ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವರು ದೇಶವನು ಒಡೆಯುತ್ತಿರಲಿಲ್ಲ..

bilimale

ಪುರುಷೋತ್ತಮ ಬಿಳಿಮಲೆ 

 

ಅವರು ದೇಶವನು ಒಡೆಯುತ್ತಿರಲಿಲ್ಲ

ಗಾಂಧಿಗೆ ಗುಂಡಿಕ್ಕಿ,

ಗೋಡ್ಸೆಗೆ ಗುಡಿ ಕಟ್ಟಿ

ರಾಮ ಮಂತ್ರವ ಜಪಿಸುವಾಗ

ಅವರು ದೇಶವನು ಒಡೆಯುತ್ತಿರಲಿಲ್ಲ.

 

ತಿನ್ನುವ ಆಹಾರ ಕಸಿದು

ಅತ್ತಾಗ ಮರುಗಿ

ಮತ್ತೆ ವಿಷಬೆರೆಸಿ ಕೊಟ್ಟು

ನಿನ್ನನ್ನು ಸಾಯಿಸಿದಾಗ

ಅವರು ದೇಶವನು ಒಡೆಯುತ್ತಿರಲಿಲ್ಲ.

 

ತಲೆಯಲ್ಲಿ ಹೇಲು ಹೊರಿಸಿ

ಮುಟ್ಟಬಾರದೆಂದು ಊರ ಹೊರಗಿರಿಸಿ

ಮತ್ತೆ ಮಲಗಿದ್ದ ದಲಿತರನು

ಕೇರಿ ಸಹಿತ ಸುಟ್ಟಾಗ

ಅವರು ದೇಶವನು ಒಡೆಯುತ್ತಿರಲಿಲ್ಲ.

 

ಅಮಾಯಕರ ಮನೆಯೊಳಗೆ ನುಗ್ಗಿ

ತೋಳ ಬಲದಿಂದ  ಹೊರಗೆಳೆದು

ತಿವಿ ತಿವಿದು ಕೊಂದು

ಅನ್ನವನು ಕಸಿವಾಗ

ಅವರು ದೇಶವನು ಒಡೆಯುತ್ತಿರಲಿಲ್ಲ.

 

ದೇಶ ತುಂಬಾ ಸುತ್ತಿ,

ಇಟ್ಟಿಗೆಗಳ ಮೆರವಣಿಗೆಯಲಿ

ಮಂದಿರಗಳ ಒಡೆದು

ಭಾಷಣಗಳ ಬಿಗಿವಾಗ

ಅವರು ದೇಶವನು ಒಡೆಯುತ್ತಿರಲಿಲ್ಲ.

 

ತುಂಬು ಗರ್ಭಿಣಿಯರ

ಹೊಟ್ಟೆ ಬಗೆದು

ಬೀದಿಯಲಿ ರಕ್ತ ಚೆಲ್ಲಿ

ಬೆಂಕಿಯನಿಕ್ಕಿದಾಗ

ಅವರು ದೇಶವನು ಒಡೆಯುತ್ತಿರಲಿಲ್ಲ

 

ನನ್ನ ಪ್ರಿಯ ದೇಶವೇ

ನಿನ್ನ ಸಂಪತ್ತನು ನನ್ನೆದುರೇ ಹರಾಜಿಗಿಟ್ಟು

ಮೋಜು ಮಾಡುತ್ತಾ

ದೇಶಭಕ್ತಿಯ ಬಗೆಗೆ ನನಗೆ ತಿಳಿ ಹೇಳುತ್ತಿದ್ದಾಗ

ಅವರು ದೇಶವನು ಒಡೆಯುತ್ತಿರಲಿಲ್ಲ.

‍ಲೇಖಕರು Admin

21 February, 2016

3 Comments

  1. sangeetha raviraj

    ಅಪಾರ ಅರ್ಥಗರ್ಭಿತ ಕವಿತೆ ಇಷ್ಟವಾಯಿತು ನಂಗೆ….

  2. ಆರನಕಟ್ಟೆ ರಂಗನಾಥ

    ಕವಿತೆ ಸೋಗಲಾಡಿ ದೇಶಭಕ್ತರ ತೋರಿಕೆಯ ನಡವಳಿಕೆ. ನಾಡಿನ ಮಣ್ಣಿನ ಮಕ್ಕಳು ಯಾವೂದೇ ಘೋಷಣೆಗಳಿಲ್ಲದೆ ಬದುಕುವ ಪರಿಯನ್ನು ಅರ್ಥಪೂರ್ಣವಾಗಿ ಮಂಡಿಸಿದೆ ಅಂಗೈ ಹುಣ್ಣಿಗೆ ಕನ್ನಡಿ ಹಿಡಿದರೂ ಕನ್ನಡಿಯೇ ಸರಿಯಿಲ್ಲವೆಂಬ ಸನಾತನಿಗಳಿಗೆ ,ಎಲ್ಲವನ್ನೂ ಬಗೆದು ತೋರಿಸುವಂತಹ ಪರಿಸ್ಥಿತಿ ತಂದಿದ್ದಾರೆ. ಕವಿತೆ ತೋರುವ ಪ್ರತಿ ಸಂಗತಿಯು ದುರಂತಗಾಥೆಯೇ ಆಗಿದೆ. ಈ ಸಂಧರ್ಭದಲ್ಲಿ ಕವಿತೆಯ ಆಶಯಗಳು ಹೆಚ್ಚು ವಿಡಂನನಾತ್ಮಕವಾಗಿವೆ

  3. ಟಿ.ಕೆ.ಗಂಗಾಧರ ಪತ್ತಾರ

    ಹೌದು! ಅವರು ದೇಶವನ್ನು ಒಡೆಯುತ್ತಿರಲಿಲ್ಲ!!, ಇವರು ದೇಶವಾಸಿಗಳನ್ನು ನೆಮ್ಮದಿಯಿಂದ ಬದುಕಲು ಬಿಡುತ್ತಿಲ್ಲ!!!
    ಅವರಾದರೇನು? ಇವರಾದರೇನು?? ನಮ್ಮ ಪಾಡು ನಮಗೆ ತಪ್ಪಿದ್ದಲ್ಲ ಬಿಡಿ!!!
    ಕ್ರೌರ್ಯಕ್ಕೂ ವಿಡಂಬನೆಯ ಲೇಪನ! ಹೃದಯವಿದ್ರಾವಕ ಕಟುವಾಸ್ತವವನ್ನು ಹೇಳುವಲ್ಲಿಯೂ ಇರುವ ನಿರ್ಲಿಪ್ತತೆ ಅನನ್ಯ-ಅನುಪಮ.
    “ಅಳು”ನುಂಗಿ “ನಗು”ವ ವಿಭಿನ್ನ ವಿಶಿಷ್ಟತೆ.
    “ಬಿಳಿ”ಮಲೆಯವರ “ಕಪ್ಪು”ಮಸಿಯಲ್ಲಿರುವ “ಬಿಸಿ” ಕೋಟಿ ಜನರಿಗೆ ತಟ್ಟುವ ಕಾಲ ಯಾವಾಗ ಬರುವುದೋ?

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading