ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಾಲತಿ ಶಶಿಧರ್ ಕವಿತೆ: ಅವಳು ಒಡ್ಡಿದ ಸೆರಗು

ಮಾಲತಿ ಶಶಿಧರ್

ಜೀವನ ಅವಳು ಒಡ್ಡಿದ
ಸೆರಗಿಗೆ ಒಂದಷ್ಟು ಕೆಂಡಗಳ
ಸುರಿದಿದೆ
ಪ್ರಾಯಶಃ ಠಿಕಾಣಿ ಹೂಡಿದ್ದ
ಅದೃಷ್ಟ ಖಾಲಿ ಮಾಡಿತ್ತೇನೋ

ನಮ್ಮಂತೆಯೇ ಆಕೆಗೂ
ಏಳು ಬೀಳು
ಬಿದ್ದಾಗಲೆಲ್ಲಾ ಸಾವರಿಸಿ ಎದ್ದು
ನಿಂತು ಹೆಜ್ಜೆ ಇಡುವ ಹೊತ್ತಿಗೆ
ಕಾಲು ಕೊಟ್ಟು ಕೆಡವಿದವರೇ
ಹೆಚ್ಚು

ಆಸೆ ಅವಳ ಬೆನ್ನಟ್ಟಿದ್ದಂತೂ
ಬಹಳಾ ವಿರಳ
ದುರದೃಷ್ಟ ಮಾತ್ರ ಅವಳ
ತಾಳಿಯ ಕೇಂದ್ರದಲ್ಲಿರುವ
ಕೆಂಪರಳಂತೆ ವಕ್ಷಸ್ಥಳವ
ಅಲಂಕರಿಸಿಬಿಟ್ಟಿದೆ.

ತಾಳ್ಮೆ ಅವಳಜ್ಜಿ ಕೊಟ್ಟ
ಜಡೆಬಿಲ್ಲೆ
ಒಮ್ಮೊಮ್ಮೆ ಬೀಸಿ ಬರುವ
ಕತ್ತಿ ಏಟುಗಳ ತಡೆವ ಗುರಾಣಿ..
ಕಂಬನಿ ಇಣುಕುವಾಗಲೆಲ್ಲ
ಹಾಸ್ಯ ಪಟಾಕಿ ಹಚ್ಚಿ
ಗಹಗಹಿಸಿ ನಕ್ಕಾಗ
ಉದುರೋ ಹನಿಗಳಿಗೊಂದು
ಬೇರೆಯದ್ದೇ ರೂಪು
ನಗುತ್ತಲೇ ಅತ್ತು ಹಗುರಾಗುವ
ಇವಳು ಮೆಲುನಗುವ ಹಂಚಿ
ನಿರಾಳವಾಗುತ್ತಾಳೆ.

‍ಲೇಖಕರು nalike

7 August, 2020

5 Comments

  1. ನೂತನ

    ತಾಳಿಯ ಮಧ್ಯದ ಕೆಂಪು ಹರಳು,.
    ತಾಳ್ಮೆ. ..ಜಡೆ ಬಿಲ್ಲೆ…ರೂಪಕಗಳು ಚನ್ನಾಗಿವೆ

    • Ravi Kumar

      ವಾಸ್ತವವೇ ಆಗಿದೆ

  2. Vasundhara K M

    ಸರಳವಾಗಿದ್ದರೂ ಅರ್ಥಪೂರ್ಣವಾಗಿದೆ. ದುಃಖ ದುಮ್ಮಾನಗಳನು ನುಂಗಿ ನಗೆ ಹಂಚಿ ಹಗುರಾಗುವ ಅವಳು ಎಲ್ಲರೊಳಗೂ ಇರುವವಳೇ…

    • Nagraj Harapanahalli.karwar

      ಜೀವನ ಅವಳ ಸೆರಗಿಗೆ ಕೆಂಡ ಸುರಿದಿದೆ…..ಆಕೆ ನಗುತ್ತಲೇ ಅತ್ತು,ಹಗುರಾಗಿ ನಗೆ ಹಂಚಿ ನಿರಾಳವಾದಳು…ಆರಂಭ ಮತ್ತು ಅಂತ್ಯದ ಬೆಸುಗೆ ಬದುಕಿನ ಪಲ್ಲಟವನ್ನು ಹೇಳುವಲ್ಲಿ ಕವಿತೆ ಗೆಲ್ಲುತ್ತದೆ‌ .ಅದಕ್ಕಾಗಿಯೇ ಹೆಣ್ಣಿಗೆ ಭೂಮಿಯ ತಾಳ್ಮೆ ಸಹನೆ ಎನ್ನುವುದು…ಚೆಂದ ಕವಿತೆ.

  3. Mallu Waggar

    ಅರ್ಥಪೂರ್ಣಿತ ಕವಿತೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading