ಲಕ್ಷ್ಮಿ ದೇವಿ
ನಾವು ಬೆವರನು ಸುರಿಸಿ ದುಡಿಯುವ ಜನ ನಮ್ಮ ಬೆವರಿನ ಪಾಲನು ಕೇಳುವೆವು..’
ಈ ಹಾಡು ಬೀದಿ ನಾಟಕಗಳಲ್ಲಿ ಹಾಗೂ ಜನಾಂದೋಲನ ಕಾರ್ಯಕ್ರಮಗಳಲ್ಲಿ ಸಾಮಾಜಿಕ ಅರಿವನ್ನು ಮೂಡಿಸುವ ಸಲುವಾಗಿ ಸುಮಾರು 90ರ ದಶಕದಲ್ಲಿ ಹಾಡಲಾಗುತ್ತಿತ್ತು. ರಂಗತಂಡಗಳು ಸಾಮಾಜಿಕ ಕಳಕಳಿಯನ್ನು ಹೊತ್ತು ರಾಜ್ಯದಾದ್ಯಂತ ಸಂಚರಿಸಿತ್ತು. ಅದೇ ರಂಗಭೂಮಿಯ ಸೊಗಡನ್ನು ಬಿ.ಸುರೇಶ್ ರವರ ‘ದೇವರ ನಾಡಲ್ಲಿ’…..ಕಂಡಂತಾಯಿತು.
ಅತ್ಯಂತ ಸೂಕ್ಷ್ಮ ಪ್ರಜ್ಞೆಯುಳ್ಳ ನಿರ್ದೇಶಕರ ಸಂಶೋಧನಾ ಸಾಮರ್ಥ್ಯ ಇಡೀ ಚಲನಚಿತ್ರದಲ್ಲಿ ಎದ್ದು ಕಾಣುತ್ತದೆ. ತಮಿಳು, ಮಳೆಯಾಳಂ, ತುಳು, ಮರಾಠಿ, ತೆಲುಗು, ಉರ್ಧು ಭಾಷೆಗಳ ಸಂಗಮ ಸಹಜತೆಯ ಮಿಳಿತದೊಂದಿಗೆ ರೂಪುಗೊಂಡಿದೆ. ಚಿತ್ರದ ಪ್ರತಿ ಹಂತದಲ್ಲೂ ಜತನವಹಿಸಿ ಮಾಡಿರುವ ಕಾರ್ಯ ನಿರ್ದೇಶಕರ ಶ್ರಮವನ್ನು ಬಿಂಬಿಸುತ್ತದೆ. ಪ್ರತಿ ಪಾತ್ರದಲ್ಲೂ ಸಹಜತೆಯ ತುಡಿತ ಎದ್ದು ಕಾಣುತ್ತದೆ.
ರಂಗಭೂಮಿಯ ನೇಪಥ್ಯವನ್ನು ಹೊಂದಿರುವ ನಾಯಕಿ, ಪ್ರಸಾಧನವಿಲ್ಲದೇ ತನ್ನ ಪಾತ್ರಕ್ಕೆ ಜೀವತುಂಬಿದ ಪ್ರಕಾಶ್ ರೈ, ನಯವಂಚನೆಯನ್ನು ಸಮರ್ಥವಾಗಿ ಅಭಿವ್ಯಕ್ತಿಸಿದ ಸಿಹಿ ಕಹಿ ಚಂದ್ರು, ರಾಜಕಾರಣಿಯಾಗಿ ಅಚ್ಚುತ, ಉಪನ್ಯಾಸಕರಾಗಿ ಮಂಡ್ಯ ರಮೇಶ್, ಕನ್ನಡದ ಉಪನ್ಯಾಸಕ ಹಾಗೂ ನಾಯಕ ನಟನ ಪಾತ್ರಗಳು ಅತ್ಯಂತ ಮನೋಜ್ಞವಾಗಿ ಮೂಡಿಬಂದಿವೆ.
ಒಂದು ಘಟನೆ ವಸ್ತುಸ್ಥಿತಿಯನ್ನು ಹೊರತು ಪಡಿಸಿ ಅದೆಷ್ಟು ಆಯಾಮಗಳನ್ನು ಪಡೆದುಕೊಳ್ಳಬಹುದು ಎಂಬುದನ್ನು ಬೀಡಾ ಹಾಗೂ ಚಹಾದ ಅಂಗಡಿಯ ಸನ್ನಿವೇಶಗಳಲ್ಲಿ ಮಾರ್ಮಿಕವಾಗಿ ಹೊರಹೊಮ್ಮಿಸುತ್ತದೆ. ಗಡಿ ಪ್ರಾಂತ್ಯದಲ್ಲಿರುವ ವರ್ಗ-ವರ್ಣ ಸಂಘರ್ಷಗಳನ್ನು ಕಾಲೇಜಿನ ಉಪನ್ಯಾಸಕರ ಪಾತ್ರಗಳ ಮೂಲಕ ಹೇಳಿಸುತ್ತಾ, ಬಂಡವಾಳ ಶಾಹಿಗಳ ಹಿಡಿತದಲ್ಲಿರುವ ರಾಜಕಾರಣದ ವಿಡಂಬನೆಯೊಂದಿಗೆ ತಳಿಕೆಯನ್ನು ಹಾಕಿಕೊಳ್ಳುವ ಕಥಾಹಂದರ ಪ್ರಸ್ತುತ ಸಮಾಜಕ್ಕೆ ಹಿಡಿದ ಕನ್ನಡಿಯಾಗಿದೆ.
ಸಾಮಾಜಿಕ ಸ್ವಾಸ್ಥ್ಯ , ಕೋಮು ಸೌಹಾರ್ಧದ ಹಿನ್ನೆಲೆಯ ಆಶಯವನ್ನು ಇಡೀ ಚಲನ ಚಿತ್ರ ಧ್ವನಿಸುತ್ತದೆ. ….. ಇಂತಹ ಸದಭಿರುಚಿಯ ಚಿತ್ರವನ್ನು ನೀಡಿದ ನಿಮಗೆ ಹ್ಯಾಟ್ಸ್ ಆಫ್ ಸುರೇಶ್ ಸರ್..
0 ಪ್ರತಿಕ್ರಿಯೆಗಳು