— ಮೆಹಬೂಬ್ ಮಠದ
ನೆಲದಗಲದ ಬೇರು
ಅಚ್ಚಗುಂಡು
ಬೆಚ್ಚಗ ಮಲಗ
ವಯಸ್ಸಿನಾಗ
ಅಕ್ಕಿ ಕಾಳು
ಕಂಡಿ
ಹೂವ ಒಣಗಿ
ಹಣ್ಣು ಮೆತ್ತಗಾಗ
ಮೊದಲು
ಕುಡಗೋಲು
ಕುರ್ಚಗಿ ಜತಿ
ಮಾತಾಡಿದಿ
ಉರುಸು
ಜಾತ್ರಿಗಿ
ಬೆನ್ನು ಮಾಡಿ
ಸಿಂಬಿ
ಕಟಗೋಂತ ನಿಂತಿ
ಬಾಯಿ ಸತ್ತವನ
ಮನಿ ಉಳ್ಸಾಕ
ಬಾಯ್ತುಂಬ
ಬಯ್ಗಳ ಕಲ್ತಿ
ಉದಾಗಳಿವಿ
ಕೊಡ್ಲಿಕಾವು
ಮೈಮ್ಯಾಲ ಕುಣುದ್ರು
ನಕ್ಕಂತ ಬುತ್ತಿ
ಕಟ್ಚಿದಿ
ಮೈಲುಗಟ್ಟಲೆ
ನಡ್ದು ಹೊಲಾ
ಮುಟ್ದಾಕಿ
ಸಂತಿ ಚೀಲ ಹಿಡಿಯಾಕ
ಹೆದರೀದಿ
ಎದಿಯೊಳಗ
ಕನಸುಗಳ
ಸುಡಗಾಡು
ಸೆರಗಿನ ತುದಿಯಾಗ
ಸಾಗರ
ಇಟುಕೊಂಡಿ
ಹುಗ್ಗಿತುಪ್ಪ
ಸಿಕ್ಕೈತಂತ
ರೊಟ್ಟಿ ಹಿಂಡಿ
ಮರಿಬಾರ್ದು
ಅಂದಿ
ಬೇವಿನಗಿಡದ
ನೆಳ್ಳಾಗ
ಮಾವಿನಣ್ಣು
ತಿನ್ಸೀದಿ
ಜಡ್ಡುಗಳೆಲ್ಲ
ಅರಿಷಿಣ
ಪುಡಿಯಲ್ಲೆ
ತೊಳದಿ
ಇರದೊರಳಗ
ತುಂಡು ರೊಟ್ಟಿ
ಬಗಸಿ ನೀರು
ಹಂಚಕೊಂಡಿ
ಬಿಟ್ಟವರ ಹಿಡಕೊಂಡು
ತುಳದವರ ಹೊತಕೊಂಡು
ಕಳ್ಳಿಗೆ ನಾಚ್ಗಿಲ್ಲಂತ
ತೋರ್ಸೀದಿ
ಮಾಡು
ಮುಟ್ಟುವ
ಕ್ವಾಲಿಗಳ
ಹಡೆವಾಕಿ
ನೀನು
ನೆಲದಗಲದ
ಬೇರು






ಬಹಳ ಚೆನ್ನಾಗಿದೆ
ಪ್ರತಿಭಾ ನಂದಕುಮಾರ್
ನಮಸ್ಕಾರ ಮೇಡಮ್,
ನಿಮಗೆ ಈ ಕವಿತೆ ಇಷ್ಟವಾಗಿದೆ ಎಂದರೆ ಇದು ನನಗೆ ಸಿಕ್ಕ ಅತಿ ದೊಡ್ಡ ಗೌರವ ಎಂದು ಹೆಮ್ಮೆ ಪಡುತ್ತೇನೆ. ನಿಮ್ಮ ಕೆಂಡದುಂಡೆಯಂಥ ಕವಿತೆಗಳನ್ನು ಓದಿ ಪ್ರಭಾವಿತರಾದವರಲ್ಲಿ ನಾನೂ ಒಬ್ಬ. ನಮ್ಮ ನೆಲದ ಮಹತ್ವದ ಕವಿ ಆದ ನಿಮಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು.
– ಮೆಹಬೂಬ್ ಮಠದ
*’ಅವಧಿ’ ಯಲ್ಲಿ ಪ್ರಕಟವಾಗಿದ್ದಕ್ಕೆ ಈ ಕವಿತೆ ಹೆಚ್ಚು ಜನರನ್ನು ತಲುಪುತ್ತಿದೆ. ನಿಮ್ಮ ‘ತಾಯಿ ಪ್ರೀತಿ’ ಗಾಗಿ ನಿಮಗೂ ಕೂಡ ಕೃತಜ್ಞತೆಗಳು ಸರ್.*
*- ಮೆಹಬೂಬ್ ಮಠದ*