ಅಂಗೋಲಾದ ಬ್ಯಾಂಡ್-ಬಾಜಾ-ಬಾರಾತ್

ಪ್ರಸಾದ್ ನಾಯ್ಕ್

    ”ಎರಡು ಕ್ರೇಟ್ ಬಿಯರ್”

”………”

    ”ಎರಡು ಕ್ರೇಟ್ ಸಾಫ್ಟ್ ಡ್ರಿಂಕ್ಸ್”

”………”

    ”ಒಂದು ಹಾಸಿಗೆ”

”………”

    ”ಹತ್ತು ಪ್ಲಾಸ್ಟಿಕ್ ಕುರ್ಚಿಗಳು”

”………”

    ”ಎರಡು ಮೇಜುಗಳು”

”………”

    ”ಎರಡು ಸೂಟ್”

”………”

    ”ಎರಡು ಸಾವಿರ ಡಾಲರ್ ನಗದು”

    ”ಏನೂ?”

ಅಷ್ಟು ಹೊತ್ತಿನಿಂದ ನಾನು ಮಾತಾಡಿದ್ದು ಆವಾಗಲೇ. ನನ್ನ ಅಂಗೋಲನ್ ಗೆಳೆಯನಾಗಿದ್ದ ರಿಕಾರ್ಡೋ ತನ್ನ ಪಟ್ಟಿಯನ್ನು ತಯಾರಿಸುತ್ತಲೇ ಇದ್ದ. ಮುಂದಿನ ಕೆಲವೇ ದಿನಗಳಲ್ಲಿ ರಿಕಾರ್ಡೋನ ಗೆಳೆಯನೊಬ್ಬನ ಮದುವೆಯು ನಿಗದಿಯಾಗಿತ್ತು. ಹೀಗಾಗಿ ವಧುದಕ್ಷಿಣೆಯಾಗಿ ಕೊಡಬೇಕಾಗಿರುವ ವಸ್ತುಗಳ ಪಟ್ಟಿಯಿದು. ಹತ್ತಿಪ್ಪತ್ತು ಸಾಮಾನುಗಳನ್ನು ನೋಡಿಯೇ ಸುಸ್ತಾಗಿದ್ದ ನನಗೆ ಕೊನೆಗೆ ಹೆಚ್ಚುವರಿಯಾಗಿ ಎರಡು ಸಾವಿರ ಡಾಲರ್ ಗಳ ಬೇಡಿಕೆಯು ಬಂದಾಗ ಬೆಚ್ಚಿಬೀಳುವಂತಾಯಿತು. ”ಮುಗೀತು ಕಥೆ… ಅವನು ಮದುವೆಯಾಗೋದೇನೋ ಬೇಡ, ಬ್ರಹ್ಮಚಾರಿಯಾಗಿಯೇ ಇರು ಅನ್ನು”, ನಗುತ್ತಾ ಅಂದೆ ನಾನು. ನನಗೆ ಗೊತ್ತಿರುವಂತೆ ಇಷ್ಟನ್ನೆಲ್ಲಾ ಸಿದ್ಧಪಡಿಸಿ, ನಂತರ ಸಾಲದ್ದೆಂಬಂತೆ ಎರಡು ಸಾವಿರ ಡಾಲರ್ ದಕ್ಷಿಣೆಯನ್ನೂ ಕೊಟ್ಟು ಆತ ಮದುವೆಯಾಗುವುದು ಸಾಧ್ಯವಿರಲಿಲ್ಲ. ಅಷ್ಟಿದ್ದರಲ್ಲವೇ ಕೊಡುವುದು?

”ಏನಾದರೂ ಮಾಡಿ ಹಣ ಹೊಂದಿಸಬೇಕಂತೆ”, ರಿಕಾರ್ಡೋ ಪಟ್ಟಿಯನ್ನು ಓದುತ್ತಲೇ ನನ್ನತ್ತ ನೋಡದೆ ಉತ್ತರಿಸಿದ. ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಅಂತಾರೆ. ನಾನು ಸುಮ್ಮನೆ ಹೂಂಗುಟ್ಟಿದೆ. ಅಂತೂ ವಿವಾಹವು ಚೆನ್ನಾಗಿಯೇ ಆಯಿತೆಂದು ಕೆಲ ದಿನಗಳಲ್ಲಿ ವರ್ತಮಾನ ಬಂದಿತು.

ವೀಜ್ ನಲ್ಲಿ ಮೊಟ್ಟಮೊದಲ ಬಾರಿಗೆ ನಿಶ್ಚಿತಾರ್ಥದಂತಹ ವಿಧಿಯೊಂದರಲ್ಲಿ ಭಾಗವಹಿಸಿದ ನೆನಪಿದೆ ನನಗೆ. ದುಭಾಷಿಗೆ ಈ ಬಗ್ಗೆ ಮೊದಲೇ ಹೇಳಿ ತತ್ಸಂಬಂಧಿ ಕಾರ್ಯಕ್ರಮಗಳಿದ್ದರೆ ನನ್ನನ್ನು ಕರೆದುಕೊಂಡು ಹೋಗಲೇಬೇಕೆಂದು ಕೇಳಿಕೊಂಡಿದ್ದೆ. ಹಾಕಿದ್ದ ಯೋಜನೆಯಂತೆಯೇ ಮದುವೆಯ ಮನೆಗೆ ಬಂದು ತಲುಪಿದ್ದೂ ಆಯಿತು. ನಾಲ್ಕು ಕಂಬಗಳನ್ನು ನೆಲಕ್ಕೂರಿ ಡೇರೆಯಂತಹ ಬಟ್ಟೆಯನ್ನು ಕಟ್ಟಿ ಮನೆಯ ಪಕ್ಕ ಶಾಮಿಯಾನದಂತಹ ವ್ಯವಸ್ಥೆಯೊಂದನ್ನು ಆಯೋಜಕರು ಮಾಡಿದ್ದರು. ಇನ್ನು ಆಯಕಟ್ಟಿನ ಭಾಗವೊಂದರಲ್ಲಿ ಎದುರುಬದುರಾಗಿರುವಂತೆ ಎರಡು ಸಾಲುಗಳಲ್ಲಿ ಪ್ಲಾಸ್ಟಿಕ್ ಕುರ್ಚಿಗಳನ್ನಿಡಲಾಗಿತ್ತು. ಅಂದಹಾಗೆ ಈ ಶಾಮಿಯಾನ ವ್ಯವಸ್ಥೆಯ ನೆರಳು ಈ ಜಾಗಕ್ಕೆ ಮಾತ್ರ. ಉಳಿದವರಿಗೆ ಕುಳಿತುಕೊಳ್ಳಲು ಅನುಕೂಲವಾಗುವಂತೆ ಹೊರಭಾಗದಲ್ಲಿ ಕುರ್ಚಿಗಳನ್ನು ಇಡಲಾಗಿತ್ತು. ಹೀಗೆ ಬಂದವರು ಎದುರುಬದುರಿನ ಕುರ್ಚಿಗಳಲ್ಲಿ ಕೂತವರು ನಡೆಸುವ ಎಲ್ಲಾ ಚಟುವಟಿಕೆಗಳನ್ನು ನೋಡಲು ಸಾಧ್ಯವಾಗುವಂತಹ ತಕ್ಕಮಟ್ಟಿನ ವ್ಯವಸ್ಥೆಯು ಅದಾಗಿತ್ತು. ಈ ಭಾಗದ ಸಭಿಕರಿಗೆ ನೆರಳಿನ ವಿಲಾಸವಿಲ್ಲ ಎಂಬುದನ್ನು ಬಿಟ್ಟರೆ ಬೇರೆಲ್ಲವೂ ಸರಾಗ.

ಸಮಯವು ಆಗಲೇ ಸಂಜೆಯ ಐದಾಗಿದ್ದರಿಂದ ನೆರಳಿನ ಅಂಥಾ ಅವಶ್ಯಕತೆಯೂ ಇರಲಿಲ್ಲವೆನ್ನಿ. ಹೀಗಾಗಿ ಒಳ್ಳೆಯ ಗಾಳಿಯಾಡುತ್ತಿದ್ದ ಆ ಪರಿಸರದಲ್ಲಿ ಎಲ್ಲರೂ ಆರಾಮಾಗಿಯೇ ಇದ್ದರು. ನನ್ನ ಕಾರಿನಲ್ಲಿ ಎಂದಿನಂತೆ ಬಂದ ನಾನು ದುಭಾಷಿಯೊಂದಿಗೆ ಸಭಿಕರು ಕುಳಿತುಕೊಂಡಿದ್ದ ಜಾಗದತ್ತ ನಡೆದೆ. ನಡೆಯಬೇಕಿದ್ದ ವಿಧಿಯ ಜಾಗದಲ್ಲಿ ಎದುರುಬದುರಾಗಿ ಕುರ್ಚಿಗಳನ್ನಿಟ್ಟಿದ್ದರೂ ಇಬ್ಬರ ಕಡೆಯಿಂದಲೂ ಇನ್ನೂ ಯಾರೂ ಬಂದು ಕೂತಿರಲಿಲ್ಲ. ಬಂದವರೆಲ್ಲಾ ಇವರಿಗಾಗಿಯೇ ಕಾಯುತ್ತಿರಬೇಕು ಎಂದು ಒಳಗೊಳಗೇ ಲೆಕ್ಕಹಾಕಿದೆ ನಾನು. ಬಂದ ಅಷ್ಟೂ ಜನರಲ್ಲಿ ನಾನೊಬ್ಬ ಮಾತ್ರ ವಿದೇಶೀಯನಾಗಿದ್ದರಿಂದ ಎಲ್ಲರೂ ನನ್ನನ್ನೇ ಬಿಟ್ಟಕಣ್ಣುಗಳಿಂದ ನೋಡುತ್ತಿದ್ದರು, ನಾನೊಬ್ಬ ಅನ್ಯಗ್ರಹಜೀವಿಯೋ ಎಂಬಂತೆ! ಪುಣ್ಯಕ್ಕೆ ಒಂದಿಬ್ಬರು ಸ್ವತಃ ಬಂದು ಮಾತನಾಡಿಸಿ ನನ್ನ ಮುಜುಗರವನ್ನೂ ಕಮ್ಮಿ ಮಾಡಿದರು. ಬರಬೇಕಿದ್ದವರು ಅದ್ಯಾವಾಗ ಬಂದು ಆ ಡೇರೆಯ ಕೆಳಗಿನ ಸ್ಥಾನವನ್ನು ತುಂಬಿಸುತ್ತಾರಪ್ಪಾ ಎಂದು ಕಾತರದಿಂದ ಕಾದೆ ನಾನು.

ಅಂತೂ ಸಾಕಷ್ಟು ಹೊತ್ತು ಕಾದ ನಂತರ ಕೆಲ ಬೆರಳೆಣಿಕೆಯ ಮಂದಿ ಬಂದು ಎದುರಿನ ಸಾಲುಗಳಲ್ಲಿ ಕುಳಿತುಕೊಂಡರು. ಕೂತು ಏನೋ ಗುಟ್ಟು ಮಾತಾಡುವವರಂತೆ, ಸಭಿಕರತ್ತಲೂ ನೋಡದೆ ತಮ್ಮತಮ್ಮಲ್ಲಿ ಗುಸುಗುಸು ಮಾತಾಡುತ್ತಲೇ ಹೋದರು. ಇತ್ತ ಕುಳಿತಿದ್ದ ಸಭಿಕರಲ್ಲೂ ಯಾರಿಗೂ ಇದರಲ್ಲಿ ಆಸಕ್ತಿಯಿದ್ದಂತಿರಲಿಲ್ಲ. ಎಲ್ಲರೂ ತಮ್ಮತಮ್ಮಲ್ಲಿ ಹರಟೆಹೊಡೆಯುವುದರಲ್ಲೇ ವ್ಯಸ್ತರು. ಹಾಗೆಯೇ ಹೊಸದಾಗಿ ಬಂದು ಸೇರುತ್ತಿರುವವರನ್ನು ನೋಡುವತ್ತ ಉತ್ಸಾಹ. ನಮ್ಮ ಚಲನಚಿತ್ರ ಪ್ರಶಸ್ತಿಪ್ರದಾನ ಸಮಾರಂಭಗಳಲ್ಲಿ ರೆಡ್ ಕಾರ್ಪೆಟ್ ನಲ್ಲಿ ಹೆಜ್ಜೆ ಹಾಕುತ್ತಾ ಭರ್ಜರಿ ಎಂಟ್ರಿ ಕೊಡುವ ಚಿತ್ರತಾರೆಗಳಂತೆ. ಅಷ್ಟಕ್ಕೂ ಎಲ್ಲರೆದುರು ಕುಳಿತುಕೊಂಡು ತಮ್ಮತಮ್ಮಲ್ಲೇ ಎರಡೂ ಕಡೆಯವರು ಅದೇನು ಗುಟ್ಟು ಮಾತಾಡಿಕೊಳ್ಳುವುದು ಎಂದು ದುಭಾಷಿಯಲ್ಲಿ ಕೌತುಕದಿಂದ ಕೇಳಿದೆ ನಾನು. ”ಚೌಕಾಶಿ ಸಾರ್ ಚೌಕಾಶಿ”, ಎಂದ ಆತ!

ಮನೆಯ ಹೊರಾಂಗಣದಲ್ಲಿ ರಾಶಿ ಹಾಕಿರುವ ಕೆಲ ಸಾಮಾನುಗಳು ನನಗೆ ಕಂಡಿದ್ದೇ ಆಗ. ಒಂದು ಹಾಸಿಗೆ, ಅಂಗೋಲಾದ ಬಿಯರ್ ಆಗಿರುವ ‘ಕೂಕಾ’ದ ಕ್ರೇಟ್ ಗಳು, ಪಾತ್ರೆ-ಪಗಡಿಗಳು, ಒಂದರ ಮೇಲೊಂದರಂತೆ ಪೇರಿಸಿಟ್ಟಿದ್ದ ಕೆಲ ಪ್ಲಾಸ್ಟಿಕ್ ಕುರ್ಚಿಗಳು, ಕೆಲ ಜಾಕೆಟ್ಟುಗಳು… ಹೀಗೆ ಒಂದಷ್ಟು ವಸ್ತುಗಳನ್ನು ಅಲ್ಲಿ ರಾಶಿ ಹಾಕಲಾಗಿತ್ತು. ಮಣ್ಣಿನ ನೆಲದ ಮೇಲೆ ಒಂದು ಚಾಪೆಯನ್ನು ಹಾಕಿ ಇವುಗಳನ್ನು ಹೀಗೆ ಅಸ್ತವ್ತಸ್ಯವಾಗಿ ಇರಿಸಲಾಗಿತ್ತು. ನನ್ನ ದುಭಾಷಿ ಮಹಾಶಯ ಚೌಕಾಶಿಯ ಮಾತನ್ನೆತ್ತದಿದ್ದರೆ ವಧುದಕ್ಷಿಣೆಯಾಗಿ ಕೊಡಲಾಗುತ್ತಿದ್ದ ಈ ವಸ್ತುಗಳು ನನ್ನ ಗಮನಕ್ಕೆ ಬರುತ್ತಿರಲಿಲ್ಲವೋ ಏನೋ! ಈ ಘಟನೆಯೊಂದಿಗೆ ರಿಕಾರ್ಡೋನ ಪಟ್ಟಿಯೂ, ವೀಜ್ ನ ಮಟ್ಟಿಗೆ ಆತನ ಗೆಳೆಯನ ದುಬಾರಿ ಮದುವೆಯೂ ನೆನಪಾಯಿತು. ಕೊನೆಗೂ ಅಂಥದ್ದೊಂದು ‘ವ್ಯವಹಾರ’ವನ್ನು ನಾನು ಖುದ್ದಾಗಿ ನೋಡುತ್ತಿದ್ದೆ.

ಹೀಗೆ ವಿವಾಹವನ್ನು ವ್ಯವಹಾರ ಮಾಡಿರುವ ರೂಢಿಯು ಭಾರತಕ್ಕೇ ಸೀಮಿತವಾಗಿರುವಂಥದ್ದಲ್ಲ. ಸೊಮಾಲಿಯಾದಂತಹ ಭಾಗಗಳಲ್ಲಿ ಒಂಟೆಯ ಆಸೆಗೆ ಬಿದ್ದು ಪುಟ್ಟ ಹೆಣ್ಣುಮಕ್ಕಳನ್ನು ಮುದುಕರಿಗೆ ಗಂಟು ಹಾಕುವ ಪ್ರಕರಣಗಳನ್ನು ನಾವು ಕೇಳಿರುತ್ತೇವೆ. ಇಲ್ಲಿ ಒಂಟೆಗಳನ್ನು ವಧುದಕ್ಷಿಣೆಯ ರೂಪದಲ್ಲಿ ತೆಗೆದುಕೊಳ್ಳಲಾಗುತ್ತದಂತೆ. ಜನಸಂಖ್ಯೆಯ ವಿಚಾರಕ್ಕೆ ಬಂದರೆ ಅಂಗೋಲಾದಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಪುರುಷರಿಗಿಂತ ಹೆಚ್ಚಿದೆ. ಇಪ್ಪತ್ತು ಚಿಲ್ಲರೆ ವರ್ಷಗಳ ದೀರ್ಘ ಯುದ್ಧಕಾಲದಲ್ಲಿ ಸತ್ತ ಲಕ್ಷಗಟ್ಟಲೆ ಪುರುಷರಿಂದ ಜನಸಂಖ್ಯೆಯ ಅನುಪಾತದ ಮೇಲೆ ಗಾಢವಾದ ಪರಿಣಾಮ ಬೀರಿತೆಂದು ಹೇಳಲಾಗುತ್ತದೆ. ಇನ್ನು ವಿವಾಹದ ಸಮಯದಲ್ಲಿ ಹೆಣ್ಣುಮಕ್ಕಳಿಂದಾಗಿ ಒಂದು ರೀತಿಯಲ್ಲಿ ಕುಟುಂಬಕ್ಕೆ ಲಾಭವೇ ಆಗುವುದರಿಂದ ಆರೈಕೆಯಲ್ಲಿ ಯಾವ ಕೊರತೆಯೂ ಉಂಟಾಗದಂತೆ ಅವರನ್ನು ನೋಡಿಕೊಳ್ಳಲಾಗುತ್ತದೆ ಕೂಡ.  

ಇವೆಲ್ಲಾ ಕಾರಣಗಳಿಂದಾಗಿ ವಿವಾಹವೆಂದರೆ ಅಂಗೋಲನ್ ಗಂಡುಮಕ್ಕಳಿಗೆ ಒಂದು ರೀತಿಯಲ್ಲಿ ಹೊರೆ. ಉತ್ತಮ ವಿಧ್ಯಾಭ್ಯಾಸ, ಉದ್ಯೋಗಾವಕಾಶಗಳಿಲ್ಲದೆ ಕಂಗೆಡುವ ಯುವಕರಿಗೆ ಇಂಥದ್ದೊಂದು ಮೊತ್ತವನ್ನು ಒಟ್ಟುಗೂಡಿಸಿ ಮದುವೆಯಾಗುವುದೆಂದರೆ ದೊಡ್ಡ ಸವಾಲಿನ ಕೆಲಸವೇ ಸರಿ. ಎಷ್ಟೇ ಚೌಕಾಶಿಗಳಾದರೂ ಕೊಡಬೇಕಾಗಿರುವುದಷ್ಟನ್ನು ಕೊಡಲೇಬೇಕಾಗಿರುವುದರಿಂದ ಇದರಿಂದ ತಪ್ಪಿಸಿಕೊಳ್ಳಲೂ ಆಗದಂತಹ ಪರಿಸ್ಥಿತಿ.

ಆದರೆ ಇಲ್ಲೂ ಕೆಲ ಮಹಾಬುದ್ಧಿವಂತರು ತಮ್ಮದೇ ಆದ ಜಾಣನಡೆಗಳನ್ನಿರಿಸಿ ಮುಂದುವರೆಯುತ್ತಿದ್ದರು. ”ಮುಂದಿನ ವರ್ಷ ಮದುವೆಯಾಗಬೇಕು ಅಂದುಕೊಂಡಿದ್ದೇನೆ. ಅಂಥದ್ದೇನು ಉಳಿತಾಯವೂ ನನ್ನಲ್ಲಿಲ್ಲ. ಇನ್ನು ಅವಳ ತಂದೆ ಈ ಮದುವೆಗೆ ಒಪ್ಪುತ್ತಾನೆ ಎಂಬ ಭರವಸೆಯೂ ನನಗಿಲ್ಲ. ನನಗಿನ್ನು ಉಳಿದಿರುವುದು ಒಂದೇ ದಾರಿ. ಅವಳನ್ನು ಗರ್ಭವತಿಯಾಗಿಸಿ ಕೈತೊಳೆದುಕೊಳ್ಳುವುದು”, ಎಂದು ನನ್ನಲ್ಲಿ ತಮಾಷೆಯ ಧಾಟಿಯಲ್ಲಿ ಒಬ್ಬ ಹೇಳುತ್ತಿದ್ದ. ಆತ ಈ ಬಗ್ಗೆ ನನ್ನೊಂದಿಗೆ ತಮಾಷೆಯೆಂಬಂತೆ ಹೇಳುತ್ತಿದ್ದರೂ ಆತ ಅದನ್ನು ಮಾಡಿಯೇ ತೀರುವನೆಂಬ ಬಗ್ಗೆ ನನಗೆ ಖಚಿತತೆಯಿತ್ತು. ಈತ ತನ್ನನ್ನು ಮತ್ತು ತನ್ನ ಪ್ರೇಯಸಿಯನ್ನು ನಿಯಮಿತವಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಚ್.ಐ.ವಿ ಪರೀಕ್ಷೆಗಳನ್ನೂ ಮಾಡಿಸುತ್ತಿದ್ದ ಎಂಬ ಬಗ್ಗೆಯೂ ನನಗೆ ಮಾಹಿತಿಯಿತ್ತು.

ವಿವಾಹಕ್ಕೆ ಮುನ್ನವೇ ಹೆಣ್ಣೊಬ್ಬಳು ಗರ್ಭವತಿಯಾದಳೆಂದರೆ ವಧುದಕ್ಷಿಣೆಯಾಗಿ ನೀಡಬೇಕಾದ ಖರ್ಚು ಅರ್ಧಕ್ಕರ್ಧ ಉಳಿತಾಯವಾಗುತ್ತದಂತೆ. ”ಇದರಲ್ಲಿ ಎರಡು ಆಯ್ಕೆಗಳಿವೆ. ಬಾಲಕಿಯನ್ನು ವಿವಾಹವಾಗಲೇಬೇಕೆಂದು ಹುಡುಗಿಯ ಮನೆಯವರು ಒಂದೋ ನನ್ನ ಮೇಲೆ ಒತ್ತಡ ಹಾಕುತ್ತಾರೆ. ಇಲ್ಲವಾದರೆ ನಿನ್ನ ತಪ್ಪಿಗೆ ತಕ್ಕ ಶಿಕ್ಷೆಯಾಗಲೇಬೇಕು, ಮಗಳ ಆರೈಕೆಯನ್ನು ನಾವು ಮಾಡುತ್ತೇವೆ, ಆದರೆ ಖರ್ಚಿಗೆ ನೀನು ನಿಯಮಿತವಾಗಿ ಇಂತಿಷ್ಟು ಮೊತ್ತವನ್ನು ಕೊಡುತ್ತಿರಬೇಕು ಎಂದು ಹಕ್ಕು ಚಲಾಯಿಸುತ್ತಾರೆ. ನನಗೆ ನಿಜಕ್ಕೂ ವಿವಾಹವಾಗುವ ಇಚ್ಛೆಯಿದ್ದರೆ ಮೊದಲ ಆಯ್ಕೆಯನ್ನೇ ನಾನು ಆರಿಸಿಕೊಳ್ಳುತ್ತೇನೆ. ಆದರೆ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಬೇಕು ಎಂದಾದರೆ ಎರಡನೆಯದ್ದು ವಾಸಿ. ನಾಲ್ಕೈದು ತಿಂಗಳು ಒಂದಿಷ್ಟು ಆರ್ಥಿಕ ರೂಪದಲ್ಲಿ ನೆರವಾಗಿ ನಂತರ ಮಾಯವಾಗಿಬಿಟ್ಟರೆ ಇವರೆಲ್ಲಾ ನನ್ನನ್ನು ಎಲ್ಲಿ ಅಂತ ಹುಡುಕುತ್ತಾರೆ? ಹೀಗೆ ಎಲ್ಲದಕ್ಕೂ ಒಂದು ಒಳದಾರಿಯಿರುತ್ತದೆ. ಅದನ್ನು ಸೂಕ್ಷ್ಮವಾಗಿ ಗುರುತಿಸಿ ಬಳಸಿಕೊಳ್ಳುವವನೇ ಜಾಣ”, ಎನ್ನುತ್ತಾ ತನ್ನ ಬೆನ್ನನ್ನು ತಾನೇ ತಟ್ಟಿಕೊಂಡ ಆತ. ಕೈಗೊಂದು, ಕಂಕುಳಿಗೊಂದು ಎಂಬಂತೆ ಮಕ್ಕಳನ್ನು ಪೋಷಿಸುತ್ತಿರುವ ಬಹುತೇಕ ಅಂಗೋಲನ್ ಹೆಣ್ಣುಮಕ್ಕಳು ತಮ್ಮ ಮಕ್ಕಳನ್ನು ಅದೇಕೆ ಏಕಾಂಗಿಯಾಗಿ ಸಾಕುತ್ತಿದ್ದಾರೆ ಎಂಬ ಪ್ರಶ್ನೆಗೂ ಈ ವಿವರಣೆಯಿಂದ ನನಗೆ ಉತ್ತರವು ಸಿಕ್ಕಿತ್ತು.

ಆದರೆ ಇದು ಹೇಳಿಕೊಳ್ಳುವಷ್ಟು ಸುಲಭವೂ ಅಲ್ಲ ಎಂಬುದೂ ಕೂಡ ಗಮನಾರ್ಹ ಅಂಶವೇ. ವಿವಾಹವಾಗಲಿ ಅಥವಾ ಆಗದೇ ಇರಲಿ, ಇಂಥಾ ಸಂದರ್ಭಗಳಲ್ಲಿ ಇಂತಿಷ್ಟು ಎಂಬ ದಂಡದ ಮೊತ್ತವನ್ನು ಹುಡುಗಿಯ ಮನೆಯವರು ಹುಡುಗನಿಂದ ಕಕ್ಕಿಸಿಯೇ ಬಿಡುತ್ತಾರೆ. ಆತ ಕೊಡುವ ಸ್ಥಿತಿಯಲ್ಲಿಲ್ಲ ಎಂಬ ಪರಿಸ್ಥಿತಿಗಳಲ್ಲಿ ಆತನ ಕೆಲ ವಸ್ತುಗಳನ್ನು ಅವರುಗಳು ಬಲವಂತವಾಗಿ ಮುಟ್ಟುಗೋಲು ಹಾಕಬಹುದು. ಮೋಟಾರುಬೈಕುಗಳಂತಹ ದುಬಾರಿ ವಸ್ತುಗಳನ್ನು ಹುಡುಗನೊಬ್ಬ ಕಳೆದುಕೊಳ್ಳಬೇಕಾಗಿ ಬರಬಹುದು. ಇನ್ನು ತೀರಾ ಗಂಭೀರ ಪ್ರಕರಣಗಳಲ್ಲಿ ವಿಷಯಗಳು ಮಾತುಕತೆಯಲ್ಲಿ ಇತ್ಯರ್ಥವಾಗದಿದ್ದರೆ ಪ್ರಾಣ ಬೆದರಿಕೆ ಅಥವಾ ಕೊಲೆಯಂತಹ ಅಪರಾಧಗಳಲ್ಲಿ ಕೊನೆಯಾಗುವ ಸಾಧ್ಯತೆಗಳೂ ಇಲ್ಲದಿಲ್ಲ. ಒಟ್ಟಿನಲ್ಲಿ ವ್ಯವಹಾರ ಕುದುರಿಸಿಕೊಳ್ಳುವ ವಿಚಾರಕ್ಕೆ ಬಂದರೆ ವಿವಾಹದ ಸೋಗಿನಲ್ಲಿ ವಿಕ್ಷಿಪ್ತ ಆಟಗಳನ್ನು ಆಡಿ ಎರಡೂ ಕಡೆಯವರು ತಮ್ಮ ತಮ್ಮ ಲಾಭಕ್ಕೆ ತಕ್ಕಂತೆ ದಾಳಗಳನ್ನೆಸೆಯುವುದು ಮೇಲ್ನೋಟಕ್ಕೆ ಕಾಣದಿರುವ ಸತ್ಯಗಳಲ್ಲೊಂದು.

ವಿದೇಶೀ ಅಧಿಕಾರಿಯೊಬ್ಬ ಇಂಥದ್ದೊಂದು ಪ್ರಕರಣದಲ್ಲಿ ಸಿಲುಕಿಕೊಂಡು ಕಂಗೆಟ್ಟ ವಿಚಿತ್ರ ಘಟನೆಯೊಂದೂ ಇಲ್ಲಿ ನಡೆದಿತ್ತು. ಆತ ಬೆಲ್ಜಿಯಂ ಮೂಲದ ಬಿಳಿಯ ಅಧಿಕಾರಿ. ವಿಶ್ವದ ಹಲವು ರಾಷ್ಟ್ರಗಳಲ್ಲದೆ ಇಪ್ಪತ್ತೈದಕ್ಕೂ ಹೆಚ್ಚು ವರ್ಷಗಳ ಕಾಲ ಕೇವಲ ಆಫ್ರಿಕಾದ ವಿವಿಧ ಮೂಲೆಗಳಲ್ಲಿ ಸೇವೆ ಸಲ್ಲಿಸಿದಾತ. ಈತ ಅರವತ್ತೈದರ ವಯಸ್ಸಿನವನಾದರೂ ಕಾಲೇಜು ಹಂತದ ಯುವತಿಯರನ್ನು ಅದ್ಹೇಗೋ ಪುಸಲಾಯಿಸಿ ತನ್ನ ಹಾಸಿಗೆಗೆ ಕರೆದುಕೊಂಡು ಬರುತ್ತಿದ್ದವನು. ಮೊದಲೇ ಸ್ವಭಾವತಃ ಸ್ನೇಹಮಯಿಗಳಾಗಿರುವ ಅಂಗೋಲನ್ನರ ಗೆಳೆತನ ಮಾಡುವುದು ಬಹಳ ಸುಲಭ. ಇನ್ನು ಈತ ಯುವತಿಯರಿಗೆ ಡಾಲರುಗಳ ಮತ್ತು ಒಂದಿಷ್ಟು ವಿಲಾಸದ ಆಮಿಷಗಳನ್ನು ತೋರಿಸಿ ತನ್ನ ಲಾಭಕ್ಕೆ ಬಳಸಿಕೊಳ್ಳುವುದು ಎಲ್ಲರಿಗೂ ಬಹುತೇಕ ತಿಳಿದ ವಿಷಯವೇ ಆಗಿತ್ತು. ಕೈಯಲ್ಲಿ ಡಾಲರುಗಳು ಓಡಾಡುತ್ತಿರುವ, ಕೈತುಂಬಾ ದುಬಾರಿ ಉಡುಗೊರೆಗಳನ್ನು ನೀಡುವ, ಅಂತಃಪುರದಿಂದ ಹೊರಗೆ ಸಾರ್ವಜನಿಕವಾಗಿ ಯುವತಿಯರೊಂದಿಗೆ ಯಾವುದೇ ಸಂಬಂಧವನ್ನಿರಿಸಿಕೊಳ್ಳದ ಇಂಥಾ ಸಿರಿವಂತ ವಿದೇಶೀಯರ ಮೇಲೆ ಇಲ್ಲಿ ಕೆಲವರು ಕಣ್ಣಿಟ್ಟೇ ಇರುತ್ತಾರೆ. ಇನ್ನು ಕೊಂಪೆಯಂತಿರುವ ಸ್ಥಳೀಯ ವೇಶ್ಯಾಗೃಹಗಳಿಗೆ ಹೋಗಲಿಚ್ಛಿಸದ ಇಂತಹ ವಿದೇಶೀಯರಿಗೆ ಈ ಆಯ್ಕೆಯು ವಾಸಿಯೆಂದೂ ಅನ್ನಿಸುವುದರಿಂದ ಇವರಿಗೂ ಇಂಥಾ ಹೆಣ್ಣುಮಕ್ಕಳ ಗುಂಪುಗಳ ಮೇಲೆ ಗಮನವು ಇದ್ದೇ ಇರುತ್ತದೆ. ಹೀಗೆ ಲೈಂಗಿಕ ರೋಗಗಳ ಭಯವೊಂದನ್ನು ಬಿಟ್ಟರೆ ದೇಹತೃಷೆಯನ್ನು ತೀರಿಸಿಕೊಳ್ಳಲು ಇಬ್ಬರಿಗೂ ಲಾಭದಾಯಕ ವ್ಯವಹಾರವಿದು.    

ಆದರೆ ಈ ಒಂದು ಘಟನೆಯಲ್ಲಿ ಮಾತ್ರ ಸಂದರ್ಭವು ಕೊಂಚ ಬದಲಾಗಿತ್ತು. ಈ ಬೆಲ್ಜಿಯನ್ ಅಧಿಕಾರಿಯು ಐದಾರು ವರ್ಷಗಳ ಕಾಲ ಹಿಂದೆ ಅಂಗೋಲನ್ ಯುವತಿಯೊಬ್ಬಳಿಗೆ ಗರ್ಭವನ್ನು ಕರುಣಿಸಿ ಮಗುವೊಂದರ ತಂದೆಯಾಗಿದ್ದ. ಆ ದಿನಗಳಲ್ಲಿ ಯುವತಿಗೂ, ಆಕೆಯ ಮನೆಯವರಿಗೂ ಆತ ಸಾಕಷ್ಟು ದೊಡ್ಡ ಮೊತ್ತವನ್ನು ನೀಡಿ ಎಲ್ಲರ ಬಾಯಿ ಮುಚ್ಚಿಸಿದ್ದನಂತೆ. ಆದರೆ ಕಥೆಯು ನಿಜಕ್ಕೂ ಮುಗಿದಿಲ್ಲ ಎಂಬುದು ಆತನಿಗೆ ತಿಳಿದಿದ್ದು ವರ್ಷಗಳ ನಂತರವಷ್ಟೇ. ಈಗ ಬೆಳೆದ ಮಗುವಿನೊಂದಿಗೆ ಬಂದ ಆ ತಾಯಿ ಈತನ ಕದ ತಟ್ಟಿದ್ದಳು. ”ಮಗು ಬೆಳೆದಿದೆ. ಖರ್ಚು ಹೆಚ್ಚಾಗಿದೆ. ಶಾಲೆಗೂ ಸೇರಿಸಬೇಕು. ಹೀಗಾಗಿ ನೀನೇ ಎಲ್ಲಾ ನೋಡಿಕೊಳ್ಳಬೇಕು”, ಎಂದು ರಂಪಾಟ ಮಾಡಿದ್ದಳು. ಆಗಮಿಸುವ ವಿದೇಶೀಯರು ಎಷ್ಟಾದರೂ ಇಂದಲ್ಲಾ ನಾಳೆ ಮರಳುವವರು ಎಂಬ ಸತ್ಯವು ಎಲ್ಲರಿಗೂ ತಿಳಿದಿರುತ್ತದೆ. ಹೀಗಾಗಿ ಅವರಿಂದ ದೀರ್ಘಕಾಲದ ಸಹಾಯವನ್ನು ಬಯಸುವುದು ಮೂರ್ಖತನ. ಪರಿಸ್ಥಿತಿಯು ಹೀಗಿರುವಾಗ ವಿದೇಶೀಯರ ಮೇಲೆ ತೀವ್ರ ಒತ್ತಡವನ್ನು ಹಾಕಿ ಕ್ಷಣಾರ್ಧದಲ್ಲಿ ದೊಡ್ಡ ಮೊತ್ತವನ್ನು ಜೇಬಿಗಿಳಿಸುವುದೇ ಜಾಣತನದ ಹೆಜ್ಜೆ.

ಈ ಪ್ರಕರಣದಲ್ಲೂ ಹಾಗೇ ಆಯಿತು. ಇಷ್ಟು ವರ್ಷಗಳ ಕಾಲ ಇಲ್ಲದಿದ್ದವಳು ಈಗೆಲ್ಲಿಂದ ಬಂದು ಪ್ರತ್ಯಕ್ಷಳಾದಳು ಎಂದು ಆ ಅಧಿಕಾರಿಯು ಬೆರಗಾಗಿದ್ದ. ಆದರೆ ಆಕೆಯನ್ನು ಸಂತೈಸಿ ಪ್ರಕರಣವನ್ನು ಮುಚ್ಚಿಹಾಕುವ ಆತನ ಪ್ರಯತ್ನಗಳು ಮಾತ್ರ ವಿಫಲವಾದವು. ಪ್ರಕರಣವು ಇನ್ನೇನು ನ್ಯಾಯಾಲಯದ ಮೆಟ್ಟಿಲೇರಲಿದೆ ಎಂಬ ಹಂತಕ್ಕೆ ಬಂದಾಗ ಆತ ವಿಧಿಯಿಲ್ಲದೆ ಸೋಲೊಪ್ಪಿಕೊಳ್ಳಲೇಬೇಕಾಯಿತು. ಆದರೆ ಇದು ಬೆದರಿಕೆಯ ತಂತ್ರವೂ ಆಗಿರಬಹುದೆಂಬುದು ಸ್ಪಷ್ಟ. ಅಂತೂ ಪ್ರಕರಣವನ್ನು ನ್ಯಾಯಾಲಯಕ್ಕೆ ಹೋಗದೇನೇ ಇತ್ಯರ್ಥಗೊಳಿಸಲಾಯಿತು. ಮುಂದೆ ಸುಮಾರು ಎಂಟು ಸಾವಿರ ಡಾಲರಿನಷ್ಟು ದೊಡ್ಡ ಮೊತ್ತವನ್ನು ಈ ಅಧಿಕಾರಿಯು ಕೊಟ್ಟ ನಂತರವೇ ಈ ಪ್ರಕರಣಕ್ಕೆ ಮಂಗಳ ಹಾಡಿದರಂತೆ.

‘ಅಲ್ಲಾ… ನೀವ್ಯಾಕೆ ಅಂಗೋಲನ್ ಹೆಣ್ಣನ್ನು ಮದುವೆಯಾಗಬಾರದು?”, ”ಇಲ್ಲೊಂದು ಅಲ್ಲೊಂದು ಮಾಡಬಹುದಲ್ವಾ?”, ”ಆಗಲೇ ನಿಮಗೆ ಇಪ್ಪತ್ತೆಂಟಾಯ್ತು. ನಿಮ್ಮ ವಯಸ್ಸಿನಲ್ಲಿ ನನಗೆ ಐದು ಮಕ್ಕಳಿದ್ದರು. ಯಾವಾಗ ಮದುವೆಯಾಗ್ತೀರಿ?” ಹೀಗೆ ಯಾವಾಗಲೂ ನನ್ನನ್ನು ತನ್ನ ವಿಚಿತ್ರ ಪ್ರಶ್ನೆಗಳಿಂದ ಕಂಗೆಡಿಸುವ ಸ್ಥಳೀಯ ಮಧ್ಯವಯಸ್ಕನೊಬ್ಬ ಈ ಬಗ್ಗೆ ಪ್ರಸ್ತಾಪಿಸಿದಾಗಲೇ ರಿಕಾರ್ಡೋ ಮತ್ತೆ ನೆನಪಾಗಿದ್ದ. ”ಕಳೆದ ಬಾರಿ ನಿನ್ನ ಗೆಳೆಯನೊಬ್ಬ ಅಷ್ಟು ಡಾಲರುಗಳನ್ನು ಸುರಿದು ಮದುವೆಯಾಗಿದ್ದನಲ್ಲವೇ? ಹೇಗಿದ್ದಾರೆ ದಂಪತಿಗಳು?”, ಎಂದು ಕೂಡಲೇ ರಿಕಾರ್ಡೋಗೆ ಕರೆ ಮಾಡಿ ಕುತೂಹಲದಿಂದ ನಾನು ವಿಚಾರಿಸಿದೆ. ”ಆತ ಭಯಂಕರ ಶೋಕಿಲಾಲ. ಎಲ್ಲಿಂದಲೋ ಸಾಲಸೋಲ ಮಾಡಿ ಅದೊಂದು ಶತಮಾನದ ಮದುವೆಯೆಂಬಂತೆ ಅದ್ದೂರಿಯಾಗಿ ಮಾಡಿಸಿದ. ಒಂದೇ ವರ್ಷಕ್ಕೆ ವಿವಾಹವು ಮುರಿದುಬಿತ್ತು. ಅವಳು ಎದ್ದುಹೋದಳು. ಈಗ ತಲೆಯ ಮೇಲೊಂದು ಸೂರೂ ಇಲ್ಲದೆ, ಮೈತುಂಬಾ ಸಾಲಮಾಡಿಕೊಂಡು ಇಕ್ಕಟ್ಟಿಗೆ ಬಿದ್ದಿದ್ದಾನೆ”, ಎಂದು ಉತ್ತರಿಸಿದ ರಿಕಾರ್ಡೋ. ‘ಬೇಕಿತ್ತಾ ಇದೆಲ್ಲಾ? ನಾನಿವನಿಗೆ ಮೊದಲೇ ಹೇಳಿದ್ದೆ’, ಎಂಬ ಭಾವವೊಂದೂ ಕೂಡ ಅವನ ಕುಹಕ ನಗೆಯಲ್ಲಿದ್ದಂತೆ ನನಗೆ ಭಾಸವಾಯಿತು.   

ಸಾವಿರ ಸುಳ್ಳುಗಳನ್ನು ಹೇಳಿ ಒಂದು ಮದುವೆಯನ್ನು ಹೇಗಾದರೂ ಮಾಡಿ ಮುಗಿಸಬಹುದೇನೋ. ಆದರೆ ಆ ಸುಳ್ಳುಗಳ ಭಾರಕ್ಕೆ ಅಪ್ಪಚ್ಚಿಯಾಗದಂತೆ ಸದಾ ಜಾಗೃತರಾಗಿರುವುದೇ ಒಂದು ದೊಡ್ಡ ಸಾಹಸ. ಚಿತ್ರವೊಂದರಲ್ಲಿ ನಾಯಕ ಮತ್ತು ನಾಯಕಿ ಒಂದಾಗಿ ‘ಶುಭಂ’ ಬೋರ್ಡು ಬಂದಾಗ ಚಲನಚಿತ್ರವೇನೋ ಅಂತ್ಯವಾಗಬಹುದು. ಆದರೆ ನಿಜವಾದ ಕಥೆ, ಬದುಕು ಶುರುವಾಗುವುದೇ ಅಲ್ಲಿಂದ ಅಲ್ಲವೇ!

‍ಲೇಖಕರು Avadhi

July 17, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

3 ಪ್ರತಿಕ್ರಿಯೆಗಳು

  1. Kusumapatel

    ಪ್ರ ಸಾದ್ ಅವರೇ ನಿಮ್ಮ ಲೇಖನ ತುಂಬಾ ಇಷ್ಟ ವಾಯಿತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: