ಮಾಲತಿ ಪಟ್ಟಣಶೆಟ್ಟಿ ಅವರು ಅಚಲ ಛಲದ ಹೆಣ್ಣುಮಗಳು. ಕಷ್ಟಗಳಿಗೆ ಮಣಿಯದೆ ಆಪತ್ತುಗಳಿಗೆ ದಣಿಯದೆ ಬದುಕು ಒದಗಿಸಿದ ಏಕಾಂಗಿ ದೋಣಿಯಲ್ಲಿ ದೃಡಮನದಿಂದ ಹುಟ್ಟು ಹಾಕುತ್ತ ಬಂದ ಕತೆಗಾರ್ತಿ. ಒಂಟೆಯಾದೆನೆಂದು ಮನೆಯಲ್ಲಿ ಕೂಡದೆ ಸಾರ್ವಜನಿಕ ಬದುಕಿನ ಅನೇಕ ಕೆಲಸ ಮಾಡಿದವರು. ಸಮಾಜಮುಖಿ ಚಿಂತನೆಯ ಮಾಲತಿ ಅವರು ಬದುಕಿನ ಅನುಭವಗಳನ್ನೇ ಕಥೆ ಮಾಡುತ್ತ ಬಂದವರು.
34 ವರ್ಷಗಳ ಕಾಲ – ಉಪನ್ಯಾಸಕಿಯಾಗಿ, ಪ್ರಾಧ್ಯಾಪಿಕೆಯಾಗಿ, ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸಿರುವ ಮಾಲತಿ ಅವರು ಈ ತನಕ ಮೂರು ಕಥಾ ಸಂಕಲನ ಪ್ರಕಟಿಸಿದ್ದಾರೆ. ಇಂದು ನಿನ್ನಿನ ಕಥೆಗಳು, ಸೂರ್ಯ ಮುಳುಗುವುದಿಲ್ಲ, ಎಲ್ಲಾದರೂ ಬದುಕಿರು ಗೆಳೆಯಾ ಇವು ಅವರ ಪ್ರಕಟಿತ ಕಥಾ ಸಂಕಲನಗಳು.
ಜತೆಗೆ, ಬಾ ಪರೀಕ್ಷೆಗೆ, ಗರಿಗೆದರಿ, ತಂದೆ ಬದುಕು ಗುಲಾಬಿ, ದಾಹತೀರ, ಮೌನ ಕರಗುವ ಹೊತ್ತು, ಹೂ ದಂಡಿ, ಎಷ್ಟೊಂದು ನಾವೆಗಳು, ನನ್ನ ಸೂರ್ಯ, ಗುನ್ ಗುನ್ ಗೀತಗಾನ, ಬಾಳೆಂಬ ವ್ರತ, ಕಳ್ಳುಬಳ್ಳಿ ಹೀಗೆ ಒಟ್ಟು 11 ಕವನ ಸಂಕಲನಗಳು ಪ್ರಕಟವಾಗಿವೆ.
‘ಬಗೆದಷ್ಟು ಜೀವ’ ಇದು ಪ್ರಕಟವಾದ ಅವರ ಪ್ರಬಂಧ ಸಂಗ್ರಹ, ಬಸವರಾಜ ಕಟ್ಟೀಮನಿ ಬದುಕು-ಬರಹ, ಸಂವೇದನ, ಶ್ರೀನಿವಾಸ ವೈದ್ಯ ಬದುಕು-ಬರಹ, ಸಮಾಜಮುಖಿ ಇವು 4 ವಿಮರ್ಶಾ ಸಂಕಲನಗಳು ಪ್ರಕಟವಾಗಿವೆ
ಬೆಳ್ಳಕ್ಕಿ ಸಾಲು, ಭೋರಂಗಿ, ಮೂರು ಮಕ್ಕಳ ನಾಟಕಗಳು, ಇವು 3 ಮಕ್ಕಳಿಗಾಗಿ ಬರೆದ ಕೃತಿಗಳು. ಆಕಾಶ ಗಂಗೆ ಇದು ರೇಡಿಯೋ ನಾಟಕಗಳ ಗುಚ್ಚ.
ಪ್ರಶಾಂತ, ಸಮತಾ, ಕರ್ನಾಟಕ ಸಾಹಿತ್ಯ ಅಕಾಡೆಮಿ ಕಾವ್ಯ, ಅಕ್ಕ, ಗೀತಾಂಜಲಿ, ಸಬಾಲ್ಟ್ರನ್ ಓದು, ಇವು 6 ಸಂಪಾದನಾ ಗ್ರಂಥಗಳು.
ಹೀಗೆ ವಿಪುಲವಾಗಿ ಬರವಣಿಗೆ ಮಾಡಿರುವ ಮಾಲತಿ ಪಟ್ಟಣಶೆಟ್ಟಿ ಸಮಾಜಮುಖಿ ಚಿಂತನೆ ಮತ್ತು ಬದುಕಿನ ಕಾರ್ಯಗಳ ಜತೆಗೆ ಅವರ ಕಥೆಗಳನ್ನು ಮುನ್ನಲೆಯಾಗಿಟ್ಟು ಅವರನ್ನು 2023ರ ಸಾಲಿನ ಬೃಹನ್ಮಠ ಶಾಂತವೀರಮ್ಮ ಮಹಾತಾಯಿ ಕಥಾ ಪ್ರಶಸ್ತಿಗಾಗಿ ಆಯ್ದುಕೊಂಡಿದ್ದೇವೆ.
ಈ ಪ್ರಶಸ್ತಿಯನ್ನು ತಮ್ಮ ಹೃದಯವಂತ ತಾಯಿಯ ನೆನಪಿನಲ್ಲಿ ಶ್ರೇಷ್ಠ ಕಥೆಗಾರ ಮಹಾಂತೇಶ ನವಲಕಲ್ಲ ಪ್ರಯೋಜಿಸಿದ್ದಾರೆ. ಪ್ರಶಸ್ತಿಯು 10 ಸಾವಿರ ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.
ಪ್ರಶಸ್ತಿಯನ್ನು ಮೇ 27 ಮತ್ತು 28 ರಂದು ಎರಡು ದಿನ ವಿಜಯಪುರದಲ್ಲಿ ನಡೆವ ಮೇ ಸಾಹಿತ್ಯ ಮೇಳದಲ್ಲಿ ಪ್ರದಾನ ಮಾಡಲಾಗುವುದು.
0 ಪ್ರತಿಕ್ರಿಯೆಗಳು