ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸದಾಶಿವ್ ಸೊರಟೂರು ಹೊಸ ಕವಿತೆ- ಊರು ಸೇರದ ಬಸ್ಸನ್ನು…

ಊರು ಸೇರದ ಬಸ್ಸನ್ನು ಯಾರೂ ಹತ್ತುವುದಿಲ್ಲ..

ಸದಾಶಿವ್ ಸೊರಟೂರು

ಖಾಕಿ ಬಣ್ಣಕ್ಕೊಂದು ಗತ್ತಿದೆ
ಅದನು ತೊಟ್ಟ ಅವನಿಗೂ;
ಗಂಟಲಲ್ಲಿ ಹಿಡಿ ಹುರುಪು
ಜೊತೆಗೆ
ಹೋಗುವ ಊರಗಳ ನೆನಪು
ಖಾಲಿ ಬಸ್ಸೊಂದನ್ನು
ನಿಲ್ಲಿಸಿಕೊಂಡು
ಕೂಗುತ್ತಾನೆ
ಶಿವಮೊಗ್ಗ ಸಾಗರ ಕಾರವಾರ ಶಿರಸಿ..
ಹೀಗೆ ತರಹೇವಾರಿ
ಅದೊಂದು ಯಾರಿಗೂ ಸಿದ್ದಿಸದ
ರಾಗಬದ್ದ ಧನಿ
ನೀವು ಅಲ್ಲಿ ಹುಡುಕಬಹುದು
ಹಸಿವು ವಿಷಾದ ಆಸೆ ಹೀಗೆ ಹತ್ತೆಂಟು

ಕಾದು ಕೂತವರ
ಹೃದಯದ ಕೋಣೆಯ ಬಾಗಿಲುಗಳನ್ನು
ತಾನು ಕೂಗುವ
ಹೆಸರಿಂದಲೇ ಬಡಿಯುತ್ತಾನೆ
ನೆನಪುಗಳ ತಿಜೋರಿ
ಒಡೆಯುತ್ತಾನೆ

ಬ್ಯಾಗಿನಲ್ಲಿ ಬದುಕು ತುಂಬಿಕೊಂಡು
ಹೊರಟವರು
ಯಾರು ಯಾರಿಗೋ ಕಾದವರು
ಊರು ಬಿಟ್ಟವರು
ತಪ್ಪಿಸಿಕೊಂಡವರು
ತಪ್ಪಿಸಿಕೊಳ್ಳಲು ಬಂದವರು..
ಎದ್ದ ಊರಿನ ಹೆಸರುಗಳ
ಸಂತೆಯಲ್ಲಿ
ತಮ್ಮ ತಮ್ಮನ್ನು ಹುಡುಕಿಕೊಳ್ಳಲು
ತೊಡಗುತ್ತಾರೆ
ಕ್ಷಣಮಾತ್ರಕ್ಕೆ ಯೋಚನಾಲಹರಿಯನ್ನೇ
ಹರಿಬಿಟ್ಟ ಆ ಖಾಕಿ ಅಂಗಿಯವ
ಅವಧೂತನಂತೆ ಕಾಣಿಸುತ್ತಾನೆ.

ಬಸ್ಸು ಚೆಂದವಿದೆ ಎಂದ ಮಾತ್ರಕ್ಕೆ
ತನ್ನ ಊರು ಸೇರದ ಬಸ್ಸನ್ನು
ಯಾರೂ ಹತ್ತುವುದಿಲ್ಲ
ತುಂಬಾ ಹಣವಿದೆ ಎಂದು
ಊರಿನ ದರಕ್ಕಿಂತ
ದೊಡ್ಡ ಮೊತ್ತದ ತಿಕೇಟನ್ನು
ಯಾರೂ ಖರೀದಿಸುವುದಿಲ್ಲ
ಆತ ಇದೆಲ್ಲವನ್ನೂ ಹೇಳಿಯೂ
ಹೇಳದೆ ತನ್ನ ಪಾಡಿಗೆ ತಾನು
ಒಲಿದ ಹಾಡಿನಂತೆ ಊರಿನ
ಹೆಸರುಗಳನ್ನು ಕೂಗುತ್ತಲೇ ಇರುತ್ತಾನೆ
ಕೇಳಿಸಿಕೊಂಡವರ ಮನದೊಳಗೆ
ಅಲೆಗಳು ಏಳುತ್ತಲೇ ಇರುತ್ತವೆ…

‍ಲೇಖಕರು Admin

3 November, 2021

1 Comment

  1. prathibha nandakumar

    ಸದಾಶಿವ್ ಸೊರಟೂರು
    ನಿಮ್ಮ ಕವನಗಳು ಚೆನ್ನಾಗಿರುತ್ತವೆ, ನನಗೆ ಇಷ್ಟ ಅವನ್ನು ಓದುವುದು.
    ಪ್ರತಿಭಾ ನಂದಕುಮಾರ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading