ಅಕ್ಷತಾ ಕೃಷ್ಣಮೂರ್ತಿ
ಚಳಿ ನಿಧಾನ
ಮೆಟ್ಟಿಲಿಳಿಯುತಿದೆ
ಒಂದೊಂದೆ ಚಿಗುರುಗಳ
ದಾಟಿ
ಒಲವು
ಹುಟ್ಟುತಿದೆ
ಒಂದೊಂದೆ
ಭಾವಗಳ ಮೀಟಿ
ಸದ್ದಿಲ್ಲದೆ ಬಂದೆ
ಎಲ್ಲ ಶಬುದಗಳಿಗೆ ಅರ್ಥವಾದೆ
ಪ್ರೀತಿಸುವುದು ಧರ್ಮ ಎಂದೆ
ಆವರಿಸಿದ್ದು
ಹಚ್ಚ ಹಸಿರಿನ ನೆರಳು ಮಾತ್ರ
ಒಲವಿನ ಜೊತೆ
ಅಂಟಿಯೆ ಹುಟ್ಟಿದವು
ಈ ಜಗದಲಿ
ಬಿಸಿಲಿನ ಅಂಚು ಆರಿದ
ದೀಪ
ಉರಿದ ಕಣ್ಣೀರು
ತರಗೆಲೆಗಳ ಕಾಡು
ನೋವಿಡುವ ನಕ್ಷತ್ರಗಳು
ಪ್ರತಿ ಇರುಳಲ್ಲೆ ಹುಟ್ಟಿ
ಬೆಳಗಲ್ಲಿ ಅಡಗುತ್ತದೆ
ಕತ್ತಲೆಯ ಒಡೆಯಲು
ಹುಟ್ಟಲಿಲ್ಲ ಒಂದೂ
ಉಲ್ಕೆ
ಮತ್ತೆ ಮತ್ತೆ ಇರುಳ
ಅಂಗಳದಲ್ಲಿ ಬೀಳುತ್ತದೆ
ಹಠಾತ್ತನೆ ಮನೆ
ಎದುರಿಗಿದ್ದ ಮರದ
ತೆಂಗಿನಕಾಯಿ.
ಋತುಗಳ ಕಾಲ
ಬದಲಾಗುತಿದೆ
ಬಯಕೆಯ ಹಾದಿಯಲಿ
ಹಾದ ನೋವಿನ ದೂರ
ಪ್ರತಿ ಸಂಜೆ ನೆರಳು
ಗಳ ಜೊತೆ ಮುಳುಗಿ ಬಿಡುವ
ಸೂರ್ಯ
ವಿರಹದ ಹೊಸ ಸಾಲಿಗೆ
ಸಾಕ್ಷಿಯಾಗುತಿದೆ
ಚಳಿ ನಿಧಾನ
ಮೆಟ್ಟಿಲಿಳಿಯುತಿದೆ
ಎದ್ದ ಗಾಳಿ
ಬಯಕೆ ಬೇಡಿಕೆಯ
ಮಾತೇ ಆಡುತಿದೆ
0 ಪ್ರತಿಕ್ರಿಯೆಗಳು