಬಂದಿತೇ ಗೆಳತಿ
ಮೂಲ ಕವಿ: ಉರೋಡಗತ್ತು ಕಂದರತ್ತನಾರ್
ಅನುವಾದ: ಆರ್. ವಿಜಯರಾಘವನ್
೪ ನಾಯಕನ ಪರಾಕ್ರಮವನ್ನು ಹೊಗಳಿ ಒಳ್ಳೆಯ ಮಾತುಗಳನ್ನಾಡುವುದು-
ಈ ಊರು ನನ್ನವನ ಊರಲ್ಲ
ಈ ನಾಡು ನನ್ನವನ ನಾಡಲ್ಲ
ಗೆಲುವು ಅವನದೇ ಎನ್ನುವ ಗುಂಪೊಂದು
ಸೋಲುವುದು ಅವನೇ ಎನ್ನುವ ಗುಂಪು ಇನ್ನೊಂದು
ಇಬ್ಬರಾಡುವ ಮಾತು ನಿಜವೇ ಇರಬಹುದು
ಅಂದದ ಕಾಲಂದಿಗೆ ಸದ್ದು ಘಲ್ಲೆನಲು ಓಡಿ ಬಂದು
ಮನೆ ಮುಂದಿನ ತಾಳೆಮರವನೊರಗಿ ನಿಂತು
ಅವನು ಜಯಗಳಿಸುವುದ ಕಂಡೆ ನಾನು
ಮೂಲ ಕವಿ: ನಕ್ಕಣೈಯಾರ್
ಅನುವಾದ: ಕೆ.ವೈ.ನಾರಾಯಣಸ್ವಾಮಿ
೫ ನಾಯಕಿಯನ್ನು ಅಗಲಿದ ನಾಯಕನ ಸ್ವಗತದ ಆಯ್ದ ಎರಡು ಪದ್ಯಗಳು-
ಕಾದ ನೆತ್ತಿಯ ಹದ್ದಿನ, ಹರಿತ ಕೊಕ್ಕಿನ ಗೆಳತಿ
ಮಾಮರದ ಮುರುಟಿರುವ ಕೊಂಬೆಯನು ಏರಿ
ಸುಡು ನೆಲದ ಕಾಡಿನಲಿ ಒಂಟಿ ಕೂಗುತಿದೆ
ಬೇರೆ ನುಡಿಯಾಡುವರ ನಡುವೆ ಹಲವು ಮಲೆಯೇರಿದರೂ
ಕಾಡುತಿದೆ ಹೊಳೆವ ಬಳೆ ತೊಟ್ಟವಳ ನೆನಪು.
ನೀಳ ಬಿದಿರು ಒಣಗಿದೆ ನಿಡುಗಾಲದ ಬಿಸಿಲಿಗೆ
ಕಲ್ಲುಗಳೇ ಬಿರಿದಿವೆ ಸುಡು ಸೂರ್ಯನ ಕಿರಣಕೆ
ನನ್ನವಳ ಕಡು ಚೆಲುವ ನೆನೆದು
ಹಿತವೆನಿಸುತಿದೆ ಬಿಸಿಲಿನ ಬೇಗೆ
ತಂಪಾಗಿ ಕಾಣುತಿದೆ ಸುಡುವ ಕಾಡ ಹಾದಿ.
ಮೂಲ ಕವಿ: ಓದಲಾಂದೈಯಾರ್
ಅನುವಾದ: ಎಂ.ಆರ್.ಕಮಲ
ಈ ಸಂಗ್ರಹಕ್ಕೆ ಮುನ್ನುಡಿ ಬರೆದಿರುವ ಡಾ|ಎಚ್.ಎಸ್.ರಾಘವೇಂದ್ರರಾವ್ ಹೇಳುತ್ತಾರೆ: “ನಿಜವಾಗಿಯೂ ಇದು ಒಂದು ಸೃಜನಶೀಲವಾದ ಪ್ರಯೋಗ. ಇದರಲ್ಲಿ ಹಲವು ಬಗೆಯ ಹಲವು ಮನಸ್ಸುಗಳು ಒಗ್ಗೂಡಿವೆ. ಯಾರೋ ಒಬ್ಬರು ತಮಿಳಿನಿಂದ ಅಥವಾ ಇಂಗ್ಲಿಷ್ ನಿಂದ ನೇರವಾಗಿ ಮಾಡಿರುವ ಅನುವಾದಗಳು ಇಲ್ಲಿ ಇಲ್ಲ. ಭಾರತೀಯ ಭಾಷೆಗಳ ನಡುವೆ ಇಂಗ್ಲಿಷ್ ಎಂಬ ಮಧ್ಯವರ್ತಿ ಭಾಷೆಯಿಲ್ಲದ ಅನುವಾದಗಳು ನಡೆಯಬೇಕೆನ್ನುವುದು ಕುವೆಂಪು ಭಾಷಾ ಪ್ರಾಧಿಕಾರದ ಉದ್ದೇಶ. ….ಹಲವು ಕವಿಗಳ ಸೃಷ್ಟಿಯಾದ ಸಂಗಂ ಕವಿತೆಗಳನ್ನು ಹಲವು ಕವಿಗಳು ತಮ್ಮ ಸ್ವಂತ ಕವಿತೆಯ ಬೆಳಕಿನಲ್ಲಿ (ಇಲ್ಲಿ) ಮತ್ತೆ ಮೂಡಿಸಿದ್ದಾರೆ.
ಇವುಗಳನ್ನು ’ಒಂದಿಷ್ಟು ಕುಂದಿಲ್ಲ’ ಎಂದು ಹೇಳಲಾಗದಿದ್ದರೂ, ’ಒಂದರೊಲು ಒಂದಿಲ್ಲ’ ಎಂದು ಖಂಡಿತವಾಗಿಯೂ ಹೇಳಬಹುದು”. ನಾವಾದರೂ ಅಹುದಾದ ಈ ಮಾತಿಗೆ ಅಹುದು ಎನ್ನಲಿಕ್ಕೆ ಅಡ್ಡಿಯಿಲ್ಲ.
ಅಪರೂಪದ ಫೋಟೊ! ನನಗೆಅದರ ಕಾಪಿ ಬೇಕು.
ಎಚ್.ಎಸ್.ವಿ.
ಲೇಖನ ತುಂಬಾ ಚೆನ್ನಾಗಿದೆ.
ಎಷ್ಟೊಂದು ಕಾವ್ಯಸಂಗತಿಗಳ ಅನಾವರಣ ಇಲ್ಲಿ…
ಓದುತ್ತಲೇ ಇರಬೇಕು..
ಸರ್, ವರ್ಷವಾಯಿತಲ್ಲವೇ ? ನೆನಪುಗಳು ಮರುಕಳಿಸಿದವು. ತಾವು, ಕೆವಿಎನ್, ಹೆಚ್ ಎಸ್ ಆರ್, ಕಾರ್ಲೋ ಸರ್ – ನಿಮ್ಮಂಥಹ ಹಿರಿಯರ ಮಾರ್ಗದರ್ಶನದೊಂದಿಗೆ ನಡೆದ “ನಿಚ್ಚಂ ಪೊಸತು” – ಸಂಗಂ ಸಾಹಿತ್ಯದ ಅನುವಾದದ ಸಮಯ ಬಹಳ ಸುಂದರವಾಗಿತ್ತು. ಬಹಳಷ್ಟು ಕಲಿತೆ ನಾನು. ಲೇಖನ ಇಷ್ಟವಾಯ್ತು ಸರ್. ಧನ್ಯವಾದಗಳು.
ಲಲಿತ ಸಿದ್ದಬಸವಯ್ಯ, ಎಸ್.ಪಿ.ವಿಜಯಲಕ್ಶ್ಮಿ, ಅಕ್ಕಿಮಂಗಲ ಮಂಜುನಾಥ್…ನಿಮ್ಮ ಪ್ರೀತಿಗೆ ಆಭಾರಿ.
ಎಚ್ಚೆಸ್ವಿ.