ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಂಬೇಡ್ಕರ್ ಸಿಕ್ಕಿದ್ದರು ಮೊನ್ನೆ, ಹೀಗೆ ನಡೆದು ಹೋಗುವಾಗ..

ಬುದ್ಧ ಪೂರ್ಣಿಮೆ ಬೆಳಕಲ್ಲಿ; ಅಂಬೇಡ್ಕರ್

bidaloti ranganath

ಬಿದಲೋಟಿ ರಂಗನಾಥ್

ಅಂಬೇಡ್ಕರ್ ಸಿಕ್ಕಿದ್ದರು ಮೊನ್ನೆ
ಹೀಗೆ ನಡೆದು ಹೋಗುವಾಗ
ಬುದ್ದಪೂರ್ಣಿಮೆಯ ಬೆಳಕಲ್ಲಿ.
ಸೂಟಿಲ್ಲ ಬೂಟಿಲ್ಲ
ಏಕ ಗೌನು ಧರಿಸಿದ್ದರು

ambedkar6“ಎಲ್ಲಿಗೆ ತಾತ ಅಂದೆ”
ಶಾಸ್ತ್ರಿಗಳ ಮಗಳ ಮದುವೆ ಬಂದಿದ್ದೆ
ಹೀಗೆ ಗಾಳಿ ವಿಹಾರಕ್ಕೆ ಬಂದೆ ಅಂದರು.
ಶಾಸ್ತ್ರಿಗಳ ಮನೆ ಒಳಗು ಹೊರಗು
ನಿರ್ಭಯವಾಗಿ ಓಡಾಡಿದಿರ ?

ಯಾಕೋ ಹುಡುಗ ಭಯ,
ಅವರೇ ಕರೆದಿದ್ದಲ್ಲವೆ ? ಮದುವೆಗೆ.
ಜಾತಿ ಸುಟ್ಟು , ತುಳಿದ ಬೂದಿ ಅಂಗಾಲಿಗೆ ತಾಕಿತು
ಅದೇ ಬೂದಿ ವಿಭೂತಿಯಾಗಿ ಧರಿಸಿದ್ದರು
ಜಂಗಮರು ಮದುವೆಯಲ್ಲಿ
ಉಸಿರಾಡುತ್ತಿದೆ ಕುಲಗೊತ್ರ
ಸ್ವ ಜಾತಿಯಲ್ಲು ಇನ್ನು.
‘ಶಾಸ್ತ್ರಿಗಳ ಅಳಿಯ ಒಬ್ಬ ಪಂಚಮ’
ಗೊತ್ತು ನಿನಗೆ ?

ನನಗೆ ಎದೆಯಲ್ಲಿ
ನವಿರು ಭಾವ ಎದ್ದು.
ಅಂಬೇಡ್ಕರರನ್ನು ಅಪ್ಪಿಕೊಂಡೆ
ನನ್ನ ಮನೆಗೆ ಮೊದಲೆ ಬಂದಿದ್ದ ಅಜ್ಜ
ಬರುವ ಮನಸು ಮಾಡಲಿಲ್ಲ.

ಹಾಗೆ ಮುಂದೋಗಲು
ಮುಂದಾದರು ಅಂಬೇಡ್ಕರ್ ಅಜ್ಜ, ಸಣ್ಣ ಕಲ್ಲಿಗೆ ಎಡವಿ
ಕೆರೆದ ಉಂಗುಷ್ಠ ಕಿತ್ತೋಯಿತು
ಮುಖ ನೋಡಿದರು,
ಓಡೋಗಿ ಕೆರ ಹೊಲೆಯುವ ಚೀಲ ತಂದು
ಹೊಲೆಯಲು ಮುಂದಾದೆ,
ಅವರು ನನ್ನ ಚೀಲ ಕಿತ್ತುಕೊಂಡು
ಉಳಿ ರೆಮ್ಕೆಯಿಂದ ಚರ್ಮ ಕೊಯ್ದು
ಉಂಗುಷ್ಠ ಹಾಕಿಕೊಂಡರು. !
ನಾನು ಅವರ ಪಾದಗಳ ಹಿಡಿದು
ಜೋರಾಗಿ ಅತ್ತು ಬಿಟ್ಟೆ.

ಯಾರು ಯಾರಿಗೂ ಕಮ್ಮಿಯಿಲ್ಲ
ಎಂಬಂತೆ ತಲೆನೇವರಿಸಿ
ಹೂ ಮುತ್ತನಿಟ್ಟರು ಹಣೆಗೆ.
ಜನ ನೆರೆದಿದ್ದರು ರಸ್ತೆಯ ತುಂಬಾ
ಅಂದಿನಿಂದಲೂ ನನಗೆ ಚಪ್ಪಲಿ
ಹೊಲೆಯುವ ಕೆಲಸವಿಲ್ಲ.!!
ಅವರವರ ಚಪ್ಪಲಿ ಅವರೆ ಹೊಲೆದುಕೊಳ್ಳುತ್ತಾ
ಬೂಟುಗಳಿಗೆ ಪಾಲಿಶ್ ಹಾಕಿಕೊಳ್ಳುತ್ತಿದ್ದಾರೆ.

ಇಷ್ಟು ದಿನ ರಾಜರೋಷ್ಟವಾಗಿ ಉಸಿರಾಡುತ್ತಿದ್ದ
ಜಾತಿಗೊಂಬೆ, ಕದ್ದು ಮುಚ್ಚಿ ಉಸಿರಾಡುತ್ತಿದೆ
ಭೇದ ಭಾವಗಳ ಗೋಡೆ ಬಿರುಕುಬಿಟ್ಟಿದೆ
‘ಪ್ರತಿಯೊಬ್ಬರ ಮನೆಯಲ್ಲು ಸಂವಿಧಾನವಿರಲಿ ‘ಎಂದು
ಅಂಬೇಡ್ಕರ್ ಬದ್ದ ಬಸವರ ಹೆಜ್ಜೆ ಗುರುತುಗಳು
ಸಾರಿ ಸಾರಿ ಹೇಳುತ್ತಿವೆ. !

‍ಲೇಖಕರು admin

6 December, 2015

1 Comment

  1. ಟಿ.ಕೆ.ಗಂಗಾಧರ ಪತ್ತಾರ.

    ****************************************
    ಕವನ ನಮನ
    ****************************************
    “ಭಾರತ ರತ್ನ”, “ಸಂವಿಧಾನ ಶಿಲ್ಪಿ” ಡಾ.ಬಿ.ಆರ್.ಅಂಬೇಡ್ಕರ್
    ****************************************
    ಭಾರತಾಂಬೆಯ ಧೀರ ಪುತ್ರನೆ
    ಭೀಮ ಕೇಸರಿ ಸಿಡಿಲ ಮರಿ /
    ಬೆವರನೆ ಕುಡಿದು ಅಳುವನು ನುಂಗಿದ
    ದೀನ ದರಿದ್ರರ ಹೃದಯ ಸಿರಿ /1/

    ದಲಿತರ ಬಾಳಿನ ಕತ್ತಲೆ ಕಳೆಯಲು
    ಹೊಮ್ಮಿದ ಕ್ರಾಂತಿಯ ಸೂರ್ಯನ ಕಿರಣವೊ/
    ಜಿಡ್ಡುಗಟ್ಟಿದಾ ವರ್ಣ ವ್ಯವಸ್ಥೆಯ
    ನಡುವೆಯೆ ಸಿಡಿದಾ ಸಿಟ್ಟಿನ ಸ್ಫೋಟವೊ/2/

    ಶೋಷಿತ ಜನರೆದೆ ಸಂಕಟ ದಹಿಸಲು
    ಚಿಮ್ಮಿದ ಸಿಡಿಲಿನ ಜ್ವಾಲಾಮುಖಿಯೊ/
    ಅಂತ್ಯೋದಯಕೆ ಆವಿರ್ಭವಿಸಿದ
    ಮಾನವ ರೂಪದ ಚಿಂತಾಮಣಿಯೊ/3/

    ಅಸ್ಪೃಶ್ಶತೆಯಾ ಪಿಡುಗನು ತೊಡೆಯಲು
    ಧರೆಗವತರಿಸಿದ ವಿಪ್ಲವ ಮೂರ್ತಿ/
    ಬತ್ತಿದ ಕನಸಿನ ಬತ್ತಲೆ ಗುಡಿಲಲಿ
    ಭರವಸೆ ಬಿತ್ತಿದ ಆಶಾ ಜ್ಯೋತಿ/4/

    ಬುದ್ಧ-ಬಸವರ ವಿಕಸಿತ ರೂಪದಿ
    ಇಳೆಯನು ಬೆಳಗಿದ ಶಕ ಪುರುಷ/
    ಮಾನವ ಧರ್ಮದ ಉನ್ನತ ತತ್ವದ
    ಮೌಲ್ಯವ ಬದುಕಿದ ಯುಗಪುರುಷ/5/

