ಅನುಸೂಯ ಓದಿದ ‘ಬೆಳಕ ನಿಚ್ಚಣಿಕೆ’

ಅನುಸೂಯ ಯತೀಶ್

ಗಜಲ್ ಎಂಬ ಮಾಯಾಂಗನೆ ಇತ್ತೀಚಿನ ದಿನಗಳಲ್ಲಿ ಕನ್ನಡದ ಸಾಹಿತ್ಯ ಪ್ರಕಾರವೇನೊ ಎನ್ನುವಷ್ಟರಮಟ್ಟಿಗೆ ಬರಹಗಾರರನ್ನು ಒಪ್ಪಿಸಿಕೊಂಡು, ಅಪ್ಪಿಕೊಂಡು ಬರಸಿಕೊಳ್ಳುತ್ತ ಸಾಗುತ್ತಿದೆ. ಗಜಲ್ ಗಾಯನ ಕೇಳುತ್ತಿದ್ದರೆ ನಾವು ಭಾವನಾ ಲೋಕದಲೊಮ್ಮೆ ವಿಹರಿಸಿ ಬರುತ್ತೇವೆ. ಅಷ್ಟರ ಮಟ್ಟಿಗೆ ನಮ್ಮನ್ನು ಸಮ್ಮೋಹನಗೊಳಿಸಿ ಭಾವಪರವಶಗೊಳಿಸಿ ಕೇಳುಗರು ಹಾಗೂ ಓದುಗರ ಮನದ ಭಿತ್ತಿಗೆ ಸಂತೃಪ್ತಿಯನ್ನು ಲೇಪಿಸುತ್ತವೆ.

ಅನ್ಯ ಭಾಷೆಯಿಂದ ಕನ್ನಡಕ್ಕೆ ಬಂದರು ಕನ್ನಡದಲ್ಲಿ ಅಭೂತಪೂರ್ವ ಯಶಸ್ಸನ್ನು ಗಳಿಸಿ ಮುನ್ನುಗ್ಗುತ್ತ ಹೋಗುತ್ತಿರುವುದಕ್ಕೆ ಗಜಲ್ ಕಾರರ ಸಾಹಿತ್ಯ ಪ್ರೌಢಿಮೆಯೆ ಕಾರಣವಾಗಿದೆ ಎನ್ನಬಹುದು. ಯಾವುದೇ ವಿಜಯ ಸುಖಾ ಸುಮ್ಮನೆ ಲಭಿಸುವುದಿಲ್ಲ. ಅದಕ್ಕಾಗಿ ದೊಡ್ಡ ಧ್ಯಾನವನ್ನು ಮಾಡಬೇಕಾಗುತ್ತದೆ. ತನ್ನನ್ನೇ ತಾನು ಮರೆತು ಭಾವಲೋಕದಲ್ಲಿ ವಿಹರಿಸಬೇಕಾಗುತ್ತದೆ. ಆಗ ಮಾತ್ರ ಗಜಲ್ ಗಳಿಗೆ ಜೀವಂತಿಕೆ ದಕ್ಕುತ್ತದೆ.

ಗಜಲ್ ಗಳ ಸೆಳೆತ ಎಷ್ಟರಮಟ್ಟಿಗೆ ಇರುತ್ತದೆ ಎಂದರೆ ನಾವು ಚಿಕ್ಕವರಿದ್ದಾಗ ಡಿ.ಡಿ ದೂರದರ್ಶನ ಚಂದನ ವಾಹಿನಿಯಲ್ಲಿ ಹಿಂದಿ ಗಜಲ್ ಗಳು ಪ್ರಸಾರವಾಗುತ್ತಿದ್ದವು. ಸಾಹಿತ್ಯ, ಸಂಗೀತದ ಗಂಧ ಗಾಳಿ ತಿಳಿಯದ ವಯಸ್ಸದು. ಆದರೂ ಗಜಲ್ ಗಾಯನ ಬಂತೆಂದರೆ ಸಾಕು ಅರ್ಥವಾಗದ ಭಾಷೆಯಾದರೂ ನಾವು ಅದನ್ನು ತದೇಕಚಿತ್ತದಿಂದ ಕೇಳಿ ಆಸ್ವಾದಿಸುತ್ತಿದ್ದೆವು. ಇಂದು ಕನ್ನಡದಲ್ಲಿಯೂ ಅಂತಹ ಅವಕಾಶಗಳು ಓದುಗರಿಗೆ, ಕೇಳುಗರಿಗೆ ದೊರೆಯುತ್ತಿರುವುದು ಹರ್ಷದ ಸಂಗತಿಯಾಗಿದೆ.

ಗಜಲ್ ಎಂಬ ವೃಕ್ಷ ಇಂದು ಹೆಮ್ಮರವಾಗಿ ಬೆಳೆದು ನಾಡಿನೆಲ್ಲೆಡೆ ತನ್ನ ಕೊಂಬೆಗಳನ್ನು ಚಾಚಿ ಅದ್ಭುತವಾಗಿ ಸಾಹಿತ್ಯ ಕೃಷಿ ಮಾಡಿಸಿಕೊಂಡು ಜನರಿಗೆ ಆಪ್ಯಾಯಮಾನವಾಗಿದೆ.

ಇಂದು ಗಜಲ್ ಯುವಕರಿಂದ ಹಿಡಿದು ವಯಸ್ಕರಾದಿಯಾಗಿ ವಯೋವೃದ್ಧರವರೆಗೂ ಎಲ್ಲರಿಗೂ ಆಪ್ತವಾಗಿ ಗಜಲ್ ಬರಹ ಸಾಗುತ್ತಿದೆ. ಗಜಲ್ ನಿನಾದಕೆ ತಲೆದೂಗದವರಿಲ್ಲ. ಅಂತಹ ಅದ್ಭುತ ಸಾಹಿತ್ಯ ಪ್ರಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಗಜಲ್ ಕಾವ್ಯ ಲೋಕಕ್ಕೆ ಎರಡು ಅದ್ಭುತ ಕೃತಿಗಳನ್ನು ಕೊಡುಗೆಯಾಗಿ ನೀಡಿರುವುದು ಚಂಪಾರವರ ಸಾಹಿತ್ಯಾಭಿರುಚಿಗೆ ಹಿಡಿದ ಕೈಗನ್ನಡಿಯಾಗಿದೆ.

ಚಂಪೂ ಎಂಬ ಕಾವ್ಯನಾಮದಿಂದ ಸಾಹಿತ್ಯಲೋಕದಲ್ಲಿ ತಮ್ಮನ್ನು ಪರಿಚಯಿಸಿಕೊಂಡ ಚಂದ್ರಶೇಖರ ಯಲ್ಲಪ್ಪ ಪೂಜಾರ ಅವರ ಬೆಳಕ ನಿಚ್ಚಣಿಕೆ ಏರಿ ಬಂದ ನಂತರ ನಾನು ಗಜಲ್ ಕಾರರ ಮನೋಗತವನ್ನು ತಮ್ಮೆಲ್ಲರ ಮುಂದಿಡುವ ಪ್ರಯತ್ನ ಮಾಡುತ್ತಿರುವೆ.

ಇವರ ಎರಡು ಗಜಲ್ ಸಂಕಲನಗಳನ್ನು ಓದಿರುವೆ. ಎರಡು ಹೊತ್ತಿಗೆಗಳು ಬೆಳಕನ್ನು ಅಸ್ತ್ರವನ್ನಾಗಿ ಮಾಡಿಕೊಂಡಿವೆ ಎಂದು ನಾವು ಬಹಳ ಸೂಕ್ಷ್ಮವಾಗಿ ಗುರುತಿಸಬಹುದು. ಇವರು ಕತ್ತಲೆಯಲ್ಲಿ ಇರುವವರಿಗೆ ಅಂದರೆ ಹತಾಶೆ,ದುಃಖ, ಶೋಷಣೆ, ಅನ್ಯಾಯ, ಅಸಮಾನತೆ, ಸಾಮಾಜಿಕ ತುಳಿತಕ್ಕೊಳಗಾಗಿ ಸಾಮಾಜಿಕ ಬದುಕಿನ ಕತ್ತಲೆಯಲ್ಲಿ ಜೀವಿಸುವ ಜನಗಳಿಗೆ ಭರವಸೆ, ಕನಸು, ನ್ಯಾಯ, ಸುಖ, ಸಂತೋಷದ ಬೆಳಕನ್ನು ನೀಡುವ ಚೈತನ್ಯದಾಯಕವಾಗಿ ಇವರ ಲೇಖನಿ ದುಡಿಸಿಕೊಂಡಿದೆ ಎಂಬುದು ನಮಗೆ ಇವರ ಗಜಲ್ ಗಳನ್ನು ಓದಿದ ನಂತರ ನಮಗೆ ಅರ್ಥವಾಗುತ್ತದೆ.

ಈ ಬೆಳಕ ನಿಚ್ಚಣಿಕೆ ಎಂಬ ಶೀರ್ಷಿಕೆಯೆ ವಿಶೇಷವಾಗಿದ್ದು ನಿಚ್ಚಣಿಕೆ ಎಂದರೆ ಏಣಿ. ಬೆಳಕ ನಿಚ್ಚಣಿಕೆ ಎಂದರೆ ಬೆಳಕನರಸುತ್ತ ಏರುವ ಏಣಿಯಾಗಿದೆ. ದುರಿತದ ಬೇಗುದಿಯಲ್ಲಿ ನೊಂದು ಬೆಂದು ಹೊರಬರಲು ದಾರಿಕಾಣದೆ ತೊಳಲಾಡುವ ಮನೆಗಳಿಗೆ, ಅಸಮಾನತೆಯ ಚಕ್ರವ್ಯೂಹದಲ್ಲಿ ಬಂಧಿಯಾದ ಜನಗಳಿಗೆ, ಶೋಷಿತರಿಗೆ, ಅಸಹಾಯಕರಿಗೆ, ದೀನದಲಿತರಿಗೆ, ಕತ್ತಲೆಯಿಂದ ಹೊರ ಬರಲು ಪರಿತಪಿಸುವ ಜೀವಗಳಿಗೆ, ಬೆಳಕಿನ ಸಾಧನೆಯ ಪಥದಲ್ಲಿ ಚಲಿಸಲು ಮಾರ್ಗದರ್ಶನ ನೀಡುವ ನೀಲಿನಕ್ಷೆಯಾಗಿದೆ. ಇವರೆಲ್ಲ ಕತ್ತಲೆಯೆಂಬ ಅಂಧಕಾರದಿಂದ ಹೊರಬರಲು ಬೆಳಕಿನ ಅನುಭವ ಪಡೆಯಲು ಬೆಳಕ ನಿಚ್ಚಣಿಕೆ ಏರಬೇಕು.ಈ ನಿಚ್ಚಣಿಕೆ ತಯಾರಿಸುವಲ್ಲಿ ಗಜಲ್ ಕಾರರು ಸಾಕಷ್ಟು ಪ್ರಯಾಸ ಪಟ್ಟಿದ್ದಾರೆ ಎಂಬುದು ಗಜಲ್ ಗಳನ್ನು ಓದಿದ ನಂತರವಷ್ಟೇ ಓದುಗ ಪ್ರಭುಗಳ ಅರಿವಿಗೆ ಬರುತ್ತದೆ.

