ರಹಮತ್ ತರೀಕೆರೆ ಅವರ ’ತನ್ನತನದ ಹುಡುಕಾಟ’

ವೈಚಾರಿಕ ಸ್ಪಷ್ಟತೆಯಲ್ಲಿ ಅರಳಿದ ಮನುಷ್ಯಪ್ರೀತಿ

– ಮರ‍್ಗನಳ್ಳಿ ಪ್ರಕಾಶ

ಕೃಪೆ : ದ ಸ೦ಡೆ ಇ೦ಡಿಯನ್

ರಹಮತ್ ತರೀಕೆರೆಯವರು ನಮ್ಮ ನಡುವಿನ ಪ್ರಮುಖ ಸಂಸ್ಕೃತಿ ಚಿಂತಕ ಹಾಗೂ ಸಂಶೋಧಕ. ಕರ್ನಾಟಕವನ್ನು ಬಹುವಿಧದಲ್ಲಿ ಅರ್ಥಮಾಡಿಕೊಳ್ಳುತ್ತ, ಪರ್ಯಾಯ ಸಂಸ್ಕೃತಿಗಳ ಶೋಧನೆಯಲ್ಲಿ ತೊಡಗಿರುವ ರಹಮತ್‌ರವರ ಚಿಂತನೆಗಳ ಪ್ರಾತಿನಿಧಿಕ ಸಂಕಲನ ’ತನ್ನತನದ ಹುಡುಕಾಟ’ ಕೃತಿ. ಮನುಷ್ಯ ವಿರೋಧಿ ತತ್ವಸಿದ್ಧಾಂತ ಅಜೆಂಡಾಗಳನ್ನು ಎದುರು ಹಾಕಿಕೊಂಡು ಸಂಶೋಧನೆ ಅಥವಾ ಚಿಂತನೆಗೆ ತೊಡಗುವ ಅವರ ಅಧ್ಯಯನದಲ್ಲಿ ಮಾನವೀಯತೆಯ ಬಾಗಿಲುಗಳು ತೆರೆದುಕೊಳ್ಳುತ್ತಾ ಹೋಗುತ್ತವೆ. ಅವರ ಯಾವುದೇ ಬರವಣಿಗೆಗಳ ಮೂಲ ಆಶಯವೂ ಇದೇ ಆಗಿದೆ. ಈ ಹಿನ್ನೆಲೆಯಲ್ಲಿ ರಹಮತ್‌ರವರ ಚಿಂತನೆಯನ್ನು ಹೊಸ ತಲೆಮಾರಿನ ಓದುಗರು ಮತ್ತು ವಿದ್ಯಾರ್ಥಿಗಳಿಗೆ ಪರಿಚಯಿಸುವ ದೃಷ್ಟಿಯಿಂದ ಶಿವಮೊಗ್ಗದ ಅಂತಃಕರಣ ಪ್ರಕಾಶನ ಈ ಸಂಕಲನವನ್ನು ಹೊರ ತಂದಿದೆ. ಸಂಶೋಧನೆ, ಅಧ್ಯಯನಗಳನ್ನು ಸೀಮಿತ ಚೌಕಟ್ಟುಗಳೊಳಗೇ ಇಟ್ಟು ನೋಡುವವರ ಮಧ್ಯೆ ರಹಮತ್ ಅವರ ಧಾಟಿ ಅನನ್ಯವಾಗಿ ಕಾಣುತ್ತದೆ. ಕರ್ನಾಟಕದ ಅಲಕ್ಷಿತ ಸಮುದಾಯಗಳು, ಶೋಷಿತ ಜನವರ್ಗಗಳು, ಅವುಗಳ ಸಂಸ್ಕೃತಿಯ ಕುರಿತೇ ಅಧ್ಯಯನ ನಡೆಸಿರುವ ಹಲವು ಲೇಖನಗಳು ಈ ಕೃತಿಯಲ್ಲಿ ಇವೆ. ಈ ಸಮಾಜವನ್ನು ಒಡೆದು ಆಳುವವರ ಚಿಂತನೆಗಳಿಗೆ ಎದುರಾಗಿ ಅಧ್ಯಯನಗಳನ್ನು ರೂಪಿಸುತ್ತಾ, ಚರಿತ್ರೆ, ಪರಂಪರೆಯಲ್ಲಿ ಹಾಗೂ ಸಮಕಾಲೀನ ಸಂದರ್ಭದಲ್ಲಿ ಇರಬಹುದಾದ ಜೀವಪರ ಸಂಗತಿಗಳನ್ನು ಶೋಧಿಸುತ್ತಾ ರಹಮತ್ ಸಾಗುತ್ತಾರೆ. ಸಮಾಜದ ಸ್ವಾಸ್ಥ್ಯವನ್ನು ಕಾಪಾಡಿದ ಅನೇಕರ ಚರಿತ್ರೆಯನ್ನು ಇಲ್ಲಿ ಪನರ್ ಕಟ್ಟಿಕೊಡಲಾಗಿದೆ. ಜೋಳದರಾಶಿ ದೊಡ್ಡನಗೌಡರ ಕುರಿತ ಚಿತ್ರ ಹಾಗೂ ಎಸ್.ಎಸ್. ಹಿರೇಮಠರ ಕುರಿತ ’ಅವರು ತಲ್ಲಣಗಳಲ್ಲೇ ತೀರಿಕೊಂಡರು’ ಲೇಖನಗಳು ಈ ಮಾದರಿಯವು. ಬೌದ್ಧ, ಸೂಫಿ, ದತ್ತ, ನಾಥ, ಶರಣ ಮುಂತಾದ ಅವೈದಿಕ ಪರಂಪರೆಗಳನ್ನು ಲೇಖಕರು ಗಾಢವಾಗಿ ಅಧ್ಯಯನ ಮಾಡಿದ್ದಾರೆ. ’ಬಾಬರಿ ಮಸೀದಿ ಧ್ವಂಸ ಹಾಗೂ ನಂತರದ ಭಾರತ’ ರಹಮತ್ ಚಿಂತನೆಯನ್ನು ಬಹುವಾಗಿ ರೂಪಿಸಿವೆ. ’ಬಾಬಾಬುಡನ್‌ಗಿರಿ: ಸೂಫಿ ಮತ್ತು ದತ್ತ’ ’ಸಮುದಾಯಗಳ ಸೃಜನಶೀಲತೆಯ ಹುಡುಕಾಟ’ ಲೇಖನಗಳಲ್ಲಿ ಈ ಕಾಳಜಿ ಪ್ರಧಾನವಾಗಿದೆ. ಬೌದ್ಧ ಧರ್ಮದ ಬಗ್ಗೆ ಒಲವಿಟ್ಟುಕೊಂಡು ಪ್ರಸ್ತುತ ಬೌದ್ಧಧರ್ಮ ಕರ್ನಾಟಕದ ಸಮಾಜದಲ್ಲಿ ಯಾವ ಕ್ರಮದಲ್ಲಿ ಆಚರಣೆಯಲ್ಲಿ ಇದೆ ಎಂದು ಶೋಧಿಸುತ್ತಾ ಪರುಷ ಪ್ರಧಾನ ಸಮಾಜದಲ್ಲಿ ಮತಾಂತರ ಏನೆಲ್ಲ ಸಂದಿಗ್ಧಗಳನ್ನು ತರಬಲ್ಲದು, ಹೆಣ್ಣಿನ ಧ್ವನಿಯನ್ನು ಅಡಗಿಸಬಲ್ಲದು ಎಂಬುದನ್ನು ’ಯಶೋಧರೆಯ ಕಷ್ಟಗಳು’ ಲೇಖನ ಮನವರಿಕೆ ಮಾಡಿಕೊಡುತ್ತದೆ. ಮತೀಯವಾದಿ ರಾಜಕಾರಣ ಸಿಕ್ಕ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಸಮುದಾಯಗಳನ್ನು ಒಡೆದು ಆಳಬಲ್ಲದು ಎಂಬುದು ದಿನನಿತ್ಯ ಅರಿವಾಗುತ್ತಿದೆ. ಉಣ್ಣುವ ಊಟವೂ ರಾಜಕಾರಣದ ದಾಳವಾಗುವ ದುರ್ದೈವ ಈ ದೇಶದ್ದು. ’ಮಾಂಸಹಾರ’ದ ರಾಜಕಾರಣ ಚರಿತ್ರೆಯಲ್ಲಿ ಹೇಗೆ ಸಾಗಿ ಬಂದಿದೆ ಎಂಬುದರ ಮೇಲೆ ಬೆಳಕು ಚೆಲ್ಲುವ ’ಹೊಲಸು’ ಆಹಾರ ಪ್ರಮಾಣ ಎನ್ನುವ ಲೇಖನ ನಮ್ಮ ಚಿಂತನೆಯನ್ನೇ ಬದಲಿಸುವಷ್ಟು ಪ್ರಭಾವಶಾಲಿಯಾಗಿದೆ. ಗಂಭೀರ ಚಿಂತಕರು ಕೊಂಚ ಮಡಿವಂತಿಕೆ ತೋರುವ ಜನಪ್ರಿಯ ಸಿನಿಮಾ ಮಾಧ್ಯಮ ಕುರಿತೂ ಸಹ ಇಲ್ಲಿ ಒಂದು ಲೇಖನವಿದೆ. ಡಾ. ರಾಜಕುಮಾರ್ ಸಾವಿನ ಸಂದರ್ಭ ಇಟ್ಟುಕೊಂಡು ಬರೆದಿರುವ ’ಈ ಸಾವುಗಳು ನ್ಯಾಯವೇ?’ ಎನ್ನುವ ಲೇಖನ ಸತ್ವಪರ್ಣವಾಗಿದ್ದು. ಸಿನಿಮಾ ಮಾಧ್ಯಮದ ಒಳಿತು ಕೆಡುಕಿನ ಪರಿಣಾಮವನ್ನು ಸವಿವರವಾಗಿ ತಲಸ್ಪರ್ಶಿಯಾಗಿ ಚರ್ಚಿಸುತ್ತದೆ. ೨೦ನೇ ಶತಮಾನದ ಕನ್ನಡನಾಡು ಕಂಡ ದೈತ್ಯ ಪ್ರತಿಭೆ ಕುವೆಂಪ ಅವರು ರಹಮತ್ ಚಿಂತನೆಯ ಕೇಂದ್ರ ಪ್ರಜ್ಞೆ. ಈ ಹಿನ್ನೆಲೆಯ ’ಕುವೆಂಪ ಚಿಂತನೆ ಆಕರ್ಷಣೆ- ವಿಕರ್ಷಣೆ’ ಲೇಖನ ಅತ್ಯಂತ ಮೌಲ್ಯಭರಿತವಾದುದು. ಇಂತಹುಗಳ ಸಂಗಡ ಕನ್ನಡತನದ ಹುಡುಕಾಟವೇ ’ತನ್ನತನದ ಹುಡುಕಾಟ’ ಅನೇಕ ಅನ್ಯಗಳ ನಡುವೆ ಕಳೆದು ಹೋಗಿರುವ ಅಥವಾ ಅವಜ್ಞೆಗೆ ಒಳಗಾಗಿರುವ ಸತ್ವಭರಿತ ’ಕನ್ನಡತನ’ ಎಲ್ಲಾ ಶಿಸ್ತುಗಳಲ್ಲಿ ಸಾಕಾರಗೊಳ್ಳಬೇಕು, ಆ ಮೂಲಕ ಕನ್ನಡ ನಾಡಿನ ಬದುಕು ಹೆಚ್ಚು ಪ್ರಜಾ ಪ್ರಭುತ್ವೀಕರಣಗೊಳ್ಳಬೇಕು ಎನ್ನುವ ಮಹತ್ತರ ಹಂಬಲ ಲೇಖಕನದು ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ. ’ವೈಚಾರಿಕ ಸ್ಪಷ್ಟತೆ, ವಿಸ್ತಾರವಾದ ಅಧ್ಯಯನ, ಮನುಷ್ಯ ಪ್ರೀತಿ ಮತ್ತು ಭಾಷೆಯನ್ನು ದುಡಿಸಿಕೊಳ್ಳುವ ಬರವಣಿಗೆಯ ಶೈಲಿ ರಹಮತ್ ಅವರ ಶಕ್ತಿ. ತಾವು ನಂಬಿದ ವಿಚಾರಗಳನ್ನು ಒಬ್ಬ ನುರಿತ ವಕೀಲರಂತೆ ವಾದ ಪರಾವೆಗಳ ಮೂಲಕ ಅವರು ಮಂಡಿಸುತ್ತಾರೆ. ಅವರ ಬರವಣಿಗೆಗಳನ್ನು ಒಪ್ಪದವರು ಇರಬಹುದು, ಆದರೆ ತಪ್ಪು ಎನ್ನುವವರು ಇರಲಾರರು’ ಎಂದು ಮುನ್ನುಡಿಯಲ್ಲಿ ಬರೆದಿರುವ ಪತ್ರಕರ್ತ ದಿನೇಶ್ ಅಮೀನ್‌ಮಟ್ಟು ಅವರ ಮಾತುಗಳು ಅರ್ಥಪೂರ್ಣವಾಗಿವೆ. ಕೃತಿಯ ಪುಟಗಳಿಂದ ’ಧರ್ಮವನ್ನು ಜನಾಂಗ ದ್ವೇಷವನ್ನಾಗಿ ಮಾಡಿ ಸಮಕಾಲೀನ ರಾಜಕಾರಣಕ್ಕೆ ಹೇಗೆ ಬಳಸಬೇಕು ಎಂಬ ತಂತ್ರಗಾರಿಕೆ ಧೇನಿಸುವ ಮತೀಯವಾದಿಗಳು ಮತ್ತು ಮೂಲಭೂತವಾದಿಗಳಿಗೆ ನಮ್ಮ ದೇಶದ ಜನಸಮುದಾಯಗಳು ನಿರ್ಮಾಣ ಮಾಡಿರುವ ಸಂಸ್ಕೃತಿ ಪರಂಪರೆಗಳ ಅರಿವು ಕಡಿಮೆ. ಚರಾಚರವನ್ನು ’ಹಿಂದು’ ’ಮುಸ್ಲಿಂ’ ಎಂಬ ಎರಡು ಭಾಗಗಳಲ್ಲಿ ವಿಂಗಡಿಸಿ, ಎದುರಾಳಿಗಳಾಗಿ ನಿಲ್ಲಿಸಿ ನೋಡುವವರಿಗೆ ಭಾರತದ ಧರ್ಮಪಂಥ ಹಾಗೂ ಜನಸಮುದಾಯಗಳು ಮಾಡಿಕೊಂಡಿರುವ ಸ್ವೀಕಾರ ಹಾಗೂ ಅವು ಹುಟ್ಟಿಸಿರುವ ಮಿಲನ ಸಂಸ್ಕೃತಿಯ ಸೂಕ್ಷ್ಮತೆ ಗೊತ್ತಿಲ್ಲ’.]]>

‍ಲೇಖಕರು G

April 25, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Sharadhi

    I use to read Prof.Rahamat in KS, when he use to write articles there. I am a big fan of his work, vision, attitude, and angle at which he looks at life. Sattire and humor in his writings, weaved together with his unique vision is very appreciable.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: