ಉಗಮ ಶ್ರೀನಿವಾಸ್ ಕ್ರಮಿಸಿದ ಹದಿನೈದು ವರ್ಷದ ರಂಗಭೂಮಿಯ ಪರಿಶ್ರಮ
ನಟರಾಜ್ ಹೊನ್ನವಳ್ಳಿ
ಕವಿಯೂ, ಕಥೆಗಾರನೂ, ವೃತ್ತಿಯಲ್ಲಿ ಪತ್ರಕರ್ತನೂ ಆದ ಉಗಮ ಶ್ರೀನಿವಾಸ ನಾಟಕ ಮತ್ತು ರಂಗಭೂಮಿಯ ಗೀಳು ಹತ್ತಿಸಿಕೊಂಡು ಈಗ್ಗೆ ೨೦ ವರ್ಷ ಆಗಿರಬೇಕು.
ಅವನನ್ನು ಕುರಿತು ಯೋಚಿಸುತ್ತಿದ್ದಂತೆ ಗೋಮಾರದಹಳ್ಳಿ ಮಂಜುನಾಥ್, ಆಲೂರು ದೊಡ್ಡಲಿಂಗಪ್ಪ, ಹಾಲ್ಕುರಿಕೆ ಶಿವಶಂಕರ, ಹಳ್ಳಿಸುರೇಶ್, ಮಲ್ಲಿಕಾರ್ಜುನ ಮತಿಘಟ್ಟ, ತಿಪಟೂರು ಕೃಷ್ಣ, ತಿಪಟೂರು ಸತೀಶ್, ಪ್ರದೀಪ್ ಬಿ. ಇ. ಅನಿಲಕುಮಾರ, ಡೈರಿ ನಾಗಣ್ಣ ಮುಂತಾದವರೆಲ್ಲ ನೆನಪಾಗುತ್ತಿದ್ದಾರೆ.
ಅವನು ನನ್ನ ನಿರ್ದೇಶನದ ‘ಮಾಸ್ತಿ ಕಥೆ’ ಮತ್ತು ‘ಗುಣಮುಖ’ ನಾಟಕಗಳಲ್ಲಿ ನಟನಾಗಿ ನಟಿಸಿದ್ದ, ನಾಟಕ ನಿರ್ದೇಶಿಸಲು ಒಂದೆರಡು ಬಾರಿ ಪ್ರಯತ್ನಿಸಿ ಅದರಿಂದ ಹಿಂತಿರುಗಿದಂತೆ ಕಾಣುವ ಅವನ ತುಮಕೂರಿನ ‘ಝೆನ್ ಟೀಮ್’ಗೆ ಈಗ ಹದಿನೈದು ವರ್ಷ. ಕಳೆದ ೧೫ ವರ್ಷದಿಂದ ನೀನಾಸಮ್, ಜನಮನದಾಟ, ಆಟಮಾಟ ಸೇರಿದಂತೆ ಕರ್ನಾಟಕದ ಎಲ್ಲ ರೆಪರ್ಟರಿಗಳ ನಾಟಕಗಳನ್ನು ತುಮಕೂರಿನ ಪ್ರೇಕ್ಷಕರಿಗೆ ತೋರಿಸಿದ್ದಾನೆ.
ಈ ರೀತಿ ನಾಟಕಗಳ ಆಯೋಜನೆಗೆ ಇಡೀ ತುಮಕೂರೇ ಭಾಗವಹಿಸಿದೆ. ಕನ್ನಡ ರಾಮಾಯಣ ನಾಟಕದಿಂದ ಆರಂಭಿಸಿ ನಟನಾರಾಯಣಿ, Water station, ಕಂಬಾಲ ಪಲ್ಲಿ, ಓದಿರಿ, ಅಕ್ರಮ ಸಂತಾನ, ಊರುಕೇರಿ, ಅವಳು ಈ ಕೆಳಗಿನವರು – ಹೀಗೆ ನೂರಕ್ಕೂ ಹೆಚ್ಚು ನಾಟಕಗಳನ್ನು ಆಯೋಜಿಸಿದ್ದಾನೆ.
ನಾಟಕ ಆಡುವ ಜವಾಬ್ದಾರಿಯಂತೆಯೇ ಕಾಲಕಾಲಕ್ಕೆ ನಾಟಕ ತೋರಿಸುವ ಜವಾಬ್ದಾರಿ ಕೂಡ ಮುಖ್ಯ. ಉಗಮ ಒಂದು ರೀತಿ Reportary Darling ಇದ್ದಂತೆ . ಈ ಹದಿನೈದು ವರ್ಷದ ಅವನ ರಂಗಭೂಮಿ ಬದ್ಧತೆಯಿಂದ ತುಮಕೂರಿನ ರಂಗಭೂಮಿ ಬೆಳೆದಿದೆ. ಈಗ ನಾಟಕಗಳನ್ನು ಆಡಿಸುವ ಸಂಭ್ರಮದಿಂದ ಆಡುವ ಸಂಭ್ರಮಕ್ಕೆ ಬದಲಾಗುವ ಲಕ್ಷಣಗಳನ್ನು ತೋರತೊಡಗಿದ್ದಾನೆ. ೧೫ ವರ್ಷದ ಅವನ ಈ ರಂಗಭೂಮಿಯ ಪಯಣ really Amazing.
ತುಮಕೂರಿನ ಹಲವು ತಂಡಗಳು ಉಚಿತವಾಗಿ ನಾಟಕಗಳನ್ನು ತೋರಿಸುವ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿವೆ. ಇದರಿಂದ ಪ್ರೇಕ್ಷಕರಿಗೆ ಇರುವ ಜವಾಬ್ದಾರಿಯನ್ನು ಮೊಟಕುಗೊಳಿಸಿದಂತೆ ಆಗುತ್ತದೆ. ನಾಟಕ ಆಡುವ ಮತ್ತು ನೋಡುವ ಕಲಾ ಜವಾಬ್ದಾರಿಯಿಂದ ರಂಗಭೂಮಿ ಬೆಳೆಯಬೇಕು. ಉಚಿತ ಪ್ರವೇಶ ಪ್ರೇಕ್ಷಕರ ಹಕ್ಕನ್ನು ಮೊಟಕುಗೊಳಿಸಿದಂತೆ ಎಂದು ನನ್ನ ಅನಿಸಿಕೆ.
ಈ ಸಾರಿಯಿಂದ ಝನ್ ಟೀಂ ನ ಉಗಮ ಪ್ರತಿ ನಾಟಕಕ್ಕೆ ೩೦ ರೂಪಾಯಿಗಳ ಟಿಕೆಟ್ ಇರಿಸಿದ್ದಾರೆ. ಇದು ತುಮಕೂರಿನ ರಂಗಭೂಮಿಯ ಆಶಾದಾಯಕ ಬೆಳವಣಿಗೆ. ನಾಟಕಗಳನ್ನು ನೋಡವ ಒಂದು ಕಲಾತ್ಮಕ ಜವಾಬ್ದಾರಿ ಪ್ರೇಕ್ಷಕರಿಗೆ ಬರುವುದಕ್ಕೆ ಈ ಟಿಕೆಟ್ ಕೂಡ ಕಾರಣ ಆಗುತ್ತದೆ. ಹಾಗೆಯೇ ನಾಟಕ ಆಡುವವರಿಗೂ ನಾಟಕ ನೋಡಿಸುವ ಜವಾಬ್ದಾರಿ ಬರುತ್ತದೆ. ಇದರಿಂದ ತಂಡಗಳಲ್ಲಿ ಒಂದು ಹೊಸ ರಂಗ ಪ್ರೇಕ್ಷಕ ವ್ಯಾಕರಣ ಸೃಷ್ಟಿಸಲು ಸಾಧ್ಯವಾಗುತ್ತದೆ.
ರಂಗಾಯಣಗಳೂ, ಸಂಸೃತಿ ಇಲಾಖೆಗಳು ಕೂಡ ಟಿಕೆಟ್ ಇಡಬಾರದು ಎಂಬ ನಿಯಮವನ್ನು ಬಿಡಬೇಕು. ರಂಗಭೂಮಿಯ ಕಲಾ ಸೃಷ್ಟಿಯಲ್ಲಿ ಪ್ರೇಕ್ಷಕರಿಗೆ ಹೆಚ್ಚಿನ ಜವಾಬ್ದಾರಿ ಇರುತ್ತದೆ. ನಾವೆಲ್ಲ ಸಮಯಕ್ಕೆ ಸರಿಯಾಗಿ ಹೋದರೆ ಸಮಯಕ್ಕೆ ಸರಿಯಾಗಿ ನಾಟಕ ಪ್ರಾರಂಭವಾಗುತ್ತದೆ. ಮೊಬೈಲ್ ನಲ್ಲಿ ಮಾತಾಡುತ್ತಾ, ಫೋಟೋ ತೆಗೆಯುತ್ತಾ ನಾಟಕ ನೋಡುವುದನ್ನು ನಾವು ಬಿಡಬೇಕು. ನಾಟಕದ ಮಧ್ಯೆ ಎದ್ದು ಹೋಗುವ ಪರಿಪಾಠವನ್ನು ಬಿಡಬೇಕು.
ಕನಿಷ್ಠ ಎರಡು ಗಂಟೆ ನಾಟಕವನ್ನು ಏಕಾಗ್ರತೆಯಿಂದ ನೋಡಲು ನಾವು ಟ್ರೈನ್ ಆಗಬೇಕು. ಆಗ ನಮಗೆ ನಾಟಕ ಪ್ರದರ್ಶನದ ಶಕ್ತಿ, ಮಿತಿಗಳು ತಿಳಿಯುತ್ತದೆ. ನಂತರ ನೀವು ಆ ನಾಟಕ ಪ್ರದರ್ಶನದ ಮಿತಿಯು ಬಗ್ಗೆ critical ಆಗಿ ಮಾತನಾಡಬಹುದು. ಆಗ ನಾಟಕ ತಂಡಗಳು ಪ್ರಬುದ್ಧವಾಗುತ್ತವೆ. ಪ್ರೇಕ್ಷಕರು ಪ್ರಬುದ್ಧವಾದಷ್ಟೂ ನಾಟಕ ಪ್ರದರ್ಶನ ಶ್ರೇಷ್ಠತೆಯ ಕಡೆ ಚಲಿಸುತ್ತದೆ.
ಹಾಗೆಯೇ ಪ್ರಬುದ್ಧ ನಾಟಕ ಪ್ರದರ್ಶನ ಸಂವೇದನಾಶೀಲ ಪ್ರೇಕ್ಷಕರನ್ನೂ, ಅವರಲ್ಲಿ ಚಿಕಿತ್ಸಾಗುಣವನ್ನು ಬೆಳೆಸುತ್ತದೆ. ಈ ರೀತಿಯ ಪರಸ್ಪರ ಕಲಾ ಜವಾಬ್ದಾರಿ ಬರಲು ಕೆಲವು ಸಾರಿ ಈ ಪುಟ್ಟ ಟಿಕೆಟ್ ಕಾರಣವಾಗುತ್ತದೆ ಎಂದು ಝನ್ ಟೀಮ್ ಅನೌನ್ಸ್ ಮಾಡಿರುವ ೩೦ ಟಿಕೆಟ್ ವಿಷಯ ಕೇಳಿ ಅನಿಸಿತು.
ಉಗಮನ ಜೊತೆಗಿನ ಜಗಳ, ಮುನಿಸು, ಅನುಮಾನ ಮುಂತಾದವುಗಳ ಜೊತಯೇ, ಉಗಮ ಶ್ರೀನಿವಾಸ್ ಕ್ರಮಿಸಿದ ಹದಿನೈದು ವರ್ಷದ ರಂಗಭೂಮಿಯ ಪರಿಶ್ರಮಕ್ಕೆ, ಕಾಳಜಿಗೆ ಶರಣು. ಅವನ ಮುಂದಿನ ಸಾಹಸಗಳು ಯಶಸ್ವಿಯಾಗಲಿ.
ಸರ್, ಉಗಮ ಶ್ರೀನಿವಾಸರ ಬಗ್ಗೆ ನೀವು ತಿಳಿಸಿದ್ದು ಅಕ್ಷರ ಸಹ ನಿಜ, ಧನ್ಯವಾದಗಳು, ಝೆನ್ ಟೀಮ್ ಕಟ್ಟಿಕೊಂಡು, ನಾಡಿನ ಕ್ರಿಯಾಶೀಲ ನಾಟಕ ತಂಡಗಳನ್ನು ಕರೆಯಿಸಿ, ಪ್ರದರ್ಶನಗಳನ್ನು ಏರ್ಪಡಿಸುವ ಇವರ ಕಾಳಜಿಗೆ, ಪರೀಶ್ರಮಕ್ಕೇ, ಈ ಮೂಲಕ ತುಮಕೂರಿನ ರಂಗ ಸಂಸ್ಕೃತಿ ಹಾಗೂ ಸಾಂಸ್ಕತಿಕ ಜಗತ್ತನ್ನು ಇನ್ನಷ್ಟು ಶ್ರೀಮಂತಗೊಳಿಸುವಲ್ಲಿ ತೊಡಗಿಸಿಕೊಂಡಿರುವ ಇವರಿಗೆ ನನ್ನ ಅಭಿನಂದನೆಗಳು ಹಾಗೂ ಕೃತಜ್ಞತೆಗಳು.
ಉಗಮ ಶ್ರೀನಿವಾಸರಿಗೆ ಒಳ್ಳೆಯದಾಗಲಿ