ಅಕ್ಷತಾ ಕೃಷ್ಣಮೂರ್ತಿ
ನೀನು ಈ ಹೊತ್ತಲ್ಲಿ ಅದೇ ಕಡಲ
ದಂಡೆಯ ಬಳಿ ಕುಳಿತು
ಕಾಯುತ್ತಿರುವೆ
ಕಡಲ ಹಕ್ಕಿ
ಗೂಡ ಸೇರುವುದನು
ಅಥವಾ
ಗೂಡ ಬಿಡುವುದನು
ನಾನಿಲ್ಲಿ ಕಾಡಲ್ಲಿ
ಮರಗಳ ನಡುವೆ
ನಿನ್ನ ಹೆಸರಿನ ಮೊದಲಕ್ಷರ
ಹೊತ್ತ ಎಲೆಗಳನ್ನೆ
ಒಟ್ಟುಗೂಡಿಸುತಿರುವೆ
ಯಾರಿಗೂ ಚೂರು
ಖಬರು ಕೊಡದೆ
ನಿನ್ನಿರುವಿನ ಸುಖ
ಕಾಣುತಿರುವೆ
ಕಾಡ ಹಣ್ಣುಗಳ ಚೀಪಿ
ಶಬರಿಯಂತೆ ಕೊಟ್ಟಾಗ
ಮರು ಮಾತಾಡದೆ
ಸೀಬಿದ್ದವನು
ಇಂದು
ಬಿಸಿಲುಕೋಲು ಹಿಡಿದು
ಗರಮಿ ಕಾ ಮಾಹೋಲ್ ಎನ್ನುತ್ತ
ಪಿಟೀಲು ಕುಯ್ಯುತ್ತಿರುವೆ
ಇಲ್ಲಿ ನಾನು
ಸುಮ್ಮಸುಮ್ಮನೆ
ಬಂದಪ್ಪುವ ಚಳಿಯ
ಸಹಿಸಿ
ಕೌದಿ ಹೊದ್ದರೂ
ನೇಯ್ಗೆ ಪರಿಶೀಲಕನಂತೆ
ನೆಪಹೂಡಿ
ಎಲೆಮಳೆಗರೆವ ಕಿತಾಪತಿಗೆ
ಅಗ್ಗಿಷ್ಠಿಕೆ ಮುಂದೆ ಕುಳಿತಿದ್ದೇನೆ
ಸುಡುವ ಬೆಂಕಿ
ನಿನ್ನ ಹೆಸರಿನಲಿ ಉರಿಸಿ
ಅಷ್ಟಕ್ಕೂ ಸಿಟ್ಟಿದೆ
ಎಲೆಗಳ ಬಗೆಗೆ
ಚಿಗುರುವುದು
ಅರಳಿಸುವುದು
ಹೂ ಕಾಯಿ
ಕೆಣಕಿ
ಕಣ್ಣು ಮಿಟುಕಿಸಿ
ಇನ್ನೇನು ಮುಟ್ಟಬೇಕು
ಅಷ್ಟರಲ್ಲಿ ಮಾಯಾ
ಗಾಳಿಯ ಜೊತೆ
ಇನ್ನೆಲ್ಲೋ ಹಾರಿ
ಅದಕೆ ಎಲೆಯ
ತೇಲುವ ಹಂಬಲಕೆ
ಪೂರ್ಣವಿರಾಮವಿಡಲು
ಚಳಿಯ ನಿಘಂಟು
ಓದಲೇಬೇಕಾಗಿದೆ
ಇಳಿಗಾಲದಲ್ಲೂ…
0 ಪ್ರತಿಕ್ರಿಯೆಗಳು