ಜೆ ಎನ್ ಯುವಿನಂಥ ಕಡೆ ಕನ್ನಡ ಕಟ್ಟುವ ಬಗೆ ಹೇಗೆ?
ಸುತ್ತ ಹಿಂದಿ ಉರ್ದು ಭಾಷಿಕರು, ಪ್ರಾದೇಶಿಕ ಭಾಷೆಗಳ ಬಗ್ಗೆ ಅಷ್ಟೇನೂ ತಿಳುವಳಿಕೆಯಿಲ್ಲದ ಆಡಳಿತಗಾರರು. ಕರ್ನಾಟಕ ರಾಜ್ಯದ ಭಾಷೆ ಸಂಸ್ಕೃತಿಯ ಕುರಿತು ಆಸಕ್ತಿ ಇರುವ ಸಂಶೋಧಕರನ್ನು ಕನ್ನಡ ಪೀಠದ ಕಡೆ ಆಕಷಿಸುವ ಬಗೆ ಹೇಗೆ?
ಅನುವಾದ, ಬೋಧನೆ, ಸಂಶೋಧನೆ, ಗ್ರಂಥಾಲಯ, ಇತ್ಯಾದಿ ಚಟುವಟಿಕೆಗಳನ್ನು ರಾಷ್ಟ್ರೀಯ ಚೌಕಟ್ಟಿನಲ್ಲಿ ಉಪಯುಕ್ತವಾಗಿ ಆಯೋಜಿಸುವ ಕ್ರಮ ಯಾವುದು?
ಕೆಲಸವೇನೋ ಮಾಡಬಹುದು, ಆದರೆ ಹಣ ಎಲ್ಲಿಂದ ಬರುತ್ತದೆ?, ಸದ್ಯ ಒಬ್ಬನೇ ಇರುವ ಪೀಠವನ್ನು ವಿಸ್ತರಿಸುವುದು ಹೇಗೆ ?
-ಹೀಗೆ ಹೊರಗಿನ ರಣ ರಣ ಬಿಸಿಲಿನ ಜೊತೆ ಮಂಡೆ ಬಿಸಿಕೊಂಡಿರುವ ಹೊತ್ತು ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಶ್ರೀ ವಿಶುಕುಮಾರ್ ಅವರು ಪೀಠಕ್ಕೆ ಭೇಟಿ ನೀಡಿದರು.
ಇದೇ ಸಂದರ್ಭದಲ್ಲಿ ಜೆ ಎನ್ ಯು ವಿನಲ್ಲಿ ಕೆಲಸ ಮಾಡುತ್ತಿರುವ, ಕರ್ನಾಟಕದ ಬಗ್ಗೆ ಆಸಕ್ತಿ ಇರುವ ಹತ್ತಾರು ಹಿರಿಯ ವಿದ್ವಾಂಸರ ಒಂದು ಸಭೆಯನ್ನು ಸಮಾಲೋಚನೆಗಾಗಿ (23.04.18ರಂದು) ಕರೆದೆ. ಕವಿ ಎಚ್ ಎಸ್ ಶಿವಪ್ರಕಾಶ್, ಚರಿತ್ರೆಕಾರ್ತಿ ಪ್ರೊ. ಜಾನಕಿ ನಾಯರ್, ಹಿರಿಯ ಪ್ರಾಧ್ಯಾಪಕಿ ಪ್ರೊ. ಮಹಾಲಕ್ಷ್ಮಿ, ಗೆಳೆಯ ಪ್ರೊ. ವೆಂಕಟಾಚಲ ಹೆಗಡೆ, ಲೇಖಕ, ಚಿಂತಕ ಪ್ರೊ. ರಾಕೇಶ್ ಬಟಾಬ್ಯಾಲ್, ಶಿಕ್ಷಣತಜ್ಞೆ ಪ್ರೊ. ಪರಿಮಳಾ ರಾವ್, ಕಮಲಾ ನೆಹರೂ ಕಾಲೇಜಿನ ಶ್ರೀ ರಮೇಶ್ ಅರೋಲಿ ಮೊದಲಾದವರೆಲ್ಲ ಉತ್ಸಾಹದಿಂದ ಆಗಮಿಸಿದರು.
ಹಿರಿಯರಾದ ಪ್ರೊ. ಗೊರುಚ, ಡಾ.ಕೆ. ಮರುಳಸಿದ್ಧಪ್ಪ, ಕತೆಗಾರ ಬಸವರಾಜ ಸಾದರ, ಸಂಘಟಕ ನಾಗರಾಜ ಮೂರ್ತಿ ಅವರೂ ಸೇರಿಕೊಂಡು ಅನೌಪಚಾರಿಕವಾಗಿ ಚರ್ಚೆ ನಡೆಸಿದೆವು.
ಈ ಸಂದರ್ಭದಲ್ಲಿ ಶ್ರೀ ವಿಶುಕುಮಾರ್ ಅವರು ನಮಗೆಲ್ಲಾ ವಿಶೇಷವಾದ ಧೈರ್ಯ ತುಂಬಿದ್ದಲ್ಲದೆ, ಮುನ್ನೋಟವುಳ್ಳ ಕೆಲವು ಮಹತ್ವದ ಮಾತುಗಳನ್ನೂ ಆಡಿದರು.
ಎಲ್ಲವೂ ನೆನೆಸಿದಂತೆ ನಡೆದರೆ ಈ ವರ್ಷ ( 2018-19) ಕನ್ನಡ ಅಧ್ಯಯನ ಪೀಠವು ಜೆ ಎನ್ ಯು ವಿನ ವಿವಿಧ ವಿಭಾಗಗಳ ಜೊತೆ ಸೇರಿಕೊಂಡು ರಾಷ್ಟ್ರ ಮಟ್ಟದ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕೆಲವು ಉಪಯುಕ್ತ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಿದೆ. ನಾನು ನಿವೃತ್ತನಾಗುವ ಮುನ್ನ ಜೆ ಎನ್ ಯುವಿನಲ್ಲಿ ಸಶಕ್ತವಾದ ಕನ್ನಡದ ಕೇಂದ್ರವೊಂದು ಭದ್ರವಾಗಿ ನೆಲೆ ಊರಿರಬೇಕೆಂಬುದಷ್ಟೇ ನನ್ನ ಆಸೆ. ನಿಮ್ಮ ಸಹಾನುಭೂತಿ, ಬೆಂಬಲ, ಮಾರ್ಗದರ್ಶನ ಇರಲಿ.
-ಡಾ ಪುರುಷೋತ್ತಮ ಬಿಳಿಮಲೆ
0 ಪ್ರತಿಕ್ರಿಯೆಗಳು