ಸ್ವ್ಯಾನ್ ಕೃಷ್ಣಮೂರ್ತಿ
ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಕೊಡಮಾಡುತ್ತಿರುವ ಈ ಬಾರಿಯ ಮುದ್ರಣ ಸೊಗಸು ಬಹುಮಾನ ಗದಗ್ ನ ಫ.ಶಿ.ಭಾಂಡಗೆ ಅವರ ತ್ವರಿತ ಮುದ್ರಣಕ್ಕೆ….
ಅಲ್ಪ ಶಾಲಾ ಶಿಕ್ಷಣ, ಬಡತನ, ನಿಸ್ಸಹಾಯಕ ಕುಟುಂಬದ ನಡುವೆ ಬಂದ ಭಾಂಡಗೆ ಅವರು ಅಕ್ಷರ ಜೋಡಕನಾಗಿ ಮುದ್ರಣೋದ್ಯಮಕ್ಕೆ ಬಂದು ಅವರ ಬೆಳೆದ ಪರಿಯೇ ಒಂದು ವಿಸ್ಮಯ..
ಕರ್ನಾಟಕದಲ್ಲಿ ಗುಣಮಟ್ಟದ ಮುದ್ರಣ ಎಂದರೆ ಬೆಂಗಳೂರು ಕಡೆ ನೋಡುವಂತ ದಿನಗಳಲ್ಲಿ ಗದಗ ಕಡೆಯೂ ನೋಡುವಂತೆ ಮಾಡಿದ ಕೀರ್ತಿ ಫ. ಶಿ. ಭಾಂಡಗೆ ಅವರಿಗೆ ಸಲ್ಲುತ್ತದೆ.
ಎಂಬತ್ತರ ದಶಕದಲ್ಲಿ ಕರ್ನಾಟಕ ಸರ್ಕಾರದ ಬೃಹತ್ ವರದಿ ಪುಸ್ತಕವನ್ನು ತುರ್ತಾಗಿ ಮುದ್ರಣ ಮಾಡುವ ಸಂದರ್ಭ ಬಂದಾಗ, ಕರ್ನಾಟಕದಲ್ಲಿ ಸರಿಯಾದ ಸಮಯಕ್ಕೆ ಮುದ್ರಿಸಿ ಕೊಡಲು ಯಾರ ಬಳಿಯೂ ಅಚ್ಚಿನಮೊಳೆ ಮತ್ತು ಯಂತ್ರಗಳು ಇಲ್ಲದೆ, ಭಾಂಡಗೆ ಅವರ ತ್ವರಿತ ಮುದ್ರಣದಿಂದ ಕೆಲಸ ಸಾಧ್ಯ ಎಂಬುದನ್ನು ತಿಳಿದು ಟೆಂಡರ್, ದರ ಪಟ್ಟಿ ಏನನ್ನೂ ಕೇಳದೆ ನೇರವಾಗಿ ಅವರಿಗೆ ಮುದ್ರಣಕ್ಕೆ ನೀಡಿರುತ್ತಾರೆ. ಸರ್ಕಾರ ಕೊಟ್ಟ ಸಮಯಕ್ಕಿಂತ ಮುಂಚಿತವಾಗಿ ಪುಸ್ತಕವನ್ನು ಮುದ್ರಿಸಿ ಕೊಟ್ಟ ಕೀರ್ತಿ ತ್ವರಿತ ಮುದ್ರಣದವರದು.
ಭಾಂಡಗೆಯವರು ಅತ್ಯುತ್ತಮ ಮೊಳೆ ಜೋಡಕರು ( compositor) ಕೂಡ. ಇವರನ್ನು ಶಿವರಾಮ ಕಾರಂತರು ಅವರ ಹರ್ಷ ಮುದ್ರಣಾಲಯಕ್ಕೆ ಆಗಾಗ ಕರೆಸಿ ಅವರ ಪುಸ್ತಕಗಳ ಮೊಳೆ ಜೋಡಣೆ ಮಾಡಿಸಿಕೊಂಡಿದ್ದು ದಾಖಲಾಗಿದೆ..
ಬೆಂಗಳೂರು ಸೇರಿ ಕರ್ನಾಟಕದ ಬೇರೆ ಬೇರೆ ಭಾಗದ ಎಷ್ಟೋ ಪ್ರಕಾಶಕರ, ಲೇಖಕರ, ಪುಸ್ತಕಗಳನ್ನು ತ್ವರಿತ ಮುದ್ರಣಾಲಯದಲ್ಲಿ ಮುದ್ರಣ ವಾಗಿರುವುದು ಇದಕ್ಕೆ ಸಾಕ್ಷಿ .
ಪುಸ್ತಕದ ಟೆಕ್ನಿಕಲ್ ಪೇಜಿನಲ್ಲಿ ಪುಸ್ತಕ ಮುದ್ರಣಕ್ಕೆ ತೆಗೆದುಕೊಂಡ ಸಮಯವನ್ನು ಅಚ್ಚು ಹಾಕುತ್ತಿದ್ದ ಏಕೈಕ ಮುದ್ರಕ.
ಅಕ್ಷರ ಜೋಡಕ (ಕಂಪೋಸಿಟರ್) ನಾಗಿ ಮುದ್ರಣೋದ್ಯಮಕ್ಕೆ ಬಂದು ಯಶಸ್ವಿ ತ್ವರಿತ ಮುದ್ರಕನಾಗುವುದರ ಜೊತೆ ಜೊತೆಗೆ ಪತ್ರಿಕಾಲಯ, ಪುಸ್ತಕ ಪ್ರಕಾಶನಗಳಲ್ಲಿ ವೃತ್ತಿಯನ್ನು ಸುಧಾರಿಸಿಕೊಂಡು, ಸ್ವಯಂಪ್ರೇರಣೆಯಿಂದ ಲೇಖಕನಾಗಿ, ಪ್ರವೃತ್ತಿಯಿಂದ ನಾಟಕಕಾರನಾಗಿ ಜೀವನವನ್ನು ಸಾರ್ಥಕಗೊಳಿಸಿಕೊಂಡ ಜೀವ ಫ.ಶಿ. ಭಾಂಡಗೆಯವರದು.
ಈಗಲೂ ಅಚ್ಚುಕಟ್ಟಾಗಿ, ತ್ವರಿತವಾಗಿ ಮುದ್ರಿಸುತ್ತಾ ಮುದ್ರಣಾಲಯವನ್ನು ಮುಂದುವರಿಸುತ್ತಿರುವ ಅಶೋಕ್ ಅವರಿಗೆ ಮತ್ತು ಅವರ ಕುಟುಂಬಸ್ಥರಿಗೆ ಅಭಿನಂದನೆಗಳು…
0 ಪ್ರತಿಕ್ರಿಯೆಗಳು