ನರೇಂದ್ರ ರೈ ದೇರ್ಲ ಅವರ ಮೂರು ಕೃತಿಗಳು ಬಿಡುಗಡೆಗೆ ಸಿದ್ಧವಾಗಿದೆ.
ಅಭಿವೃದ್ಧಿ ಪತ್ರಿಕೋದ್ಯಮದ ಕುರಿತು ಸಾಕಷ್ಟು ಬರೆದಿರುವ ನರೇಂದ್ರ ರೈ ಅವರು ಕೃಷಿ ಹಾಗೂ ಜನ ಬದುಕಿನ ಬಗ್ಗೆ ಖಚಿತವಾಗಿ ಬರೆಯಬಲ್ಲವರು.
‘ಕೊರೋನ ನಂತರದ ಗ್ರಾಮ ಭಾರತ’, ‘ಹಳ್ಳಿಯ ಆತ್ಮಕಥೆ’, ‘ಬೇರು ಬದುಕು’ ಈ ಮೂರೂ ಕೃತಿಗಳು ಗ್ರಾಮೀಣ ಭಾರತದ ಮಿಡಿತವನ್ನು ಕಟ್ಟಿ ಕೊಡುತ್ತವೆ
ಈ ಪೈಕಿ ಕೊರೋನ ನಂತರದ ಗ್ರಾಮ ಭಾರತಕ್ಕೆ ಹಿರಿಯ ಕೃಷಿ ತಜ್ಞ ಶ್ರೀಪಡ್ರೆ ಅವರು ಬರೆದ ಬೆನ್ನುಡಿ ಇಲ್ಲಿದೆ.
ಪುತ್ತೂರಿನ ಮಾಡಾವಿನ ಕನಸು ಪ್ರಕಾಶನ ಈ ಮೂರೂ ಕೃತಿಗಳನ್ನು ಪ್ರಕಟಿಸಿದೆ.
ಶ್ರೀಪಡ್ರೆ
ʼಕೃಷಿಯೊಂದೇ ಸತ್ಯ, ಉಳಿದದ್ದೆಲ್ಲಾ ಮಿಥ್ಯೆ.ʼ ಇದು ತನ್ನ ಶಿಕ್ಷಣ ಸಂಸ್ಥೆಯಲ್ಲಿ ಕೃಷಿಪಾಠ ಸೇರಿಸಿಕೊಂಡ ತಮಿಳುನಾಡಿನ ಮಹನೀಯರ ಈಚೆಗಿನ ನುಡಿಮುತ್ತು. ಕಳೆದ ಆರು ತಿಂಗಳ ವಿದ್ಯಮಾನ ಅವರಿಂದ ಈ ಮಾತು ಹೊರಡಿಸಿತು.
ನಾಲಕೇ ಶಬ್ದ! ಆದರೆ ಅವು ನಮ್ಮನ್ನು ಅದೆಂಥ ಚಿಂತನೆಗೆ ಹಚ್ಚುತ್ತವೆ ನೋಡಿ. ವಿಶೇಷವಾಗಿ ಕೊರೋನಾ ಕಾರ್ಮೋಡದ ಹಿನ್ನೆಲೆಯಲ್ಲಿ.
ಈ ಮಾತು ನೆನಪಾದದ್ದು ದೇರ್ಲರ ಹಸಿರು ಕ್ಯಾಪ್ಸೂಲುಗಳ ರುಚಿ ನೋಡಲು ಹೊರಟಾಗ. ಅವರು ಇಲ್ಲಿ ತನ್ನ ಮನದಾಳದ ತುಮುಲು, ಆತಂಕ, ಒಳನೋಟ, ನಿತ್ಯಸತ್ಯಗಳನ್ನು ನವಿರಾಗಿ ಬಡಿಸಿದ್ದಾರೆ. ಹೀಗೆ ಮಾಡಲು ಅವರು ಆಯ್ದದ್ದು ಜಗಕಾಯಿಲೆಯ ನೆಪ.
ಇದು ಎಲ್ಲರನ್ನೂ ಆಳ ಚಿಂತನೆಗೆ ಹಚ್ಚಬಲ್ಲ ಕೃತಿ. ಆಡಳಿತ ಮಂದಿ, ಶಿಕ್ಷಣ ತಜ್ಞರು, ಅಧ್ಯಾಪಕರು, ಅಷ್ಟೇ ಏಕೆ, ದೇಶದ ಎಲ್ಲ ವಿದ್ಯಾರ್ಥಿಗಳೂ ಇದನ್ನು ಓದಬೇಕು.
ದೇರ್ಲರ ಕೃತಿ ಕಬ್ಬಿನಂತೆ. ಜಗಿದರಷ್ಟೇ ಸಿಹಿ ಸ್ರವಿಸುತ್ತದೆ. ಇಲ್ಲಿರುವುದು ಎಲ್ಲವೂ ಸಿಹಿಯೇ ಅಲ್ಲ. ಕಹಿಯೂ ಇದೆ. ಉತ್ತರ ಕಾಣದ ಮಹತ್ಚದ ಪ್ರಶ್ನೆ- ವಾಸ್ತವಗಳೂ ಇವೆ. ಸ್ವಲ್ಪ ಸ್ಯಾಂಪಲ್ ನೋಡಿ.
ʼʼಕೃಷಿಪ್ರೀತಿಯ, ಹಳ್ಳಿಯಲ್ಲೇ ಉಳಿಯಿರಿ ಎನ್ನುವ ಅನ್ನ ಸ್ವಾವಲಂಬನೆಯ ಒಂದೇ ಒಂದು ಪಾಠ ನಮ್ಮ ಸಿಲೆಬಸ್ ನಲ್ಲಿ ಇದ್ದಂತಿಲ್ಲ.ʼʼ
ʼʼಕೃಷಿಗೆ ಕಿರುಕುಳ ಕೊಡುವ ಕೀಟಗಳಿಗೆ ಮದ್ದಿದೆ. ಆದರೆ ʼʼಕೃಷಿಯಲ್ಲಿ ಸುಖವೇ ಇಲ್ಲʼ ಎಂಬ ಮಾನಸಿಕ ಕಾಯಿಲೆಗೆ ಮದ್ದೇ ಇಲ್ಲ.
ʼʼ ನಿಜವಾಗಿ ಕೃಷಿಕರಿಗೆ, ನೆಲದವರಿಗೆ ಕೃಷಿ ವಿಶ್ವವಿದ್ಯಾನಿಲಯಗಳ ಗೋಡೆಗಳು ತಗ್ಗುವುದು, ಗೇಟು ತೆರೆಯುವುದು ಯಾವಾಗ?ʼʼ
ಅರಗಿಸಿಕೊಂಡ ಮೇಲೆ ದೇರ್ಲಪಾಕವನ್ನು ನೆನಪಿಸಿಕೊಳ್ಳಲು ಒಂದು ಉಪಾಯವಿದೆ. ಅವರದೇ ಆದ ʼಮಲಗು ಸುಖʼ ಕಿರಿಕಿರಿ ಕೂಟʼ ಮುಂತಾದ ʼಕೀ ವರ್ಡ್ʼಗಳನ್ನು ನೆನೆಯಿರಿ, ಸಾಕು. ಅದು ದೇರ್ಲ ಚಮತ್ಕಾರ.
0 ಪ್ರತಿಕ್ರಿಯೆಗಳು