ನಾ ದಿವಾಕರ್
ಎಕ್ಸಿಟ್ ಪೋಲ್ ಎನ್ನುವುದು ಒಂದು ಅಂದಾಜು ಪ್ರಕ್ರಿಯೆ.
ಇಲ್ಲಿ ಷೇರು ಮಾರುಕಟ್ಟೆಯ ಸ್ಥಿರತೆಯನ್ನು ಕಾಪಾಡುವ ಔದ್ಯಮಿಕ ಹಿತಾಸಕ್ತಿಯೂ ಇರುತ್ತದೆ. ಆಡಳಿತಾರೂಢ ಪಕ್ಷಕ್ಕೆ ಹಿನ್ನಡೆಯಾಗುವ ಸೂಚನೆಗಳು ಷೇರು ಮಾರುಕಟ್ಟೆಯಲ್ಲಿ ವ್ಯತ್ಯಯಗಳನ್ನುಂಟುಮಾಡುವ ಸಾಧ್ಯತೆಗಳಿರುತ್ತವೆ.
ಹಾಗಾಗಿ ಕಾರ್ಪೋರೇಟ್ ಕೇಂದ್ರಿತ/ ನಿಯಂತ್ರಿತ ಮಾಧ್ಯಮಗಳು ನಡೆಸುವ ಸಮೀಕ್ಷೆಗಳು ತಮ್ಮದೇ ಆದ ಹಿತಾಸಕ್ತಿಗಳನ್ನೂ ಬಿಂಬಿಸುತ್ತವೆ. ಬಹುಪಾಲು ಸಮೀಕ್ಷೆಗಳು ಜಗತ್ತಿನಾದ್ಯಂತ ವಿಫಲವಾಗಲು ಇದೂ ಒಂದು ಕಾರಣ.
ಪ್ರಸಕ್ತ ಚುನಾವಣೆಗಳ ಫಲಿತಾಂಶಗಳು ಏನಾಗುತ್ತವೆ ಎನ್ನುವುದಕ್ಕಿಂತಲೂ ಭಾರತದ ಭವಿಷ್ಯ ಯಾರ ಕೈಯಲ್ಲಿ ನೆಲೆಸುತ್ತದೆ ಎನ್ನುವುದು ಮುಖ್ಯ. ಸಂಭ್ರಮ ಮತ್ತು ನಿರಾಸೆಗಳನ್ನು ಬದಿಗಿಟ್ಟು ಅಧಿಕಾರ ರಾಜಕಾರಣ ಮತ್ತು ಕಾರ್ಪೋರೇಟ್ ಹಿತಾಸಕ್ತಿಗಳ ಮೈತ್ರಿಕೂಟದ ಅಂತಃಸತ್ವವನ್ನು ಗ್ರಹಿಸುವುದು ನಮ್ಮ ಆದ್ಯತೆಯಾಗಬೇಕಿದೆ.
ಎಕ್ಸಿಟ್ ಪೋಲ್ ಸುಳ್ಳಾಗಲೂಬಹುದು ಏರುಪೇರು ಆಗಬಹುದು. ಎಲ್ಲವೂ ಸಾಧ್ಯ. ಮಾಧ್ಯಮಗಳ ಅತ್ಯುತ್ಸಾಹದ ಹಿಂದೆ ವಂದಿಮಾಗಧ ಸಂಸ್ಕೃತಿಯೂ ಇರುವುದನ್ನು ಗಮನಿಸಬೇಕು. ಈ ವೇಳೆಗಾಗಲೇ ವಿದ್ಯುನ್ಮಾನ ಮಾಧ್ಯಮಗಳು ಟವಲ್ ಹಾಕಿ ತಮ್ಮ ಸ್ಥಾನಮಾನಗಳನ್ನು ಭದ್ರಪಡಿಸಿಕೊಳ್ಳಲು ಯತ್ನಿಸುತ್ತಿರುತ್ತವೆ. ಹಾಗಾಗಿಯೇ ಈ ಪರಿಯ ಅಬ್ಬರ.
ನಾಗರಿಕ ಸಮಾಜಕ್ಕೆ ಈ ಚಿಂತೆ ಬೇಕಿಲ್ಲ. ನಮಗೆ ಮೋದಿ ಅಥವಾ ರಾಹುಲ್ ಮುಖ್ಯವಲ್ಲ. ಪ್ರಜಾತಂತ್ರ ಮತ್ತು ಸಂವಿಧಾನ ಮುಖ್ಯ. ಗದ್ದುಗೆಯ ಮೇಲೆ ಯಾರೇ ಕುಳಿತರೂ ನಮ್ಮ ಹೋರಾಟ ನಿಲ್ಲುವುದಿಲ್ಲ, ನಿಲ್ಲಲೂ ಕೂಡದು. ಅಲ್ಲವೇ ? 23ರವರೆಗೆ ಕಾಯೋಣ.
ದೇಶದ ಬಹುಪಾಲು ಜನತೆ ಬಯಸಿದ್ದನ್ನು ಅಲ್ಲಗಳೆಯಲಾಗುವುದಿಲ್ಲ. ಆದರೆ ಜನಾಭಿಪ್ರಾಯವನ್ನು ಸಾರ್ವತ್ರಿಕ ಮನ್ನಣೆ ಎಂದು ಭಾವಿಸಿ ಕೈಕಟ್ಟಿ ಕೂಡಲೂ ಆಗುವುದಿಲ್ಲ. ಶೋಷಿತ, ದಮನಿತ, ಅವಕಾಶವಂಚಿತ ಜನಸಮುದಾಯಗಳಿಗೆ ಸಂಸದೀಯ ಪ್ರಜಾತಂತ್ರ ವ್ಯವಸ್ಥೆಯ ಚುನಾವಣೆಗಳು ಕೇವಲ ಅಲ್ಪಕಾಲಿಕ ಸಾಂತ್ವನವನ್ನಷ್ಟೇ ನೀಡಬಲ್ಲವು. ಇದಕ್ಕಿಂತಲೂ ಹೆಚ್ಚಿನದನ್ನು ನಿರೀಕ್ಷಿಸುವುದೂ ಬೇಕಿಲ್ಲ.
ನವ ಉದಾರವಾದ, ಕಾರ್ಪೋರೇಟ್ ರಾಜಕಾರಣ ಮತ್ತು ಔದ್ಯಮಿಕ ಹಿತಾಸಕ್ತಿಗಳ ಸಮ್ಮಿಶ್ರ ಸರ್ಕಾರ ನಮ್ಮ ಕಣ್ಣಿಗೆ ಕಾಣದೆಯೇ ಕಾರ್ಯ ನಿರ್ವಹಿಸುತ್ತಿರುತ್ತದೆ. ಸಾರಥಿ ಬದಲಾಗುತ್ತಾನೆ. ರಥಚಕ್ರಗಳು ಬದಲಾಗುವುದಿಲ್ಲ. ರಥದ ಮಾರ್ಗವೂ ಬದಲಾಗುವುದಿಲ್ಲ.
ನಮ್ಮ.. ಅಂದರೆ ಭಾರತದ ಬಹುಸಂಖ್ಯಾತ ಸಾರ್ವಭೌಮ ಪ್ರಜೆಗಳ ಹೋರಾಟ ಇರುವುದು ಆಳುವ ವರ್ಗಗಳ ವಿರುದ್ಧ ಮತ್ತು ಆಡಳಿತ ನೀತಿಗಳ ವಿರುದ್ಧ. ಯೋಗಿಯೋ.. ಭೋಗಿಯೋ, ಜೋಗಿಯೋ ಅಥವಾ ವಿರಾಗಿಯೋ ಗದ್ದುಗೆಯ ಚಿಂತೆ ನಮಗೆ ಬೇಕಿಲ್ಲ. ಯಾರು ಏರುತ್ತಾರೋ ನೋಡೋಣ.
ನಮ್ಮ ಪಾಲಿಗೆ ಇದೊಂದು ಸವಾಲಿನ ಸಂದರ್ಭ. ಸೋಲು ಗೆಲುವು ರಾಜಕೀಯ ಪಕ್ಷಗಳಿಗೆ ಸಂಬಂಧಿಸಿದ್ದು. ನಮ್ಮೆದರು ಇರುವುದು ಹೋರಾಟವೊಂದೇ. ಮುಂದುವರೆಸೋಣ.
0 ಪ್ರತಿಕ್ರಿಯೆಗಳು