ಸರ್ದಾರ್ ಎಂ ತನಾಝ್
ಒಮ್ಮೆ ಉಸಿರು ನಿಂತ ಮೇಲೆ
ಹೂವು ಹಾರ ಹಾಕಿ
ಹೂಣುವರು ಇಲ್ಲ ದಹಿಸುವರಯ್ಯ
ಮುಂದೆ ಮತ್ತೇನೂ ನಡೆಯದಯ್ಯ!
ಒಮ್ಮೆ ಉಸಿರು ನಿಂತ ಮೇಲೆ
ಒಂದೆರಡು ದಿನ ಮಾತಾಡುವರಯ್ಯ
ನಮ್ಮ ಬಗ್ಗೆ ಹಾಗೆ ಹೀಗೆ
ಮುಂದೆ ಮತ್ತೇನೂ ನಡೆಯದಯ್ಯ!
ಒಮ್ಮೆ ಉಸಿರು ನಿಂತ ಮೇಲೆ
ತಿಥಿ-ಶ್ರಾದ್ಧಗಳ ದಿನ ದುಃಖದಿ
ಸಿಹಿ ತಿಂಡಿ ಭಕ್ಷ್ಯ ಭೋಜನಗಳ ಸವಿಯುವರಯ್ಯ
ಮುಂದೆ ಮತ್ತೇನೂ ನಡೆಯದಯ್ಯ!
ಒಮ್ಮೆ ಉಸಿರು ನಿಂತ ಮೇಲೆ
ಹೋರಾಡುವರಯ್ಯ ನಮ್ಮವರು
ನಾವು ಬಿಟ್ಟು ಹೋದ ಆಸ್ತಿ ಪಾಸ್ತಿ ಪಡೆಯಲು
ಮುಂದೆ ಮತ್ತೇನೂ ನಡೆಯದಯ್ಯ!
ಒಮ್ಮೆ ಉಸಿರು ನಿಂತ ಮೇಲೆ
ನೀ ಸ್ವರ್ಗದ ಪಾಲು ಇಲ್ಲ ನರಕದ ಪಾಲಾದೆ
ಎನ್ನುವರಯ್ಯ ಜನ ತಮಗನ್ನಿಸಿದಂತೆ
ಮುಂದೆ ಮತ್ತೇನೂ ನಡೆಯದಯ್ಯ!
ಒಮ್ಮೆ ಉಸಿರು ನಿಂತ ಮೇಲೆ
ಕನಸುಗಳು ಕೂಡ ಸಾವ ಕಂಡು
ಸ್ತಬ್ಧವಾಗುವವು ಕೈ ಚೆಲ್ಲಿ
ಮುಂದೆ ಮತ್ತೇನೂ ನಡೆಯದಯ್ಯ!
ಒಮ್ಮೆ ಉಸಿರು ನಿಂತ ಮೇಲೆ
ಧ್ಯೇಯ, ಗುರಿ, ಆಸೆಗಳೆಲ್ಲ
ಮಣ್ಣಿನಲ್ಲಿ ಹೂತು ಕೊಳೆಯುವವಯ್ಯ
ಮುಂದೆ ಮತ್ತೇನೂ ನಡೆಯದಯ್ಯ!
ಒಮ್ಮೆ ಉಸಿರು ನಿಂತ ಮೇಲೆ
ಸಂಬಂಧಗಳ ನಡುವೆ ನಾವಿರುವುದಿಲ್ಲ
ಇರುವುದು ಮಾತ್ರ ನಮ್ಮ ನೆನಪುಗಳಯ್ಯ
ಮುಂದೆ ಮತ್ತೇನೂ ನಡೆಯದಯ್ಯ!
ಒಮ್ಮೆ ಉಸಿರು ನಿಂತ ಮೇಲೆ
ಹೋರಾಡಲು ನಮ್ಮವರು ಅವರ ಕಾಲ ಮೇಲೆ
ಅವರು ನಿಂತು ಬದುಕಲು, ನೀಡಿರಯ್ಯ ಶಿಕ್ಷಣ
ಮುಂದೆ ಮತ್ತೇನೂ ನಡೆಯದಯ್ಯ!
ಒಮ್ಮೆ ಉಸಿರು ನಿಂತ ಮೇಲೆ
ನಿಮ್ಮತನ, ನಮ್ಮತನ, ಭಂಡತನ,
ಅಂಧತನ ಎಲ್ಲ ನಮ್ಮೊಂದಿಗೆ
ಮಣ್ಣಾಗಿಬಿಡುತ್ತವಯ್ಯ
ಮುಂದೆ ಮತ್ತೇನೂ ನಡೆಯದಯ್ಯ!
ಒಮ್ಮೆ ಉಸಿರು ನಿಂತ ಮೇಲೆ
ನಿಮ್ಮ ಅಪೂರ್ಣ ಕನಸುಗಳು
ನನಸಾಗಲು ಪಾಲಿಸಬೇಕಯ್ಯ
ಮಾನವತಾವಾದ ಪ್ರತಿ ಗಳಿಗೆ ಉಸಿರಿರುವಾಗ
ಮುಂದೆ ಮತ್ತೇನೂ ನಡೆಯದಯ್ಯ!
ಒಮ್ಮೆ ಉಸಿರು ನಿಂತ ಮೇಲೆ
ಬದುಕಿದ್ದಾಗಿನ ನಮ್ಮ ಕರ್ಮಗಳ ಬಗ್ಗೆ
ಲೆಕ್ಕ ಪರಿಶೋಧನೆ ನಡೆಯಬಹುದಯ್ಯ
ಗೋರಿಯಲ್ಲೂ, ಭುವಿಯಲ್ಲೂ
ಮರೆಯಬೇಡಿರಯ್ಯ ಈ ಸತ್ಯ ಬದುಕಿದ್ದಾಗ
ಮುಂದೆ ಮತ್ತೇನೂ ನಡೆಯದಯ್ಯ!
ಯಾವ ಕ್ಷಣ, ಹೇಗೆ, ಯಾವ ರೀತಿ
ನಮ್ಮ ಉಸಿರು ನಿಲ್ಲಬಹುದೆಂಬ
ಅರಿವು ನಮಗ್ಯಾರಿಗೂ ಇಲ್ಲವಯ್ಯ!
ಒಮ್ಮೆ ಉಸಿರು ನಿಂತ ಮೇಲೆ
ಮಿಸುಕಾಡಲು ಅವಕಾಶವಿಲ್ಲವಯ್ಯ!
ಸಾಧಿಸುವುದಿದ್ದರೆ ಈಗಲೇ ಸಾಧಿಸಿಬಿಡಿ
ಉಸಿರು ನಿಂತು ಹೋಗುವ ಮುನ್ನ!
0 ಪ್ರತಿಕ್ರಿಯೆಗಳು