-ಎಂ ವಿ ಶಶಿಭೂಷಣ ರಾಜು
ಒಡಲೊಳಗಿನ ಅಗ್ನಿ
ಒಡಲೊಳಗಿನ ಅಗ್ನಿ, ಪದಗಳ
ಕುಲುಮೆಯಾಗಿ
ಕಾಯಿಸಿ
ಪೋಣಿಸಿ
ಕಾವ್ಯಕಟ್ಟುವಾಗ
ದೃಶ್ಯವೊಂದು ದುತ್ತೆಂದು
ಎದುರಾಗುತ್ತದೆ
ಆಗತಾನೆ ಕಣ್ಬಿಟ್ಟ ಆತ್ಮಗಳ
ಒಂದೊಂದು ಪಂಗಡವಾಗಿ
ವಿಂಗಡಿಸಿ
ದಿಕ್ಕುಗಳಿಗೆ ಎಸೆದು
ದೆಸೆಗೆ ಗೊಂದಲ ಮೂಡಿ
ಉಚ್ಛ ನೀಚಗಳ ನಡುವೆ
ನಲುಗುತ್ತದೆ
ಕಾವ್ಯವೇನೋ ಬಿಡಿ ಅತ್ತೂ ಕರೆದು
ಬರೆಸಿಕೊಳ್ಳುತ್ತದೆ
ಕೈಗೆಟುಕದ ಅನ್ನವ
ದಕ್ಕಿಸಿಕೊಳ್ಳುವ ತವಕದಿ
ತೆವಳುವ ಜೀವ
ಭರವಸೆಯ ಕ್ಷಣಗಳ
ಸವಿಯುವ ಮುನ್ನವೇ
ಕಳೆದುಕೊಳ್ಳುತ್ತದೆ
ಹತ್ತಾರು ದಾರಿಗಳ ಆರಿಸಿಕೊಂಡು
ಗುರಿಯ ಕಡೆ ಹೊರಟ
ಮನಸುಗಳ ಮುರುಟಿ
ಮತ್ತದೇ ಹಳೇ ದಾರಿಗೆ ನೂಕಿ
ಬದುಕಿಸೆದೆವು ಎಂದು
ಸಂಭ್ರಮಿಸುವುದು
ಹೀಗೇ
ಸರಿ ತಪ್ಪು ಲೆಕ್ಕಾಚಾರಗಳಲ್ಲಿ
ದಿನಗಳ ದೂಡಿ
ಮನಸ ಯಾರದೋ ಕೈಯ್ಯಲಿರಿಸಿ
ಮೃತ್ಯುಶೆಯ್ಯೆಯಲಿ
ಪಶ್ಚಾತಾಪ ಪಡುವುದು
ಅಲ್ಲಿಗೆ ಎಲ್ಲವೂ ಮುಗಿದಿರುತ್ತದೆ
ಕಾವ್ಯ ಒಂಟಿಯಾಗಿ
ನೋವುಣ್ಣುತ್ತದೆ






0 Comments