ಡಾ ಅನಿಲ್ ಎಮ್ ಚಟ್ನಳ್ಳಿ
ಚಿತ್ರ: ಬಿ ಎಂ ಕೇದಾರನಾಥ್ , ಧಾರವಾಡ
ಹೋಗಿ ಬನ್ನಿ
ಧರ್ಮಸ್ಥಳದ ಮಂಜುನಾಥ
ಮೈಸೂರಿನ ಚಾಮುಂಡೇಶ್ವರಿ
ಮುಗ್ಧ ಮುಖಗಳನ್ನು
ಹೀಗೆ ದಂಡಿಯಾಗಿ ನೋಡಿ
ಎಷ್ಟು ದಿನಗಳಾಯ್ತೊ
ಹೋಗಿ ಬನ್ನಿ
ಮುಂದಿನ ಊರಿನಲಿ
ನಿಮ್ಮ ಹಳೆ ಗೆಳತಿ
ಹತ್ತಬಹುದು
ಅದೂ ಇದೂ ಮಾತಾಡಿ
ಹಗುರಾಗಬಹುದು
ಹೋಗಿ ಬನ್ನಿ

ಇವತ್ತೊಂದು ರಾತ್ರಿ
ಮಕ್ಕಳು ಅಜ್ಜಿ ಮನೆಯಲ್ಲಿ
ಮಲಗುತ್ತವೆ, ಹೋಗಿ ಬನ್ನಿ
ದಿನಾ ಕುಡಿದು ಬಂದು
ರಾದ್ಧಾಂತ ಮಾಡುವ ಗಂಡ
ಇವತ್ತು ಉಪವಾಸ ಮಲಗಲಿ
ಹೋಗಿ ಬನ್ನಿ
ಗಳಿಸುವ ಪುಡಿಗಾಸು
ಹೋಗಿ ಬರಲಿಕ್ಕೆ ಸಾಲದೆಂದು
ಒಲ್ಲೆಂದ ಕೆಲಸ
ಇನ್ನೂ ಖಾಲಿ ಇರಬಹುದು
ಒಮ್ಮೆ ಹೋಗಿ ಬನ್ನಿ
ಆರು ತಿಂಗಳಿಗೊಮ್ಮೆ ಅತ್ತೆಗೆ
ಡಾಕ್ಟರಿಗೆ ತೋರಿಸಬೇಕು
ಬಹುಶಃ ಬಹಳ ದಿನಗಳಾಯ್ತು
ಜೊತೆಗೆ ನೀವೆ ಹೋಗಿ ಬನ್ನಿ
ಮಾತು ಬಿಟ್ಟಿದ್ದ ಅಣ್ಣ
ಮಗನ ಮದುವೆಗೆ ಕರೆದಿದ್ದಾನೆ
ತುಂಬಾ ಯೋಚಿಸಬೇಡಿ
ಹೋಗಿ ಬನ್ನಿ
ದೇಶದ ದುಡ್ಡು ಹೊಡೆದವರೆಲ್ಲ
ವಿಮಾನದಲ್ಲಿ ಹಾರಿ ಹೋಗಿದ್ದಾರೆ,
ನೀವು ತಿರುಗಾಡಿ ಬಂದು
ಮತ್ತೆ ಇಲ್ಲೇ ದುಡಿಯುವವರು
ನಿಮಗ್ಯಾವುದರ ಪಶ್ಚಾತಾಪ ?
ಅವು ನಿಮ್ಮದೇ ಬಸ್ಸು
ಹೋಗಿ ಬನ್ನಿ.






Beautiful poem sir
ವಾವ್! ತುಂಬಾ ತುಂಬಾ ಇಷ್ಟವಾಯಿತು
ಇತ್ತೀಚಿನ ದಿನಗಳಲ್ಲಿ ಪುಕ್ಕಟ್ಟೆ ಬಸ್ ಪ್ರಯಾಣ ಮಾಡುವ ಮಹಿಳೆಯರನ್ನು ವಿಡಂಬಿಸುವ, ಹೀಯಾಳಿಸುವ ಮಾತುಗಳನ್ನು ಕೇಳಿ ಬೇಸರ ಬಂದಿತ್ತು. ಬಿಸಿಲಲ್ಲಿ ತಂಗಾಳಿ ಬೀಸಿದ ಅನುಭವವನ್ನು ಕೊಟ್ಟ ಹೊಸತನದ ನಿಮ್ಮ ಈ ಕವನ, ಅವರ ಮನದ ಆಸೆಗಳಿಗೆ ಪ್ರಬುದ್ಧತೆಯನ್ನೇ ಹೊದಿಸಿಬಿಟ್ಟಿತು.
Beautiful ಖಂಡಿತವಾಗಿ