Invited
ಮಹಾಭಾರತ
ಮಲಯಾಳಂ ಕವಿ ಸಚ್ಚಿದಾನಂದನ್ ಅವರ ‘ಮಹಾಭಾರತಂ’ ಕವನದ ಅನುವಾದ

ರಶ್ಮಿ ಕಾಸರಗೋಡು

ಈ ಬಾರಿ ಕೌರವರೇ ಗೆಲ್ಲುತ್ತಾರೆಂದು
ಶಕುನಿಗೆ ಖಚಿತವಾಗಿತ್ತು
ಗುರುಗಳನ್ನೆಲ್ಲಾ
ಬಾಯ್ಮುಚ್ಚಿಸಿದ
ದುರ್ಯೋಧನನ ಜಾಣ್ಮೆ
ಅವರಿಗೇ ಗೊತ್ತು

ಯುದ್ದ ಗೆಲ್ಲುವುದು
ಯುದ್ಧ ಮಾಡುವವರಲ್ಲ
ಯುದ್ಧ ಮಾಡಿಸುವವರು
ಅವರಿನ್ನು ಪ್ರತಿಫಲ
ಕೇಳಬಹುದು
ದಾನಗೈದ ಒಂದೊಂದು ತೇರಿಗೂ ಹತ್ತು ತೇರು
ಒಂದೊಂದು ಕುದುರೆಗೂ ಹತ್ತು ಕುದುರೆ
ಪಾಂಡವರು ಗೆದ್ದಿದ್ದರೆ
ನೀತಿ ಬದಲಾಗುತ್ತಿತ್ತೆ?
ನೀತಿ, ಯುದ್ಧಕ್ಕೆ ಸಂಬಂಧಿಸಿದ್ದೇ ಆಗಿರಲಿಲ್ಲ
ಜಾಣತನದಿಂದ
ಸುಳ್ಳೊಂದನ್ನು ಮಾರಲು
ಯಾರಿಗೆ ಸಾಧ್ಯ ಎಂಬುದಾಗಿತ್ತು
ಮೌನಕ್ಕಿಂತ ಚೆನ್ನಾಗಿ ಸುಳ್ಳೊಂದನ್ನು ಮರೆಮಾಚಲು
ಮಾತಿಗೆ ಸಾಧ್ಯವೆ?
ಈ ಬಾರಿ ಗೊತ್ತಾಗಿದೆ
ಧರ್ಮ ಜತೆಗಿದ್ದರೆ
ಅದು ಜಾದೂ ಮಾಡಬಲ್ಲದು ಎಂದು

ಯಾರೇ ಗೆದ್ದರೂ
ಸಾಯುವವರು ಒಂದು ತಂಡದವರೇ
ವಿಧವೆಗಳೂ, ಅನಾಥ ಸಂತತಿಗಳೂ
ಅವರದ್ದೇ
ಅಧಿಕಾರದ ನಿಪುಣತೆ ದಕ್ಕಿದಷ್ಟೂ
ಸಾವಿನ ವೇಗ ಏರುತ್ತದೆ
ದಹಿಸುವುದು ಖಾಂಡವ ವನವಾದರೂ
ಲಂಕೆಯಾದರೂ ಹೊಗೆಯ ವಾಸನೆ ಒಂದೇ
ಗಿಳಿಗಳ, ಪ್ರಾಣಿಗಳ
ಮರಗಳ, ವನವಾಸಿಗಳ
ಇನ್ನೆಷ್ಟೋ ಕಾಡುಗಳನ್ನು
ನಿರ್ನಾಮ ಮಾಡಬೇಕಿದೆ
ಅದೆಷ್ಟೋ ಗಣಿಗಳನ್ನು ಅಗೆಯಬೇಕಿದೆ
ಸ್ವಲ್ಪ ಬಲಿ ಕೊಡಬೇಕಾದೀತು
ಕೆಲ ಶವಗಳು ರೆಂಬೆಯಲ್ಲಿ ನೇತಾಡಬಹುದು
ಕೆಲವನ್ನು ಚಟ್ಟದಲ್ಲಿ ಹೊತ್ತೊಯ್ಯಬಹುದು
ಊರು ಕೇರಿ ಗೊತ್ತಿಲ್ಲದ ಅನಾಮಧೇಯ ಜೀವಗಳನ್ನು
ಅದೂ ಪಾಂಡವರು
ಶುರು ಮಾಡಿದ ರೀತಿಯಂತೆಯೇ
ಅಂಧನನ್ನು ಅಂಧನಾಗಿಯೇ ಉಳಿಯುವಂತೆ ಮಾಡಲು
ಸಂಜಯನಿದ್ದಾನಲ್ಲಾ
ಅವನು ಗೆದ್ದವರಿಗೆ ಜೈ ಎನ್ನುವಂತೆ
ಎಲ್ಲವನ್ನೂ ವಿವರಿಸುವನು
ಭಯವಿರುವುದು ದೆವ್ವಗಳದ್ದು ಮಾತ್ರ
ಪಾಂಡವರೂ ಕೌರವರೂ ಕೊಂದ
ಜನರು ಒಂದಾಗಿ ನೆಲ ಮಾಳಿಗೆ-
ಯಿಂದ ಎದ್ದು ಬಂದರೆ?
ಹೊಳೆಗಳನ್ನು ಜೋಡಿಸಬಹುದು
ಆದರೆ ಬೆಟ್ಟಗಳನ್ನೇನು ಮಾಡುವುದು?
ನಿದ್ದೆ ಮಾಡುವವರು ನಿದ್ದೆ ಮಾಡುತ್ತಲೇ
ಇರುತ್ತಾರೆಂದು ನಂಬುವುದಾದರೂ ಹೇಗೆ?
ಪಾಂಡವರನ್ನೂ ಕೌರವರನ್ನೂ ಹೊರದಬ್ಬಿ
ಅವರು ಇತಿಹಾಸ ಬರೆಯುವರೆ?
ಶಕುನಿಗೆ ಅದೂ ಗೊತ್ತು
ಹತ್ತು ವರುಷ, ಅಷ್ಟೇ ಅವರು
ಕೇಳುತ್ತಿರುವುದು…
ಆಮೇಲೆ ಬಡವರು ಉಳಿಯವುದೇ ಇಲ್ಲ
ಹೆಣ್ಣಿಗೆ ಹೆರಲು
ಧೈರ್ಯವಿರುವುದಿಲ್ಲ





0 Comments