ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮೊದಲನೆಯ ಬಾರಿ ನಾನು ಭಾಗವಹಿಸಿದ್ದು ೧೯೭೦ರಲ್ಲಿ ಬೆಂಗಳೂರಿನಲ್ಲಿ. ದೇಜಗೌ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಬೇಂದ್ರೆ ಅವರ ಕವಿಗೋಷ್ಠಿಯ ಅಧ್ಯಕ್ಷತೆ ಸಹಿತ ಕನ್ನಡ ಹಿರಿಯ ಮತ್ತು ಆಗಿನ ನವ್ಯದ ಸಾಹಿತಿಗಳನ್ನು ಕಂಡದ್ದು, ಅವರ ಮಾತುಗಳನ್ನು ಕೇಳಿದ್ದು ಒಂದು ಸುಂದರ ಅನುಭವ.
ಅಂದಿನ ಅನೇಕ ಸಾಹಿತಿಗಳು ಇಂದು ನಮ್ಮೊಂದಿಗಿಲ್ಲ. ನಿಸಾರ್ ಅವರ ‘ನಿಮ್ಮೊಡನಿದ್ದೂ ನಿಮ್ಮಂತಾಗದೆ ‘ಕವನ ವಾಚನ ತನ್ನ ಓರಗೆಯ ನವ್ಯ ಕವಿಗಳನ್ನು ನೋಡುತ್ತಾ ನಡೆದಾಗ ಸಭೆಯಲ್ಲಿ ಚಪ್ಪಾಳೆ.
ಬೆಂಗಳೂರಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದ ಸುದ್ದಿಗಳನ್ನು ಅಂತರ ಜಾಲದ ತಾಣಗಳಲ್ಲಿ ಓದುತ್ತಾ ನೋಡುತ್ತಾ ಅಂದುಕೊಳ್ಳುತ್ತೇನೆ,
‘ಆ ಕಾಲವೊಂದಿತ್ತು, ದಿವ್ಯ ತಾನಾಗಿತ್ತು !’
ಈ ಎಲ್ಲಾ ಕೊರತೆಗಳು ಒಂದು ಸುಂದರ ಮಿಡಿವ ಕವನವಾಗಲಿ , ಬದಲಾವಣೆಯ ಸಹಜತೆಯನ್ನು ಮೀರಲಾಗದ ಬದುಕಿನ ಎಲ್ಲವೂ , ಎಲ್ಲಾ ಕಾಲ ಘಟ್ಟಗಳು ಕಾವ್ಯವಾಗುವುದಿಲ್ಲವೇ?. ಬರೆದು ಬಯಲಾಗಲಿ!.