ಅಣ್ಣನ ಮುಗ್ಧತೆ
ನಾ ದಾಮೋದರ ಶೆಟ್ಟಿ
ಇಪ್ಪತ್ತೈದು ವರ್ಷಗಳ ಹಿಂದೆ. ನಾಗಾಭರಣ ಮಂಗಳೂರಿನ ಸಸಿಹಿತ್ಲಿನಲ್ಲಿ ಸಾಗರದೀಪ ಸಿನಿಮಾ ಮಾಡುತ್ತಿದ್ದರು. ಮುಂಜಾನೆ, ಸ್ಪಾಟಿಗೆ ಬರುವಂತೆ ಭರಣರ ಫೋನು. ಹೋದರೆ, ನನ್ನ ಬಟ್ಟೆ ತೆಗೆಯಿಸಿ ‘ ಬಬ್ಬರ್ಯ’ನ ವೇಷತೊಡಿಸಿ ಪೂಜೆಯ ಗುಡಿಯ ಎದುರು ನಿಲ್ಲಿಸಿದರು. ಇನ್ನೊಂದು ಕಡೆಯಿಂದ ಆ ಸಿನಿಮಾದ ಹೀರೋ ರಾಘವೇಂದ್ರ ರಾಜಕುಮಾರ್ ಬಂದು ನಿಂತರು. ಅಷ್ಟರಲ್ಲಿ ಬಂತೊಂದು ಕಾರು: ಡಾ.ರಾಜಕುಮಾರ್ ಕೆಳಗಿಳಿದರು.
ಬಂದವರೇ ಗುಡಿಯ ಬಳಿನಿಂತ ನನಗೆ ಕೈಮುಗಿದರು! ನಾನು ನಡುಗಿಹೋದೆ. ಅವರು ನನ್ನನ್ನು ನಿಜವಾದ ಬಬ್ಬರ್ಯ ಎಂದುಕೊಂಡಿದ್ದರು. ಕೊನೆಗೂ ಧೈರ್ಯಮಾಡಿ, “ನಾನು ಬಬ್ಬರ್ಯ ಅಲ್ಲ ಸರ್, ವೇಷ ಹಾಕ್ಕಿದ್ದು” ಎಂದೆ. ಅವರು ಮತ್ತೊಮ್ಮೆ ಕೇಳಿದರು. ನಾನು ‘ವೇಷ’… ‘ವೇಷ’… ಎಂದೆ.
“ಪರವಾಗಿಲ್ಲ. ಚೆನ್ನಾಗಿ ಕಾಣಿಸ್ತೀರಾ!” ಎನ್ನುತ್ತಾ ಕೈ ಚಾಚಿದರು. ವೇಷಾರ್ಥವಾಗಿ ಹಿಡಿದುಕೊಂಡಿದ್ದ ತಟ್ಟೆಯಿಂದ ಅವರು ಕುಂಕುಮಪ್ರಸಾದ ಕೇಳಿದ್ದರು. ನಿಜವಾಗಿಯೂ ನನ್ನ ಮೈ ನಡುಗುತ್ತಿತ್ತು.(ಆವೇಶ ಬಂದ ಬಬ್ಬರ್ಯನೂ ನಡುಗುತ್ತಲೇ ಭಕ್ತರಿಗೆ ಪ್ರಸಾದ ಕೊಡುವುದು.)
ಭಕ್ತಿಯಿಂದ ಪ್ರಸಾದ ಸ್ವೀಕರಿಸಿ ಒಳ್ಳೇದಾಗಲಪ್ಪಾ ಎಂದು ಹರಸಿ ಮುನ್ನಡೆದರು.
ಅಣ್ಣನ ಮುಗ್ಧತೆಗೆ ನಾನು ಮುದುಡಿಹೋದೆ.
ಸಕತ್ತಾಗಿದೆ ಅನುಭವ