ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಿಹಿದ್ರಾಕ್ಷಿ ಹುಳಿಯಾದಾಗ…

ಬಂದೇಸಾಬ.ಮೇಗೇರಿ

ರಾಮಾಪುರ

ಅದು ಪ್ರಾಥಮಿಕ ಶಾಲೆಯಲ್ಲಿದ್ದ ದಿನಗಳು. ಪ್ರತಿದಿನ ತಪ್ಪದೇ ಕ್ಲಾಸ್ಗೆ ಹೋಗುತ್ತಿದ್ದ ಗುಂಪು ನನ್ನದೆಂಬುದೆ ವಿಶೇಷ. ಬೈಗುಳಕ್ಕೆ ಸಿಗುವ ಉಡಾಳ ಹುಡುಗ ನಾನಾಗಿರಲಿಲ್ಲ. ಎಲ್ಲ ಶಿಕ್ಷಕರಿಗೂ ಅಭಿಮಾನ. ಸಾಮಾನ್ಯವಾಗಿ ಮೊದಲ ಸಾಲಿನಲ್ಲೆ ನಾನು ಕುಳಿತುಕೊಳ್ಳುತ್ತಿದ್ದೆ. ಅಂದ ಹಾಗೇ ಇತ್ತೀಚೆಗೆ ಶಾಲೆಗಳಲ್ಲಿ ಕುಳಿತುಕೊಳ್ಳಲು ಬೆಂಚುಗಳು ಕಂಡು ಬರುತ್ತಿರುವುದು ಸರ್ವೇಸಾಮಾನ್ಯವಾಗಿ ಬಿಟ್ಟಿದೆ. ಆದರೆ ಮೊದಲು ನೆಲದ ಮೇಲೆ ಕುಳಿತು ಶಾಲೆ ಕಲಿಯುವ ಪರಿಪಾಠವಿತ್ತು.

ಒಂದು ದಿನ ಪಕ್ಕದಲ್ಲೇ ಕುಳಿತಿದ್ದ ಗೆಳೆಯ ಹಲರ್ಪುರ ರವಿಯು ಕಾಲಿಗೆ ಕೆಂಪಾಗುವಂತೆ ಚಿವುಟಿದ್ದ. ಆಗ ಶಾಲೆಯ ತಾರಸಿಯೇ ಕುಸಿದು ಬೀಳುವ ಹಾಗೇ ನಾನು ಚೀರಿದೆ. ಇದರ ಹಿನ್ನೆಲೆ ಏನೆಂದು ತಿಳಿಯದ ಮಾಸ್ತರರು ಬಂದು ಛಡಿಯೇಟುಗಳ ಪ್ರಸಾದವನ್ನು ಒಂದರ ಮೇಲೊಂದು, ಬೇಡವೆಂದರೂ ಬಿಟ್ಟು ಬಿಡದೇ ಫ್ರೀಯಾಗಿ ದಯಪಾಲಿಸಿದರು. ನನ್ನ ಮೈ ತುಂಬಾ ಬಾಸುಂಡೆಗಳ ರಾಶಿಯೇ ಮನೆ ಮಾಡಿದ್ದವು, ಮೈಯ ಬಣ್ಣವು ಕೆಂಪಾದ ಗೆಣಸು ಗಜ್ಜರಿಗಳ ರೂಪಕ್ಕೆ ತಿರುಗಿತ್ತು. ನಡೆದ ಸಮಾಚಾರವನ್ನು ಮನೆಯಲ್ಲಿ ತಿಳಿಸಲು ಮನಸ್ಸಾಗಲಿಲ್ಲ.

‘ಶಾಲೆಗೆ ಹೋಗಿ ಬರ್ತೀನಿ ಬೇ ಎವ್ವಾ’ ಅಂತ ಹೇಳಿ ಹೋದ ನಾನು ಶಾಲೆಯು ಸಮೀಪಿಸಿದಂತೆ ಅಲ್ಲಿಂದ ದೂರ ನಡೆದೆ. ಕಾರಣ ನಿನ್ನೆ ತಿಂದ ಛಡಿ ಏಟಿನ ಬಾಸುಂಡೆಗಳೇ. ಮುಂದುವರೆದು ಮಾರ್ಗಗಳು ಬದಲಾವಣೆಗಳಾದವು ಮನಸು ತೋಚಿದಂತೆ. ಯಾವುದರ ಪರಿವೇ ಇಲ್ಲದೆ ದ್ರಾಕ್ಷಿ ತೋಟದ ಬದುವನ್ನು ತಲುಪಿದ್ದೆ. ದ್ರಾಕ್ಷಿಯ ಗೊಂಚಲುಗಳು, ಅತಿಥಿಗಳು ಮನೆಗೆ ಆಗಮಿಸಿದಾಗ ತಲೆ ಬಾಗಿ ಸ್ವಾಗತ ಕೋರುವ ಹಾಗೇ ಯುವ್ ಆರ್ ವೆಲ್ಕಮ್ ಅಂತ ಆಹ್ವಾನಿಸಿದವು. ಹಸಿರಿನಿಂದ ಹಳದಿಗೆ ತಿರುಗಿದ ಹಣ್ಣುಗಳು ತುಂಬಾ ಆಕರ್ಷಣೀಯವಾಗಿ, ಮಾಗಿ ಕಣ್ಣು ಕುಕ್ಕುತ್ತಿದ್ದವು. ಆದರೆ ತೋಟದ ಮಾಲೀಕ ವಿರೋಧ ವ್ಯಕ್ತಪಡಿಸಿ, ಕಪಾಳ ಮೋಕ್ಷ ಮಾಡಿದರೆ ಏನು ಗತಿ ಎಂಬ ಹೆದರಿಕೆ ಹುಟ್ಟಲಾರಂಭಿಸಿತು. ಸುತ್ತ ಕಡೆ ಕಣ್ಣು ಆಡಿಸಿ ತಂತಿಯ ಬೇಲಿಯನ್ನು ಹಲವು ಪ್ರಯತ್ನಗಳ ಫಲವಾಗಿ ಬೇಧಿಸಿ ತೋಟಕ್ಕೆ ಧಾವಿಸಿದೆ. ದಿಢೀರನೆ ಒಂದು ನಾಗರ ಹಾವು ಪ್ರತ್ಯಕ್ಷವಾಯಿತು! ಎಂದೂ ದೇವರಿಗೆ ಕೈ ಮುಗಿಯದ ನಾನು, ಆಗ ಕೈಜೋಡಿಸಿ ವಂದಿಸಿದೆ. ಸರೀಸೃಪ ಮಾತ್ರ ಅಲ್ಲಿಂದ ಜಾಗ ಖಾಲಿ ಮಾಡಿತ್ತು. ಮನಸು ನಿರಾಳ. ಹಸಿವಿನ ಜೊತೆಗೆ ಖುಷಿ ನೂರ್ಮಡಿಯಾಯ್ತು. ಸುತ್ತಲೂ ದ್ರಾಕ್ಷಿ ಹಣ್ಣಿನ ಗೊಂಚಲುಗಳು. ಕೈಗೆ ನಿಲುಕಿದ್ದೆಲ್ಲವು ಸಿಹಿಯಾಗಿದ್ದವು. ಕೈಗೆಟುಕದ ಗೊಂಚಲುಗಳು ಮಾತ್ರ ಕಹಿಯಾಗಿ ಪರಿಣಮಿಸಿದ್ದವು.
ಇಷ್ಟಪಟ್ಟು, ಕಷ್ಟಪಟ್ಟು ಹಣ್ಣನ್ನು ತಿಂದದ್ದಾಯ್ತು. ಬುತ್ತಿ ಕಟ್ಟುವ ಕಾರ್ಯ ಸಾಂಗೋಪಾಂಗವಾಗಿ ನೆರವೇರಿತ್ತು. ಲೂಟಿಯಾದ ಕೋಟೆಯಂತಿರುವ ತೋಟ ಬಿಟ್ಟು ಮನೆಗೆ ತೆರಳಿದೆ. ಮಾರ್ಗದಲ್ಲಿ ಸ್ನೇಹಿತರಿಗೆ ಹಂಚಿ ಸಂಭ್ರಮಿಸಿದೆ. ಮನೆಯಲ್ಲಿ ತಾಯಿ ಗದ್ದೆಯಲ್ಲಿ ದುಡಿದು ಬಂದು ವಿಶ್ರಾಂತಿಗೆ ಕೈ ಚಾಚಿದ್ದಳು. ಬಾಗಿಲೊಳಗೆ ಕಾಲಿಟ್ಟ ತಕ್ಷಣ ತಾಯಿ ಮಮತೆಯಿಂದ ಸತ್ಕರಿಸಿದಳು.  ದ್ರಾಕ್ಷಿಯ ಲೂಟಿಯ ಸಂಗತಿ ಜಗಜ್ಜಾಹೀರಾಗಿತ್ತು. ಮಾಲೀಕ ಶಿಕ್ಷಕರಿಗೆ ದೂರು ಸಲ್ಲಿಸಿದ್ದರಿಂದ ಮನೆಗೆ ಸುದ್ಧಿ ಶರವೇಗದಲ್ಲಿ ಮುಟ್ಟಿತ್ತು. ಘರ್ ವಾಪಸಿ ಅನ್ನುವ ಹಾಗೆ ಮನೆಗೆ ತೆರಳಿದ್ದೆ. ತಾಯಿ ಹತ್ತಿರಕ್ಕೆ ಕರೆದು ವಾತ್ಸಲ್ಯದಿಂದ ತಲೆ ಮೇಲೆ ಕೈ ಆಡಿಸಿ ಆ ರೀತಿ ಮಾಡುವುದು ತಪ್ಪು ಕಂದ ಎಂದು ತಿಳಿಸಿ ಹೇಳಿದಳು. ಝೀರೋ ಕ್ಯಾಂಡಲ್ ದೀಪದ ಬೆಳಕಿನಲ್ಲಿ ಆ ರಾತ್ರಿ ಕಳೆದೆ. ಮರುದಿನ ತಾಯಿ ಕಣ್ಣೀರು ಹಾಕಿ, ಶಾಲೆಗೆ ಹೋಗು ಕಂದ ನಮ್ಮ ಹಾಗೆ ಕಷ್ಟ ಸೋಸುವ ಬಾಳು ನಿನ್ನದಾಗದಿರಲಿ ಎಂದು ಹಾರೈಸಿ ಬೀಳ್ಕೊಟ್ಟಳು. ಶಿಕ್ಷಕರು ಕರೆದು ಮೊದಲಿನ ಪ್ರೀತಿಯನ್ನೇ ಧಾರೆಯೆರೆದರು. ಸ್ನೇಹಿತ ಎನಿಸಿಕೊಂಡಿದ್ದ ರವಿ ಸ್ವಾರಿ ಅಂತ ಕೇಳಲೇ ಇಲ್ಲ. ಸಮಯ ವ್ಯಯಿಸದೇ ಓದಿದರ ಫಲವಾಗಿಯೇ ಇಂದು ಧಾರವಾಡದಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಓದುತ್ತಿರುವೆ. ಥ್ಯಾಂಕ್ಸ್ ಟು ಅಮ್ಮಾ.
 

‍ಲೇಖಕರು G

5 May, 2015

5 Comments

  1. umavallish

    ನಿಮ್ಮ ತಾಯಿ ಒಳ್ಳೆಯ ಮಾರ್ಗದರ್ಶನ ಮಾಡಿದ ”ಗುರು”

    • ಬಂದೇಸಾಬ ಮೇಗೇರಿ

      ಧನ್ಯವಾದಗಳು ಸರ್

  2. mallikarjun talwar

    chenda baraha…… hage barita iri……

    • ಬಂದೇಸಾಬ ಮೇಗೇರಿ

      ಧನ್ಯವಾದಗಳು ಅಣ್ಣ

  3. savitri hiremath

    putta chanda bardi lekhanana. super. khushiyayu keep on write maga.yake idna metroke hakilla?

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading