ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

“ಅಮ್ಮಚ್ಚಿಯೆಂಬ ನೆನಪು”ಗಳೊಂದಿಗೆ…

ಸಿ.ಎಸ್.ದ್ವಾರಕಾನಾಥ್

‘ಅಮ್ಮಚ್ಚಿ ಎಂಬ ನೆನಪು’ ಎಂಬ ಸಿನಿಮಾಗೂ ನನಗೂ ನಡುವಿನ ನಂಟು ನಮ್ಮ ವೇಣು? ಚಿತ್ರ ಮಾಡಲು ಚಿತ್ರ ತಂಡ ಆಲೋಚನೆ ಮಾಡಿದಂದಿನಿಂದ ಹಿಡಿದು ಚಿತ್ರ ಪರದೆಯ ಮೇಲೆ ಸಿನಿಮಾ ಆಗಿ ಮೂಡುವವರೆಗೂ ವೇಣು ನೆಪೋಲಿಯನ್ ‘ಅಮ್ಮಚ್ಚಿ’ಯನ್ನು ಹೊರತುಪಡಿಸಿ ನನ್ನ ಬಳಿ ದುಸೆರಾ ಮಾತಾಡಿದಂತಿಲ್ಲ! ವೇಣುವಿನ ಗಾಢವಾದ involvement ಕಂಡಿದ್ದ ನನಗೆ ಈ ಚಿತ್ರ ನೋಡುವ ಕಾತರ ಅದೆಷ್ಟು ಅದಮ್ಯವಾಗಿತ್ತೆಂದರೆ ಚಿತ್ರಬಿಡುಗಡೆಯಾಗುವ ಮುಂಚೆಯೇ ನೋಡಿಬಿಟ್ಟೆ..!

ನಾಟಕ, ಚಲನಚಿತ್ರವನ್ನು ಒಂದು passion ಆಗಿ ಸ್ವೀಕರಿಸಿರುವ ವೇಣು, ಪ್ರಕಾಶ್ ಶೆಟ್ಟಿ ದಂಪತಿಗಳು, ಶಶಿದರ ಅಡಪ, ಕೃಷ್ಣ ರಾಯಚೂರ್ ನಂತ ಅನೇಕ ನನ್ನ ಆಪ್ತರು ಮಾಡಿರುವ ಚಿತ್ರವಿದು. ವೈದೇಹಿ ಅಂತಹ ಲೇಖಕಿಯ ಕತೆ ರೂಪಾಂತರವಾಗಿ ನಾಟಕವಾಗಿ ಈಗ ಚಲನಚಿತ್ರವಾಗಿದೆ. ಚಂಪಾ ಶೆಟ್ಟಿ ನಿರ್ದೇಶನ ಮಾಡಿದ್ದಾರೆ. ಮಹಿಳೆಯೇ ಕಥಾಕರ್ತೃವಾಗಿ, ಮಹಿಳೆಯೇ ನಿರ್ದೇಶನ ಮಾಡಿರುವ, ಮಹಿಳಾ ಪ್ರದಾನ ಪಾತ್ರಗಳಿರುವ, ಸ್ತ್ರೀಸಂವೇದನೆಯ ಚಿತ್ರವೆಂಬುದು ಕೂಡ ಇದರ ಹೆಗ್ಗಳಿಕೆಗೆ ಕಾರಣ.

ಚಿತ್ರ ಆರಂಭದಿಂದ ಹಿಡಿದು ಅಂತ್ಯದವರೆಗೂ ನಮ್ಮನ್ನು ಹಿಡಿದಿಡುವುದು ದಕ್ಷಿಣ ಕನ್ನಡದ ಹಸಿರು, ನೀರು ತುಂಬಿರುವ ಶ್ರೀಮಂತ ಗ್ರಾಮೀಣ ಪರಿಸರ, ಪಳಯುಳಿಕೆಯಂತಿರುವ ಹಳೆಯ ಹೆಂಚಿನ ಮನೆ, ಈಚೆಗೆ ನಮ್ಮ ಕಣ್ಣಿಂದ ಮರೆಯಾಗುತ್ತಿರುವ, ನೂರಾರು ವರ್ಷಗಳ ಹಿಂದಿನ ಆಭರಣಗಳಂತಿರುವ ಮನೆಯ ಪರಿಕರಗಳು, ಈ ಅಪರೂಪದ ಪರಿಸರ ಪರಿಕರಗಳೊಂದಿಗೆ ಭೂತ ವರ್ತಮಾನಗಳೊಂದಿಗೆ ಬೆರೆತುಹೋದಂತಿರುವ ರಕ್ತಮಾಂಸ ತುಂಬಿಕೊಂಡ ಮೂರು ತಲೆಮಾರುಗಳ ಜೀವಂತ ಪಾತ್ರಗಳು!

ಪ್ರತಿ ಫ್ರೇಮೂ ನಿಮ್ಮನ್ನು ಹಿಡಿದಿಡುತ್ತೆ, ಗಾಡವಾಗುತ್ತೆ, ಸ್ಥಬ್ದವಾಗಿಸುತ್ತೆ..! ಪ್ರತಿಪಾತ್ರವೂ, ಪರಿಸರವೂ ನಡೆದಾಡುವ ದೃಶ್ಯ ಕಾವ್ಯವನ್ನಾಗಿ ತನ್ಮಯಗೊಳಿಸುತ್ತೆ. ಪ್ರತಿ ಸಣ್ಣ ವಿವರಕ್ಕೂ ಗಮನ ನೀಡಿರುವ ಕುಸುರಿ ಎದ್ದು ಕಾಣುತ್ತೆ..! ಚಂಪಾಶೆಟ್ಟಿ ಮತ್ತವರ ತಂಡದ ಶ್ರಮಕ್ಕೆ ಸಲಾಂ…!!

ಕಡಲ ತೀರದ ಗ್ರಾಮೀಣ ಪ್ರದೇಶದ ವೈದಿಕ ಬ್ರಾಹ್ಮಣ ಕುಟುಂಬದ ಮೂರು ತಲೆಮಾರಿನ ಸ್ತ್ರೀಯರ ನೋವು ನಲಿವುಗಳ ಸಂವೇದನೆಯ ಕತೆಯಿದು.

ದಕ್ಷಿಣ ಕನ್ನಡದ ಪರಿಸರದಲ್ಲಿ ಹೆಸರಾಂತ ಲೇಖಕಿ ವೈದೇಹಿ ನಮ್ಮೊಂದಿಗೆ ‘ಲಂಕೇಶ ಪತ್ರಿಕೆ’ ಯಲ್ಲಿ ಬರೆಯುತ್ತಾ ಬೆಳಕಿಗೆ ಬಂದವರು, ಅದಕ್ಕೂ ಮುಂಚೆಯೂ ಆಕೆ ಲೇಖಕಿಯಾಗಿರಬಹುದು. ಆದರೆ ಲಂಕೇಶರು ಆಕೆಗೆ ಕೊಟ್ಟ ‌ಮಾನ್ಯತೆಯನ್ನು ಕಂಡವರು ನಾವು. ಮೇಷ್ಟ್ರು ವೈದೇಹಿಯವರ ಬಗ್ಗೆ ಎಷ್ಟೇ ಮೆಚ್ಚಿದರೂ, ಪ್ರೋತ್ಸಾಹಿಸಿದರೂ ನನ್ನಂತಹ ತೆಲಗು ಬಾಷಿಕ ಸೆರಗಿನಿಂದ ಬಂದವನಿಗೆ ಎಷ್ಟೇ ಕಷ್ಟಪಟ್ಟರೂ ವೈದೇಹಿಯವರ ಬಾಷೆ, ಪರಿಸರ, ಪಾತ್ರಗಳು, ಕತೆ ಕಟ್ಟುವ ವಿಧಾನ ಯಾವುದೂ ಒಳಕ್ಕೆ ಇಳಿಯಲೇ ಇಲ್ಲ? ಕೊಂಚ ನಿಷ್ಠುರವಾಗಿ ಹೇಳಬೇಕೆಂದರೆ ನಮ್ಮಂತಹ ಜನಸಾಮಾನ್ಯರಿಗೆ ವೈದೇಹಿಯವರು ಇಂದಿಗೂ ಕಗ್ಗವೇ! ಇಂತಹದೊಂದು ಕಥಾ ಸಂಕೀರ್ಣವನ್ನು ಚಂಪಾಶೆಟ್ಟಿಯವರ ತಂಡ ಮನೆಮಂದಿಯೆಲ್ಲಾ ಕುಂತು ನೋಡಬಲ್ಲಂತ ಸಹನೀಯ ದೃಶ್ಯ ಕಾವ್ಯವನ್ನಾಗಿ ಕಟ್ಟಿಕೊಟ್ಟಿದ್ದು ನಿಜಕ್ಕೂ ಗ್ರೇಟ್!!

ಪ್ರತಿಯೊಬ್ಬರೂ ತಪ್ಪದೇ ನೋಡಬಹುದಾದಂತಹ ಸಿನಿಮಾ ಇದು, ಈ ಚಿತ್ರದಿಂದಾಗಿ ಕನ್ನಡದಲ್ಲಿ ಒಳ್ಳೇ ಸಿನಿಮಾ ಮಾಡಬಹುದಾದ ಗಂಭೀರ ಚಿತ್ರಪ್ರೇಮಿಗಳ ಮತ್ತೊಂದು ಭರವಸೆಯ ತಂಡವೊಂದು ರೂಪುಗೊಂಡದ್ದು ಕನ್ನಡಿಗರಿಗೆ ಲಾಭ, ಈ ಕಾರಣಕ್ಕೆ ಇವರ ಶ್ರಮವನ್ನು ಗುರುತಿಸಬೇಕು.. ಈ ತಂಡ ಸದಾ ನಾಟಕ, ಸಿನಿಮಾ ಮಾಡುತ್ತಾ ಉಸಿರಾಡುವಂತೆ ನೋಡಿಕೊಳ್ಳಬೇಕು…

‍ಲೇಖಕರು Avadhi

1 November, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading