ಮ ಶ್ರೀ ಮುರಳಿ ಕೃಷ್ಣ
ಇಂದು ಸಂಜೆ 7.42ಕ್ಕೆ ಡಾ. ವೇಣುಗೋಪಾಲರ ಮೊಬೈಲ್ ನಿಂದ ನನಗೆ ಕರೆ ಬಂದಿತ್ತು. ಕಾರಣಾಂತರಗಳಿಂದ ಆ ಕೆರೆಯನ್ನು ಸ್ವೀಕರಿಸಲು ಸಾಧ್ಯವಾಗಲಿಲ್ಲ. ನಂತರ 7.57ಕ್ಕೆ ಅವರಿಗೆ ಫೋನಾಯಿಸಿದಾಗ ಅವರ ಸೊಸೆ ಒಂದು ಗಂಟೆಯ ಹಿಂದೆ ಹೆಚ್ ವಿ ವಿ ಯವರು ತೀವ್ರ ಹೃದಯಾಘಾತದಿಂದ ಅಸುನೀಗಿದರೆಂಬ ಆಘಾತಕಾರಿ ಸುದ್ದಿಯನ್ನು ತಿಳಿಸಿದರು. ನನಗೆ ನಂಬಲಿಕ್ಕೇ ಆಗಲಿಲ್ಲ.
ಇತ್ತೀಚಿನ ವರ್ಷಗಳಲ್ಲಿ ನಾವು ನಿಕಟ ಗೆಳೆಯರಾಗಿದ್ದೆವು. ಅವರು ನ್ಯಾಷನಲ್ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸುಮಾರು ಐದು ವರ್ಷಗಳ ಹಿಂದೆ ನಿವೃತ್ತರಾದರು. ಸಂಸ್ಕೃತದ ಪ್ರಾಧ್ಯಾಪಕರಾಗಿದ್ದರು. ನಿವೃತ್ತರಾದ ತರುವಾಯ ತಮ್ಮ ಮನೆಯ ಬೇಸ್ಮೆಂಟಿನಲ್ಲಿ ‘ಉನ್ನತಿ’ ಸಾಂಸ್ಕೃತಿಕ ಕೇಂದ್ರವನ್ನು ಸ್ಥಾಪಿಸಿ, ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿದರು. ಒಂದರ್ಥದಲ್ಲಿ, ನಮ್ಮೀರ್ವರ ಸ್ನೇಹವನ್ನು ಬೆಸೆದಿದ್ದು ನಮಗಿರುವ ಚಲನಚಿತ್ರಗಳ ಬಗೆಗಿನ ತೀವ್ರಾಸಕ್ತಿ.
‘ಉನ್ನತಿ’ಯಲ್ಲಿ ಪ್ರತಿ ಶನಿವಾರ ಚಲನಚಿತ್ರವನ್ನು ತೋರಿಸುತ್ತಿದ್ದರು. ಇದಕ್ಕೆ ಮತ್ತು ಇತರ ಕಾರ್ಯಕ್ರಮಗಳಿಗೆ ಅಪಾರ ಮೊತ್ತದ ತಮ್ಮ ಸ್ವಂತ ಹಣವನ್ನು ಬಳಸಿ ಸುಸಜ್ಜಿತವಾದ ಸಣ್ಣ ಸಭಾಂಗಣವನ್ನು ಕಟ್ಟಿಸಿದ್ದರು. ಅವರಿಗೆ ಒಳ್ಳೆಯ ಸಿನಿಮಾ ಸಂಸ್ಕೃತಿಯನ್ನು ಬೆಳೆಸಬೇಕೆಂಬ ಆಶಯವಿತ್ತು; ಈ ನಿಟ್ಟಿನಲ್ಲಿ, ಅರ್ಥಪೂರ್ಣ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ನಾವು ಅನೇಕ ಚಲನಚಿತ್ರಗಳನ್ನು ‘ಉನ್ನತಿ’ಯಲ್ಲಿ ಒಟ್ಟಿಗೆ ವೀಕ್ಷಸಿದ್ದೇವೆ; ವಿಚಾರ ವಿನಿಮಯಗಳನ್ನು ನಡೆಸಿದ್ದೇವೆ. ಇನ್ನು ಅನೇಕ ನೆನಪುಗಳು ಸುಳಿದಾಡುತ್ತಿವೆ…
ಸುಮಾರು ನಾಲ್ಕು ದಶಕಗಳಿಗೂ ಹೆಚ್ಚು ಸಮಯ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು. ಅನೇಕ ನಾಟಕಗಳನ್ನು ನಿರ್ದೇಶಿಸಿದ್ದರು. ಸಮುದಾಯ ಸಂಘಟನೆಗೂ ಶ್ರಮಿಸಿದ್ದರು. ಅವರು (ಪ್ರಸ್ತುತ)ಬೆಂಗಳೂರಿನ ಸುಚಿತ್ರಾ ಫಿಲ್ಮ್ ಸೊಸೈಟಿಯ ಕಾರ್ಯಕಾರಿ ಸಮಿತಿಯಲ್ಲಿ ನನ್ನ ಸಹೋದ್ಯೋಗಿಯಾಗಿದ್ದರು. ಅನೇಕ ಸಮಾಜಮುಖಿ, ವೈಚಾರಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು.
ಅವರ ಅಕಾಲಿಕ ಮರಣ ನನ್ನನ್ನು ಗಾಢವಾಗಿ ಅಲುಗಾಡಿಸಿದೆ. ಅವರಿಗೆ ಭಾವಪೂರ್ಣ ನಮನಗಳು.ಅವರ ಕುಟುಂಬಕ್ಕೆ ನನ್ನ ಸಂತಾಪಗಳು..
0 ಪ್ರತಿಕ್ರಿಯೆಗಳು