ಕೆಲವರ್ಷಗಳಿಂದ ಸಣ್ಣ ಊರಿನ ಕಥೆಗಳನ್ನ ದೊಡ್ಡ ಪರದೆಯ ಮೇಲೆ ನೋಡಿದ್ದು ನೆನಪೇ ಇಲ್ಲ. ಸಿನಿಮಾ ಹೀಗೇ ಇರಬೇಕು, ಹಾಗೇ ಇರಬೇಕು ಎಂದು ಜನರು ತಮ್ಮಲ್ಲೇ ಒಂದು ಚೌಕಟ್ಟನ್ನ ಹಾಕಿಕೊಂಡಿದ್ದಾರೆ. ಈ ಚೌಕಟ್ಟಿನ ಹೊರಗೆ ಕೂಡ ಸಿನಿಮಾ ಮಾಡಬಹುದು, ಜನರು ಇಷ್ಟಪಡಬಹುದು ಎಂದು ತೋರಿಸಲು ಹೊರಟಿರುವುದೇ ಈ ಊರ್ಮನೆ ಹಬ್ಬ.
ಸಿನಿಮಾ ದೊಡ್ಡ ನಗರದಲ್ಲೇ ಆಗಬೇಕು, ಪ್ರಸಿದ್ಧ ನಟರಿರಬೇಕು, ಹೆಚ್ಚು ಕಾಸಿರಬೇಕು ಎಂಬುವುದು ಎಷ್ಟು ಮಟ್ಟಕ್ಕೆ ಸತ್ಯವೋ, ಸಣ್ಣ ಹಳ್ಳಿಯಲ್ಲೂ ಸಿನಿಮಾ ಮಾಡಬಹುದು, ತಮ್ಮ ಊರಿನ ಜನರನ್ನೇ ತೋರಿಸಬಹುದು ಎಂದು ಹೇಳಿ ಕೊಟ್ಟಿದ್ದೇ ಊರ್ಮನೆ ಪ್ರೊಡಕ್ಷನ್ಸ್. ಬೆಂಗಳೂರಿನಿಂದ ತಮ್ಮ ಮನೆ ಸಾಗರಕ್ಕೆ ವಾಪಸ್ ಬಂದು ಅಲ್ಲಿ ತಮ್ಮ ಸ್ನೇಹಿತರ ಜೊತೆ ‘Oormane Productions’ ಎಂದು ಒಂದು ಸಿನಿಮಾ ತಂಡ ಕಟ್ಟಿ, ಯಾವುದೇ ರೀತಿಯ ರಾಜಿ ಮಾಡಿಕೊಳ್ಳದೆ ಈಗಾಗಲೇ ವಡ್ಡಾರಾಧಕ ಎಂಬ ಕಿರುಚಿತ್ರ ಮಾಡಿ ಪ್ರಶಂಸೆಗೆ ಒಳಗಾದ ಸಾಗರದ ಅನೀಶ್ ಶರ್ಮಾ, ಈಗ ಇದೇ ರೀತಿಯ ಸಿನಿಮಾ ಹುಚ್ಚು ಇರುವ 6 ನಿರ್ದೇಶಕರಾದ ದೀಪಕ್ ರಾಮ್, ಶ್ರೀಕರ ಭಟ್, ನಿಖಿಲ್ ವಿನಯ್, ನವೀನ್ ತೇಜಸ್ವಿ, ಅಶ್ವಥ್, ಹಾಗೂ ಶರತ್ ರೈಸದ್ ಜೊತೆ ಒಟ್ಟುಗೂಡಿ ತಮ್ಮ ತಮ್ಮ ಕಿರು ಚಿತ್ರಗಳನ್ನ ಊರ್ಮನೆ ಹಬ್ಬದಲ್ಲಿ ಜನರಿಗೆ ತೋರಿಸಲು ಮುಂದಾಗಿದ್ದಾರೆ.
ಶಬರಿ, ಅಪ್ಪನ್ ಡೈರೆಕ್ಷನ್ ಹೇರ್ ಸ್ಟೈಲ್ ಬೈ ಕೃಷ್ಣಣ್ಣ, The Last Time I Saw The Moon, ಹಬ್ಬ ಹರಿದಿನ ಸುಗ್ಗಿ ಸಿವರಾತ್ರಿ, ಕಲ್ಲರ್ ಕನ್ನಡ್ಕ ಹಾಗು ಕಾಯಿರಸ, ಎಂದು ಏಳು ಕಿರುಚಿತ್ರಗಳನ್ನು ಈ ಹಬ್ಬದಲ್ಲಿ ಜನರಿಗೆ ತೋರಿಸಲಿದ್ದಾರೆ. ತಮ್ಮ ಊರು, ಅಲ್ಲಿಯ ಜನ, ಅವರ ಬದುಕು, ಬೆಟ್ಟ, ಸಮುದ್ರ, ಸಂಪ್ರದಾಯ, ದೊಡ್ಡ ಊರಿನ ಕಿರಿಕಿರಿ ಎಂದು ಇನ್ನೂ ಸುಮಾರಷ್ಟು ಅಂಶಗಳನ್ನ ದೊಡ್ಡ ಪರದೆಯ ಮೇಲೆ ನೋಡಬೇಕು, ಜನರು ಅದನ್ನ ನೋಡಿ ಅನುಭವಿಸಬೇಕು ಎಂಬುವುದೇ ಈ ಊರ್ಮನೆ ಹಬ್ಬದ ಉದ್ದೇಶ.
ಬನ್ನಿ, ಊರ್ಮನೆ ಹಬ್ಬವನ್ನು ಆಚರಿಸೋಣ.
ದಿನಾಂಕ : ೧೯ ಡಿಸೆಂಬರ್ ೨೦೨೧
ಸಮಯ : ಸಂಜೆ ೪ ಗಂಟೆಯಿಂದ
ಸ್ಥಳ : ಕಲಾವಿದರ ಸಂಘ, ಡಾ. ರಾಜ್ ಭವನ, ಡಾ. ಅಂಬರೀಷ್ ಸಭಾಭವನ, ಪಂಪ ಮಹಾಕವಿ ರಸ್ತೆ,
ಚಾಮರಾಜಪೇಟೆ, ಬೆಂಗಳೂರು.
0 ಪ್ರತಿಕ್ರಿಯೆಗಳು