ಡಾ. ಸಬಿತ ಬನ್ನಾಡಿ
ದೀಪ್ತಿ ಭದ್ರಾವತಿ ಅವರ ಹೊಸ ಕಥಾ ಸಂಕಲನ ‘ಗೀರು’ಗೆ ಖ್ಯಾತ ವಿಮರ್ಶಕಿ ಡಾ ಸಬಿತಾ ಬನ್ನಾಡಿ ಅವರು ಬರೆದ ಬೆನ್ನುಡಿ ಇಲ್ಲಿದೆ. ಗೀರು ಈಗಾಗಲೇ ಡಾ ಪಾಟೀಲ ಪುಟ್ಟಪ್ಪ ಪ್ರಶಸ್ತಿಯನ್ನು ಗಳಿಸಿದೆ.
ಮೆಲುದನಿಯಲ್ಲಿ ಗಾಢಭಾವನೆಗಳಿಗೆ ಮಾತು ಕೊಡುವೆಡೆಗೆ ದೀಪ್ತಿಗೆ ಆಸಕ್ತಿ ಇದೆ.

ಪುಟ್ಟ ಪಟ್ಟಣದ – ಮಧ್ಯಾಹ್ನದ ಕಡು ಬಿಸಿಲಂತೆ ಮೌನವಾಗಿರುವ, ಚುರುಕು ಮುಟ್ಟಿಸುವ, ಆದರೆ ಯಾರಿಗೂ ಅದರ ಆಳ ಅಗಲ ತಿಳಿಯದ ಹಾಗೆ ಇರುವ ಪುಟ್ಟ ಬದುಕಿನ ಪರಿಯೆಂದರೆ ಅದು ಆಡುವಂತಿಲ್ಲ, ಅನುಭವಿಸುವಂತಿಲ್ಲ ಎಂಬಂತದು.
ಆಡಿದರೆ ನಾಲ್ಕು ಜನರ ಬಾಯಿಗೆ ಆಹಾರ. ಎದ್ದರೆ ಬಿದ್ದರೆ ಅವರನ್ನೇ ನೋಡಬೇಕಾದ ಪರಿಸರ. ಆಡದಿದ್ದರೆ ಮೂಗುಬ್ಬಸ. ಇಂತಹ ಅನುಭವಗಳನ್ನು ಹಾಗೂ ಅದನ್ನು ನಿಭಾಯಿಸುವವರ ಭಿನ್ನ ದಾರಿಗಳನ್ನು ಈ ಸಂಕಲನದ ಕತೆಗಳು ತೆರೆದುಕೊಡುತ್ತವೆ.
ಬದುಕು ತನ್ನೆದುರು ಬಂದಂತೆ ಸ್ವೀಕರಿಸುವ ಮುಗ್ಧತೆಯಾಚೆಗೂ ‘ನ್ಯೂಸ್ ಬೀ’ ಕತೆಯ ನ್ಯೂಸ್ಬೀಗಿರುವ ನೈತಿಕತೆ ಮತ್ತು ದೃಢತೆಗೊಂದು ಸೆಳೆತದ ಗುಣವಿದೆ. ‘ಚೌಕಟ್ಟು’ವಿನ ಮಧುವಂತಿಯ ಅಸಹಾಯಕತೆ, ‘ಭಾಗೀಚಿಕ್ಕಿ’ಯ ಅಮಾಯಕತೆ, ‘ಮೊಹರು’ವಿನ ನಾಯಕಿಯ ಅಭದ್ರತೆ, ‘ಮುಚ್ಚಿದ ಬಾಗಿಲು’ವಿನ ಅವನ ಅನಾಥತೆ, ಸ್ಫೋಟದ ಅರುಂದತಿಯ ಬಾಳಿನ ಅಸಂಗತತೆ ಹೀಗೆ ಇನ್ನೂ ಅನೇಕರು ಇಲ್ಲಿದ್ದಾರೆ.
ಈ ಎಲ್ಲವನ್ನೂ ಹೇಗೊ ದಾಟುವ, ಕೆಲವೊಮ್ಮೆ ದಾಟಲಾರದ ಸ್ಥಿತಿಯಲ್ಲಿ ದೀಪ್ತಿ ಇವರನ್ನು ಮುಟ್ಟಿ ಮಾತಾಡಿಸುತ್ತಾರೆ. ಓದುವ ನಮ್ಮೊಳಗೆ ತಣ್ಣಗೆ ಇಳಿಸುತ್ತಾರೆ. ಇದು ಇವರ ಕತೆ ಮತ್ತು ಕಥನದ ರೀತಿ.






ಧನ್ಯವಾದ ಅವಧಿ
ಧನ್ಯವಾದ ಅವಧಿಗೆ