ಈ ಬೆಳಕ ನಿಚ್ಚಣಿಕೆ ಗಜಲ್ ಸಂಕಲನವು 66 ಗಜಲ್ ಗಳಿದ್ದು ನೇರಿಶಾ ಪ್ರಕಾಶ ನದಲ್ಲಿ ಪ್ರಕಟವಾಗಿದೆ. ಮಡಿವಾಳ ರಾಜಯೋಗೀಂದ್ರ ಸ್ವಾಮಿಗಳು ವಿರಕ್ತಮಠ ದೇಶನೂರ್ ಅವರು ಶುಭ ಹಾರೈಸಿದ್ದಾರೆ. ಹಡಗಲಿಯ ಇಮಾಮ್ ಸಾಹೇಬ್ ಸೋತು ಸುಣ್ಣವಾದವರ ನಡುವೆ ಬಣ್ಣವಾದ ಚಂಪೂ ಎಂಬ ಮಿಸ್ರಾ ದೊಂದಿಗೆ ಮುನ್ನುಡಿ ಬರೆದು ಶುಭ ಹಾರೈಸಿದ್ದಾರೆ.

ಇವರು ಗಜಲ್ ನ ಐತಿಹಾಸಿಕ ಮಹತ್ವವನ್ನು ಉಲ್ಲೇಖಿಸುತ್ತ, ರಾಜಾಶ್ರಯದಲ್ಲಿ ಗಜಲ್ ಕಾರರು ವಾದ ಪ್ರತಿವಾದದ ಮೂಲಕ ತಮ್ಮ ವಿದ್ವತ್ತನ್ನು ಪ್ರದರ್ಶಿಸುತ್ತಿದ್ದರು. ಉತ್ಪ್ರೇಕ್ಷೆ ಹಾಗೂ ರೂಪಕಗಳನ್ನು ಸೊಗಸಾಗಿ ಕಟ್ಟಿಕೊಟ್ಟ ಕವಿಗಳಿಗೆ ಸುಲ್ತಾನ, ನವಾಬರಿಂದ ಬಹುಮಾನ, ಸನ್ಮಾನ ಲಭಿಸುತ್ತಿದ್ದವು ಎಂಬ ವಿಚಾರಗಳನ್ನು ಓದುಗರ ಮುಂದಿಟ್ಟಿದ್ದಾರೆ.

ಗಜಲ್ ಕಾರರಾದ ಚಂಪೂ ರವರ ಸಾಹಿತ್ಯ ಯಾನವನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತ ದಶಕದ ಹತಾಶೆ, ನೋವು ಅವಮಾನಗಳ ನಂತರ ಸನ್ಮಾನದ ರೂಪದಲ್ಲಿ ಎರಡು ಕೃತಿಗಳು ಜನ್ಮತಾಳಿವೆ ಎಂದು ವಿವರಿಸಿದ್ದಾರೆ. ಚಂಪು ರವರ ಗಜಲ್ ಗಳನ್ನು ಜನಗಳು ಒಳಗಣ್ಣಿನಿಂದ ನೋಡುವ ಅಗತ್ಯತೆ ಇದ್ದು ಅಲ್ಲಿ ಅಡಕವಾಗಿರುವ ಗೂಡಾರ್ಥವನ್ನು ಅರಿತುಕೊಳ್ಳಬೇಕಾದ ಅವಶ್ಯಕತೆಯನ್ನು ಒತ್ತಿ ಹೇಳಿದ್ದಾರೆ.

ಈ ಗಜಲ್ ಸಂಕಲನಕ್ಕೆ ಬಳ್ಳಾರಿಯ ಸಾಹಿತಿಗಳಾದ ಅಬ್ದುಲ್ ಹೈ ತೋರಣಗಲ್ಲ ರವರು ಜಡಕ್ಕೆ ಜೀವತುಂಬಿ ಝಲಕಿಸುವ ಗಜಲ್ ಕಾರರಾದ ಚಂಪೂ ರವರು ನವಿರಾದ ರೂಪಕ, ಪ್ರತಿಮೆಗಳನ್ನು ಬಳಸಿಕೊಂಡು ತಾತ್ವಿಕ ಹಸಿವು ಅರಿವಿನ ಜಾಡು ಹಿಡಿದು ವಿಷಯನ್ನು ಬಗ್ಗಿಸಿ ಒಗ್ಗಿಸಿಕೊಳ್ಳುವ ಪ್ರಜ್ಞಾವಂತಿಕೆ, ಬದುಕು ಕಟ್ಟುವ, ಕ್ರಿಯೆಯನ್ನು ಘನಗೊಳಿಸುವ ತಂತ್ರಗಾರಿಕೆ, ಲಘು ಸ್ವರೂಪದ ಭಾವಗಳನ್ನು ತೀವ್ರ ಸ್ವರೂಪಕ್ಕೆ ಕೊಂಡೊಯ್ಯುವ ಕಲಾತ್ಮಕಕತೆ ಜೊತೆಗೆ ಸಮಾಜದಲ್ಲಿ ದಕ್ಕಿದ ಅನುಭವಗಳನ್ನು ಅಕ್ಷರಗಳ ಮುಖೇನ ನೇಯುವ ನೇಯ್ಗಾರಿಕೆ ಇವರಿಗೆ ಕರಗತವಾಗಿದೆ ಎಂದು ತುಂಬು ಮನದಿಂದ ಶ್ಲಾಘಿಸುತ್ತ ಭಾಷೆಯ ಹಂಗು ತೊರೆದು ಬರೆಯುವ ಗಜಲ್ಕಾರ ಎಂಬ ಮಿಸ್ರಾದೊಂದಿಗೆ ಬೆನ್ನುಡಿ ಬರೆದು ಶುಭ ಹಾರೈಸಿದ್ದಾರೆ.

ಬೆಳಕ ನಿಚ್ಚಣಿಕೆಗೆ ನಾಡಿನ ಪ್ರಖ್ಯಾತ ಚಿತ್ರ ಕಲಾವಿದರಾದ ಟಿ. ಎಫ್.ಹಾದಿಮನಿ ಅವರು ಬಹಳ ಆಕರ್ಷಕವಾದ ಹಾಗೂ ಅರ್ಥಪೂರ್ಣವಾದ ಮುಖಪುಟ ವಿನ್ಯಾಸವನ್ನು ರಚಿಸಿದ್ದು, ಈ ಗಜಲ್ ಶೀರ್ಷಿಕೆಯ ಮೆರಗನ್ನು ಮತ್ತಷ್ಟು ಇಮ್ಮಡಿಗೊಳಿಸಿದೆ. ಓದುಗರ ಮನದಲ್ಲಿ ಗಜಲ್ ಸಂಕಲನ ಹೊತ್ತು ತರುವ ವಿಚಾರಧಾರೆಗಳ ಒಳಗುಟ್ಟನ್ನು ಈ ಮುಖಪುಟ ವಿನ್ಯಾಸ ಸ್ಪಷ್ಟವಾಗಿ ಬಿಂಬಿಸುತ್ತದೆ.

ಗಜಲ್ ಲೋಕದಲ್ಲಿ ನಿತ್ಯ ಭಾವಪರವಶರಾಗಿ ಮಿಂದೆದ್ದ ಬಳಿಕ ಬೆಳಕ ನಿಚ್ಚಣಿಕೆ ಪುಟಿದೆದ್ದಿದೆ ಎಂಬುದು ಸತ್ಯ ಸಂಗತಿಯಾಗಿದೆ. ಬಹು ಸೂಕ್ಷ್ಮ ಸಂವೇದನೆಗಳ ಮೂಲಕ ಅರಿವಿನ ಜಾಡಿನಲ್ಲಿ ಸಾಗಿ ತಲುಪಿಸಬೇಕಾದ ಸಂದೇಶವನ್ನು ಬಹಳ ಪ್ರಜ್ಞಾಪೂರ್ವಕವಾಗಿ ಹೆಣೆದು ಕಾವ್ಯ ಕಟ್ಟುವ ಪರಿ ಅನನ್ಯ ಹಾಗೂ ಅಮೋಘವಾಗಿದೆ.

ಓದುಗರಿಗೆ ಇವರ ಗಜಲ್ಗಳು ನೋವಿನ ಬಿಸಿಯುಸಿರಲಿ ಬೇಯುತ್ತಿರುವವರಿಗೆ ಸಾಂತ್ವನದ ತಂಪನೆರೆಯುವ ವಿಶಾಲ ವೃಕ್ಷದಂತೆ ಭಾಸವಾಗುತ್ತದೆ. ಕಷ್ಟಗಳೆಂಬ ಮರಳುಗಾಡಿನಲ್ಲಿ ಪರಿತಪಿಸುತ್ತಿರುವ ಮಂದಿಗೆ ನೆಮ್ಮದಿ ನೀಡುವ ಭರವಸೆಯ ತುಂಬುವ ಒಯಸಿಸ್ ನಂತೆ ಕಾಣುತ್ತವೆ.

ಇವರು ಬಳಸುವ ಅಭೂತಪೂರ್ವವಾದ ರೂಪಕಗಳಿಂದ ಮಿಸ್ರಾ ಗಳು ಓದುಗರಿಗೆ ವಾಚ್ಯವೆನಿಸದೆ ಗಜಲ್ ಓದಿನ ತೃಪ್ತಿಯನ್ನು ಓದುಗರೆದೆಗೆ ಬಿತ್ತುತ್ತವೆ. ಇವರ ಗಜಲ್ ಗಳು ಕೇವಲ ವ್ಯಕ್ತಿಗತ ರೂಪದಲ್ಲಿ ಮೂಡಿಬರದೆ ಸಾರ್ವತ್ರಿಕ ವಸ್ತುವಾಗಿ ಬಿಂಬಿತವಾಗಿವೆ. ಸಾವಿರಾರು ನೊಂದ ಮನಗಳ ಪ್ರತಿಭಟನೆಯ ಧ್ವನಿಯಾಗಿವೆ. ವೈಯಕ್ತಿಕ ನೆಲೆಯಲ್ಲಿ ನಿಲ್ಲದೆ ಸಾಮಾಜಿಕ ನ್ಯಾಯ ಕೇಳುವ ನ್ಯಾಯವಾದಿಯಾಗಿ, ಹಾಗೂ ಸಮಾಜದ ಓರೆಕೋರೆಗಳನ್ನು ತಿದ್ದುವ ಚಿಕಿತ್ಸೆಕನಾಗಿ ಕಂಡುಬರುತ್ತಾರೆ. ಇವರು ಓದುಗರಿಗೆ ಪ್ರೀತಿ ಪ್ರೇಮದ ರಸಪಾಕವನ್ನು ಉಣಬಡಿಸಲು ಸೈ, ಅನ್ಯಾಯವನ್ನು ಪ್ರತಿಭಟಿಸುವ ಸಾತ್ವಿಕ ಹೋರಾಟಕ್ಕೂ ಸೈ.

ಬಡತನದ ರೋಧನೆ, ಹಸಿವಿನ ಆಕ್ರಂದನ ವಿವಿಧ ಮಜಲುಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ. ನಿರಾಶೆಯ ಕಾರ್ಮೋಡ, ಅಸಹಾಯಕತೆಯ ಕಣ್ಣೀರು ಓದುಗರ ಕಂಗಳನ್ನು ಒದ್ದೆಯಾಗಿಸುತ್ತವೆ. ಕೆಲವು ಅನಿಷ್ಟ ಪದ್ಧತಿಯ ಕರಾಳ ದರ್ಶನ ಮಾಡಿಸುವ ಗಜಲ್ ಗಳ ಅಶ್ ಅರ್ ನೋಡಬಹುದು. ನಿರಾಸೆಯ ಬದುಕಲ್ಲಿ ಮುಂಬರುವ ಹೊಸ ದಿನಗಳಿಗಾಗಿ ಆಶಾವಾದದ ಹೊಂಗನಸುಗಳನ್ನು ಹೊತ್ತು, ಜಾತಕ ಪಕ್ಷಿಗಳಂತೆ ಕಾಯುತ್ತಿರುವ ಜನರಿಗೆ, ನವ ನವೀನ ದಾರಿಗಳನ್ನು ತೋರುವ ಪ್ರಯತ್ನವನ್ನು ಬೆಳಕ ನಿಚ್ಚಣಿಕೆಯಲ್ಲಿ ಕಾಣಬಹುದು.

ಜೀವನದಲ್ಲಿ ಜಿಗುಪ್ಸೆಗೊಂಡು ಬದುಕಿನ ಆಸೆಯನ್ನು ಕಳೆದುಕೊಂಡ ಮಂದಿಗೆ ಆಶಾವಾದದ ಚಿಲುಮೆಯನ್ನು
ಸಿಂಪಡಿಸುತ್ತವೆ. ಮೌಲ್ಯಗಳ ಆಚರಣೆಯ ಜನರಿಗೆ ವೈಚಾರಿಕ ಹಾಗೂ ಪ್ರಗತಿಪರ ಚಿಂತನೆಗಳನ್ನು ಬಿತ್ತುವ ವಿಚಾರವಾದಿಗಳಾಗಿ ಈ ಗಜಲ್ ಗಳು ಮೂಡಿಬಂದಿವೆ.

ಗಜಲ್ ಕ್ಷೇತ್ರದಲ್ಲಿ ವಿಶಿಷ್ಟ ಹಾಗೂ ವಿಭಿನ್ನವಾದ ರೂಪಕಗಳ ಮೂಲಕ ಗುರುತಿಸಿಕೊಂಡಿರುವ ಗಜಲ್ ಕಾರರುಗಳನೇಕ. ಅಂತಹವರ ಸಾಲಿನಲ್ಲಿ ಚಂಪೂ ಅವರು ಸಹ ಒಬ್ಬರು. ಒಂದು ಕಬ್ಬು ಗಾಣಕ್ಕೆ ಸಿಕ್ಕಿ ಚೆನ್ನಾಗಿ ರುಬ್ಬಿಸಿಕೊಂಡು ಸಿಹಿಯಾದ ಕಬ್ಬಿನರಸ ಕೊಡುವಂತೆ ಚಂಪೂವರ ಕೈಗೆ ಸಿಕ್ಕ ವಸ್ತು ಅಮೋಘವಾದ ರೂಪಕ, ಪ್ರತಿಮೆ, ಉಪಮಾನ ಗಳಿಂದ ಅಲಂಕರಿಸಲ್ಪಟ್ಟು ಓದುಗನಿಗೆ ಆಪ್ತವೆನಿಸುವ ಸಾಲುಗಳು ಗಜಲ್ ರೂಪ ಪಡೆದುಕೊಂಡು ಕಾಡಿಸಿಕೊಂಡು ಓದಿಸಿಕೊಳ್ಳುತ್ತವೆ. ಇವರ ಗಜಲ್ ಗಳು ಕೇವಲ ಶಬ್ದಾಲಂಕಾರಗಳ ವೈಭವೀಕರಣ ಮಾತ್ರವಲ್ಲ. ಅಮೋಘವಾದ ಭಾವದೊನಲು, ಅದ್ಭುತವಾದ ರೂಪಕಗಳನ್ನು ಒಳಗೊಂಡು ಓದುಗನ ಮನದಲ್ಲಿ ಅಚ್ಚಾಗಿ ಎಂದು ಮರೆಯದ ಕರ್ಣ ಕೊಳದಲ್ಲಿ ಸಂಗ್ರಹವಾಗಿ ಶಾಶ್ವತವಾದ ರೂಪಕ ಸಾಮ್ರಾಜ್ಯವನ್ನು ಸ್ಥಾಪಿಸುತ್ತದೆ.

ನಮ್ಮ ನಾಡಿನ ಹೆಸರಾಂತ ಕವಿಗಳು ಕನ್ನಡ ಸಾಹಿತ್ಯದಲ್ಲಿ ಬಳಸಿರುವ ರೂಪಕಗಳಿಂದಾಗಿ ಅವರ ಸಾಲುಗಳು ಕಾವ್ಯಮಯವಾಗಿ ಸಿಂಗಾರಗೊಂಡು ಮಧುವಣಗಿತ್ತಿಯಂತೆ ಸಿಂಗಾರಗೊಂಡಿರುವುದನ್ನು ನಾವು ಕಾಣಬಹುದು. ಈ ನಿಟ್ಟಿನಲ್ಲಿ ಚಂಪೂ ಅವರು ರೂಪಕಗಳ ಹಿಮಾದ್ರಿ ಯನೇರುವ ಪ್ರಯತ್ನ ಮಾಡಿ ಗೆದ್ದಿದ್ದಾರೆ ಎನ್ನಬಹುದು. ಇವರು ಹೆಕ್ಕಿ ತರುವ ನವ ನವೀನ ಪದ ಪುಂಜಗಳಿಂದಾಗಿ ಕನ್ನಡ ಶಬ್ದ ಭಂಡಾರದಲ್ಲಿ ನಿಸ್ತೇಜವಾಗಿ ಇರುವ ಅಗಾಧ ಶಬ್ದಸಂಪತ್ತು ಉಪಯೋಗಿಸಲ್ಪಟ್ಟು ಇವು ಮುಖ್ಯವಾಹಿನಿಗೆ ಬಂದು ಸಾಮಾನ್ಯ ಜನರನ್ನು ತಲುಪಲು ಸಾಧ್ಯವಾಗುತ್ತದೆ. ಓದುಗರಿಗೆ ಮತ್ತಷ್ಟು ಹೊಸ ಪದ ಪುಂಟಗಳ ಪರಿಚಯವಾಗುತ್ತದೆ.

ಇವರು ನಾಡಿನ ಹೆಸರಾಂತ ಕವಿ ಶ್ರೇಷ್ಠ ರ ಕಥೆ ಕಾದಂಬರಿಗಳಲ್ಲಿ ಬರುವ ಪಾತ್ರಗಳನ್ನು ತಮ್ಮ ಗಜಲ್ ಗಳಲ್ಲಿ ರಧೀಪ್ ರೂಪದಲ್ಲಿ ಬಳಸಿಕೊಂಡಿರುವುದು
ಅವರ ಅಧ್ಯಯನಶೀಲತೆ ಹಾಗೂ ಅಭಿವ್ಯಕ್ತಿಗೆ ಸಾಕ್ಷಿಯಾಗಿದೆ. ಉದಾಹರಣೆಗೆ ಚೋಮ, ಬಸವ, ಹೀಲಿ, ಹೂವಯ್ಯ,ಶರೀಫ್, ಸುರಗಿ, ನಳಿನಿ, ನಶೀಬ್,ಬೋಧಿ, ಬಸವಾ, ಉರ್ವಿ,ದೇಹಿ, ದೇವಾ, ರುಸ್ತುಂ, ಸುರಭಿ, ಬುಲ್ ಬುಲ್, ಅಹಲ್ಯೆ , ತ್ಯಕ್ತನಾರಿ, ಮುಂತಾದ ಪದಗಳನ್ನು ಗಜಲ್ ಗಳನ್ನು ಮತ್ತಷ್ಟು ಮಗದಷ್ಟು ಸಾಣೆ ಹಿಡಿದಿವೆ.

ಜೊತೆಗೆ ಇವರ ಗಜಲ್ ಗಳಲ್ಲಿ ಅನ್ಯ ಭಾಷೆಯ ಪದಗಳ ಅರ್ಥವನ್ನು ಕಾಣಬಹುದು. ಓದುಗರಿಗೆ ಗೊಂದಲ ಮೂಡದಂತೆ ಎಚ್ಚರವಹಿಸುವ ಗಜಲ್ ಕಾರರು ಅಪರಿಚಿತ ಪದಗಳ ಅರ್ಥವನ್ನು ವಿವರಿಸಿದ್ದಾರೆ. ದೇಶಿಯ ಸೊಗಡಿನಲ್ಲಿ ಮೂಡಿಬಂದ ಅವರ ಗಜಲ್ ಗಳು ಓದುಗ ಪ್ರಭುಗಳನ್ನು ತಮ್ಮೆಡೆಗೆ ಆಕರ್ಷಿಸುತ್ತವೆ.

ಕವಿಯ ಸಾಹಿತ್ಯದ ಹೋರಾಟವು ಬಂಡಾಯವೆ ಆಗಿದ್ದರು ಎಲ್ಲೂ ಅಹಿಂಸೆಗೆ ಪ್ರೇರಣೆ ನೀಡದಂತೆ ಕ್ರೌರ್ಯ ಮೆರೆಯದಂತೆ ತಮ್ಮ ಹರಿತವಾದ ಲೇಖನಿಯ ಮೂಲಕ ಮಾರ್ಮಿಕವಾಗಿ ಛಡಿಯೇಟು ಬೀಸುತ್ತ ಸಾತ್ವಿಕವಾದ ಹಾಗೂ ಸೈದ್ಧಾಂತಿಕವಾದ ಪಥದಲ್ಲಿ ಸಾಗಿರುವುದು ಕವಿಯ ಸಾಮರಸ್ಯದ ನಡೆ ಹಾಗೂ ಪ್ರೌಢಿಮೆಗೆ ಹಿಡಿದ ಕೈಗನ್ನಡಿಯಾಗಿದೆ.

ಚಂಪೂರವರು ತಮ್ಮ ಸಾಹಿತ್ಯದಲ್ಲಿ ಧಮನಿತರ ಪರವಾಗಿ ಮಾತನಾಡುವಾಗ, ಉಳ್ಳವರ ಹುನ್ನಾರವನ್ನು ಬೆಳಕಿಗೆ ತರುವಲ್ಲಿ, ನಿರ್ಭಯದ ಹೆಜ್ಜೆಯಿಟ್ಟು, ನಿರ್ಧಾಕ್ಷಿಣ್ಯವಾಗಿ ಪ್ರತಿಭಟಿಸುವ ಪರಿ ಎಲ್ಲರಿಗೂ ಆಪ್ತವಾಗುತ್ತದೆ. ಇವರು ಸತ್ವಪೂರ್ಣ ಹಾಗೂ ಸತ್ಯಪೂರ್ಣ ಗಜಲ್ ಸಾಹಿತ್ಯ ಕೃಷಿಯ ಮೂಲಕ ತಮ್ಮದೇ ಆದ ವಿಶಿಷ್ಟವಾದ ಛಾಪು ಮೂಡಿಸುತ್ತಿದ್ದಾರೆ.

ಸಾಹಿತ್ಯ ಪ್ರಕಾರ ಯಾವುದಾದರೂ ಅವುಗಳ ಪರಮಾರ್ಥ ಗುರಿಯೆಂದರೆ ಓದುಗನಿಗೆ ನ್ಯಾಯ ಒದಗಿಸುವುದು. ಅವನ ಮನಸ್ಸನ್ನು ಸಂತೋಷಪಡಿಸುವುದು. ಓದಿದ ಸಂತೃಪ್ತಿಯನ್ನು ಅವನೆದೆಗೆ ಬಿತ್ತುವುದು. ಬರೆದ ಬರಹದಿಂದ ಕಿಂಚಿತ್ತಾದರೂ ಸಕಾರಾತ್ಮಕ ಬದಲಾವಣೆಯಾದರೆ, ನೊಂದವರಿಗೆ ಬೆಳಕಾದರೆ ಅದು ಗೆದ್ದಂತೆ. ಈ ನಿಟ್ಟಿನಲ್ಲಿ ಅವರ ಪಯಣ ಆಶಾದಾಯಕವಾಗಿದೆ.

ಇಲ್ಲಿ ಗಜಲ್ ಕಾರರು ತಮ್ಮ ಬದುಕಿನ ಕೆಲವು ಅನುಭವಗಳು, ತಾವು ಕಂಡಿದ್ದ ಘಟನೆಗಳನ್ನು, ನೋಡಿದ ದೃಶ್ಯಾವಳನ್ನು ಗಜಲ್ ರೂಪದಲ್ಲಿ ಭಟ್ಟಿ ಇಳಿಸಿದ್ದಾರೆ. ಜೊತೆಗೆ ಅವುಗಳ ಪರಿಹಾರದ ದಾರಿಯನ್ನು ಕೂಡ ಅವರೆ ತೋರುತ್ತಾ ಸಾಗಿದ್ದಾರೆ. ಇದನ್ನು ಅರ್ಥೈಸಿಕೊಂಡು ಸರಿಯಾದ ಮಾರ್ಗ ದಲ್ಲಿ ನಡೆಯಬೇಕಾಗಿರುವುದು ಫಲಾನುಭವಿಗಳ ಜವಾಬ್ದಾರಿಯಾಗಿದೆ. ನೀರಿನಲ್ಲಿ ಮುಳುಗುವವನಿಗೆ ಸಣ್ಣ ಹುಲ್ಲು ಕಡ್ಡಿಯೂ ಕೂಡ ಆಸರೆಯಾಗಬಹುದು ಎಂಬ ಅನುಭವ ಜನ್ಯ ನುಡಿಯು ಇವರ ಬರಹಗಳಿಗೆ ಸೂಕ್ತವಾಗಿ ಹೊಂದುತ್ತದೆ. ಕಾರಣ ನೋವಿನಲ್ಲಿ ಇರುವವರಿಗೆ ಇವರ ಸಂದೇಶಗಳು, ಆಶಯಗಳು, ಬದುಕುವ ಭರವಸೆಯನ್ನು ತುಂಬಿ, ಜೀವನವನ್ನು ಅಪ್ಪಿ ಒಪ್ಪುವಂತೆ ಮಾಡುತ್ತದೆ.

ಚರ್ಮದ ಮಕ್ಮಲ್, ಶೋಕದ ಹಳ್ಳಿಗಳು, ಬೂದು ಬಕದಂತೆ, ಹರಿದ ಹಚ್ಚಡ, ಬಣ್ಣದ ಬುರ್ಲಿ, ಚಕ್ರವಾಕ ರಾಗ ,ಎರಡು ತಲೆ ಗಂಡಬೇರುಂಡ, ಜರಡಿ ಆಡಿಸುವ ಹಂಸ, ಕತ್ತಲೆಯ ನಿಗೂಢ ಬಲೆ,ಕಾಡುವ ಗ್ರಹಣ, ರಕ್ತ ಹೀರುವ ವ್ಯಾಗ್ರ, ಪರಾಕ ಬುಡುಬುಡಿಕೆ, ಹೊಂಚಿನ ಹಂಚು, ಬೆನ್ನಿಗೆ ಬಾಕು, ಪರಾಕ್ ದ ಬಾಯಿಗೆ, ಗಾಂಧಾರಿ ಸಂತತಿ, ಕಣದ ಕುಯಿಲು, ಕುಳಿಬಿದ್ದ ಹಿಮ್ಮಡಿ, ಧರ್ಮದ ಕಿಲುಬು, ಕೀವಾದ ಕಣ್ಣೀರಿಗೆ, ಪಹರೆ ಪಂಜರ, ರಕ್ತದ ಪಾರಿವಾಳ ,ಸೊಗಡಿನ ಗೋಣು, ನಿಶಾಚರ ನೆರಳು,ನಂಜಿನ ಎದೆ, ಕೊರೆವ ಕಂದಕ, ಹಿಲಾಲಾದ ಕಾಡಿಗೆ, ಕಿಚ್ಚು
ಕುಹಕದ ಸಂತೆ, ಬಿಕನಾಸಿ ಬದುಕು, ಉಪಕಾರದ ಅರ್ಜಿ, ಸಾವಿನ ಮಜೂರಿ, ಹೆಪ್ಪಿಟ್ಟ ಹಾಲು ಗನಸಿಗೆ, ಬೆನ್ನಿಗಂಟಿದ ದಾರಿದ್ರ, ಕರಿನರೆ ಸುಕ್ಕುಗಳು, ಇಂತಹ ಅದ್ಭುತವಾದಂತಹ ರೂಪಕಗಳಿಂದ ಗಜಲ್ ಗಳು ಸಾಹಿತ್ಯ ಲೋಕದಲ್ಲಿ ವಿಜೃಂಭಿಸುವಂತೆ ಮೂಡಿಬಂದಿದೆ.

ಮುಗಿಲು ಪಲ್ಲಂಗದಲ್ಲಿ ಮಲಗಿದವರಿಗೆ ಕೈ ದಿಂಬು ಇಟ್ಟವರು ನನ್ನವರು| ಚಂದ್ರನೆಂಬ ಗಂಗಾಳದಲ್ಲಿ ಕೈಗಳು ಅನ್ನವನ್ನು ಹುಡುಕುತ್ತಿವೆ ಚೋಮ॥

ಈ ಮಕ್ತಾದ ಮಿಸ್ರಾ ಎ ಸಾನಿ ಯಲ್ಲಿ ಚಂದ್ರ ಎಂಬ ತಖಲ್ಲುಸ್ ಕಾಣಬಹುದು.ಚೋಮ ಎಂಬ ರಧೀಪ್ ಬಡತನದ ಪ್ರತೀಕ, ದುಡಿತ ವರ್ಗದ ಸಂಕೇತವಾಗಿ ಮೂಡಿಬಂದಿದ್ದು, ಗಜಲ್ ನ ಆಶಯವನ್ನು ಪ್ರತಿನಿಧಿಸುವ ಜೀವಂತಿಕೆಯ ಪಾತ್ರವಾಗಿದೆ. ಇಲ್ಲಿ ಜೀವನ ನಿರ್ವಹಣೆಯ ಹೋರಾಟದಲ್ಲಿ ಎದುರಾಗುವ ಬವಣೆಗಳು, ಕಷ್ಟಕೋಟಲೆಗಳು, ಜಂಜಡಗಳನ್ನು, ಗಜಲ್ ಕಾರರು ಮನಮಿಡಿಯುವಂತೆ ಚಿತ್ರಿಸಿದ್ದಾರೆ. ಉಳ್ಳವರ ದರ್ಪವನ್ನು ತರಾಟೆಗೆ ತೆಗೆದುಕೊಳ್ಳುವ ಇವರು ಅವರು ಅನುಭವಿಸುವ ಅಷ್ಟೈಶ್ವರ್ಯಗಳಿಗೂ, ಸುಖದ ಸುಪ್ಪತ್ತಿಗೆ, ಬಡವರ ಬೆವರಿನಿಂದ ಲಭಿಸಿದವೆನ್ನುತ್ತ ಅವರ ಶ್ರೇಯಸ್ಸಿಗೆ, ಸಾಧನೆಗೆ ಕಾರಣೀಭೂತರಾದ ದುಡಿತ ವರ್ಗದವರ ಪರಿಸ್ಥಿತಿಯನ್ನು ಎಳೆಎಳೆಯಾಗಿ ಬಿಡಿಸುವ ಮೂಲಕ ಶ್ರಮಜೀವಿಗಳ ಗಂಗಾಳದಲ್ಲಿ ಅನ್ನವಿಲ್ಲದೆ ತಟ್ಟೆಯಲ್ಲಿ ಕೈ ಹಾಕಿ ಅನ್ನದ ತುತ್ತನ್ನು ಹುಡುಕುತ್ತಿದ್ದಾರೆ ಎನ್ನುವಲ್ಲಿ ಕರುಳು ಹಿಂಡುವ ದೃಶ್ಯ ಕಣ್ಮುಂದೆ ಬಂದು ಹೋಗುತ್ತದೆ.ಬಂದ ಚಂದ್ರನಿಗೆ ಬಹಿಷ್ಕಾರದ ಪಲಕ ತೋರಿಸಿ ಊರಾಚೆ ನಿಲ್ಲಿಸಿದರು|

ಬಂದ ಚಂದ್ರನಿಗೆ ಬಹಿಷ್ಕಾರದ ಪಲಕ ತೋರಿಸಿ ಊರಾಚೆ ನಿಲ್ಲಿಸಿದರು|

ಬಾವಿಯ ಕಪ್ಪೆಯಂತೆ ಶವವಾಗಿ ಬಿದ್ದ ನನ್ನವರ ಕಂಡು ನಗುವುದು ಹಕೀಮ್॥

ಈ ಮಕ್ತಾದ ಮಿಸ್ರಾ ಎ ಊಲಾ ದಲ್ಲಿ ದುಡ್ಡಿನ ಜಮಾನದಲ್ಲಿ ಬಡವರ ಶೋಷಣೆ, ಜಾತಿ ಮತಗಳ ಮೇಲಾಟ, ಜೀತಪದ್ಧತಿಯ ಕ್ರೌರ್ಯದ ಅನಾವರಣ ಕಾಣಬಹುದು. ತನ್ನ ಒಡೆಯನಿಗಾಗಿ ದುಡಿದು ನಿತ್ರಾಣನಾಗಿ ಅಸ್ತಿಪಂಜರವಾಗಿದ್ದರೂ, ಕಪ್ಪು ಗುಳೆ ಬೀಳುವಂತೆ ಬಾಸುಂಡೆ ಏಟುಗಳನ್ನು ತಿಂದರೂ, ಯಜಮಾನನ ಪ್ರೀತಿ ಸ್ನೇಹಗಳಿಗೆ ಪಾತ್ರನಾಗದೇ ಹರಿದ ಹಚ್ಚಡ ಹೊದ್ದು ಬಾಗಿಲಲ್ಲಿ ನಿಲ್ಲುವುದು ತಪ್ಪಿಲ್ಲ. ಜೊತೆಗೆ ಮಾಡದ ತಪ್ಪಿಗಾಗಿ ಊರಿನ ಸಂಪರ್ಕದಿಂದ ದೂರ ಉಳಿದ ಜನರ ಧೈರ್ಯದ ಬೆನ್ನು ಮೂಳೆ ಮುರಿದರು ಎನ್ನುವ ಆತಂಕದ ಭಾವ ಮೂಡಿಬಂದಿದೆ.

ಮಿಸ್ರಾ ಎ ಸಾನಿ ಯಲ್ಲಿ ತನ್ನವರು ಅಸಹಾಯಕರು ಮತ್ತು ಹೊರಜಗತ್ತಿನ ಪರಿವೆಯೇ ಇಲ್ಲದವರು. ಎಲ್ಲವನ್ನೂ, ಎಲ್ಲರನ್ನು ಸುಲಭವಾಗಿ ನಂಬುವವರು, ಎನ್ನುವ ಮೂಲಕ ಅವರಿಗೆ ಸ್ವಾತಂತ್ರದ ಸಿಹಿ ಇಲ್ಲದೆ ಬಾವಿ ಕಪ್ಪೆಗಳಾಗಿ ವೈಚಾರಿಕ ದಾರಿಯಲ್ಲಿ ಚಿಂತಿಸದೆ ಮಾಲಿಕ ಹೇಳಿದ್ದೆಲ್ಲವನ್ನೂ ಸುಲಭವಾಗಿ ನಂಬುವ ಮುಗ್ಧರು ಎನ್ನುವ ಕವಿಯ ಮನದಾಳದ ಮಿಡಿತವನ್ನು ನೋಡಬಹುದು.

ಹೆತ್ತವರು ಕೈತೊಳೆದುಕೊಳ್ಳುವ ಕಾತುರತೆಗೆ ಹರಕೆಯ ಕುರಿ ನಾನು|

ಹೆತ್ತವರು ಕೈತೊಳೆದುಕೊಳ್ಳುವ ಕಾತುರತೆಗೆ ಹರಕೆಯ ಕುರಿ ನಾನು|

ಗಜಲ್ ೫ ರ ೩ ಷೇರ್ ನ ಮೊದಲ ಚರಣದಲ್ಲಿ ನಾವು ಬಡತನದ ಬೇಗೆಯಲ್ಲಿ ನೊಂದು ಬೆಂದ ಬಡ ಕುಟುಂಬದ ಹೆಣ್ಣು ಮಗಳೊಬ್ಬಳ ಮೂಖ ರೋದನವನ್ನು ಕಾಣಬಹುದು. ಹೆಣ್ಣು ಮಗುವಿನ ಜನನ ಬಡವರಿಗೊಂದು ಶಾಪ ಎಂದು ಭಾವಿಸುತ್ತಾರೆ. ಅವರಿಗೆ ಮನೆಗೆಲಸಗಳನ್ನು ಕಲಿಸಿ ಗಂಡನ ಮನೆಗೆ ಸಾಗಿ ಹಾಕಿ ತಮ್ಮ ಮೇಲಿನ ಜವಾಬ್ದಾರಿ ಕಳೆದುಕೊಳ್ಳಲು ಬಯಸುವರೆ ವಿನಃ ಅವರನ್ನು ವಿದ್ಯಾವಂತರನ್ನಾಗಿ ಮಾಡಿ, ಸ್ವಾಭಿಮಾನದ ಜೀವನ ಸ್ವಾತಂತ್ರ್ಯದ ಬದುಕು ಕಟ್ಟಿಕೊಡಲು ಆಶಿಸುವುದಿಲ್ಲ.

ಹೆಣ್ಣಿನ ಸ್ಥಾನಮಾನ ಉನ್ನತೀಕರಿಸಲು ನೆರವು ನೀಡುವುದಿಲ್ಲ ಎನ್ನುವ ಮೂಲಕ ನಮ್ಮ ಸಮಾಜದ ಲಿಂಗ ಅಸಮಾನತೆ ವಿರುದ್ಧ ಕಿಡಿಕಾರಿದ್ದಾರೆ. ಹೆಣ್ಣು ಮಗಳು ಮನೆಯಲ್ಲಿದ್ದರೆ ಮಡಿಲಲ್ಲಿ ಕೆಂಡ ಕಟ್ಟಿಕೊಂಡಂತೆ ಎಂದು ಭಾವಿಸಿ ಆದಷ್ಟು ಬೇಗ ಅವಳನ್ನು ಮದುವೆ ಮಾಡಿಕಳಿಸುವ ತಂದೆ ತಾಯಿಗಳ ಕಾತುರಕ್ಕೆ ತಾನು ಹರಕೆಯ ಕುರಿ ಎಂಬ ಸ್ತ್ರೀ ವೇದನೆಯು ಇಡಿ ಮಾನವ ಕುಲವೇ ತಲೆತಗ್ಗಿಸುವಂತೆ ಛಡಿಯೇಟು ನೀಡಿದೆ.

ಕೊರಳ ಬಾಗಿಸಿ ಉತ್ತಿ ಬಿತ್ತಿದ ಮುದಿ ಕರಿಯನ ರಕ್ತ ಬಸಿದಿದ್ದಾರೆ ಮೊನ್ನೆ|
ಕೊರಳ ಬಾಗಿಸಿ ಉತ್ತಿ ಬಿತ್ತಿದ ಮುದಿ ಕರಿಯನ ರಕ್ತ ಬಸಿದಿದ್ದಾರೆ ಮೊನ್ನೆ|
ಉಪಕಾರದ ಅರ್ಜಿ ವಜಾ ಮಾಡಿ ಗವ್ವೆನ್ನುವ ಗಹ್ವರದಲ್ಲಿ ನೂಕುತ್ತಾರೆ॥
ಎಂತಹ ಅದ್ಭುತ ರೂಪಕಗಳ ಜೋಡಣೆ ಇದೆ. ಈ ಗಜಲ್ ವಯಸ್ಸಾದ ನೆಪವೊಡ್ಡಿ ಕಸಾಯಿಖಾನೆಗೆ ಕಳುಹಿಸುವ ಪಶುಗಳ ಕುರಿತಾದ ತಳಮಳ ತಲ್ಲಣಗಳನ್ನು ಕಣ್ಮುಂದೆ ತರುತ್ತದೆ. ಎತ್ತು ಹಸುಗಳು ಗಟ್ಟಿಮುಟ್ಟಾಗಿದ್ದು ದಣಿವರಿಯದೆ ದುಡಿದು ಒಡೆಯನಿಗೆ ಲಾಭ ತಂದುಕೊಡುವವರೆಗೆ ಮಾತ್ರ ಅವುಗಳಿಗೆ ಮೌಲ್ಯ ಹಾಗೂ ಹಾಲು ಕೊಟ್ಟು ಎಲ್ಲರನ್ನು ಪೋಷಣೆ ಮಾಡುತ್ತವೆ. ದುಡಿದು ಅನ್ನ ನೀಡುತ್ತವೆ ಇದೆಲ್ಲದರ ಪರಿವೆ ಇಲ್ಲದೆ ಕಟುಕರಂತೆ ವರ್ತಿಸುತ್ತ ಉಪಕಾರ ಸ್ಮರಣೆ ಮಾಡದೆ ಕ್ರೂರತನ ತೋರುವ ಬಗೆಯನ್ನು ನೋಡಿದಾಗ ಪುಣ್ಯಕೋಟಿಯ ನಾಡಿನಲ್ಲಿ ನಾವು ಜೀವಿಸಿದ್ದೇವೆಯೆ ಎನಿಸದಿರದು.ಗಜಲ್ ಕಾರರು ಗೋವಿಗೆ ಹೇಳುವ ಮಾತುಗಳು ಕಂಗಳನ್ನು ಒದ್ಧೆಯಾಗಿಸುತ್ತವೆ ಎಂಬುದಕ್ಕೆ ಈ ಕೆಳಗಿನ ಸಾಲುಗಳು ಸಾಕ್ಷಿಯಾಗಿದೆ.

ಸಣಕಲು ದೇಹ ಹೊರಬೇಡ ನೀನು ಕಟುಕರ ಕೈಗೆ ಕೊಡುತ್ತಾರೆ|
ಕೆಚ್ಚಲು ಬತ್ತಿಸಬೇಡ ಕೈಮುಗಿದು ಕಸಾಯಿಖಾನೆಗೆ ಬಿಟ್ಟುಬರುತ್ತಾರೆ॥
ಎನ್ನುವಲ್ಲಿ ಗೋವಿನ ಅಸಹಾಯಕತೆ ಹಾಗೂ ಕವಿಯ ಹತಾಶೆಯ ಭಾವವನ್ನು ಗುರುತಿಸಬಹುದು.

ಎರಡು ತಲೆಯ ಗಂಡಬೇರುಂಡಗಳು ನಂಬಿಕೆ ಹೆಗಲಮೇಲೆ ಕುಳಿತಿವೆ|
ಎರಡು ತಲೆಯ ಗಂಡಬೇರುಂಡಗಳು ನಂಬಿಕೆ ಹೆಗಲಮೇಲೆ ಕುಳಿತಿವೆ|
ಬೂದು ಬಕದಂತೆ ಕಪಟ ಧ್ಯಾನ ಮಾಡುವ ಜನರಿಗೆ ಕೈಮುಗಿವೆ ಹೀಲಿ॥

ನಂಬಿಕೆ ಎನ್ನುವುದು ಮಾನವನ ಸಹಜ ಗುಣ. ಆದರೆ ಇಂದು ಅದಕ್ಕೆ ಅರ್ಹರಾದವರ ಸಂಖ್ಯೆ ವಿರಳವಾಗಿದೆ. ನಮ್ಮೆದುರು ವಿಶ್ವಾಸದ ಪ್ರತೀಕಗಳಂತೆ ನಟನೆ ಮಾಡುತ್ತ, ಅದರಿಂದೆ ಭಯಾನಕ ಮುಖವಾಡ ಧರಿಸಿ ಒಳ್ಳೆಯವರ ಸೋಗಿನಲ್ಲಿ ಮುಗ್ಧರ ಬದುಕಿನಲ್ಲಿ ಆಟವಾಡಿ, ಅವರನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡು, ಅಗತ್ಯಗಳ ಪೂರೈಸಿಕೊಳ್ಳುವ ಜನರ ವಿರುದ್ಧ ಕವಿಯ ಮನದಾಳದ ಆಕ್ರೋಶವನ್ನು ಕಾಣಬಹುದು.

ಇಲ್ಲಿ ಸಂದರ್ಭಕ್ಕನುಸಾರವಾಗಿ ನೈಜತೆಯನ್ನು ಮೀರಿಸುವಷ್ಟು ಪ್ರಬಲವಾಗಿ ವರ್ಣಮಯ ವೇಷ ಹಾಕುವ ಜನರ ಬಣ್ಣವನ್ನು ಬಯಲಿಗೆಳೆದಿದ್ದಾರೆ. ಬೆಕ್ಕೊಂದು ಕಪಟ ಧ್ಯಾನ ಮಾಡುತ್ತಿದ್ದಂತೆ ನಟಿಸಿ ಅದರ ಎದುರಿಗೆ ಬಂದ ಜೀವಿಗಳನ್ನು ಹವಣಿಸಿ ಬಕ್ಷಿ ಸುವಂತೆ ಸಜ್ಜನರಂತೆ ನಡೆದುಕೊಳ್ಳುತ್ತ, ಮುಗ್ಧರ ಅರಿವಿಗೆ ಬಾರದಂತೆ ಅವರ ಬೆನ್ನಿಗೆ ಚೂರಿ ಹಾಕುವ ಪರಿಯನ್ನು ಅದ್ಭುತ ರೂಪಕಗಳಲ್ಲಿ ಕಟ್ಟಿಕೊಡುವ ಮೂಲಕ ಅಂತಹ ವ್ಯಕ್ತಿಗಳಿಂದ ಅಂತರ ಕಾಯ್ದುಕೊಳ್ಳುವ ಸಂದೇಶವನ್ನು ನೀಡಿದ್ದಾರೆ.

ಬಸವಿ ನಿತ್ಯ ಸುಮಂಗಲಿ ಬಿರುದು ಹೊತ್ತು ಹರಕೆಯ ಕುರಿ ಆದವಳು|
ಬಸವಿ ನಿತ್ಯ ಸುಮಂಗಲಿ ಬಿರುದು ಹೊತ್ತು ಹರಕೆಯ ಕುರಿ ಆದವಳು|
ಅನ್ನದೇವರನ್ನು ಶಪಿಸಿ ರೆಪ್ಪೆ ಬಡಿಯುವ ನಮ್ಮ ನಡುವಿನ ತ್ಯಕ್ತನಾರಿ॥

ಈ ಮೇಲಿನ ಮತ್ಲಾವು ನಮ್ಮ ಸಮಾಜದ ಅನಿಷ್ಟ ಆಚರಣೆಯಾದ ದೇವದಾಸಿ ಪದ್ಧತಿಯ ವಿರುದ್ಧದ ಅಕ್ಷರ ಪ್ರಹಾರವಾಗಿದೆ. ಧರ್ಮದ ಹೆಸರಿನಲ್ಲಿ ಮುತ್ತು ಕಟ್ಟಿ ಹೆಣ್ಣನ್ನು ಲೈಂಗಿಕವಾಗಿ ಶೋಷಿಸುತ್ತ ಅವಳಲ್ಲ ಆಸೆ ಆಕಾಂಕ್ಷೆಗಳನ್ನು ಬಲಿಕೊಟ್ಟು, ಸ್ವಾತಂತ್ರ್ಯವನ್ನು ಹತ್ತಿಕ್ಕಿ, ಕನಸುಗಳನ್ನು ಧಮನಗೊಳಿಸಿ, ಸಾಂಸಾರಿಕ ಬದುಕಿನ ಹರಣ ಮಾಡಿ ಊರಿನ ಜನರ ಕಾಮತೃಷೆ ಈಡೇರಿಸುವ ಅವಳಿಗೆ ಸುಮಂಗಲಿ ಪಟ್ಟಕಟ್ಟಿ ಹರಕೆಯ ಕುರಿಯಾಗಿಸಿ ಅವಳ ಭಾವನೆಗಳೊಡನೆ ಆಟವಾಡುವ ಆಚರಣೆಗೆ ಗಜಲ್ ಕಾರರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಹಸಿವನ್ನು ಒಡಲೊಳಗೆ ಇಟ್ಟು ಅದರ ಈಡೇರಿಕೆಗಾಗಿ ತನ್ನತನವನ್ನು ಬಲಿ ಕೊಡಬೇಕಾಗಿ ಬರುವ ಪರಿಸ್ಥಿತಿಗಾಗಿ ಅನ್ನ ದೇವರನ್ನು ಶಪಿಸುತ್ತ ಕಣ್ಣೀರಧಾರೆ ಹರಿಸುವಳು ಈ ತ್ಯಕ್ತನಾರಿ ಎನ್ನುವ ಮೂಲಕ ಬಸವಿಯ ಮಡುಗಟ್ಟಿದ ನೋವನ್ನು ಚಿತ್ರಿಸಿದ್ದಾರೆ. ಇದು ಸಾಮಾಜಿಕ ವ್ಯವಸ್ಥೆಯ ವಿರುದ್ಧದ ಕವಿಯ ಅಕ್ರೋಶವಾಗಿದೆ. ದೇವದಾಸಿ ಪದ್ಧತಿ ನಿಷೇಧ ಕಾಯ್ದೆ ಹಾಗೂ ಪುನರ್ವಸತಿ ಯೋಜನೆಗಳು ಇದ್ದರೂ ತೆರೆಮರೆಯಲ್ಲಿ ಇನ್ನು ಈ ಆಚರಣೆ ಜೀವಂತವಾಗಿರುವುದಕ್ಕೆ ಕವಿ ಭಾವ ದುಃಖಿಸುತ್ತದೆ.

ಬೇರೂರಿದ ಬೇಧದ ಹಸಿ ಬೇರುಗಳ ಕಂಡು ಮಮ್ಮಲ ಮರುಗಿದವನೆ|
ಬೇರೂರಿದ ಬೇಧದ ಹಸಿ ಬೇರುಗಳ ಕಂಡು ಮಮ್ಮಲ ಮರುಗಿದವನೆ|
ಬೆನ್ನಟ್ಟಿ ಬಂದ ಬೆಂತರಕಕ್ಕೆ ಬೆಳಗುವ ಚಂದ್ರನ ತೋರಿದೆ ನೀ ಬಸವಾ॥

ಈ ಮಕ್ತಾದಲ್ಲಿ ಗಜಲ್ ಕಾರರು ಸಮಾನತೆಯ ಸಮಾಜ ಕಟ್ಟಬಯಸಿದ ಸಂತನ ಕುರಿತಾಗಿ ಹೇಳಿದ್ದಾರೆ. 12ನೇ ಶತಮಾನದಲ್ಲಿಯೇ ಅಸಮಾನತೆಯ ವಿರುದ್ಧ ಆಕ್ರೋಶಗೊಂಡ ಬಸವನನ್ನು ಉಲ್ಲೇಖಿಸುತ್ತ, ಶತಮಾನಗಳಿಂದ ಬೇರೂರಿದ್ದ ಜಾತಿವ್ಯವಸ್ಥೆಯ ವಿರುದ್ಧ ಸಿಡಿದೆದ್ದು, ಅಂತರ್ಜಾತಿಯ ವಿವಾಹ, ಇಷ್ಟ ಲಿಂಗಧಾರಣೆ ಮಾಡಿಸುವ ಮೂಲಕ ಸಮಾಜದ ಅಸಮಾನತೆಯನ್ನು ತೊಳೆಯಲು ಪ್ರಥಮ ಹೆಜ್ಜೆ ಇಟ್ಟವನು ಬಸವ. ಬೆನ್ನಟ್ಟಿ ಬರುತ್ತಿದ್ದ ಜಾತಿಯೆಂಬ ಬೆಂತರಕ್ಕೆ ಬೆಳಗುವ ಚಂದ್ರನ ತೋರಿಸಿದಿರಿ ಎನ್ನುವ ಮೂಲಕ ಜಾತಿಯ ಜೋಳಿಗೆಯಲ್ಲಿ ಸಿಲುಕಿ, ಮತ ಬೇಧಗಳ ಕುಲುಮೆಯಲ್ಲಿ ಬೆಂದು ಬಳಲುತ್ತಿರುವ ಜನರನ್ನು ಅಲ್ಲಿಂದ ಹೊರತರಲು ಊರುಕೇರಿಗಳ ಸಂಗಮದ ರಣಕಹಳೆಯನ್ನು ಮುಳುಗಿಸಿದ ಪರಿಯನ್ನು ಅದ್ಭುತ ಭಾವದೊನಲಿನಲಿ ನಿರೂಪಿಸಿದ್ದಾರೆ.

ವ್ಯಥೆಯಿಂದ ತೇಲಿಹೋದ ಕರ್ಣನಂತಾದ ನಾವು ಬಿಳಿ ಹೂಗಳು|
ವ್ಯಥೆಯಿಂದ ತೇಲಿಹೋದ ಕರ್ಣನಂತಾದ ನಾವು ಬಿಳಿ ಹೂಗಳು|
ಹೆಣ್ಣೆಂದು ಕೂಡಿಕೆಗೆ ಅಂಜಿ ತಿಪ್ಪೆಗುಂಡಿಗೆಸೆದ ನಾವು ಬೀದಿ ಹೂಗಳು॥

ಹೆಣ್ಣು ಜಗತ್ತಿನ ಸೃಷ್ಟಿ, ಅವಳೆ ಪ್ರಕೃತಿ, ಆದರೆ ಅವಳ ವಿರುದ್ಧ ವಿಕೃತಿ ಮೆರೆಯುತ್ತಿರುವ ಕಥೆ, ವ್ಯಥೆಯನ್ನು ಈ ಮೇಲಿನ ಚರಣದಲ್ಲಿ ಕಾಣಬಹುದು. ಇಂದು ಹೆಣ್ಣು, ಜನ್ಮ ನೀಡುವ ತಾಯಾಗಿ, ಮನೆಬೆಳಗುವ ಮಡದಿಯಾಗಿ, ಎಲ್ಲರಿಗೂ ಬೇಕು. ಆದರೆ ಮಗಳಾಗಿ ಯಾರಿಗೂ ಬೇಡ ಎಂಬ ಪೂರ್ವಾಗ್ರಹ ಪೀಡಿತ ಜನಗಳಿಗೆ ಈ ಮೇಲಿನ ಸಾಲುಗಳು ಕಂಗಳಲ್ಲಿ ನೀರು ಹರಿಸುತ್ತವೆ. ಇಲ್ಲಿ ಗಜಲ್ ಕಾರರು ಬೀದಿಗೆಸೆದ ಹೆಣ್ಣು ಮಗುವಿನ ಮನಸ್ಸಿಗೆ ತಮ್ಮ ಲೇಖನಿಯ ಮೂಲಕ ಜೀವತುಂಬ ಬಯಸಿದ್ದಾರೆ.

ಗಂಡು ಮಗುವಿನ ಮೇಲಿನ ಅತಿಯಾದ ವ್ಯಾಮೋಹ, ವಾಂಛೆಯಿಂದ, ಜನಿಸಿದ ಹೆಣ್ಣು ಮಗುವನ್ನು ಕಸದ ಬುಟ್ಟಿಗೆ ಎಸೆವರು. ಕರ್ಣನನ್ನು ತ್ಯಜಿಸಿದ ಕುಂತಿಯಂತೆ ಎನ್ನುವಲ್ಲಿ ಅನಾಥ ಮಕ್ಕಳ ನೋವಿನ ಅನಾವರಣದ ಅಂತಃಕರಣದ ಸಾಲುಗಳು ಕಟುಕರ ಕಂಗಳಲ್ಲೂ ನೀರು ಹನಿಸುತ್ತವೆ. ಬೀದಿಗೆಸೆದ ಮಕ್ಕಳು ಮಾನವೀಯ ಕಣ್ಣುಗಳಿಗೆ ಬಿದ್ದರೆ ಯಾರಾದರೂ ಅವುಗಳನ್ನು ಸಾಕಿಕೊಂಡು ಜೀವಂತ ಉಳಿಯುತ್ತವೆ. ಇಲ್ಲದಿದ್ದರೆ ಮರಳಿ ಮಣ್ಣಿಗೆ ಸೇರುತ್ತವೆ. ಬದುಕುಳಿದರೆ ಬೀದಿನಾಯಿಗಳ ಜೊತೆಯಲ್ಲಿ ಬೆಳೆಯುತ್ತ ಅಂತಹ ಪಡಿಪಾಟಲು ಬದುಕನ್ನು ನಡೆಸಬೇಕಾಗುತ್ತದೆ ಎನ್ನುವ ಹೃದಯವಿದ್ರಾವಕ ಘಟನೆಯನ್ನು ತಮ್ಮ ಬಾಣದಂತ ಮೊನಚಾದ ಅಕ್ಷರಗಳ ಮೂಲಕ ಬೀರಿದ್ದಾರೆ.

ಸಪ್ಪಳದ ಅರ್ಧ ಕೊಡಪಾನ ತನ್ನ ಮೈ ನಗ್ಗಿ ನುರಿ ಮಾಡಿಕೊಳ್ಳುವುದು|
ಸಪ್ಪಳದ ಅರ್ಧ ಕೊಡಪಾನ ತನ್ನ ಮೈ ನಗ್ಗಿ ನುರಿ ಮಾಡಿಕೊಳ್ಳುವುದು|
ಎಲುವಿಗೆ ಚರ್ಮದ ಮಕ್ಮಲ್ ಹೊಚ್ಚಿರುವುದು ಯಾವ ದೇವರು ಹೇಳು॥

ತುಂಬಿದ ಕೊಡ ಸದ್ದು ಮಾಡದಿರುವುದನ್ನು ಪ್ರಸ್ತಾಪಿಸುತ್ತ ಅರ್ಧ ತುಂಬಿದ ಕೊಡದ ಸಪ್ಪಳ ಜೋರು ಎನ್ನುವ ಮೂಲಕ ಜ್ಞಾನಿ ಮತ್ತು ಅಜ್ಞಾನಿಯ ನಡುವಿನ ವ್ಯತ್ಯಾಸವನ್ನು ಓದುಗರ ಮುಂದಿಡುವ ಜೊತೆಗೆ ದೇವರನ್ನು ತಮ್ಮದೇ ಆದ ಸೈದ್ಧಾಂತಿಕ ಆಯಾಮಗಳಲ್ಲಿ ಪ್ರಶ್ನಿಸುತ್ತಾ ಸಾಗಿದ್ದಾರೆ. ಹಿಂದಿನ ಕಾಲ ಮತ್ತು ಈಗಿನ ಕಾಲದ ಜನರ ಜೀವನ ಯಾನವನ್ನು ವಿಶ್ಲೇಷಿಸುತ್ತ ಆಗೆಲ್ಲ ಧರ್ಮ, ಪಾಪ, ಪುಣ್ಯಗಳಿಗೆ ಹೆದರಿ ಬಹುತೇಕ ಮಂದಿ ನೀತಿ ಮಾರ್ಗದಲ್ಲಿ ನಡೆಯುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಅವೆಲ್ಲಾ ಭೂಗತವಾಗಿ ಮೋಸ, ವಂಚನೆ, ಸುಲಿಗೆ, ಕ್ರೌರ್ಯ, ಕೊಲೆ, ಅನ್ಯಾಯ, ಅನಾಚಾರಗಳು ತಾಂಡವವಾಡುತ್ತಿವೆ.

ಇವೆಲ್ಲವನ್ನು ಕಂಡು ದೇವರಿಗೆ ಸುಮ್ಮನೆ ಇದ್ದಾನೆ. ದೇವರು ಯಾರು ? ಅವನೇಕೆ ಮೌನವಾಗಿ ಕುಳಿತಿದ್ದಾನೆ ? ಎನ್ನುವ ಮೂಲಕ ದೇವರ ಅಸ್ತಿತ್ವವನ್ನೇ ಪ್ರಶ್ನಿಸುತ್ತ ಗಜಲ್ ಕಾರರು ಎದೆಗಾರಿಕೆಯನ್ನು ತೋರಿದ್ದಾರೆ. ಇಲ್ಲಿ ಇವರು ಒಬ್ಬ ವೇದಾಂತಿಯಂತೆ ಭಾಸವಾಗುತ್ತಾರೆ.

ಒಲೆಯ ಮಡಿಕೆಯಲ್ಲಿ ಅನ್ನದ ಅಗಳು ಇಲ್ಲದೆ ಸತ್ತವರು ಅದೆಷ್ಟೋ|
ಒಲೆಯ ಮಡಿಕೆಯಲ್ಲಿ ಅನ್ನದ ಅಗಳು ಇಲ್ಲದೆ ಸತ್ತವರು ಅದೆಷ್ಟೋ|
ಅಸ್ತಿ ಮೂಳೆ ಸಂಗಡ ಮಲಗಿದ ಜೀತದಾಳಿಗೆ ಜೀವವಾದ ಬೆಳಕೆ ನಿಚ್ಚಣಿಕೆ॥

ಈ ಗಜಲ್ ಪುಸ್ತಕದ ಶೀರ್ಷಿಕೆಯನ್ನು ರಧೀಪ್ ಆಗಿ ಹೊಂದಿದ್ದು ಗಜಲ್ ಕಾರರು ಇಲ್ಲಿ ಹಸಿವು, ಬಡತನದ ಪಂಜರದೊಳಗೆ, ಅಸಹಾಯಕನಾಗಿ, ಬಂಧಿಯಾಗಿ, ಅನುಭವಿಸುವ ನರಕಯಾತನೆಯನ್ನು ಮನಕಲಕುವಂತೆ ಬಿಂಬಿಸಿದ್ದಾರೆ.

ಹಗಲಿರುಳು ದುಡಿದು ಬೆವರಲ್ಲಿ ಮೈ ತೊಳೆದುಕೊಂಡರು ಉಣ್ಣಲು ಅನ್ನವಿಲ್ಲದೆ ಗಂಗಳ ತುಕ್ಕು ಹಿಡಿಯುತ್ತಿದೆ॥
ಎನ್ನುವಲ್ಲಿ ಬಡವರ ಬದುಕಿನ ಅನಾವರಣ ಕಾಣಬಹುದು. ಎಷ್ಟೇ ದುಡಿದರೂ ಒಡಲಾಳದ ಹಸಿವನ್ನು ತಣಿಸಲು ಸಾಕಾಗುವಷ್ಟು ಅಕ್ಕಿ ಇಲ್ಲದೆ ಅನ್ನದ ಅಗುಳು ಸಿಗದೆ ಸತ್ತವರು ಬಹುತೇಕರು ಅನ್ನುವುದು ನಮ್ಮ ಸಮಾಜದ ಆರ್ಥಿಕ ಪರಿಸ್ಥಿತಿಯನ್ನು ಎತ್ತಿ ಹಿಡಿಯುತ್ತದೆ. ಹಸಿವು ಎಂಬುದು ಇಂದು ನಿನ್ನೆಯದಲ್ಲ ಶತಮಾನಗಳಿಂದಲೂ ನಮ್ಮನ್ನು ಕಾಡುತ್ತಿರುವ ಪೆಡಂಭೂತ.

ಇದಕ್ಕೆಲ್ಲ ಕಾರಣ ಸ್ವಾತಂತ್ರ್ಯದ ನೆಲೆಗಾಣದೆ ಇತರರ ಜೀತದಾಳುಗಳಾಗಿ ದುಡಿಯುತ್ತಿರುವುದು ಎನ್ನುವ ಮೂಲಕ ಜೀತಪದ್ಧತಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಕವಿ, ದಣಿವರಿಯದೆ ದುಡಿಮೆ ಮಾಡಿ ಸೊರಗಿದ ದೇಹವನ್ನು ಅಸ್ತಿ ಮೂಳೆಯ ತೊಗಲಾಗಿಸಿಕೊಂಡು ಬದುಕುವ ಜನರ ಪರಿಯನ್ನು ಮನ ಕಲಕುವಂತೆ ಬಿಂಬಿಸಿರುವ ಕವಿ ಇವರು ಈ ಚಕ್ರ ವ್ಯೂಹದಿಂದ ಹೊರಬರುವ ಬರವಸೆಯ ಬೆಳಕ ನಿಚ್ಚಣಿಕೆ ರೂಪಿಸಿದ್ದಾರೆ.

ಕೊರಳ ಕುಣಿಕೆಗಳ ಕಥೆ ಹೇಳಲು ಹೆಳವನಾಗಿ ಬಂದು ನಿಂತಿರುವೆ|
ಕೊರಳ ಕುಣಿಕೆಗಳ ಕಥೆ ಹೇಳಲು ಹೆಳವನಾಗಿ ಬಂದು ನಿಂತಿರುವೆ|
ಮುಗಿಲ ಗಲ್ಲಿಗೆ ಚೂರಿ ಇರಿದರೆ ಬಿತ್ತಿದ ಬೀಜ ಕಣ್ಣು ತರುವುದು ಇಲ್ಲ॥

ಈ ಗಜಲ್ ನ ದ್ವಿತೀಯ ಷೇರ್ ನ ಮೊದಲ ಚರಣದಲ್ಲಿ ಗಜಲ್ ಕಾರರು ಸತ್ಯ ಹೇಳುವವನ ಎದೆಗಾರಿಕೆ ಹಾಗೂ ಸತ್ಯದ ದರ್ಶನ ಮಾಡಿಸುವ ಅನಿವಾರ್ಯತೆ ಕುರಿತು ಹೇಳಿದ್ದಾರೆ. ಇತರರ ಸುಖ ಸಂತೋಷಗಳಿಗಾಗಿ, ಆಸೆ ಆಕಾಂಕ್ಷೆಗಳನ್ನು ಬಲಿಕೊಟ್ಟು, ಜೀವನವನ್ನೆಲ್ಲ ಅವರಿಗಾಗಿ ಮುಡುಪಾಗಿಟ್ಟು ತಮ್ಮ ಬದುಕನ್ನು ತೇಯ್ದ ಕಷ್ಟಗಳೆಂಬ ಕುಣಿಕೆಗೆ ಕೊರಳೊಡ್ಡಿದವರ ಕಥೆಯನ್ನು ಹೇಳಲು ಗಜಲ್ ಕಾರರು ಬಂದಿದ್ದಾರೆ. ಆದರೆ ಅವರು ಜೀವನವೆಂಬ ಹೋರಾಟದಲ್ಲಿ ಅಂಗಾಂಗಗಳನ್ನು ಕಳೆದುಕೊಂಡು ಹೇಳವನಾಗಿದ್ದಾರೆ. ಆದರೂ ಧೈರ್ಯ ಎಂಬ ಪಥದಲ್ಲಿ ಚಲಿಸಿ ಕಷ್ಟಗಳಿಗೆ ತಮ್ಮನ್ನು ದೂಡಿದ ಜನರ ಬಗ್ಗೆ ವಿವರಿಸಲು ಹೊರಟಿದ್ದಾರೆ.

ಈ ಷೇರ್ ನ ಎರಡನೆ ಚರಣದಲ್ಲಿ ಮುಗಿಲ ಗಲ್ಲಿಗೆ ಚೂರಿ ಇರಿದರೆ ಮಳೆ ಬಾರದು , ಹಾಗೆಯೇ ಮಳೆಯ ಸ್ಪರ್ಶವಿಲ್ಲದೆ ಬೀಜ ಮೊಳೆತು ಸಸಿ ಕಣ್ಣು ಬಿಡುವುದಾದರೂ ಹೇಗೆ ಸಾಧ್ಯ ಎಂಬ ಕವಿಯ ಹತಾಶೆಯ, ನಿರಾಶಾವಾದವನ್ನು ಕಾಣಬಹುದು. ಅದ್ಭುತ ಹಾಗೂ ಮಾರ್ಮಿಕವಾದ ರೂಪಕಗಳ ಮೂಲಕ ಈ ಷೇರ್ ಇಡಿ ಗಜಲ್ ಗೆ ಜೀವಂತಿಕೆಯ ಸಂಜೀವಿನಿಯಾಗಿ ಮೂಡಿಬಂದಿದೆ.

ಬಿತ್ತಿದ ಬೀಜವನು ನೆಲವೆ ನಂಗುವ ಕಾಲ ಬಂದಿದೆ|
ಬಿತ್ತಿದ ಬೀಜವನು ನೆಲವೆ ನಂಗುವ ಕಾಲ ಬಂದಿದೆ|
ಮಾಯಾಮೃಗದ ಬೆನ್ನೇರಿ ಹೊರಡುವ ಕಾಲ ಬಂದಿದೆ॥

ಈ ಷೇರ್ ಓದಿದ್ದಾಗ ಸಂತ ಶಿಶುನಾಳ ಶರೀಫರ ಕೋಡಗನ ಕೋಳಿ ನುಂಗಿತ್ತ ಗೀತೆ ನೆನಪಾಗುತ್ತದೆ. ಇಲ್ಲಿ ಗಜಲ್ ಕಾರರು ಪರಿವರ್ತನೆಯ ಜಗತ್ತನ್ನು ಕುರಿತು ಆತಂಕವನ್ನು ವ್ಯಕ್ತಪಡಿಸುತ್ತಾರೆ. ಈಗಿನ ದಿನಮಾನದಲ್ಲಿ ಅಸಾಧ್ಯವಾದುದು ಯಾವುದು ಇಲ್ಲ ಎಂಬುದನ್ನು ಮಾರ್ಮಿಕವಾಗಿ ಹೇಳ ಬಯಸಿದ್ದಾರೆ. ಜೊತೆಗೆ ಮಾಯಾಮೃಗ ಎಂದಿಗೂ ಕೈಗೆ ಸಿಗದು. ವಿಪರ್ಯಾಸ ಎಂದರೆ ಆಸೆಯೆಂಬ ಭ್ರಮೆಯೊಳಗೆ ಮುಳುಗಿ ಅದರ ಬೆನ್ನೇರಿ ಹೊರಡುವುದು ಮೂರ್ಖತನದ ಪರಮಾವಧಿ ಎಂಬ ಸಂದೇಶ ನೀಡುತ್ತದೆ.

ಹುದಲಲಿ ಮುಖ ಒದಗಿಸಿ ನಗುವವರ ಹೇಗೆ ನಂಬಲಿ ಹೇಳು|
ಹುದಲಲಿ ಮುಖ ಒದಗಿಸಿ ನಗುವವರ ಹೇಗೆ ನಂಬಲಿ ಹೇಳು|
ದಿಡೀರನೆ ದಾಳಿ ಇಡುವ ಕಪ್ಪುಅಸ್ತ್ರವೊಂದು ಹೊಂಚು ಹಾಕಿದೆ॥

ಈ ಗಜಲ್ ನಾ ಷೇರ್ ನಮಗೆ ಜಾಗೃತಿ ಮೂಡಿಸುವ ರೂಪದಲ್ಲಿ ಕಂಡುಬರುತ್ತದೆ. ನಮ್ಮ ಮುಂದೆ ಸಾಂತ್ವನ ಹೇಳುವ ಜನರು ನಮ್ಮ ಹಿಂದೆ ಕೆಸರಲ್ಲಿ ಮುಖ ಹುದುಗಿಸಿ ನಗುತ್ತಾರೆ. ಅವರನ್ನು ನಂಬುವುದಾದರೂ ಹೇಗೆ, ನಮ್ಮ ವಿಶ್ವಾಸ ಎಂಬ ಸ್ತಂಭದ ಮೇಲೆ ದಾಳಿ ಮಾಡಲು ಅವರು ಬೆನ್ನಹಿಂದೆ ಪಿತೂರಿ ನಡೆಸಿ ಯುದ್ಧಕ್ಕೆ ಸಿದ್ಧರಾಗುತ್ತಾರೆ. ಆದ್ದರಿಂದ ಇಂತಹ ಜನರಿಂದ ನಮ್ಮನ್ನು ನಾವು ಕಾಪಾಡಿಕೊಳ್ಳುವ ಅವಶ್ಯಕತೆಯನ್ನು ಸಾರಿ ಹೇಳುತ್ತಾರೆ.

ಕತ್ತಲೆ ಕಾಡಿಗೆ ಬೆಂಕಿ ಹುಡುಗಿ ಬೆಳಗಿದವರ ನೂರು ಕತೆಗಳಿವೆ|
ಕತ್ತಲೆ ಕಾಡಿಗೆ ಬೆಂಕಿ ಹುಡುಗಿ ಬೆಳಗಿದವರ ನೂರು ಕತೆಗಳಿವೆ|
ಹಾಲು ಗಲ್ಲಿನ ಕನಸ ಗೋಪುರ ನೆಲಕಚ್ಚದು ಚೂರು ಸುಮ್ಮನಿರು॥

ಜೀವನವೆಂಬ ಕಗ್ಗತ್ತಲಲ್ಲಿ ಮುಳುಗಿ ಮಾಯವಾಗುವ ಮುನ್ನ ಬೆಳಕಿನ ಕಿರಣವೊಂದು ಎಲ್ಲಿಂದಲಾದರೂ ಹೊರ ಸೂಸುವುದು. ಹತಾಶರಾಗಿ ನಿರಾಸೆ ಹೊಂದದೆ ಆಶಾವಾದದ ಹೊಂಗನಸನೊತ್ತು ನಾವು ಕಾಯಬೇಕು. ಸಮಸ್ಯೆಯಿಂದ ಹೊರ ಬರಲು ಒಂದು ಸಣ್ಣ ಸಣ್ಣ ಕಿಡಿ ಕಂಡರೂ ಸಾಕು ಅದು ಭರವಸೆಯ ಹಿಮಾದ್ರಿಯಾಗುತ್ತದೆ. ನಾವು ಕಾಣುವ ಕನಸ ಗೋಪುರ ನೆಲಕಚ್ಚದು. ಅದು ಈಡೇರುವವರೆಗೂ ಕಾಯುವ ತಾಳ್ಮೆಯ ತಪಗೈಯುವ ಸಂದೇಶವನ್ನು ಈ ಮೂಲಕ ನೀಡುತ್ತಾರೆ.

ಒಟ್ಟಾರೆ ಹೇಳುವುದಾದರೆ ಗಜಲ್ ಸಾಹಿತ್ಯ ಲೋಕದ ಭರವಸೆಯ ಕವಿಯಾಗಿ ಮತ್ತಷ್ಟು ಮಗದಷ್ಟು ಕೃತಿಗಳು ಶ್ರೀಯುತರಿಂದ ಬರಲಿ ಎಂದು ಹಾರೈಸುತ್ತಾ ಅವರಿಗೆ ಅಭಿನಂದನೆಗಳನ್ನು ಹೇಳುತ್ತ ನನ್ನ ಬರಹಕ್ಕೆ ವಿರಾಮ ನೀಡುತ್ತಿದ್ದೇನೆ.

‍ಲೇಖಕರು Admin

January 2, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: