ಮಹಾಂತೇಶ ನವಲಕಲ್
೧
ನೀನು ಸರಿದ ಅಕ್ಷರಗಳೆಲ್ಲ ಮಂತ್ರಬೀಜಗಳಾಗಿ; ಅಂಬೇವಾಡಿಯ ಫಲವತ್ತಾದ ಭೂಮಿಯಲಿ ಭೀಮಬಾಬನ ಬರುವಿಕೆಗೆ ಸುಪ್ರಭಾತವಾಡಿದವು
೨
ಕತ್ತಲು ತುಂಬಿದ ಆ ಓಣಿಗಳಲಿ
ನಿನ್ನ ದಾರಿಯೇ ನಿನಗೆ ಕಾಣದಾದಾಗ
ಆ ಬದುಕಿದ್ದ ಸತ್ತ ಮನುಷ್ಯರ ತಿಥಿಗೆ ಅಜ್ಞಾನದ ಕಟ್ಟಿಗೆಗಳು ಉರಿದುರಿದು ದಹ ದಹಿಸಿ ಉರಿದು ದಾರಿ ದೀಪಗಳಾದವು
೩
ನೀ ಕಲಿಸ ಹೊರಟ
ಆ ದಾರಿಗೆ ಬಿದ್ದ ಗಾಜಿನ ಚೂರುಗಳೆಲ್ಲ ತುಳಿದಷ್ಟು ರಕ್ತ ಸಿಕ್ತ ಹನಿಗಳಾಗಲಿಲ್ಲ ಕ್ರಾಂತಿಯ ಮೊಳಕೆಗಳಾದವು
೪
ಆ ಓಣಿಯ ನಿನ್ನ ಪ್ರವೇಶಕೆ ಅಂಜಿ ಕಟ್ಟಿದ
ಸಾವಿರಾರು ವರ್ಷಗಳ ಸರಪಳಿಗಳು ಇನ್ನೂ ಅವರನು ಬಿಗಿದಪ್ಪಿದವು
೫
ಕಲಿಸಿದ ಪಾಠಗಳ ಓನಾಮಕೆ
ಮತ್ತೆ ಅದೆ ಸಾವಿರಾರು ವರ್ಷಗಳ ಸರಪಳಿ ಠಳ್ ಠಳ್ ಎಂದು ಬಿರುಕುಗೊಂಡವು
೬
ಆ ಓಣಿಗೆ ಹೋಗಬೇಡವೆಂದು ಎಸೆದ ಬಹುಮಾನಗಳ ಕಲ್ಲುಗಳೆಲ್ಲ
ಒಂದೊಂದು ಮೆಟ್ಟಲುಗಳಾಗಿ
ನಿನ್ನಂತಹ ಅಕ್ಷರದ ಅವ್ವಂದಿರನು ನಿರ್ಮಿಸಿದವು
೭
ಜ್ಯೋತಿಬಾನ ಜ್ಯೋತಿಯೇ
ಕತ್ತಲು ಓಣಿಯ ಮಿಂಚು ಹುಳವೇ
ನೀ ಹುಟ್ಟಿದ ದಿನವೆ ಅಗ್ರಹಾರಕೆ ಮೆಟ್ಟು ಬಿದ್ದಿತ್ತು
ಅಂದೇ ವಿದ್ಯಾ ಸರಸ್ವತಿ ಸಾವನ್ನಪ್ಪಿದಳು
0 ಪ್ರತಿಕ್ರಿಯೆಗಳು