ರವಿಕಿರಣ್ ಆರ್ ಬಳ್ಳಗೆರೆ
ಸತ್ತ ಕಂಬಳಿಯ ನೇಯುತ್ತಿವೆ ನೆತ್ತರ ನೂಲುಗಳು
ಎಲ್ಲೆಲ್ಲೂ ಹುತ್ತ.. ನಾಗರೆಡೆಯ ನೆರಳು, ರಕ್ತ ರಂಗೋಲಿ
ಅಷ್ಟಮಂಗಲದಲ್ಲಿ ಮೂರೇ ಪ್ರಶ್ನೆ
ನಾನು ಯಾರು..? ನಾನು ಯಾರು…? ನಾನು ಯಾರು…?
ಕಂಬಳಿಯಲ್ಲಿ ಕೂರೆ ಸೂಸಿ, ನಡೆದಿದೆ
ಕನಸುಗಳ ಶವಯಾತ್ರೆ, ಒಣಗಣ್ಣ ತರ್ಪಣ
ಹಸಿದ ಒಡಲಿನ ಕಿಚ್ಚು,
ಕೂಳು ಮಡಿಕೆಯ ಸುಡುತ್ತಿದೆ
ಸಾವಿಗೂ ಇಲ್ಲಿ ಸಾವಿರ ಸುಂಕ
ನಾಗರ ಹೆಡೆಯದ್ದದು ನೆರಳಲ್ಲ, ರಕ್ತ ರಂಗೋಲಿ
ಕೂಗುವ ದನಿಯ ಕೊರಳ ಕೂಯ್ದಿರೊ ರಕ್ತ
ಓಡೋ ಕಾಲಿನ ಬೆರಳು ಕಡಿದಿರೋ ರಕ್ತ
ಕಂಡ ಕನಸುಗಳಿಗೆ ಕಣ್ಣೆದುರೇ ಗರ್ಭಪಾತ
ಅಲ್ಲೆಲ್ಲೋ ಕೊರಗುತ್ತಿದ್ದಾನೆ ಏಕಲವ್ಯ,
ಮತ್ಸರದ ಪ್ರಪಾತ, ನೆನಪುಗಳು ಅಸ್ತಂಗತ
ಅಲ್ಲಾರೋ ಕೂಗಿದರು..
ಇವ ನಮ್ಮವಾ…
ಅಷ್ಟಮಂಗಲದ ಪ್ರಶ್ನೆಗೆ ಇಷ್ಟರಲ್ಲೇ ಉತ್ತರ ಸಿಕ್ಕಿತೇ.
ಆದರೆ..
ಅವರ್ಯಾರು…?
ಹಾವಿನೆಡೆಯ ನೆರಳು… ರಕ್ತ ರಂಗೋಲಿ.
0 ಪ್ರತಿಕ್ರಿಯೆಗಳು