
ಬಿ ಕೆ ನರಸಿಂಹ ರಾಜು
ಶಿವೋತ್ಸವದ ಗಣೆ ನಾದ ಇನ್ನೂ ಕಿವಿಯಲ್ಲಿ ಹಾಗೇ ಇದೆ. ಆದರೆ ಈ ಶಿವೋತ್ಸವಕ್ಕೆ ಬಂದ ಎಷ್ಟೋ ಜನ ದೂರದೂರಿನವರ ಬಾಯಲ್ಲಿ ಗಣೆ ಗೌರವಕ್ಕೂ ಮುಂಚೆ ನಾನು ಕೇಳಿದ್ದು ಈ ಗಣೆ ಅಂದರೆ ಏನು? ಅಂತ ಕೇಳ್ತಿದ್ರು ಅವರಿಗೆ ಬಿಡಿಸಿ ಹೇಳೊಕ್ ಆಗ್ಲಿಲ್ಲ, ಕಾರ್ಯಕ್ರಮದ ಒತ್ತಡದಲ್ಲಿದ್ದೆ. ಈಗ ಸ್ವಲ್ಪ ಬಿಡುವಾಗೊರೋದ್ರಿಂದ ಗಣೆಯ ಬಗ್ಗೆ ಒಂಚೂರು ನಿಮ್ಮ ಜೊತೆ ಹಂಚಿಕೊಳ್ಳುವ ಅಂತಿದೀನಿ.
ಇಷ್ಟಕ್ಕೂ ಗಣೆಯನ್ನು ನಾನು ಚಿಕ್ಕವನಿಂದ ನೋಡಿದ್ದೆ ಆದರೆ ಅದರ ತಯಾರಿ ಹಿಂದಿನ ಶ್ರಮದ ಬಗ್ಗೆ ಇತ್ತೀಚೆಗಷ್ಟೇ ನನಗೂ ಗೊತ್ತಾಗಿದ್ದು.

‘ಗಣೆ’ ಬುಡಕಟ್ಟು ಸಮುದಾಯವಾದ ಗೊಲ್ಲ ಜನಾಂಗದಲ್ಲಿ ಈಗಲೂ ಬಳಸುವ ಅಪರೂಪದ ವಾದ್ಯ. ಕೊಳಲಿನಾಕಾರದ ಕನಿಷ್ಠ ಐದರಿಂದ ಆರು ಅಡಿ ಉದ್ದದ ಬಿದಿರ ಕೊಳಲು. ಇದರ ತಯಾರಿ ಬಗ್ಗೆ ತಿಳಿದುಕೊಳ್ಳಲು ಇದೇ ಗೊಲ್ಲ ಸಮುದಾಯದ ನಮ್ಮಾವ ಕೊರ್ಲೆ ತಿಮಣ್ಣನನ್ನು ಕೇಳಿದೆ. ಮಾವ ಅಂದರೆ ನಾನು ಛಲವಾದಿ ಜನಾಂಗದವನಾದರೂ ಕೂಡ ನಮ್ಮೂರಿನ ಎಲ್ಲಾ ಸಮುದಾಯದವರಲ್ಲೂ ಕೂಡ ನನಗೆ ನೆಂಟರು ಇದ್ದಾರೆ ಎಲ್ಲಾ ಸಮುದಾಯದಲ್ಲೂ ಮಾವಂದಿರು ಇದ್ದಾರೆ ಎಷ್ಟೋ ಸಲ ಹೆಣ್ಣು ಕೊಡ್ತೀನಿ ಮದುವೆ ಆಗೋ ರಾಜ ಅಂತ ಹೇಳಿರೋರು ಇದಾರೆ. ತಮಾಷೆಗಾಗಿ ಇರಬೇಕು. ನಮ್ಮ ಹಳ್ಳಿಗಳಲ್ಲಿ ಸಂಬಂಧಗಳು ಇನ್ನೂ ಗಟ್ಟಿಯಾಗಿದಾವೆ ಅಂದರೆ ಇಂತಹ ಜಾತಿ ಮೀರಿದ ಸಂಬಂಧಗಳಿಂದ ಅನ್ನೋದು ನನ್ ನಂಬಿಕೆ. ತಿಮ್ಮಣ್ಣ ಮಾವ ಹೇಳಿದ ಮಾತು ಕೇಳಿ ನನಗಂತೂ ಸಿಕ್ಕಾಪಟ್ಟೆ ಖುಷಿ ಜೊತೆಗೆ ಇಷ್ಟೆಲ್ಲಾ ಕಷ್ಟ ಇರುತ್ತಾ ಅನ್ನೋ ಕುತೂಹಲ.
ಗಣೆ ತಯಾರಿ ಮಾಡುವಾಗ ಕೋರುಮಗ (ಮದುವೆಯಾಗದ ಹುಡುಗ) ಅಮವಾಸ್ಯೆಯ ದಿನ ಹುತ್ತದ ಮೇಲಿನ ಬಿದಿರು ಕಡ್ಡಿಯನ್ನು ಗಣೆಗೆ (ಉದ್ದನೆಯ ಕೊಳಲಿಗೆ) ಒಪ್ಪುವ ರೀತಿಯಲ್ಲಿಯೇ ಇರುವಂತಹದ್ದನ್ನು ಪೂಜೆ ಮಾಡಿ ಕತ್ತರಿಸಬೇಕು.

ನಮ್ ಕಡೆ ಬಿದಿರು ಮರಗಳು ಕಡಿಮೆಯೇ ಆದರೆ ಹುತ್ತದ ಮೇಲೆ ಬೆಳೆದಿರೋದು ಜೊತೆಗೆ ಕೊಳಲಿನಾಕಾರವಾಗಿ ಇರೋದು ಹುಡುಕೋದು ಎಷ್ಟು ಕಷ್ಟ ಅಂತ ಅವರ ಮಾತಲ್ಲೇ ಗೊತ್ತಾಗ್ತಿತ್ತು.
ಇನ್ನೊಂದು ವಿಷ್ಯ ಏನಂದರೆ ಈ ಕೋರುಮಗನಿಗೆ ಹಲ್ಲು ಉದುರಿರಬಾರದು. (ಚಿಕ್ಕವಯಸ್ಸಿನಲ್ಲಿ ಉದುರಿರುವುದು ಲೆಕಕ್ಕೆ ಬರಲ್ಲವಂತೆ) ಅಂದರೆ ಆಕಸ್ಮಿಕವಾಗಿ ಏನಾದರೂ ತೊಂದರೆ ಆಗಿ ಉದುರಿರಬಾರದು.
ಈ ರೀತಿ ನಿಯಮಗಳನ್ನು ಪಾಲಿಸಿ ಕತ್ತರಿಸಿ ತಂದ ಐದಾರಡಿಯ ಬಿದಿರಿಗೆ ಕೊಳಲಿನ ರೂಪ ಕೊಡಲಾಗುತ್ತದೆ. ಆದರೆ ಒಳಗೆ ರಂಧ್ರ ಸ್ವಾಭಾವಿಕವಾಗಿಯೇ ಆಗಬೇಕೆಂಬುದು ನಿಯಮ. ಸ್ವಾಭಾವಿಕವಾಗಿ ರಂದ್ರ ಮಾಡೋಕೆ ಏನೆಲ್ಲಾ ಪ್ಲಾನ್ ಮಾಡ್ತಾರೆ ಅಂದರೆ ಅಬ್ಬಾ! ಒಂದು ರಂಧ್ರ ಕೊರೆದು ಅದರಲ್ಲಿ ಬೆಲ್ಲ ಬಾಳೆಹಣ್ಣು ಸಕ್ಕರೆಯಂತಹ ಸಿಹಿ ಪದಾರ್ಥಗಳನ್ನು ತುಂಬಿ ತಿಪ್ಪೆ ಅಥವಾ ಇರುವೆಗಳು ಸೇರುವ ಫಲವತ್ತಾದ ಮಣ್ಣಿನಲ್ಲಿ ಹೂತಿಡ್ತಾರೆ. ಒಂಬತ್ತು ದಿನ ಅಥವಾ ಇಂತಿಷ್ಟು ದಿನ ಅಂತ ನಿಗದಿ ಮಾಡಿ ಹೋಗಿ ಆ ದಿನ ಬಂದಾಗ ಇರುವೆಗಳು ಆ ಸಿಹಿಯನ್ನು ತಿಂದು ಜೊತೆಗೆ ಒಳ ರಂಧ್ರ ತಾನಾಗಿಯೇ ಸೃಷ್ಟಿಯಾಗಿರುತ್ತದೆ.

ಇಷ್ಟೇ ಅಲ್ಲ ಅದನ್ನು ತಂದು ಹಾಲಿನಲ್ಲಿ ತೊಳೆದು ಗೋವುನಿಂದ (ಎತ್ತಿನ ಗಂಜಳ) ತೊಳೆದು ಸಿದ್ದಿಮಾಡಿ ಜುಂಜಪ್ಪನ ಗುಡ್ಡೆಯ ಬಳಿಯ ಮಜ್ಜನಬಾವಿಯ ಬಳಿ ಗಂಗಮ್ಮನ ಪೂಜೆ ಮಾಡ್ತಾರೆ.
ಈ ರೀತಿ ಎಲ್ಲಾ ನಿಯಮಗಳನ್ನು ಮಾಡಿದ್ರೆ ಮಾತ್ರ ಈ ಗಣೆಯನ್ನು ಪೂಜೆ ಮಾಡಿ ಊದಿದ್ರೆ ಗಣೆ ಊದೋವಾಗ ದೇವರು ಗಣೆ ಊದುವವನ ಮೈಮೇಲೆ ಬಂದು ಜನರ ಸಮಸ್ಯೆಗಳನ್ನು ಕೇಳುತ್ತಾನೆ ಅನ್ನೋ ನಂಬಿಕೆ ಈ ಸಮುದಾಯದ್ದು.
ಅದೇನೆ ಇರಲಿ ಇಂತಹ ಗಣೆಯು ನಮ್ಮ ಸಿರಾ ಸೀಮೆಯಲ್ಲಿ ಈಗಲೂ ತಯಾರಿಸುವ ನಮ್ಮ ಗೊಲ್ಲ ಸಮುದಾಯದ ಬಂಧುಗಳಿಗೊಂದು ಸಲಾಂ.
ಇಂತಹ ಗಣೆಯನ್ನು ಗೌರವಕ್ಕೆ ಬಳಸಿದ್ದು ಇನ್ನೂ ಖುಷಿ. ಎಷ್ಟೋ ಗೌರವಗಳು ಮಾರುಕಟ್ಟೆಯಲ್ಲಿ ಸಿಗಬಹುದು ಆದರೆ ಇಷ್ಟೆಲ್ಲಾ ಶ್ರದ್ದೆಯಿಂದ ಮಾಡಿದ ಗಣೆ ಮಾರುಕಟ್ಟೆಯಲ್ಲಿ ಸಿಗೊಲ್ಲ.






ಗಣೆ ಅಂದರೆ ಏನು? ಅಂತ ಗೊತ್ತೇ ಇರಲಿಲ್ಲ. ಸಾಂಪ್ರದಾಯಿಕ ಹಿನ್ನೆಲೆಯಲ್ಲಿ ನಡೆಯುವ ಆಚರಣೆಗಳ ಬಗ್ಗೆ ತಿಳಿವಳಿಕೆ ನೀಡಿದ್ದಕ್ಕೆ ಧನ್ಯವಾದಗಳು ಸರ್.
ಹಾಗೆ ಆ ಕೊಳಲಿನ ನಾದ ಅದೆಷ್ಟು ಸುಮಧುರವಾಗಿರಬಹುದು? ಊಹಿಸಲೂ ಆಗುತ್ತಿಲ್ಲ. ಕಲ್ಪಿಸಿಕೊಂಡರೇನೇ ಮೈ ಝುಂ ಅನ್ನುವುದು. ವಿಡಿಯೋ ಹಾಕಿದ್ದರೆ ಇನ್ನೂ ಚೆನ್ನಾಗಿ ಇರುತ್ತಿತ್ತು.
ಖಂಡಿತ ಮುಂದೆ ಇನ್ನೊಂದು ಬರಹದಲ್ಲಿ ವೀಡಿಯೋ ಸಮೇತ ಹಾಕುವೆ.
Nice article sir
ವಾವ್ವ್ ವಾವ್ವ್
ಹೌದು. ಜಾತಿಗಳನ್ನು ಮೀರಿದ ಇ0ಥಹ ಸಂಬಂಧಗಳಿ0ದಲೆ
ಹಳ್ಳಿಗಳಲ್ಲಿನ ಬದುಕು ಚೆ0ದವಾಗಿರುವುದು, ಮಧುರವಾಗಿರೋದು! ಗಣೆನಾದದ ವೈಶಿಷ್ಟ್ಯ ತಿಳಿದು ತಮ್ಮ ಬಗ್ಗೆ, ಬೇವಿನಹಳ್ಳಿಯ ಜನರ ಬಗ್ಗೆ ಗೌರವ ಇಮ್ಮಡಿಸಿತು. ತಮ್ಮೀ ಕೈ0ಕರ್ಯ ನಿರಂತರವಾಗಿರಲಿ.
ThankQ ಚಂಸು ಅಣ್ಣ
Tumb olle mahiti narasimha raju avre…nijavaglu na yavdo samskrutik karyakradalli nodi edenu estudd kolau ankondide ade adu GANI anno vshayad jote adr tatarike vidhan, avar bhakti bhava hagu mahatvavanna tilisddakke dhanyavadagalu…nimminda ennasru ee thara olle olle vichargalanna nirixisutt nim karyakke bembalisuv e nim snehit Raj…072