    ನರ-ನಾಡಿಗಳನೆ ಬತ್ತಿಯ ಮಾಡುತ
    ತುಂಬಿದೆ ನೆತ್ತರ ತೈಲವನು/
    ಕ್ರಾಂತಿಯ ಕಿಡಿಯಿಂ ಶಾಂತಿಯ ಕುಡಿಯಲಿ
    ಬೆಳಗಿದೆ ಮನುಕುಲ ಹಣತೆಯನು/6/

    ಆದ್ಯರ ನಗ್ನತೆ ವ್ಯಥೆ-ಕಥೆ ಮರೆಯಲು
    ಸೂಟು-ಬೂಟುಗಳ ಶೃಂಗಾರ/
    ಅಹಮಿಕೆಯಿಲ್ಲದ ಆತ್ಮ ಗೌರವದ
    ವ್ಯಕ್ತಿತ್ವದ ಘನ ಗಂಭೀರ/7/

    ಪುಟ-ಪುಟಗಳ ಒಳ ತಿರುಳನು ಅರಿಯುತ
    ಧರ್ಮ ಶಾಸ್ತ್ರಗಳ ಖಂಡಿಸಿದೆ/
    ವೈಜ್ಞಾನಿಕ ಆಧುನಿಕತೆ ಪ್ರಗತಿಯ
    ತತ್ವ ವಿಚಾರವ ಮಂಡಿಸಿದೆ/8/

    ಶತ-ಶತಮಾನದ ಮೈಚಳಿ ಬಿಡಿಸುತ
    ಮೌಢ್ಯತೆ ಮಾರಿಯ ಓಡಿಸಿದೆ/
    ಚಾತುರ್ವರ್ಣದ ಹಿಂಸೆಗೆ ರೇಗಿದೆ
    ಅಮಾನುಷ ಪದ್ಧತಿ ಛೇಡಿಸಿದೆ/9/

    ಸರ್ವ-ಸುಸಮ್ಮತ ಸರ್ವ-ಸಮಂಜಸ
    ಸಂವಿಧಾನವನು ಶಿಲ್ಪಿಸಿದೆ/
    ಲೋಕ ಚರಿತೆಯಲಿ ಮಾನ್ಯತೆ ಗಳಿಸಿದ
    ಮಾದರಿ ಘಟನೆಯ ರೂಪಿಸಿದೆ/10/

    ನಿಖರ ನಿರೂಪಣೆ ಗಹನ ವಿಚಾರದ
    ಕೃತಿ ರತ್ನಗಳನು ವಿರಚಿಸಿದೆ/
    ವಿಶ್ವ ಮಾತೆಯ ಕೀರ್ತಿ ಕಿರೀಟದಿ
    “ಭಾರತ ರತ್ನ”ವು ನೀನಾದೆ/11/

    ಯುಗ ಯುಗ ವ್ಯಥೆಯಲಿ ನಲುಗಿದ ಮುಖದಲಿ
    ಸಂತಸ ಶಾಂತಿಯ ಶ್ರೀಕಾರ/
    ದಲಿತೋದ್ಧಾರದ ನವ ಮನ್ವಂತರ
    ಅಕ್ಷರ ಕ್ರಾಂತಿಯ ಓಂಕಾರ/12/

    ಪದವಿಯ ಬಯಸದ ಪರಹಿತ ಬಯಸಿದ
    ಸೇವೆಯೆ ನಿನ್ನಯ ಪರಮ ಗುರಿ/
    ಮನವೇ ಮಂದಿರ ಅರಿವೇ ದೇವರು
    ಕರ್ಮವೆ ಪೂಜೆಯು ಧರ್ಮ ಸಿರಿ/13/

    ನಗೆಯಲಿ ಹಿಗ್ಗದ ನೋವಲಿ ಕುಗ್ಗದ
    ಸಿಹಿ-ಕಹಿ ಸಮರಸ ಸಾಧಿಸಿದೆ/
    ಅಮೃತ ಶಾಂತಿಯ ನಿಜಪದ ಸಿದ್ಧಿಗೆ
    ಬುದ್ಧನ ಬೆಳಕಿನ ಪಥ ಹಿಡಿದೆ/14/

    ಪವಿತ್ರ ಪಾವನ ನಿನ್ನಯ ಜೀವನ
    ಆದರ್ಶವು ನವ ಪೀಳಿಗೆಗೆ/
    ನಿನ್ನಯ ಕನಸಿನ ಭಾರತ ಬೆಳಗಲಿ
    ಮಾದರಿಯಾಗಲಿ ಮೇದಿನಿಗೆ/15/
    -ಟಿ.ಕೆ.ಗಂಗಾಧರ ಪತ್ತಾರ
    ****************************************

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading