ಸಾವಯವ ಕೃಷಿ ಗೊಂದಲಗಳು
ಶಿವನಂಜಯ್ಯ ಬಾಳೇಕಾಯಿ
೮೦ ರ ದಶಕದ ಮೊದಲ ದಿನಗಳಲ್ಲಿ ನನ್ನನ್ನೂ ಒಳಗೊಡಂತೆ ವರ್ತೂರು ನಾರಾಯಣರೆಡ್ದಿ , ತೀರ್ಥಹಳ್ಳಿ ದಿ. ಪುರುಷೋತ್ತಮ ರಾವ್ ಮುಂತಾದವರು ಸಾವಯವ ಕೃಷಿ ಬಗ್ಗೆ ಮಾತಾಡಲಾರಂಭಿಸಿದಾಗ ‘ಸಾವಯವ ಮಾಡೋಕೆ ದೇಶದ ತುಬಾ ಗುಂಡಿ ತೆಗೀಬೇಕ’ ಎಂದು ಕೃಷಿ ವಿ.ವಿ ಯ ದೊಡ್ದವರೆಲ್ಲ ಲೇವಡಿ ಮಾಡಿದ್ದುಂಟು.
ಅವರೆಲ್ಲಾ ಈಗ ಸಾವಯವ ಖುರ್ಚಿ ಪೀಠಸ್ಠರು. ಇದು ಸಾವಯವಕ್ಕೆ ಸಂದ ಗೌರವ ಅಲ್ಲವೆ?
ಇಂದು ಸಾವಯವ ಬೇಸಾಯ ‘ಸಾವಯವ ಕೃಷಿ, ಸಹಜ ಕೃಷಿ, ಶೂನ್ಯ ಬಂಡವಾಳದ ನೈಸರ್ಗಿಕ, ಜೀವಚೈತನ್ಯ, ಕಾಡು, ಮಾಡು , ಮೇಡು ಕೃಷಿ’ ಎಂದೆಲ್ಲಾ ಬಹುರೂಪಿಯಾಗಿದೆ.
ಇವಕ್ಕೆ ಹೋಮ ಹವನ , ಡೈಜಸ್ಟರ್ , ಬಗೆ ಬಗೆ ಅಂಬ್ರುತ ಗಳು , ನಾಡಹಸು , ಊರು ಕೋಳಿ ಎಲ್ಲಾ ಸೇರಿಕೊಂಡು ಸರಳವಾಗಿದ್ದ ಸಾವಯವ ದುಬಾರಿ ಆಗಿ ಮೂಢನಂಬಿಕೆಗಳ ಗೂಡಾಗಿದೆ.
ಜತೆಗೆ ಆಯಾ ಪಧ್ಧತಿ ಪ್ರತಿಪಾದಕರು ತಾವು ಹೇಳುವುದೇ, ಮಾಡುವುದೇ ಶ್ರೇಷ್ಠ , ಉಳಿದ ವಿಧಾನಗಳೆಲ್ಲಾ ‘ಖತರ್ನಾಕ್’ ಎಂದೆಲ್ಲಾ ಪ್ರಚಾರ ಮಾಡುತ್ತ ಸಾವಯವ ಬೇಸಾಯಕ್ಕೆ ಬರುತ್ತಿರುವ ಆಸಕ್ತರನ್ನೆಲ್ಲಾ ಗೊಂದಲಕ್ಕೆ ದೂಡುತ್ತಿದ್ದೇವೆ.
ಇಲ್ಲಿ ನಾವೆಲ್ಲಾ ನೆನಪಿಡಬೇಕಿರುವುದು ‘ಯಾವ ಕೃಷಿ ವಿಧಾನವೂ ಪರಿಪೂರ್ಣವಲ್ಲ’ ಎಲ್ಲವಕ್ಕೂ ತಮ್ಮದೇ ಇತಿ ಮಿತಿಗಳಿವೆ ಎಂಬುದು.
ಮೇಲಿನ ಎಲ್ಲವೂ ಮೂಲಭೂತವಾಗಿ ಸಾವಯವ ವಿಧಾನಗಳು. ಭೂಮಂಡಲದ ಚರಾಚರಗಳ ನಡುವೆ ಬಿಡಿಸಲಾಗದ ಸಾವಯವ ಸಂಬಂದ ಇದೆ ಎಂದು ನಂಬುವ, ಪ್ರಕೃತಿಯ ವೈವಿಧ್ಯ ಒಪ್ಪಿಕೊಳ್ಳುವ, ಸಾವಯವ ಬಳಸಿ ಮಣ್ಣಿನ ಜೈವಿಕ ರಾಸಾಯನಿಕ ಕ್ರಿಯೆ ಉತ್ತೇಜಿಸುವ ಜೀವಪರ ವಿಧಾನಗಳು.
ಆದ್ದರಿಂದ ಈ ಎಲ್ಲವುಗಳನ್ನು ಸಮನ್ವಯಗೊಳಿಸಿ ಆಯಾ ಪ್ರದೇಶಕ್ಕೆ , ಕೃಷಿ ಹವಾಮಾನಕ್ಕೆ , ಬೆಳೆಯುವ ಬೆಳೆಗಳಿಗೆ ಅನುಗುಣವಾಗಿ ಒಂದು ಸಾಮಾನ್ಯ , ಸರಳ ಸಾವಯವ ವಿಧಾನವನ್ನು ರೂಪಿಸುವ ಜರೂರು ನಮ್ಮ ಮುಂದಿದೆ.
ನಮ್ಮ ದಂಡ ಪಿಂಡ ಕೃಷಿ ವಿ. ವಿ ನಿಲಯಗಳು ಅನುಭವಿ ರೈತರು, ಕೃಷಿ ವಿಜ್ಞಾನಿಗಳನ್ನು ಸೇರಿಸಿ ಈ ಕೆಲಸ ಮಾಡಿ, ಅದನ್ನು ಜೈವಿಕ ಕೃಷಿ ಎಂದು ನಾಮಕರಣ ಮಾಡಿದರೆ ಹೇಗಿರುತ್ತೆ?
0 ಪ್ರತಿಕ್ರಿಯೆಗಳು